Explained: ಏನಿದು ಸಂಸ್ಕೃತ ವಿಶ್ವವಿದ್ಯಾಲಯ ವಿವಾದ?
ಭಾರತ ಬಹುಭಾಷೆಗಳ ತವರು, ಪ್ರಾಚೀನ ಭಾಷೆಗಳನ್ನು ಇಂದಿಗೂ ಸಲಹುತ್ತಿರುವ ದೇಶ. ದೇವನಾಗರಿ ಲಿಪಿ ಬಳಸುವ ಸಂಸ್ಕೃತ ಭಾಷೆ ಹಾಗೂ ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಂಸ್ಕೃತಿ ವಿಶ್ವವಿದ್ಯಾಲಯದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಸಹಜವಾಗಿ ಸಂಸ್ಕೃತಿ ವಿವಿ ಬೇಡ, ಕನ್ನಡ ವಿವಿಗೆ ಸಿಗದ ಅನುದಾನ ಸಂಸ್ಕೃತಿ ವಿವಿಗೇಕೆ? ಎಂದು ಕನ್ನಡಿಗರು, ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಆದರೆ, ಆಡಳಿತ ಪಕ್ಷದವರು ಹಾಗೂ ಸಂಸ್ಕೃತ ಅಳಿವು ಉಳಿವಿಗಾಗಿ ಶ್ರಮಿಸುವವರು ವಿವಿ ಸ್ಥಾಪನೆ, ಅನುದಾನವನ್ನು ಸಮರ್ಥಿಸಿಕೊಂಡಿದ್ದಾರೆ.
ಸಂಸ್ಕೃತ ದೇವರ ಭಾಷೆ ಎನಿಸಿಕೊಂಡರೂ ಮೃತ ಭಾಷೆಯಾಗಿ ಪರಿಗಣಿಸಲ್ಪಟ್ಟಿದೆ. ಜನ ಸಾಮಾನ್ಯರ ನಿತ್ಯ ಭಾಷೆ, ದೈನಂದಿನ ಸಂವಹನದ ಬಳಕೆ ಅಥವಾ ನಿರ್ದಿಷ್ಟ ಸಮುದಾಯದ ಭಾಷೆ ಎಂದು ಪರಿಗಣಿಸಿಲ್ಲ, ಆಡುಭಾಷೆ ಅಲ್ಲದ ಸಂಸ್ಕೃತ ಭಾಷೆಗಾಗಿ ಪ್ರತ್ಯೇಕ ವಿಶ್ವ ವಿದ್ಯಾಲಯ ಏಕೆ? ಎಂಬ ಪ್ರಶ್ನೆಗೆ ' ಸಂಸ್ಕೃತ ಗ್ರಂಥಗಳ ಅಧ್ಯಯನ, ವೇದ ಕಾಲದ ಜ್ಞಾನ ಇಂದಿನ ಪೀಳಿಗೆಗೆ ತಲುಪಿಸುವುದು ಉದ್ದೇಶ ಎಂದು ಸರ್ಕಾರದಿಂದ ಉತ್ತರ ಬಂದಿದೆ.
ಸಂದರ್ಶನ: ಕನ್ನಡ ಲಿಪಿಗಳ ರಾಣಿ, ಜೀವಂತ ಭಾಷೆ: ಎಸ್.ಜಿ ಸಿದ್ದರಾಮಯ್ಯ
2011 ರ ಜನಗಣತಿಯ ಪ್ರಕಾರ 24,821 ಸಂಸ್ಕೃತ ಭಾಷಿಗರು(ಮಾತೃಭಾಷೆ ಎಂದು ದಾಖಲಿಸಿದವರು) ದೇಶದೆಲ್ಲೆಡೆ ಇದ್ದಾರೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ ಸಂಸ್ಕೃತ ಬಳಸುವ ಗ್ರಾಮ ಎಂದು ಜನಪ್ರಿಯವಾಗಿದೆ.
ಶೈಕ್ಷಣಿಕ ಭಾಷೆಯಾಗಿ ಕಡ್ಡಾಯ
ಕರ್ನಾಟಕದಲ್ಲಿ ಕನ್ನಡ ಮಾಧ್ಯಮವ ಶೈಕ್ಷಣಿಕ ಭಾಷೆಯಾಗಿ ಕಡ್ಡಾಯ ಮಾಡಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಪದವಿ ಪೂರ್ವ ಕಾಲೇಜುಗಳ ಪಠ್ಯ ವಿಷಯದಲ್ಲಿ ಕನ್ನಡ ಕಡ್ಡಾಯಗೊಳಿಸುವ ಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಆರೆಸ್ಸೆಸ್ ಬೆಂಬಲಿತ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳೇ ಈ ಪಿಐಎಲ್ ಹಾಕಿದ್ದಾರೆ. ಹಂಪಿ ವಿವಿಗೆ 10 ಕೋಟಿ ರು ಅನುದಾನ ಸಿಕ್ಕಿಲ್ಲ, ಉಪನ್ಯಾಸಕರಿಗೆ ಸರಿಯಾದ ವೇತನವಿಲ್ಲ, ಈ ತಾರತಮ್ಯವೇಕೆ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ.
ಹಂಪಿ ಕನ್ನಡ ವಿವಿಗೆ ಸರಿಯಾದ ಅನುದಾನ ಸಿಕ್ಕಿಲ್ಲ, ವಿದ್ಯಾರ್ಥಿಗಳಿಗೆ ಫೆಲೋಶಿಪ್ ಸಿಗುತ್ತಿಲ್ಲ, ನೇಮಕವಾಗಿರುವ ಬೋಧಕ ವರ್ಗ, ಅತಿಥಿ ಉಪನ್ಯಾಸಕರಿಗೆ ಸಂಬಳವಿಲ್ಲ, ನಿವೃತ್ತ ಪ್ರೊಫೆಸರ್ ಗಳಿಗೆ ಪಿಂಚಣಿ ಸಿಕ್ಕಿಲ್ಲ, ಉನ್ನತ ವ್ಯಾಸಂಗ ಬಯಸುವ ವಿದ್ಯಾರ್ಥಿಗಳ ಅಡ್ಮಿಶನ್ ಆಗಿ ವರ್ಷಗಳೆ ಕಳೆದಿವೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಉಪ ಕುಲಪತಿ ಪ್ರೊ ಎಸ್ ಸಿ ರಮೇಶ್ ಅವರು ಹಂಪಿ ವಿವಿಗೆ 24 ಕೋಟಿ ರು ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಆದರೆ, ಕೋವಿಡ್ ಅಲೆಗಳ ನಡುವೆ ರಾಜ್ಯ ಸರ್ಕಾರ ಯಾವುದೇ ಅನುದಾನ ಕಲ್ಪಿಸಿಲ್ಲ.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ, ಮಾಜಿ ಅಧ್ಯಕ್ಷ ಎಸ್. ಜಿ ಸಿದ್ದರಾಮಯ್ಯ ಮುಂತಾದವರು ದನಿಯೆತ್ತಿದ್ದರೂ ಪ್ರಯೋಜನವಾಗಿಲ್ಲ.
ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!
ಸಂಸ್ಕೃತ ವಿವಿ ಎಲ್ಲಿ ತಲೆ ಎತ್ತಲಿದೆ?
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ 100 ಎಕರೆ ವಿಸ್ತೀರ್ಣದಲ್ಲಿ 320 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ(KSU)ದ ಕ್ಯಾಂಪಸ್ ತಲೆ ಎತ್ತಲಿದೆ. ಜನವರಿ ಮೊದಲ ವಾರದಲ್ಲಿ ಮಾಗಡಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಪ್ಪಸಂದ್ರ ಹೋಬಳಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ವೈದ್ಯಕೀಯ ಸಚಿವ ಡಾ.ಸುಧಾಕರ್, ಸಂಸದ ಡಿ.ಕೆ.ಸುರೇಶ್, ಶಾಸಕ ಮಂಜುನಾಥ್, ಸಂಸ್ಕೃತ ವಿವಿ ಕುಲಪತಿ ಪ್ರೊ.ದೇವನಾಥನ್, ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್, ಆರೋಗ್ಯ ವಿವಿ ಕುಲಪತಿ ಡಾ.ಜಯಕರ ಶೆಟ್ಟಿ ಅಂಕನಹಳ್ಳಿ ಮಠದ ಶ್ರೀಗಳು ಮುಂತಾದವರು ಉಪಸ್ಥಿತರಿದ್ದರು.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
''ವೇದ, ವಿಜ್ಞಾನ, ಗಣಿತ, ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅಪಾರ, ಸಂಸ್ಕೃತ ಅಧ್ಯಯನಕ್ಕೆ ಸ್ಥಳೀಯರಲ್ಲದೆ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಸಂಸ್ಕೃತದಲ್ಲಿ ಆಧುನಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ವಿವಿ ಸ್ಥಾಪಿಸಲಾಗುತ್ತಿದೆ. 2010ರಲ್ಲಿ ಸ್ಥಾಪನೆಯಾದ ಸಂಸ್ಕೃತ ವಿವಿಗೆ ತನ್ನದೇ ಆದ ಕಟ್ಟಡ, ಅಧ್ಯಯನ ಕೇಂದ್ರವನ್ನು ಇದೀಗ ಒದಗಿಸಲಾಗುತ್ತಿದೆ,'' ಎಂದು ಸಿಎಂ ಬೊಮ್ಮಾಯಿ ಈ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ, ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಗಳ ಅಧ್ಯಯನ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ಈ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು ಮಾಡಲಿದೆ.
ಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆ
ಸಂಸ್ಕೃತ ವಿವಿಯಡಿಯಲ್ಲಿ 31 ಕಾಲೇಜು
ಮಾಗಡಿಯಲ್ಲಿ ಸ್ಥಾಪನೆಯಾಗಲಿರುವ ಸಂಸ್ಕೃತ ವಿವಿಯಡಿಗೆ 31 ಕಾಲೇಜು, ಸಂಸ್ಕೃತ ವಿದ್ಯಾಲಯಗಳು ಬರಲಿವೆ. 245ಕ್ಕೂ ಅಧಿಕ ಅನುದಾನಿತ ವೇದ ಮತ್ತು ಸಂಸ್ಕೃತ ಪಾಠಶಾಲೆಗಳನ್ನು ಒಳ್ಳಗೊಳ್ಳಲಿವೆ. 100 ಎಕರೆ ವಿಸ್ತೀರ್ಣದ ವಿವಿ ಕ್ಯಾಂಪಸ್ ಇರಲಿದೆ. ಸಂಸ್ಕೃತ ಭಾಷೆ, ತರ್ಕ, ಅರ್ಥಶಾಸ್ತ್ರ, ಯೋಗ, ಅಪರೂಪದ ಸಸ್ಯಗಳ ಬಗ್ಗೆ ಅಧ್ಯಯನ, ಕಂಪ್ಯೂಟರ್, ವಿಮರ್ಶೆ, ಕಾವ್ಯ, ಗ್ರಂಥ ಅಧ್ಯಯನ, ವೇದಗಣಿತ ಹೀಗೆ ವಿವಿಧ ಪಠ್ಯ ವಿಷಯಗಳನ್ನು ಇಲ್ಲಿ ವ್ಯಾಸಂಗ ಮಾಡಬಹುದು. ಇದೇ ವಿವಿಯಲ್ಲಿ ಸಂಸ್ಕೃತ ಗ್ರಂಥಗಳನ್ನು ಕಾಪಿಡುವ ಬೃಹತ್ ಗ್ರಂಥಾಲಯ ನಿರ್ಮಿಸಲಾಗುತ್ತದೆ.
ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ
ಟೈಮ್ ಲೈನ್:
- 2010ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಯಿತು.
- 2010-2021: ಜಯ ಚಾಮರಾಜೇಂದ್ರ ಸಂಸ್ಕೃತ ವಿದ್ಯಾಲಯದಲ್ಲಿ KSU ತಾತ್ಕಾಲಿಕ ಕೇಂದ್ರ ಕಚೇರಿ ನಿರ್ವಹಣೆ.
- 2013ರಲ್ಲಿ KSU ಕ್ಯಾಂಪಸ್ ನಿರ್ಮಾಣಕ್ಕಾಗಿ ಮಾಗಡಿ ತಾಲೂಕಿನ ತಿಪ್ಪಸಂದ್ರ ಎಂಬಲ್ಲಿ 100 ಎಕರೆ ಭೂಮಿ ಮಂಜೂರು ಮಾಡಲಾಯಿತು.
- 2015ರಲ್ಲಿ ಮಂಜೂರಾದ ಜಮೀನು ನಕ್ಷೆ ಹಸ್ತಾಂತರ ವಿಳಂಬ, ತಾಂತ್ರಿಕ ದೋಷ ಸರಿಪಡಿಸಿ, ವಿವಿ ಸ್ಥಾಪನೆ ಜಮೀನು ಹಸ್ತಾಂತರ.
- 2019ರಲ್ಲಿ ಸದರಿ ಜಮೀನಿನಲ್ಲಿ ಸಂಸ್ಕೃತಿ ವಿವಿ ಕಟ್ಟಡ, ಗ್ರಂಥಾಲಯ, ವಿದ್ಯಾರ್ಥಿನಿಲಯ ಸ್ಥಾಪನೆಗೆ ಅಂದಿನ ಸರ್ಕಾರದಿಂದ ಅನುಮೋದನೆ.
- 2021ರಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ, ಸುಮಾರು 320 ಕೋಟಿ ರು ಅನುದಾನ ಮಂಜೂರು.
22 ದ್ರಾವಿಡ ಭಾಷೆ
ದ್ರಾವಿಡ ಭಾಷೆಗಳ ಸಮೂಹ ದ್ರಾವಿಡ ಭಾಷೆ 22 ಭಾಷೆಗಳನ್ನು ಒಳಗೊಂಡಿದೆ. ಸದ್ಯಕ್ಕೆ ಪಂಚ ದ್ರಾವಿಡ ಭಾಷೆಗಳು ಉಳಿದಿವೆ. ಇತ್ತೀಚೆಗೆ ಬ್ರಹೂಯಿ ಎಂಬ ಭಾಷೆ ನಶಿಸಿದೆ. ಅದನ್ನು ಎಲ್ಲಿ ಆಡುತ್ತಿದ್ದರು ಎಂದು ಹುಡುಕಿದರೆ ಮುಂಬೈನಲ್ಲಿ ಒಬ್ಬನನ್ನು ಗುರುತಿಸಿದ್ದಾರೆ. ಅರೆ ಭಾಷೆ, ತುಳು, ಗೊಂಡಿ, ಗೌಡ, ಕೊಂಕಣಿ ಎಲ್ಲವೂ ಉಪ ಭಾಷೆಗಳಾಗಿ ಬೆಳೆದಿವೆ. ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ಮೂಲ ಎಂದು ಎಲ್ಲರೂ ತಿಳಿದಿದ್ದರು ಅದು ಸುಳ್ಳು. ಕಾಲ್ಡ್ವಿನ್ ಎಂಬ ಭಾಷಾ ತಜ್ಞ ಹೇಳುವ ತನಕ ಎಲ್ಲರೂ ಹೀಗೆ ತಿಳಿದಿದ್ದರು ಸಂಸ್ಕೃತಗಿಂತಲೂ ಪ್ರಾಕೃತ ಹಳೆಯದು. ಪ್ರಾಕೃತದಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ಸಂಸ್ಕೃತದಿಂದ ಪ್ರಾಕೃತ ಹುಟ್ಟಿಲ್ಲ. ಪ್ರಕೃತಿ ಮುಂಚೆ ಸಂಸ್ಕೃತಿ ನಂತರ, ಸಂಸ್ಕೃತಿ ಇಂಡೋ ಆರ್ಯನ್ ಪ್ರಕಾರವಾಗಿದ್ದರೆ. ಮಿಕ್ಕಿದ್ದು ದ್ರಾವಿಡನ್ ಮೂಲವಾಗಿದೆ. ಇಂಡೋ ಆರ್ಯನ್ ಹೊರಗಿನಿಂದ ಬಂದಿದ್ದು, ದ್ರಾವಿಡ ಭಾಷೆ ಇಲ್ಲೇ ಹುಟ್ಟಿ ಬೆಳೆದಿದ್ದು. ಮೂಲ ದ್ರಾವಿಡವನ್ನು ಉಳಿಸಿಕೊಂಡಿದ್ದು ತಮಿಳು, ಸಂಸ್ಕೃತದ ಪ್ರಭಾವಕ್ಕೆ ಕನ್ನಡ, ಮಲಯಾಳಂ, ತೆಲುಗು ಒಳಗಾಗಿವೆ.ಇವತ್ತು ಅಚ್ಚ ಕನ್ನಡ ಪದ 19% ಇಲ್ಲ, ಅಚ್ಚ ಇಂಗ್ಲೀಷ್ 25% ಮೇಲೆ ಇಲ್ಲ, ಫ್ಲೆಕ್ಸಿಬಲಿಟಿ ಮುಖ್ಯ ಎಂದು ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಎಸ್. ಜಿ ಸಿದ್ದರಾಮಯ್ಯ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.