ಚೀನಾ-ತೈವಾನ್ ಬಿಕ್ಕಟ್ಟಿನಲ್ಲಿ ಭಾರತದ ನಿಲುವೇನು?
ಅಮೆರಿಕ ಜನಪ್ರತಿನಿಧಿ ಸಭೆಯ ಅಧ್ಯಕ್ಷೆ ನ್ಯಾನ್ಸಿ ಪೆಲೋಸಿ ತೈವಾನ್ ದೇಶಕ್ಕೆ ಭೇಟಿ ನೀಡಿದ್ದು ಈಗ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಚೀನಾದ ಗಾಯಕ್ಕೆ ಒಂದು ರೀತಿಯಲ್ಲಿ ಬರೆ ಎಳೆದಂತಾಗಿದೆ.
ತೈವಾನ್ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಹೇಳಿಕೊಳ್ಳುತ್ತಲೇ ಇರುವ ಚೀನಾ ದೇಶ ನ್ಯಾನ್ಸಿ ಪೆಲೋಸಿ ಭೇಟಿ ಕೊಟ್ಟಿದ್ದು ಉರಿದುಬಿದ್ದಿದೆ. ಪೆಲೋಸಿ ಭೇಟಿ ಕೊಡುವ ಮುನ್ನವೇ ಚೀನಾ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು. ಆದರೂ ಕೂಡ ಪೆಲೋಸಿ ಧೃತಿಗೆಡದೇ ತೈವಾನ್ಗೆ ತೆರಳಿ ಬಂದಿದ್ಧಾರೆ.
ಚೀನಾ ಮತ್ತು ತೈವಾನ್ ಮಧ್ಯೆ ಏನು ಬಿಕ್ಕಟ್ಟು?
ಚೀನಾ ಅದಾಗಲೇ ತೈವಾನ್ ಸಮೀಪವೇ ಮಿಲಿಟರಿ ಡ್ರಿಲ್ಗಳನ್ನು ಮಾಡಿ ತನ್ನ ಕೋಪ ತೋರಿಸಿಕೊಂಡಿದೆ. ಅಗತ್ಯ ಬಿದ್ದರೆ ಯುದ್ಧ ಆರಂಭಿಸಲು ಮೀನ ಮೇಷ ಎಣಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವನ್ನೂ ಚೀನಾ ಮಾಡುತ್ತಿದೆ. ಒಂದು ವೇಳೆ ಇದು ನಿಜವಾಗಿಯೂ ಘಟಿಸಿಬಿಟ್ಟರೆ ವಿಶ್ವಕ್ಕೆ ಮಾರಕ ಪೆಟ್ಟು ಬೀಳುವುದು ನಿಶ್ಚಿತ.
ತೈವಾನ್ ಬಿಕ್ಕಟ್ಟು ಏನು? ತೈವಾನ್ಗೆ ಸ್ವತಂತ್ರ ದೇಶದ ಮಾನ್ಯತೆ ಯಾಕೆ ಸಿಕ್ಕಿಲ್ಲ? ತೈವಾನ್ ವಿಚಾರದಲ್ಲಿ ಅಮೆರಿಕದ ನಿಲುವು ಏನು? ಭಾರತದ ನಿಲುವು ಏನು ಎಂಬಿತ್ಯಾದಿ ವಿವರ ಇಲ್ಲಿದೆ.
ಚೀನಾ-ತೈವಾನ್ ಬಿಕ್ಕಟ್ಟು ಏನು?
1945ರಲ್ಲಿ ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ನೆಲಕಚ್ಚಿದ ಬಳಿಕ ತೈವಾನ್ ದೇಶ ಚೀನಾದ ಆಡಳಿತಕ್ಕೆ ಒಳಪಟ್ಟಿತು. ಆದರೆ, ಮಾವೋ ನೇತೃತ್ವದ ಕಮ್ಯೂನಿಸ್ಟ್ ಕ್ರಾಂತಿ ಬಳಿಕ ತೈವಾನ್ ಚೀನಾದಿಂದ ಬೇರ್ಪಟ್ಟಿತು. ತಾನು ಸ್ವತಂತ್ರ ದೇಶ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದೆ. ಆಗಿನಿಂದಲೂ ತೈವಾನ್ ಸ್ವತಂತ್ರವಾಗಿಯೇ ಆಡಳಿತ ನಡೆಸಿಕೊಂಡು ಬಂದಿದೆ.
ತೈವಾನ್ ಅನ್ನು ಸುಪರ್ದಿಗೆ ಪಡೆಯಲು ಚೀನಾ ಬಹಳ ಪ್ರಯತ್ನ ಪಟ್ಟಿದ್ದು, ಪಡುತ್ತಿರುವುದು ಹೌದು. ಆದರೆ ತೈವಾನ್ ಅದಕ್ಕೆ ಬಗ್ಗದೇ ಉಳಿದಿದೆ.
ತೈವಾನ್ ಸಮೀಪ ಮಿಲಿಟರಿ ಅಭ್ಯಾಸ ಆರಂಭಿಸಿದ ಚೀನಾ
ಅಂತಾರಾಷ್ಟ್ರೀಯ ಮಾನ್ಯತೆ
ತೈವಾನ್ ಸ್ವತಂತ್ರ ದೇಶ ಎಂದು ಘೋಷಿಸಿಕೊಂಡಿರುವುದು ಹೌದು. ಆದರೆ, ಈಗ ಕೇವಲ 13 ದೇಶಗಳು ಮಾತ್ರ ತೈವಾನ್ ಅನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡಿವೆ. ಅದೂ ಚಿಕ್ಕ ದೇಶಗಳು ಮಾತ್ರ. ಅಮೆರಿಕದಂಥ ದೇಶಗಳು ತೈವಾನ್ಗೆ ಬೆಂಬಲವಾಗಿ ನಿಂತರೂ ಅದರ ಸ್ವಾತಂತ್ರ್ಯಕ್ಕೆ ಅಧಿಕೃತ ಮಾನ್ಯತೆ ಕೊಟ್ಟಿಲ್ಲ.
ತೈವಾನ್ 1949ರಲ್ಲಿ ಸ್ವತಂತ್ರ ದೇಶವೆಂದು ಘೋಷಿಸಲ್ಪಟ್ಟಿದ್ದು. ವಿಶ್ವಸಂಸ್ಥೆಯ ಸದಸ್ಯ ದೇಶಗಳ ಪಟ್ಟಿಯಲ್ಲಿ 1971ರವರೆಗೂ ತೈವಾನ್ ಇತ್ತು. ಆದರೆ, ನಂತರದಿಂದ ಆ ಪಟ್ಟಿಯಲ್ಲಿ ತೈವಾನ್ ಹೆಸರು ಇಲ್ಲ.
ಅಮೆರಿಕದ ನಿಲುವೇನು?
ತೈವಾನ್ಗೆ ಬೆಂಬಲವಾಗಿ ಅಮೆರಿಕ ಇದೆ. ಆದರೆ, ಅದು ಸ್ವತಂತ್ರ ದೇಶ ಎಂದು ಅಮೆರಿಕ ಕೂಡ ಮಾನ್ಯ ಮಾಡಿಲ್ಲ. ಎಂಬತ್ತರ ದಶಕದವರೆಗೂ ತೈವಾನ್ ಅನ್ನು ಸ್ವತಂತ್ರ ದೇಶ ಎಂದು ಅಮೆರಿಕ ಮಾನ್ಯ ಮಾಡಿದ್ದು ಹೌದಾದರೂ, ಸೋವಿಯತ್ ರಷ್ಯಾ ಪತನದ ಬಳಿಕ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ತೈವಾನ್ ಚೀನಾದ ಅಂಗ ಎಂಬುದು ಈಗ ಅಮೆರಿಕದ ಅಧಿಕೃತ ನಿಲುವು. ಆದರೆ, ತೈವಾನ್ನಲ್ಲಿನ ಪ್ರಜಾತಂತ್ರ ವ್ಯವಸ್ಥೆಯನ್ನು ಅಮೆರಿಕ ಬೆಂಬಲಿಸುತ್ತದೆ.
ಭಾರತದ ನಿಲುವೇನು?
ತೈವಾನ್ ಚೀನಾ ವಿಚಾರದಲ್ಲಿ ಭಾರತದ್ದೂ ತಟಸ್ಥ ನಿಲುವು. ಅಂದರೆ ಏಕ-ಚೀನಾ ಎಂಬ ನೀತಿಯನ್ನು ಅನುಸರಿಸುತ್ತದೆ. ಅಂದರೆ ತೈವಾನ್ ಚೀನಾದ ಒಂದು ಭಾಗ ಎಂಬುದು ಏಕ ಚೀನಾ ನೀತಿಯ ಅಂಶ.
