National Herald Case: ಇವರೇ ನೋಡಿ ರಾಹುಲ್ ಗಾಂಧಿ ವಿಚಾರಣೆ ನಡೆಸಿದ 'ಇಡಿ' ಕಿಲಾಡಿ!
ನವದೆಹಲಿ, ಜೂನ್ 17: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಚಾರಣೆಯು ಶುರುವಾದ ದಿನದಿಂದ ಇದುವರೆಗೂ ಮುಖ್ಯವಾಹಿನಿಗಳಲ್ಲಿ ಕೇಳಿ ಬಂದಿರುವ ಹೆಸರೇ ಸಂಜಯ್ ಕುಮಾರ್ ಮಿಶ್ರಾ.
ಕೇಂದ್ರೀಯ ತನಿಖಾ ಸಂಸ್ಥೆ ಆಗಿರುವ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲೇ ರಾಹುಲ್ ಗಾಂಧಿ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳ ನಿರಂತರ ವಿಚಾರಣೆ ಬಳಿಕ ಕೊಂಚ ಬ್ರೇಕ್ ನೀಡಲಾಗಿದೆ. ಜೂನ್ 18ರ ಶುಕ್ರವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಸಮನ್ಸ್ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣ ಏನು? ರಾಹುಲ್, ಸೋನಿಯಾ ಮೇಲಿನ ಆರೋಪವೇನು?
ಆದಾಯ ತೆರಿಗೆ ಇಲಾಖೆಯ 1984 ರ ಬ್ಯಾಚ್ ಕೇಡರ್ ಅಧಿಕಾರಿ ಆಗಿರುವ ಸಂಜಯ್ ಕುಮಾರ್ ಮಿಶ್ರಾ ಈಗ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಹುಲ್ ಗಾಂಧಿ ಅನ್ನು ವಿಚಾರಣೆಗೆ ಒಳಪಡಿಸುತ್ತಿರುವ ಈ ಅಧಿಕಾರಿಯ ಹಿನ್ನೆಲೆ ಏನು?, ಯಾರು ಈ ಸಂಜಯ್ ಕುಮಾರ್ ಮಿಶ್ರಾ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಸಂಜಯ್ ಕುಮಾರ್ ಮಿಶ್ರಾ 1984-ಬ್ಯಾಚ್ ಅಧಿಕಾರಿ
ಬಹಳ ಚಿಕ್ಕವಯಸ್ಸಿನಲ್ಲಿಯೇ ದೇಶದ ಆದಾಯ ತೆರಿಗೆ ಅಧಿಕಾರಿ ಆಗಿ ಸಂಜಯ್ ಕುಮಾರ್ ಮಿಶ್ರಾ ನೇಮಕಗೊಂಡಿರುವ ಅಧಿಕಾರಿ ಆಗಿದ್ದಾರೆ. ಆದಾಯ ತೆರಿಗೆ ಕೇಡರ್ನ 1984-ಬ್ಯಾಚ್ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದಾರೆ. ಆರ್ಥಿಕ ತಜ್ಞ ಎಂದು ಕರೆಯಲ್ಪಡುವ ಸಂಜಯ್ ಮಿಶ್ರಾ, ಅನೇಕ ಪ್ರಮುಖ ಮತ್ತು ದೊಡ್ಡ ಪ್ರಕರಣಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ. ಇದು ತನಿಖಾ ಸಂಸ್ಥೆಗೆ ಗಣನೀಯ ಯಶಸ್ಸನ್ನು ತಂದುಕೊಟ್ಟಿದೆ.
2019ರಲ್ಲಿ ಮಿಶ್ರಾ ಸೇವಾವಧಿ ವಿಸ್ತರಣೆ
ಕಳೆದ 2019ರಲ್ಲಿ ತಮ್ಮ ಉತ್ತಮ ಕಾರ್ಯವೈಖರಿಯಿಂದಾಗಿ ಸಂಜಯ್ ಕುಮಾರ್ ಮಿಶ್ರಾ ಸೇವಾ ವಿಸ್ತರಣೆಯನ್ನು ಪಡೆದುಕೊಂಡರು. ಇಲ್ಲದಿದ್ದರೆ ಪೂರ್ವ ನಿಗದಿಯಂತೆ ಅವರು 2021ರ ನವೆಂಬರ್ 16ರಂದು ನಿವೃತ್ತಿ ಹೊಂದಬೇಕಿತ್ತು. ನಿರ್ದೇಶಕರೊಬ್ಬರು ತಮ್ಮ ಸೇವಾವಧಿಯಲ್ಲಿ ಎರಡು ವರ್ಷ ಹೆಚ್ಚುವರಿ ವಿಸ್ತರಣೆ ಪಡೆದಿರುವುದು ಜಾರಿ ನಿರ್ದೇಶನಾಲಯದ ಇತಿಹಾಸದಲ್ಲೇ ಮೊದಲಾಗಿತ್ತು. ಇದೀಗ ಅವರು ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ.
