ವಿಕ್ರಾಂತ್ ರೋಣವೂ ಸಖತ್... ಉತ್ತರ ಭಾರತೀಯರಿಗೆ ಸೌತ್ ಸಿನಿಮಾಗಳೆಂದರೆ ಯಾಕಿಷ್ಟ?
ಬಾಲಿವುಡ್ನಲ್ಲಿ ಇತ್ತೀಚೆಗೆ ದಕ್ಷಿಣ ಭಾರತೀಯ ಸಿನಿಮಾಗಳು ಹಿಟ್ ಆಗುವುದು ಹೆಚ್ಚುತ್ತಿದೆ. ಬಾಹುಬಲಿ-೨, ಆರ್ ಆರ್ ಆರ್, ಕೆಜಿಎಫ್-೨, ಪುಷ್ಪಾ ಸಿನಿಮಾಗಳ ಸಾಲಿಗೆ ಈಗ ವಿಕ್ರಾಂತ್ ರೋಣ ಸೇರಿಕೊಂಡಿದೆ.
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಭರ್ಜರಿ ಹಿಟ್ ಆಗುತ್ತಿದೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ವಿಕ್ರಾಂತ್ ರೋಣ ಯಶಸ್ಸಿನ ನಾಗಾಲೋಟ ಮಾಡುತ್ತಿದೆ.
ವಿಕ್ರಾಂತ್ ರೋಣ ಶೋ ವೇಳೆ ಝಳುಪಿಸಿದ ಲಾಂಗು, ಮಚ್ಚು; ಥಿಯೇಟರ್ನಲ್ಲೇ ಗ್ಯಾಂಗ್ಗಳ ರಣರಣ ಕದನ
ಭಾರತೀಯ ಚಿತ್ರರಂಗವೆಂದರೆ ಅದು ಬಾಲಿವುಡ್ ಎಂಬಂತೆಯೇ ಭಾವಿಸಲಾಗಿದ್ದ ಕಾಲ ಇತಿಹಾಸ ಪುಟಕ್ಕೆ ಸೇರುತ್ತಿದೆ. ಭಾರತೀಯ ಚಿತ್ರರಂಗದ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದ್ದ ಬಾಲಿವುಡ್ಗೆ ದಕ್ಷಿಣ ಭಾರತೀಯ ಚಿತ್ರರಂಗಗಳು ಸೆಡ್ಡು ಹೊಡೆಯತೊಡಗಿವೆ. ಬಾಲಿವುಡ್ಗೆ ಬಹುತೇಕ ಸೀಮಿತವಾಗಿದ್ದ ಉತ್ತರ ಭಾರತದಲ್ಲಿ ಈಗ ದಕ್ಷಿಣ ಭಾರತೀಯ ಸಿನಿಮಾಗಳು ಮರೆದಾಡತೊಡಗಿವೆ.
ದಕ್ಷಿಣ ಭಾರತೀಯ ಭಾಷೆಯ ಗಂಧವೇ ಇಲ್ಲದ ಉತ್ತರ ಭಾರತೀಯರಿಗೆ ಇಲ್ಲಿನ ಸಿನಿಮಾಗಳು ಯಾಕೆ ಹಿಡಿಸಿವೆ? ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಉತ್ತರ ಭಾರತೀಯರಿಗೆ ಇಷ್ಟವಾಗುವಂಥವು ಏನಿವೆ?
ಬಾಲಿವುಡ್ ಗಂಟು
ಆಗಲೇ ಹೇಳಿದಂತೆ ಭಾರತೀಯ ಚಿತ್ರರಂಗದ ಅನಭಿಷಿಕ್ತ ದೊರೆ ಎಂದರೆ ಅದು ಬಾಲಿವುಡ್, ಅರ್ಥಾತ್ ಹಿಂದಿ ಚಿತ್ರರಂಗ. ಇಡೀ ಭಾರತವೇ ಬಾಲಿವುಡ್ಗೆ ಮಾರುಕಟ್ಟೆಯಾಗಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಹಿಂದಿ ಚಿತ್ರಗಳು ಯಾವುದೇ ಡಬ್ ಇಲ್ಲದೇ ಓಡಬಲ್ಲವು. ಹಿಂದಿ ಭಾಷೆಗೆ ಇರುವ ಮಾರ್ಕೆಟ್ ಅಂಥದ್ದು.