ಭಾರತ ಮತ್ತು ಚೀನಾ ನಾಯಕರು ಭೇಟಿಯಾದಾಗೆಲ್ಲಾ ಒನ್-ಚೀನಾ ನೀತಿಯನ್ನು ಪ್ರದರ್ಶಿಸುತ್ತಾರೆ. 2010ರಿಂದ ಈ ಪ್ರಕ್ರಿಯೆ ನಿಂತುಹೋಗಿದೆ. ಅಂದರೆ ಕಳೆದ 12 ವರ್ಷಗಳಿಂದ ಭಾರತ ಏಕ-ಚೀನಾ ನೀತಿಗೆ ಮಾನ್ಯತೆ ಕೊಡಲು ಹಿಂದೇಟು ಹಾಕಿದೆ. ಅದರೆ, ತೈವಾನ್ ಸ್ವತಂತ್ರ ದೇಶ ಎಂದೂ ಭಾರತ ಮಾನ್ಯ ಮಾಡಿಲ್ಲ. ಅದೇನೇ ಇದ್ದರೂ ತೈವಾನ್ ಜೊತೆ ಪ್ರತ್ಯೇಕವಾಗಿ ಭಾರತ ಉತ್ತಮ ವ್ಯವಹಾರ ಸಂಬಂಧ ಹೊಂದಿದೆ.
"ತೈವಾನ್ ವಿಚಾರದಲ್ಲಿ ಭಾರತಕ್ಕೆ ಸ್ಪಷ್ಟ ಮತ್ತು ಸ್ಥಿರ ನಿಲುವು ಇದೆ. ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ ಮತ್ತು ಜನ ಸಂವಾದ ಇತ್ಯಾದಿ ಕ್ಷೇತ್ರಗಳಲ್ಲಿ ಸಂಬಂಧಕ್ಕೆ ಸರಕಾರ ಉತ್ತೇಜನ ನೀಡುತ್ತದೆ" ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ ಮುರಳೀಧರನ್ ಇತ್ತೀಚೆಗೆ ರಾಜ್ಯಸಭೆಯಲ್ಲಿ ಹೇಳಿದ್ದರು.
ಥೈಪೆಯಲ್ಲಿ ಭಾರತದ ಕಚೇರಿ
ತೈವಾನ್ ರಾಜಧಾನಿ ತೈಪೆಯಲ್ಲಿ ರಾಜತಾಂತ್ರಿಕ ಕಾರ್ಯಗಳಿಗಾಗಿ ಭಾರತ ಕಚೇರಿ ಹೊಂದಿದೆ. ಇಂಡಿಯಾ ತೈಪೇ ಅಸೋಸಿಯೇಶನ್, ತೈಪೇ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ.
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದಾಗ ತೈವಾನ್ ರಾಯಭಾರಿ ಚುಂಗ್ ಕ್ವಾಂಗ್ ಟಿಯೆನ್ ಮತ್ತು ಟಿಬೆಟಿಯನ್ ಮುಖಂಡ ಲೋಬ್ಸಾಂಗ್ ಸಾಂಗೇ ಅವರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. ಇದು ಚೀನಾಗೆ ಮೋದಿ ನೀಡಿದ ಸಂದೇಶದಂತಿತ್ತು.
2020ರಲ್ಲಿ ಚೀನಾ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ಹಲ್ಲೆ ಎಸಗಿದ ಘಟನೆ ಬಳಿ ಭಾರತ ಕೆಲ ಪ್ರತಿರೋಧದ ಕ್ರಮಗಳನ್ನು ಕೈಗೊಂಡಿತು.
ಅದರಲ್ಲಿ ಒಂದು, ತೈವಾನ್ ದೇಶಕ್ಕೆ ಭಾರತದಿಂದ ರಾಯಭಾರಿಯನ್ನು ಆರಿಸಿ ಕಳುಹಿಸಿದ್ದು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿದ್ದ ಗೌರಮಂಗಲಾಲ್ ದಾಸ್ ಅವರನ್ನು ತೈವಾನ್ ರಾಯಭಾರಿಯಾಗಿ ಆಯ್ಕೆ ಮಾಡಲಾಯಿತು.
ತೈವಾನ್ನ ಮಾಜಿ ಅಧ್ಯಕ್ಷ ಲೀ ಟೆಂಗ್ ಹುಯ್ ಅವರು ನಿಧನವೊಂದಿದಾಗ ಅವರನ್ನು ಭಾರತ ಹೊಗಳಿದ್ದು ಚೀನಾಗೆ ಇರಿಸುಮುರುಸು ತಂದಿತ್ತು. ಲೀ ಟೆಂಗ್ ಹುಯ್ ಅವರನ್ನು ಮಿಸ್ಟರ್ ಡೆಮಾಕ್ರಸಿ ಎಂದು ಪ್ರಧಾನಿಗಳು ಬಣ್ಣಿಸಿದರು.