ಜಾರಿ ನಿರ್ದೇಶನಾಲಯದ ನಿರ್ದೇಶಕರು ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ನಿಗದಿಪಡಿಸಲಾಗಿತ್ತು. ಆದರೆ ಈಗ ಅದನ್ನು ಐದು ವರ್ಷಗಳಿಗೆ ಹೆಚ್ಚಿಸಲಾಗಿದೆ. ಇಡಿ ನಿರ್ದೇಶಕರ ಅವಧಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿದ ವಿವಾದಾತ್ಮಕ ಸುಗ್ರೀವಾಜ್ಞೆಯ ನಂತರದಲ್ಲಿ ಈ ಪ್ರಕಟಣೆಯ ಮೊದಲ ಫಲಾನುಭವಿಯೇ ಸಂಜಯ್ ಕುಮಾರ್ ಮಿಶ್ರಾ ಆಗಿದ್ದಾರೆ.
ಕೇಂದ್ರ ಸರ್ಕಾರದಿಂದ ಎರಡು ಬಾರಿ ಮಿಶ್ರಾ ಸೇವಾವಧಿ ವಿಸ್ತರಣೆ
ಆರಂಭದಲ್ಲಿ ನವೆಂಬರ್ 19, 2018 ರಂದು ಎರಡು ವರ್ಷಗಳ ಅಧಿಕಾರಾವಧಿಗೆ ಸಂಜಯ್ ಕುಮಾರ್ ಮಿಶ್ರಾ ಅನ್ನು ನೇಮಿಸಲಾಯಿತು. ಆದರೆ 2020ರಲ್ಲಿ ಅವರ ಅವಧಿ ಮುಗಿಯುವುದಕ್ಕೂ ಪೂರ್ವದಲ್ಲಿಯೇ ಕೇಂದ್ರ ಸರ್ಕಾರವು ತನ್ನ ನೇಮಕಾತಿ ಆದೇಶವನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಪರಿಷ್ಕರಿಸಿತು. ಇದರಿಂದ ಅವರು ನವೆಂಬರ್ 2021ರಲ್ಲಿ ನಿವೃತ್ತಿ ಹೊಂದಬೇಕಿತ್ತು. ಆದರೆ ಮತ್ತೊಮ್ಮೆ ಹೊಸ ಆದೇಶವನ್ನು ಹೊರಡಿಸುವ ಮೂಲಕ ಮಿಶ್ರಾ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಣೆ ಮಾಡಲಾಯಿತು.
ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಸಿದ್ಧ ಪಡೆದಿದ್ದ ಮಿಶ್ರಾ
ಉತ್ತರ ಪ್ರದೇಶ ಮೂಲದ ಸಂಜಯ್ ಕುಮಾರ್ ಮಿಶ್ರಾ, ಆದಾಯ ತೆರಿಗೆ ಇಲಾಖೆಯಲ್ಲಿ ಹಲವು ಉನ್ನತ ಮಟ್ಟದ ಪ್ರಕರಣಗಳನ್ನು ಅದ್ಭುತವಾಗಿ ತನಿಖೆ ಮಾಡಿ ಅಂತಿಮ ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಕಾರಣಕ್ಕಾಗಿ, ನವೆಂಬರ್ 19, 2018ರಂದು, ಅವರನ್ನು ಜಾರಿ ನಿರ್ದೇಶನಾಲಯದಲ್ಲಿ ಪ್ರಧಾನ ವಿಶೇಷ ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಕೆಲವು ದಿನಗಳ ನಂತರ, ಅವರನ್ನು ಇಡಿ ನಿರ್ದೇಶಕರನ್ನಾಗಿ ನೇಮಿಸುವ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲಾಯಿತು.
ಏಕೆ ವಿಸ್ತರಣೆ ಆಯ್ತು ಸಂಜಯ್ ಕುಮಾರ್ ಮಿಶ್ರಾ ಸೇವಾವಧಿ
ಭಾರತದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಇಡಿ ನಿರ್ದೇಶಕ, ಸಿಬಿಐ ನಿರ್ದೇಶಕರ ಸೇವಾವಧಿ ಅನ್ನು ಎರಡು ವರ್ಷ ವಿಸ್ತರಣೆ ಮಾಡಲಾಯಿತು. ಮುಖ್ಯಸ್ಥರನ್ನು ಆಗಾಗ್ಗೆ ಬದಲಾವಣೆ ಮಾಡುವುದರಿಂದ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖ ವಿಷಯಗಳ ವಿಚಾರಣೆಗೆ ಅಡ್ಡಿಯಾಗುತ್ತದೆ ಎಂದು ವಾದಿಸಲಾಗುತ್ತಿತ್ತು. ಹೀಗೆ ಪ್ರಮುಖ ವಿಷಯಗಳ ಮೇಲೆ ಪರಿಣಾಮ ಬೀರಬಾರದು ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕಾರಾವಧಿಯು ಕನಿಷ್ಠ ಐದು ವರ್ಷಗಳಾಗಿರಬೇಕು ಎಂದು ನ್ಯಾಯಾಲಯದಲ್ಲಿ ಚರ್ಚಿಸಲಾಯಿತು. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕಾನೂನನ್ನು ರಚಿಸಲಾಗಿತ್ತು. ನಂತರ ಅದನ್ನು ಅಂತಿಮ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು.