ಇದು ಕ್ರಿಕೆಟ್ ಗಲಾಟೆಯಾ, ಹಿಂದೂ ಮುಸ್ಲಿಂ ಗಲಭೆಯಾ? ಲೈಸಿಸ್ಟರ್ನಲ್ಲಿ ನಡೆದದ್ದೇನು?
ರಿಟನ್ನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಲೈಸಿಸ್ಟರ್ ಹೊತ್ತಿ ಉರಿಯುತ್ತಿದೆ. ದಕ್ಷಿಣ ಏಷ್ಯನ್ನರ ಬಾಹುಳ್ಯ ಇರುವ ಈ ನಗರದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕೋಮುಗಲಭೆ ನಡೆದಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಎನ್ನುವುದಕ್ಕಿಂತ ಭಾರತ ಮತ್ತು ಪಾಕಿಸ್ತಾನ ಸಮುದಾಯದವರ ಮಧ್ಯೆ ಘರ್ಷಣೆ ನಡೆದಿದೆ.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಶುರುವಾದ ವಿವಿಧ ಗಲಭೆ ಘಟನೆಗಳಲ್ಲಿ ಹಲವರಿಗೆ ಗಾಯಗಳಾಗಿವೆ. ಹಲವು ಕಟ್ಟಡಗಳು, ವಾಹನ ಇತ್ಯಾದಿಗಳ ಮೇಲೆ ದಾಳಿ ಮಾಡಲಾಗಿದೆ. ಲೈಸಿಸ್ಟರ್ ಸಿಟಿ ಪೊಲೀಸರು ಈ ಹಿಂಸಾಚಾರ ಘಟನೆಗಳ ಸಂಬಂಧ 47 ಮಂದಿಯನ್ನು ಬಂಧಿಸಿದ್ದಾರೆ.
ಅಮೋಸ್ ನೊರೋನ್ಹಾ ಎಂಬ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧಿಶರೊಬ್ಬರು 10 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಈತ ತನ್ನ ಬಳಿ ಗನ್ ಇಟ್ಟುಕೊಂಡಿದ್ದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಶಿಕ್ಷೆ ನೀಡಲಾಗಿದೆ.
ಇದೇ ವೇಳೆ, ಲೈಸಿಸ್ಟರ್ ಸಿಟಿಯಲ್ಲಿರುವ ಹಿಂದೂ ಮಂದಿರವೊಂದರ ಮೇಲೆ ನಡೆದ ದಾಳಿ ಘಟನೆಯನ್ನು ಭಾರತದ ರಾಯಭಾರ ಕಚೇರಿ ಬಲವಾಗಿ ಖಂಡಿಸಿದೆ. ಈ ಕೃತ್ಯ ಎಸಗಿದವರ ವಿರುದ್ಧ ಕೂಡಲೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದೆ.
ಅಷ್ಟಕ್ಕೂ ಲೈಸಿಸ್ಟರ್ ನಗರದಲ್ಲಿ ಕೋಮು ಕಿಡಿ ಹೊತ್ತಿಕೊಂಡಿದ್ದು ಯಾಕೆ? ಅಲ್ಲಿಂದ ಈವರೆಗೆ ಆಗಿರುವ ಬೆಳವಣಿಗೆಗಳೇನು ಎಂಬಿತ್ಯಾದಿ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.
ಕ್ರಿಕೆಟ್ ಮ್ಯಾಚ್ನಿಂದ ಶುರು
ಒಡೆದ ಮನಸುಗಳನ್ನು ಕ್ರೀಡೆ ಬೆಸೆಯಬಲ್ಲುದು ಎಂದು ಹಿರಿಯರು ಹೇಳುತ್ತಾರೆ. ಆದರೆ, ಭಾರತ ಮತ್ತು ಪಾಕಿಸ್ತಾನೀಯರ ಮಧ್ಯೆ ಮನಸುಗಳ ಒಡಕನ್ನು ಇನ್ನಷ್ಟು ಹೆಚ್ಚಲು ಕ್ರಿಕೆಟ್ ಕಾರಣವಾಗಿದೆ. ಅದು ಆಗಸ್ಟ್ 28, ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ. ಭಾರತ ತಂಡ ಗೆದ್ದಿತ್ತು. ಆ ಸಂಭ್ರಮದಲ್ಲಿ ಭಾರತ ತಂಡದ ಬೆಂಬಲಿಗರು ಸಂಭ್ರಮಿಸಿದರು. ಈ ವೇಳೆ ಭಾರತ ಮತ್ತು ಪಾಕಿಸ್ತಾನ ಬೆಂಬಲಿಗರ ಮಧ್ಯೆ ಸಣ್ಣಪುಟ್ಟ ಘರ್ಷಣೆ ಕೊನೆಗೆ ದೊಡ್ಡ ಮಟ್ಟಕ್ಕೆ ಬೆಳೆದಿದೆ.
ಮತ್ತೆ ಸೆಪ್ಟೆಂಬರ್ 4ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಈಗ ಪಾಕಿಸ್ತಾನ ಟೀಮ್ ಗೆದ್ದಿದೆ. ಅದಾದ ಬಳಿಕ ಪಾಕಿಸ್ತಾನೀ ಬೆಂಬಲಿಗರು ಇನ್ನಷ್ಟು ಗಲಭೆ ನಡೆಸಿದರು. ದಿನವೂ ಅಲ್ಲಲ್ಲಿ ಗಲಭೆ ಘಟನೆಗಳು ನಡೆಯುತ್ತಿದ್ದುದು ತಿಳಿದುಬಂದಿದೆ.
ಆದರೆ, ಸೆಪ್ಟೆಂಬರ್ 16, ಶುಕ್ರವಾರದಂದು ನಗರದ ಪೂರ್ವಭಾಗದಲ್ಲಿ ಹೆಚ್ಚಿನ ಹಿಂಸಾಚಾರಗಳಾದವು. ಮರುದಿನ ಹಿಂಸಾಚಾರ ಇನ್ನಷ್ಟು ಹೆಚ್ಚಾಯಿತು. ಸೆಪ್ಟೆಂಬರ್ 18ರಂದು ಹಿಂದೂ ದೇವಸ್ಥಾನವೊಂದರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಭಗವಾಧ್ವಜ ಕಿತ್ತೆಸೆದ ಘಟನೆಯೂ ನಡೆದಿದೆ. ಅದರ ವಿಡಿಯೋ ತುಣುಕೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೆಪ್ಟೆಂಬರ್ 19ರಂದು ಭಾರತೀಯ ರಾಯಭಾರ ಕಚೇರಿ ಈ ಘಟನೆಯನ್ನು ಬಲವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿತು.
ಲೈಸಿಸ್ಟರ್ನಲ್ಲಿ ಯಾಕೆ ಗಲಭೆ?
ಬ್ರಿಟನ್ನ ಲೈಸಿಸ್ಟರ್ ಸಿಟಿಯಲ್ಲಿ ದಕ್ಷಿಣ ಏಷ್ಯನ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಹಿಂದೂ ಮತ್ತು ಮುಸ್ಲಿಮ್ ಸಮುದಾಯದವರು ಶೇ. 35ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ. 2021ರ ಮಾಹಿತಿ ಪ್ರಕಾರ ಲೈಸಿಸ್ಟರ್ನಲ್ಲಿ ಒಟ್ಟಾರೆ ಜನಸಂಖ್ಯೆ 3,68,600 ಇದೆ. ಮುಸ್ಲಿಮರ ಸಂಖ್ಯೆ ಶೇ. 20ರ ಸನಿಹ ಇದೆ. ಸ್ಥಳೀಯ ಕ್ರೈಸ್ತರು ಬಿಟ್ಟರೆ ಮುಸ್ಲಿಮರದ್ದೇ ಹೆಚ್ಚು ಸಂಖ್ಯೆ. ನಂತರದ ಸ್ಥಾನ ಹಿಂದೂಗಳದ್ದು. ಇಲ್ಲಿ ಹಿಂದೂಗಳ ಸಂಖ್ಯೆ ಶೇ. 15ಕ್ಕಿಂತ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಲೈಸಿಸ್ಟರ್ನಲ್ಲಿ ವಲಸಿಗರ ಪ್ರಾಬಲ್ಯ ಹೆಚ್ಚು. ಹಿಂದೂ ಮತ್ತು ಮುಸ್ಲಿಮರು ಮೊದಲಿಂದಲೂ ಇಲ್ಲಿ ಸೌಹಾರ್ದತೆಯಿಂದ ಇದ್ದರಾದರೂ ಇತ್ತೀಚಿನ ಕೆಲ ವರ್ಷಗಳಿಂದ ಆಗಾಗ್ಗೆ ಇಲ್ಲಿ ಸೂಕ್ಷ್ಮ ಪರಿಸ್ಥಿತಿ ಮನೆಮಾಡುತ್ತದೆ ಎಂದು ಹೇಳಲಾಗುತ್ತದೆ.
ಹಿಂದೂ ಉಗ್ರವಾದಿಗಳೆನ್ನುವ ಮುಸ್ಲಿಮರು
ಲೈಸಿಸ್ಟರ್ನಲ್ಲಿ ನಡೆದ ಗಲಭೆಗಳಿಗೆ ಹಿಂದೂಗಳೇ ಕಾರಣ ಎಂಬುದು ಇಲ್ಲಿನ ಮುಸ್ಲಿಮರ ವಾದ. ಆಗಸ್ಟ್ 28ರಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿದ ಬಳಿಕ ಹಿಂದೂಗಳು ರಸ್ತೆ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಅದೇ ಆಗಿದ್ದರೆ ಸಾಮಾನ್ಯ ಘಟನೆ ಎನಿಸುತ್ತಿತ್ತು. ಆದರೆ, ಮಸೀದಿ ಮುಂದೆ ಬೇಕಂತಲೇ ಸಾಗುತ್ತಾ ಜೈ ಶ್ರೀರಾಮ್ ಇತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರು. ಮುಸ್ಲಿಮ್ ಹೆಣ್ಮಕ್ಕಳನ್ನು ಹೆದರಿಸುತ್ತಿದ್ದರು. ಮುಸ್ಲಿಮರನ್ನು ಗುರಿಯಾಗಿಸಿ ದಾಳಿ ಘಟನೆಗಳು ನಡೆದವು ಎಂದು ಕೆಲ ಮುಸ್ಲಿಂ ಸೋಷಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಬರೆಯಲಾಯಿತು.
ಲೈಸಿಸ್ಟರ್ನಲ್ಲಿ ಮೊದಲೆಲ್ಲಾ ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಇರುತ್ತಿದ್ದರು. ಇತ್ತೀಚೆಗೆ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ನ ಬೆಂಬಲಿಗರು ಈ ನಗರಕ್ಕೆ ಬಂದಿದ್ದಾರೆ. ಇವರಿಂದ ಗಲಾಟೆಗಳಾಗುತ್ತಿವೆ. ಇವರು ಹಿಂದೂ ಉಗ್ರಗಾಮಿಗಳು, ಫ್ಯಾಸಿಸ್ಟ್ಗಳು ಎಂದು ಕೆಲ ಮುಸ್ಲಿಮರು ಬಣ್ಣಿಸಿದ್ದಾರೆ. ಇನ್ನೂ ಕೆಲವರು, ಸಿಖ್ಖರ ಮೇಲೂ ಹಿಂದೂಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಿದೆ. ಹಾಗೆಯೇ, ಲೈಸಿಸ್ಟರ್ ನಗರದ ಬೀದಿಗಳಲ್ಲಿ ಮೆರೆವಣಿಗೆ ಮಾಡಿದ ಹಿಂದೂಗಳು, 'ಡೆತ್ ಟು ಮುಸ್ಲಿಮ್ಸ್', 'ಡೆತ್ ಟು ಪಾಕಿಸ್ತಾನ್' ಎಂಬಿತ್ಯಾದಿ ದ್ವೇಷಪೂರಿತ ಘೋಷಣೆಗಳನ್ನು ಕೂಗುತ್ತಿದ್ದರು ಎಂದೂ ಆರೋಪಿಸಲಾಗಿದೆ.
Tweet
Embed:
|
ಹಿಂದೂಗಳು ಹೇಳುವುದೇನು?
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಸಂಬಂಧದ ಗಲಾಟೆಯನ್ನೇ ನೆವವಾಗಿಸಿಕೊಂಡು ಮುಸ್ಲಿಮರು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳಾಗಿವೆ. ಹಿಂದೂ ಧರ್ಮದ ಸಂಕೇತಗಳಿರುವ ಯಾವುದೇ ವಸ್ತು ಸಿಕ್ಕರೂ ಮುಸ್ಲಿಂ ಗುಂಪುಗಳು ದಾಳಿ ಮಾಡುತ್ತಿವೆ. ಕೆಲ ಹಿಂದೂ ವ್ಯಕ್ತಿಗಳನ್ನು ಇರಿದಿದ್ದಾರೆ ಎಂದು ಹಿಂದೂ ಸಮುದಾಯದವರು ಅಲವತ್ತುಕೊಂಡಿದ್ದಾರೆ.
ಗಣೇಶ ಹಬ್ಬ ಆಚರಿಸುತ್ತಿದ್ದ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಿಂದೂ ಕ್ಯಾಬ್ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹಿಂದೂ ದೇವಸ್ಥಾನವನ್ನು ಗುರಿಯಾಗಿಸಿದ್ದಾರೆ. ಹಿಂದೂಗಳೆಲ್ಲರನ್ನೂ ಫ್ಯಾಸಿಸ್ಟ್ಗಳೆಂದು, ಭಯೋತ್ಪಾದಕರೆಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಹಿಂದೂಗಳಿಂದಲೇ ದಾಳಿಗಳಾಗುತ್ತಿದ್ದು ಮುಸ್ಲಿಮರು ಆತ್ಮರಕ್ಷಣೆ ಮಾತ್ರ ಮಾಡಿಕೊಳ್ಳುತ್ತಿದ್ದಾರೆ ಎಂದೂ ಬಿಂಬಿಸಲಾಗುತ್ತಿದೆ. ಇಸ್ಲಾಂ ಮೂಲಭೂತವಾದಿಗಳು ಹಿಂದೂಗಳ ಇರುವಿಕೆಯನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಹಿಂದೂಗಳು ಆರೋಪಿಸುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)