ತೈವಾನ್ಗೆ ಇಷ್ಟೆಲ್ಲಾ ಬೆಂಬಲವಾಗಿ ನಿಂತರೂ ಕೂಡ ಭಾರತದ ಏಕ-ಚೀನಾ ನೀತಿಯಲ್ಲಿ ಬದಲಾವಣೆ ಆಗಿಲ್ಲ. ತೈವಾನ್ ಪರವಾಗಿ ಭಾರತ ಗಟ್ಟಿಯಾಗಿ ಮಾತನಾಡಲು ಹೋಗಿಲ್ಲ. ಈಗ ನ್ಯಾನ್ಸಿ ಪೆಲೋಸಿ ತೈವಾನ್ಗೆ ಹೋಗಿ ಬಂದ ಬಳಿಕ ಜಗತ್ತಿನ ದೇಶಗಳ ಧ್ವನಿ ಬದಲಾಗುತ್ತದಾ? ತೈವಾನ್ಗೆ ಒಂದು ದೇಶ ಎಂದು ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತಾ ನೋಡಬೇಕು.
ಭಾರತದೊಳಗೆ ಕೂಗು
ಗಾಲ್ವನ್ ಸಂಘರ್ಷದ ಬಳಿಕ ತೈವಾನ್ ಅನ್ನು ಸ್ವತಂತ್ರ ದೇಶ ಎಂದು ಭಾರತ ಮಾನ್ಯ ಮಾಡಬೇಕೆಂದು ದೇಶೀಯವಾಗಿ ಕೂಗು ಕೇಳಿಬರುತ್ತಿರುವುದಂತೂ ಹೌದು. ಹಾಗೆಯೇ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಹಲವು ಯೋಜನೆಗಳನ್ನು ನಡೆಸುತ್ತಿರುವುದೂ ಭಾರತದ ಸಾರ್ವಭೌಮತ್ವವನ್ನು ಧಿಕ್ಕರಿಸಿದಂತೆ. ಆದ ಕಾರಣ ಭಾರತ ತೈವಾನ್ ಮತ್ತು ಟಿಬೆಟ್ ಬಗ್ಗೆ ಧ್ವನಿ ಎತ್ತಬೇಕು ಎಂಬ ಕೂಗೂ ಕೇಳಿಬರುತ್ತದೆ. ಆದರೆ, ಭಾರತದಿಂದ ಅಧಿಕೃತವಾಗಿ ಏಕ-ಚೀನಾ ನೀತಿಯನ್ನು ಕೈಬಿಡುವ ಸೂಚನೆ ಸದ್ಯಕ್ಕೆ ತೋರುತ್ತಿಲ್ಲ.
ಇದೇನೇ ಆದರೂ ತೈವಾನ್ ಜೊತೆ ಭಾರತಕ್ಕೆ ಉತ್ತಮ ವ್ಯಾವಹಾರಿಕ ಸಂಬಂಧ ಇದೆ. ಎಲೆಕ್ಟ್ರಾನಿಕ್ ಉದ್ಯಮಕ್ಕೆ ಬೇಕಾದ ಚಿಪ್ ಇತ್ಯಾದಿ ವಸ್ತುಗಳು ಹೆಚ್ಚಾಗಿ ತೈವಾನ್ನಿಂದಲೇ ಆಮದಾಗುವುದು. ಹೀಗಾಗಿ, ತೈವಾನ್ ಮೇಲೆ ಭಾರತ ಬಹಳಷ್ಟು ಅವಲಂಬಿತವಾಗಿದೆ. ಜಗತ್ತಿನ ಎಲೆಕ್ಟ್ರಾನಿಕ್ ಉದ್ಯಮ ಕೂಡ ತೈವಾನ್ ಮೇಲೆಯೇ ಅವಲಂಬಿತವಾಗಿದೆ. ಹೀಗಾಗಿ, ತೈವಾನ್ ಚೀನಾದ ತೆಕ್ಕೆ ಬೀಳದೇ ಹೋಗಲಿ ಎಂದು ಹಾರೈಸುವ ದೇಶಗಳೇ ಹೆಚ್ಚು.
(ಒನ್ಇಂಡಿಯಾ ಸುದ್ದಿ)
Recommended Video