ದಕ್ಷಿಣ ಭಾರತೀಯ ಭಾಷೆಗಳು, ಮರಾಠಿ, ಪಂಜಾಬಿ, ಭೋಜಪುರಿ ಮತ್ತು ಬಂಗಾಳಿ ಭಾಷೆಗಳನ್ನು ಹೊರತುಪಡಿಸಿದರೆ ಬಹುತೇಕ ಬೇರೆ ಚಿತ್ರರಂಗಗಳು ನಗಣ್ಯ ಎನಿಸುವಷ್ಟು ಅಸ್ತಿತ್ವ ಹೊಂದಿವೆ. ಎಲ್ಲೆಲ್ಲೂ ಬಾಲಿವುಡ್ ಆವರಿಸಿದೆ. ಅದರಲ್ಲೂ ಉತ್ತರ ಭಾರತದ ಹಿಂದಿ ಬೆಲ್ಟ್ ಎಂದು ಕರೆಯುವ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಉತ್ತರಾಖಂಡ್ ಮೊದಲಾದ ರಾಜ್ಯಗಳಲ್ಲಿ ಬಾಲಿವುಡ್ನದ್ದು ಏಕ ಪಾರಮ್ಯ. ಆದರೆ, ಈಗ ಟ್ರೆಂಡ್ ಬದಲಾಗುತ್ತಿದೆ.
ಸೌತ್ ಇಂಡಿಯಾ ಸಿನಿಮಾಗಳು, ಅದರಲ್ಲೂ ತೆಲುಗು ಚಿತ್ರಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗತೊಡಗಿವೆ.
ಬಾಲಿವುಡ್ ಸಿನಿಮಾ ದೌರ್ಬಲ್ಯವೇನು?
ಹಾಗೆ ನೋಡಿದರೆ ಬಾಲಿವುಡ್ ಸಿನಿಮಾದ ಪ್ರೊಡಕ್ಷನ್ ಕ್ವಾಲಿಟಿ ಕಳಪೆಯಂತೂ ಇಲ್ಲ. ದಕ್ಷಿಣ ಭಾರತೀಯ ಚಿತ್ರರಂಗಕ್ಕಿಂತ ಉತ್ತಮ ಗುಣಮಟ್ಟದ ಸಿನಿಮಾಗಳು ಬರುತ್ತವೆ. ಆದರೆ ಬಾಲಿವುಡ್ನ ಪ್ರಮುಖ ದೌರ್ಬಲ್ಯ ಇರುವುದೇ ಅದರ ಕಥಾವಸ್ತು ಆಯ್ಕೆಯಲ್ಲಿ. ಕೇವಲ ಮುಂಬೈನ ಅರ್ಬನ್ ಕ್ಲಾಸ್ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಣೆಯಲಾದ ಕಥೆಗಳೇ ಬಾಲಿವುಡ್ನಲ್ಲಿ ಬಹುತೇಕ ಸಿನಿಮಾಗಳಲ್ಲಿ ಇರುತ್ತದೆ. ನಗರ ಮಾತ್ರವಲ್ಲ, ಉತ್ತರ ಭಾರತದಲ್ಲಿ ಬಡಬಗ್ಗರು, ಕೂಲಿ ಕಾರ್ಮಿಕರು, ಹಳ್ಳಿ ಪಟ್ಟಣಿಗರು ಎಲ್ಲರೂ ಇರುತ್ತಾರೆಂಬುದನ್ನು ಬಾಲಿವುಡ್ ಮರೆತಂತಿದೆ.
ದಕ್ಷಿಣ ಭಾರತೀಯ ಸಿನಿಮಾಗಳು ಗೆಲ್ಲುವುದು ಹೇಗೆ?
ಸೌತ್ ಇಂಡಿಯನ್ ಸಿನಿಮಾಗಳಲ್ಲಿ, ಅದರಲ್ಲೂ ತೆಲುಗು ಸಿನಿಮಾಗಳಲ್ಲಿ ಹೀರೋಯಿಸಂ ಹೆಚ್ಚು. ಮಾಸ್ ಹೀರೋಗಳೆಂದರೆ, ಮಾಸ್ ಸಿನಿಮಾಗಳೆಂದರೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಇದು ದಕ್ಷಿಣ ಭಾರತ ಮಾತ್ರವಲ್ಲ, ದೇಶದ ಎಲ್ಲೆಡೆಯೂ ಇರುವ ಮಾನಸಿಕತೆ. ಉತ್ತರ ಭಾರತದ ಸಾಮಾನ್ಯ ವ್ಯಕ್ತಿ ಕೂಡ ಬಯಸುವುದು ಮಾಸ್ ಸಿನಿಮಾಗಳನ್ನೇ.
ಇನ್ನೂ ಕೆಲ ವಿಶ್ಲೇಷಕರ ಪ್ರಕಾರ, ಸೌತ್ ಇಂಡಿಯಾ ಮೂವಿಗಳ ಪ್ರೊಡಕ್ಷನ್ ಗುಣಮಟ್ಟ ಬಾಲಿವುಡ್ಗಿಂತ ಉತ್ತಮವೆಂದು ಹೇಳಲಾಗುತ್ತದೆ. ಅದೇನೇ ಇದ್ದರೂ ಹಿಂದಿ ಮಾರುಕಟ್ಟೆಯಲ್ಲಿ ಹಿಟ್ ಆಗಿರುವ ಸೌತ್ ಸಿನಿಮಾಗಳೆಲ್ಲವೂ ಹೀರೋಯಿಸಂ ವೈಭವೀಕರಿಸಿದವುಗಳೇ. ಹಾಗೆಯೇ, ನಾಯಕನ ಪಾತ್ರ ಪೋಷಣೆಯಲ್ಲಿ ಹಿಂದಿಗಿಂತ ದಕ್ಷಿಣ ಸಿನಿಮಾಗಳದ್ದು ವಿಭಿನ್ನ ಭಾಷೆ.
ದಕ್ಷಿಣ ಭಾರತದ ಪಾನ್ ಇಂಡಿಯಾ ಸಿನಿಮಾಗಳೆಲ್ಲವೂ, ಅದರಲ್ಲೂ ಸೂಪರ್ ಡೂಪರ್ ಹಿಟ್ ಆಗಿರುವವೆಲ್ಲವೂ ಮಾಸ್ ಮೂವಿಗಳೇ. ಬಾಹುಬಲಿಯಿಂದ ದಕ್ಷಿಣ ಸಿನಿಮಾಗಳ ಪಾನ್ ಇಂಡಿಯಾ ಪ್ರೊಡಕ್ಷನ್ ಟ್ರೆಂಡ್ ಆಗತೊಡಗಿದ್ದು ಹೌದಾದರೂ ಅದಕ್ಕಿಂತ ಮುಂಚೆಯೇ ಸೌತ್ ಸಿನಿಮಾಗಳು ಉತ್ತರ ಭಾರತೀಯರನ್ನು ಅವರಿಸಿದ್ದವು.
ತೆಲುಗಿನಿಂದ ಹಿಂದಿಗೆ ಡಬ್ ಆದ ಸಿನಿಮಾಗಳು ಉತ್ತರ ಭಾರತೀಯರಿಗೆ ಇಷ್ಟವಾಗಿದ್ದವು. ಅಲ್ಲು ಅರ್ಜುನ್, ಮಹೇಶ್ ಬಾಬು ದಕ್ಷಿಣ ಭಾರತೀಯರಿಗೆ ಎಷ್ಟು ಚಿರಪರಿಚಿತರೋ ಉತ್ತರ ಭಾರತೀಯರಿಗೂ ಅಷ್ಟೇ ಚಿರಪರಿಚಿತರು. ಟಿವಿಯಲ್ಲಿ ಪ್ರಸಾರವಾಗುವ ಹಿಂದಿ ವರ್ಷನ್ ತೆಲುಗು ಸಿನಿಮಾಗಳಿಗೆ ಒಳ್ಳೆಯ ಟಿಆರ್ಪಿ ಬರುತ್ತವೆ. ದಕ್ಷಿಣ ಸಿನಿಮಾಗಳು ಹಿಂದಿ ಮಾರುಕಟ್ಟೆಯ ಥಿಯೇಟರ್ಗಳಲ್ಲಿ ಬೆಳಗಲು ಆರಂಭವಾಗಿದ್ದು ಮಾತ್ರ ಬಾಹುಬಲಿಯಿಂದ.
