ಹಂಬನತೋಟದತ್ತ ಚೀನಾ ಸರ್ವೇಕ್ಷಣಾ ಹಡಗು; ಭಾರತಕ್ಕೆ ಏನು ಅಪಾಯ?
ಚೀನಾದ ಅಪಾಯಕಾರಿ ವರ್ತನೆ ಎಲ್ಲರಿಗೂ ತಿಳಿದಿರುವುದೇ. ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಚೀನಾ ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ. ದೂರಾಲೋಚನೆಯಿಂದ ಪ್ರತೀ ಹೆಜ್ಜೆಯನ್ನೂ ಇಡುತ್ತದೆ. ನೆರೆಯ ದೇಶವಾಗಿ, ಅದರೊಂದಿಗೆ ಯುದ್ಧ ಮಾಡಿ, ಗಡಿಯಲ್ಲಿ ಕಿತ್ತಾಡಿ ಕಾಲ ಸಾಗಿಸುತ್ತಿರುವ ಭಾರತಕ್ಕೆ ಇದು ಚೆನ್ನಾಗಿ ಅರಿವಿದೆ.
ಹೀಗಾಗಿ, ಚೀನಾದ ಯುಆನ್ ವಾಂಗ್5 ಹಡಗು ಶ್ರೀಲಂಕಾಗೆ ಬರುತ್ತಿರುವುದು ಭಾರತಕ್ಕೆ ಆತಂಕಕ್ಕೆ ಕಾರಣವಾಗಿದೆ. ಚೀನಾ ಹಡಗಿನಿಂದ ಭಾರತಕ್ಕೆ ಯಾವ ಅಪಾಯ ಇಲ್ಲ. ಇಂಧನ ಮರುಪೂರಣಕ್ಕಾಗಿ ಮಾತ್ರ ಅದು ಬರುತ್ತಿದೆ ಎಂದು ಶ್ರೀಲಂಕಾ ಹೇಳುತ್ತಿದೆ. ಆದರೆ, ವಾಸ್ತವವಾಗಿ ಇದು ಹೌದಾ?
ಶ್ರೀಲಂಕಾ ಕಡೆ ಹೊರಟ ಚೀನಾ ಹಡಗು: ಭದ್ರತೆಯ ಬಗ್ಗೆ ಭಾರತದ ಆತಂಕ
ಚೀನಾದ ಯುವಾನ್ ವಾಂಗ್5 ಹಡಗು ಜುಲೈ 13ರಂದು ಚೀನಾದಿಂದ ಹೊರಟಿರುವುದು ತಿಳಿದುಬಂದಿದೆ. ಆಗಸ್ಟ್ 11 ಅಥವಾ 12ರಂದು ಶ್ರೀಲಂಕಾದ ಹಂಬನ್ತೋಟ ಬಂದರು ತಲುಪುವ ನಿರೀಕ್ಷೆ ಇದೆ. ಆಗಸ್ಟ್ 17ರವರೆಗೆ ಇದು ಇಲ್ಲಿಯೇ ಇರಲಿದೆ.
ಇದೇ ವೇಳೆ, ಯುವಾನ್ ವಾಂಗ್5 ಜೊತೆ ಇನ್ನೊಂದು ಹಡಗು ಕೂಡ ಚೀನಾದಿಂದ ಹೊರಟಿದೆ. ಇದು ಆಫ್ರಿಕಾದ ಪೂರ್ವಭಾಗದ ಡಿಜಿಬೋಟಿಯಲ್ಲಿರುವ ಚೀನೀ ನೆಲೆಯತ್ತ ಹೋಗುತ್ತಿದೆ. ಇದು ಕ್ಷಿಪಣಿ ನಾಶಕ ವ್ಯವಸ್ಥೆ ಹೊಂದಿರುವ ಹಡಗಾಗಿದೆ.
ಇವೆಲ್ಲಾ ಬೆಳವಣಿಗೆಯು ಭಾರತಕ್ಕೆ ಸಹಜವಾಗಿಯೇ ಆತಂಕ ಮತ್ತು ಸಂದೇಹಗಳನ್ನು ಹುಟ್ಟುಹಾಕಿದೆ. ಭಾರತ ಅಷ್ಟು ಕಳವಳ ಪಡುವಂಥ ಅಂಶ ಏನಿದೆ?
ಶ್ರೀಲಂಕಾ ಅನುಮಾನಾಸ್ಪದ ವರ್ತನೆ
ಚೀನಾದ ಹಡಗು ಕೆಲ ವಾರಗಳ ಹಿಂದೆಯೇ ಹೊರಟು ಬರುತ್ತಿದ್ದಾಗಲೇ ಭಾರತಕ್ಕೆ ಸಂದೇಹ ಬಂದಿತ್ತು. ಚೀನೀ ಹಡಗು ಹಂಬನ್ತೋಟಕ್ಕೆ ಬರುತ್ತಿದೆಯೇ ಎಂದು ಕೇಳಲಾಗಿತ್ತು. ಆಧರೆ, ಶ್ರೀಲಂಕಾ ಈ ಬೆಳವಣಿಗೆಯನ್ನು ನಿರಾಕರಿಸಿತ್ತು. ಚೀನಾದ ಹಡಗು ಬರುತ್ತಿಲ್ಲ ಎಂದೇ ಹೇಳಿತ್ತು. ಆದರೆ ಹಡಗು ಸಮೀಪಕ್ಕೆ ಬರುತ್ತಿರುವಂತೆಯೇ ಈಗ ಶ್ರೀಲಂಕಾ ಮಾತಿನ ವರಸೆ ಬದಲಾಗಿದೆ.
"ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳಿಗೆ ಸಾಮಾನ್ಯವಾಗಿ ಅನುಮತಿ ನೀಡುತ್ತೇವೆ. ಆ ಹಿನ್ನೆಲೆಯಲ್ಲಿ ಚೀನೀ ಹಡಗಿಗೂ ಅನುಮತಿ ನೀಡಿದ್ದೇವೆ. ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾದಂಥ ಹಲವು ದೇಶಗಳಿಂದ ಇಂಥ ಹಡಗುಗಳು ಆಗಾಗ್ಗೆ ಬಂದು ಹೋಗುತ್ತಿರುತ್ತವೆ" ಎಂದು ಶ್ರೀಲಂಕಾ ಸ್ಪಷ್ಟನೆ ಕೊಟ್ಟಿದೆ.
ಚೀನಾ ಹಡಗು ಏನು ಮಾಡುತ್ತೆ?
ಚೀನಾದ ಯುವಾನ್ ವಾಂಗ್5 ಹಡಗು 2007ರಲ್ಲಿ ನಿರ್ಮಿತವಾಗಿದೆ. 222 ಮೀಟರ್ ಉದ್ದ ಮತ್ತು 25.2 ಮೀಟರ್ ಅಗಲ ಇರುವ ಇದು ಟ್ರ್ಯಾಕಿಂಗ್ ಅಥವಾ ಸರ್ವೇಕ್ಷಣೆ ಹಡಗು ಎನ್ನಲಾಗಿದೆ.
ಶ್ರೀಲಂಕಾ ಹೇಳಿರುವ ಪ್ರಕಾರ ಈ ಹಡಗು ಇಂಧನ ಭರ್ತಿಗಾಗಿ ಹಂಬನ್ತೋಟ ಬಂದರಿಗೆ ಬರತ್ತಿದೆ. ಈ ಹಡಗು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗಗನ ಸರ್ವೇಕ್ಷಣೆ, ಉಪಗ್ರಹ ನಿಯಂತ್ರಣ ಮತ್ತು ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತದೆ. ಜುಲೈ 13ರಿಂದ ಸಾಗಿ ಬರುತ್ತಿರುವ ಈ ಹಡಗಿನಲ್ಲಿ 500 ಮಂದಿ ಚೀನೀ ಸಿಬ್ಬಂದಿ ಇರುವುದು ತಿಳಿದುಬಂದಿದೆ.
ಆದರೆ, ಸದ್ಯ ಚೀನಾದ ಈ ಹಡಗು ಯಾವ ಉದ್ದೇಶಕ್ಕೆ ಹಂಬನ್ತೋಟಕ್ಕೆ ಬರುತ್ತಿದೆ? ಅಲ್ಲಿಂದ ಮುಂದೇನು ಮಾಡುತ್ತದೆ ಎಂಬುದು ಭಾರತಕ್ಕೆ ಇನ್ನೂ ಸ್ಪಷ್ಟವಾಗಿಲ್ಲ.
ಭಾರತದ ಆತಂಕ ಏನು?
ಹಂಬನತೋಟ ಬಂದರು ಬಹಳ ಆಯಕಟ್ಟಿನ ಜಾಗದಲ್ಲಿದೆ. ಚೀನಾ ವಶದಲ್ಲಿರುವ ಈ ಬಂದರಿನಲ್ಲಿ ಚೀನಾದ ಹಡಗು ಬಂದು ಕೂರುವುದು ಭಾರತಕ್ಕೆ ಸಹಜವಾಗಿಯೇ ಆತಂಕ ಮೂಡಿಸಿದೆ.
ಹಿಂದೂ ಮಹಾಸಾಗರದ ಒಳಗೆ ಅಡಗಿರುವ ಭಾರತದ ಜಲಾಂತರ್ಗಾಮಿ ನೌಕೆಗಳನ್ನು ಗುರುತಿಸಲು ಚೀನಾ ಪ್ರಯತ್ನಿಸಬಹುದು ಎಂಬ ಆತಂಕ ಭಾರತಕ್ಕೆ ಇದೆ. ಈ ಹಡಗಿನಿಂದ 750 ಕಿಮೀ ದೂರದವರೆಗಿನ ಸ್ಥಳಗಳ ಮೇಲೆ ಕಣ್ಣಾಡಿಸಲು ಸಾಧ್ಯವಿದೆ. ಭಾರತದ ಭಾಗದಲ್ಲಿರುವ ಕಲ್ಪಕಂ, ಕೂಡನ್ಕುಲಂ ಅಣು ಸಂಶೋಧನ ಕೇಂದ್ರಗಳ ಮೇಲೆ ಚೀನಾದವರು ಒಂದು ಕಣ್ಣಿಡಲು ಸಾಧ್ಯವಾಗುತ್ತದೆ. ದಕ್ಷಿಣ ಭಾರತೀಯ ರಾಜ್ಯಗಳ ಬಂದರುಗಳನ್ನು ಅಲ್ಲಿಂದಲೇ ಪರಿಶೀಲಿಸಿ ಇಲ್ಲಿನ ಸೂಕ್ಷ್ಮ ಕಟ್ಟಡಗಳ ಬಗ್ಗೆ ಚೀನಾ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ.
ಹಾಗೆಯೇ, ಭಾರತ ನಡೆಸುವ ಕ್ಷಿಪಣಿ ಪರೀಕ್ಷೆಯ ವಿವರವನ್ನು ಚೀನಾ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕ್ಷಿಪಣಿಯ ವ್ಯಾಪ್ತಿ, ಸಾಮರ್ಥ್ಯ, ನಿಖರತೆ ಇತ್ಯಾದಿ ಸೂಕ್ಷ್ಮ ಮಾಹಿತಿ ಚೀನಾಗೆ ಸಿಕ್ಕಿಬಿಡುತ್ತದೆ.
ಹಿಂದೂ ಮಹಾಸಾಗರ ಪ್ರದೇಶ ಭಾರತಕ್ಕೆ ಬಹಳ ಮುಖ್ಯ. ಆದರೆ, ಚೀನಾದ ಹಡಗುಗಳ ಸಂಚಾರ ಗಮನಿಸಿದರೆ ಅದು ಪೂರ್ವ ಆಫ್ರಿಕಾವರೆಗೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವಂತಿದೆ. ಅದಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಯುದ್ಧ ಮಾಡಬೇಕಾದ ಪರಿಸ್ಥಿತಿ ಬಂದರೆ ಚೀನಾಗೆ ಹಂಬನತೋಟ ಪ್ರಶಸ್ತ ದಾಳಿ ನೆಲೆಯಾಗಲಿದೆ. ಉತ್ತರದಿಂದ ಮತ್ತು ದಕ್ಷಿಣದಿಂದ ಭಾರತದ ಮೇಲೆ ಅದು ಆಕ್ರಮಣ ಮಾಡಲು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಚೀನಾ ಮರ್ಜಿಯಲ್ಲಿ ಶ್ರೀಲಂಕಾ
ಚೀನಾದ ಸಾಲದ ಸುಳಿಗೆ ಶ್ರೀಲಂಕಾ ಸಿಲುಕಿಹೋಗಿದೆ. ಬಿಳಿ ಆನೆ ಯೋಜನೆಗಳೆಂದ ಕರೆಯಲಾಗುವ ಹಲವು ಬಂದರು ಅಭಿವೃದ್ಧಿ ಯೋಜನೆಗಳಿಗೆ ಅಪಾರ ಸಾಲ ಮಾಡಿಕೊಂಡಿದೆ. ಈ ಅನಗತ್ಯ ಯೋಜನೆಗಳಿಗೆ ಚೀನಾದಿಂದಲೇ ಸಾಲ ಪಡೆದಿದೆ. ಅದೂ ಅಧಿಕ ಬಡ್ಡಿಗೆ. ಈ ಬಡ್ಡಿಯ ಹಣ ಕೂಡ ವಾಪಸ್ ಮಾಡಲಾಗದೆ ಕೊನೆಗೆ ಹಂಬನತೋಟ ಬಂದರನ್ನು ಶ್ರೀಲಂಕಾ ಚೀನಾಗೆ ಒಪ್ಪಿಸಿ ಕೈತೊಳೆದುಕೊಂಡಿದೆ. 99 ವರ್ಷಗಳ ಲೀಸ್ ಮೇಲೆ ಹಂಬನತೋಟ ಬಂದರು ಚೀನಾದ ವಶವಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video