ಸಾವಿರ ಕೋಟಿ ಕ್ಲಬ್
ಭಾರತದಲ್ಲಿ ಈವರೆಗೆ ನಾಲ್ಕು ಸಿನಿಮಾಗಳು ಮಾತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂ ಗಳಿಕೆ ಮಾಡಿರುವುದು. ಅದರಲ್ಲಿ ಬಾಲಿವುಡ್ನದ್ದು ಒಂದು ಸಿನಿಮಾ ಮಾತ್ರ. ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾ 2024 ಕೋಟಿ ರೂ ಗಳಿಸಿ ನಂಬರ್ ಒನ್ ಸ್ಥಾನದಲ್ಲಿದೆ. ನಂತರದ ಮೂರು ಸಿನಿಮಾಗಳು ದಕ್ಷಿಣ ಭಾರತೀಯ ಭಾಷೆಯವೇ. ಬಾಹುಬಲಿ-2, ಆರ್ಆರ್ಆರ್ ಮತ್ತು ಕೆಜಿಎಫ್-2 ಸಿನಿಮಾಗಳು ಸಾವಿರ ಕೋಟಿ ರೂ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿವೆ. ಕೆಜಿಎಫ್-2 ಸಿನಿಮಾ ಉತ್ತರ ಭಾರತದಲ್ಲೇ ಅತಿ ಹೆಚ್ಚು ಗಳಿಸಿರುವುದು ಎಂಬುದು ಇಲ್ಲಿ ಗಮನಾರ್ಹ.
ಬಾಹುಬಲಿ-1, ಕೆಜಿಎಫ್-1, ಪುಷ್ಪಾ ಸಿನಿಮಾ ಕೂಡ ಒಳ್ಳೆಯ ಹಿಟ್ ಆದವು. ಈಗ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.
ವಿಕ್ರಾಂತ್ ರೋಣ ದಾಖಲೆ
ಸುದೀಪ್ರ ವಿಕ್ರಾಂತ್ ರೋಣ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂರೆ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ ಎರಡು ದಿನದಲ್ಲಿ 50-60 ಕೋಟಿ ರೂ ಕಲೆಕ್ಷನ್ ಮಾಡಿರುವುದು ತಿಳಿದುಬಂದಿದೆ. ಮೂರು ದಿನದಲ್ಲಿ 80 ಕೋಟಿ ರೂ ಸೂರೆ ಮಾಡಿದೆ. ಅತಿ ಕಡಿಮೆ ದಿನಗಳಲ್ಲಿ 50 ಕೋಟಿ ರೂ ಗಳಿಸಿರುವ ಕನ್ನಡ ಸಿನಿಮಾಗಳು ಕೆಲವೇ ಮಾತ್ರ. ಪುನೀತ್ ನಟಿಸಿರುವ ಜೇಮ್ಸ್, ಯಶ್ ನಟನೆಯ ಕೆಜಿಎಫ್-೨ ಮತ್ತು ಈಗ ವಿಕ್ರಾಂತ್ ರೋಣ.
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಪ್ರಶಂಸೆಗಳ ಮಹಾಪೂರವೇ ಹರಿದಿದೆ. ರಂಗಿತರಂಗ ಸಿನಿಮಾದ ಛಾಯೆ ದಟ್ಟವಾಗಿದೆ ಎಂಬ ಅಸಮಾಧಾನ ಬಿಟ್ಟರೆ ಉಳಿದಂತೆ ವಿಕ್ರಾಂತ್ ರೋಣನ ಸೊಬಗು ಬಹಳ ಮಂದಿಗೆ ಹಿಡಿಸಿದೆ. ಟಾಲಿವುಡ್ ಬಿಗ್ ಡೈರಕ್ಟರ್ ಎಸ್ ಎಸ್ ರಾಜಮೌಳಿ ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ಧಾರೆ.
ಹಿಂದಿಯಲ್ಲಿ ಡಬ್ ಆಗಿರುವ ವಿಕ್ರಾಂತ್ ರೋಣ ಸಿನಿಮಾಗೆ ಖುದ್ದು ಸಲ್ಮಾನ್ ಖಾನ್ ಅವರೇ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. ಜಾಕೆಲಿನ್ ಫರ್ನಾಂಡಿಸ್ ಮತ್ತು ಸುದೀಪ್ ಅಭಿನಯಿಸಿರುವ 'ರಾ ರಾ ರಕ್ಕಮ್ಮ' ಹಾಡು ಹಿಂದಿಯಲ್ಲೂ ಸೂಪರ್ ಹಿಟ್ ಆಗಿದೆ.
(ಒನ್ಇಂಡಿಯಾ ಸುದ್ದಿ)