ತೀಸ್ತಾ ಸೆಟಲ್ವಾಡ್ ಯಾರು? ಈಕೆಯ ಹೋರಾಟ, ವಿವಾದಗಳ ಸುತ್ತಮುತ್ತ...
ತೀಸ್ತಾ ಸೆಟಲ್ವಾಡ್ ಅವರನ್ನು ಮುಂಬೈನ ಅವರ ನಿವಾಸದಲ್ಲಿ ಜೂನ್ 25, ಶನಿವಾರ ಸಂಜೆ ಗುಜರಾತ್ನ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. 2002ರ ಗಲಭೆ ಸಂಬಂಧ ನರೇಂದ್ರ ಮೋದಿಗೆ ದೋಷಮುಕ್ತಗೊಳಿಸಲಾಗಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ದಿನ ಬಳಿಕ ಈ ಬೆಳವಣಿಗೆಯಾಗಿದೆ.
ತೀಸ್ತಾ ಬಂಧನವಾಗುವ ಕೆಲ ಗಂಟೆಗಳ ಮೊದಲಷ್ಟೇ ಅಮಿತ್ ಶಾ ಎಎನ್ಐ ಸಂದರ್ಶನದಲ್ಲಿ ತೀಸ್ತಾ ಸೆಟಲ್ವಾಡ್ ಬಗ್ಗೆ ಆರೋಪ ಮಾಡಿದ್ದರು. ಆ ಸಂದರ್ಶನ ಪ್ರಕಟವಾದ ಒಂದೆರಡು ಗಂಟೆಯಲ್ಲೇ ತೀಸ್ತಾ ಅವರನ್ನು ಬಂಧಿಸಲಾಯಿತು.
ಮುಂಬೈನಲ್ಲಿ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನ
ಅಷ್ಟಕ್ಕೂ ತೀಸ್ತಾ ಸೆಟಲ್ವಾಲ್ ಯಾರು? ಮುಂಬೈನವರಾದ ತೀಸ್ತಾ ನಾಗರಿಕ ಹಕ್ಕು ಹೋರಾಟಗಾರ್ತಿ ಮತ್ತು ಪತ್ರಕರ್ತೆಯಾಗಿದ್ದಾರೆ. 2002ರ ಗುಜರಾತ್ ಗಲಭೆ ವೇಳೆ ಕೋಮುಗಲಭೆಗಳಿಗೆ ಸರಕಾರಿ ಯಂತ್ರಗಳೇ ಪ್ರಚೋದನೆ ಮತ್ತು ಕುಮ್ಮಕ್ಕು ನೀಡಿದವು ಎಂಬುದು ಇವರು ಮಾಡಿದ ಪ್ರಮುಖ ಆರೋಪ.
ಗುಜರಾತ್ ಗಲಭೆಯ ತನಿಖೆ ನಡೆಸಿದ ಎಸ್ಐಟಿ, ಅಂದಿನ ಸಿಎಂ ನರೇಂದ್ರ ಮೋದಿ ಅವರ ಪಾತ್ರ ಈ ಗಲಭೆಯಲ್ಲಿ ಇಲ್ಲ ಎಂದು ವರದಿ ಮಾಡಿತ್ತು. ಜೂನ್ 24ರಂದು ಸುಪ್ರೀಂ ಕೋರ್ಟ್ ಕೂಡ ಮೋದಿಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಇದಾದ ಬೆನ್ನಲ್ಲೇ ಅಮಿತ್ ಶಾ ತಮ್ಮ ಸಂದರ್ಶನದಲ್ಲಿ, ತೀಸ್ತಾ ಸೆಟಲ್ವಾಡ್ ಸುಳ್ಳು ಮಾಹಿತಿ ನೀಡಿ ಪೊಲೀಸರ ದಾರಿ ತಪ್ಪಿಸಿದರು ಎಂದು ಆರೋಪಿಸಿದ್ದಾರೆ.
ಗುಜರಾತ್ ಗಲಭೆ: ಮೋದಿಗೆ ಕ್ಲೀನ್ಚಿಟ್; ಏನಿದು ಪ್ರಕರಣ?
ತೀಸ್ತಾ ಮತ್ತವರ ಎನ್ಜಿಒ:
ತೀಸ್ತಾ ಸೆಟಲ್ವಾಡ್ ಅವರು 'ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (CJP- Citizens For Justice and Peace)" ಎಂಬ ಎನ್ಜಿಒ ಸಂಸ್ಥೆ ಇದೆ. ಇದು 2002ರ ಗುಜರಾತ್ ಗಲಭೆಯಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಲೆಂದು ಮತ್ತು ಕೋರ್ಟ್ಗಳಲ್ಲಿ ವಕಲಾತು ವಹಿಸಲೆಂದು ಹುಟ್ಟುಹಾಕಿದ ಸಂಸ್ಥೆ.
2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಸಿಜೆಪಿ ನರೇಂದ್ರ ಮೋದಿ ಹಾಗು ಇನ್ನೂ ಹಲವು ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ದೂರುಗಳನ್ನು ನೀಡಿತ್ತು.
ಗುಜರಾತ್ ಗಲಭೆ ಘಟನೆ ನಂತರ:
2002ರ ಗುಜರಾತ್ ಗಲಭೆ ಘಟನೆಗಳಲ್ಲಿ ಒಂದಾದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಘಟನೆಯಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 68 ಜನರನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಅವರ ಪತ್ನಿ ಜಾಕಿಯಾ ಜಾಫ್ರಿ ಗುಜರಾತ್ ಗಲಭೆ ಘಟನೆಯಲ್ಲಿ ದೊಡ್ಡ ಷಡ್ಯಂತ್ರ ಇದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ನಿನ್ನೆ ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಗುಜರಾತ್ ಗಲಭೆಯಲ್ಲಿ ಹಿಂಸಾಚಾರಕ್ಕೆ ಸರಕಾರ ಪ್ರಚೋದನೆ ನೀಡಿತೆಂಬುದಕ್ಕೆ ಸ್ಪಷ್ಟ ಆಧಾರ ಇಲ್ಲ ಎಂದಿತು. ಗುಜರಾತ್ ಮ್ಯಾಜಿಸ್ಟ್ರೇಟ್ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಹಿತು.
ತೀಸ್ತಾ ಬಗ್ಗೆ ಸುಪ್ರೀಂ ಹೇಳಿದ್ದಿದು:
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಘಟನೆನಲ್ಲಿ ಮೃತರಾಗಿದ್ದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿಗೆ ಅವರ ಭಾವನೆಗಳೊಂದಿಗೆ ತೀಸ್ತಾ ಆಡಿಕೊಂಡಿದ್ದಾರೆ. ಅವರ ಭಾವನೆಯನ್ನು ತೀಸ್ತಾ ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ತೀಸ್ತಾ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಆರೋಪ ಮಾಡಿದ ಕಾರಣಕ್ಕೆ ಸುಪ್ರೀಂಕೋರ್ಟ್ ಆದೇಶದನ್ವಯ ಗುಜರಾತ್ನ ಭಯೋತ್ಪಾದನೆ ನಿಗ್ರಹ ಪಡೆಯು ತೀಸ್ತಾ ಅವರನ್ನು ಬಂಧಿಸಿರವುದು ತಿಳಿದುಬಂದಿದೆ.
ಅಮಿತ್ ಶಾ ಕೂಡ ತಮ್ಮ ಸಂದರ್ಶನದಲ್ಲಿ ತೀಸ್ತಾ ಬಗ್ಗೆ ಮಾತನಾಡುತ್ತಾ, ಇವರು ಹಾಗು ಇವರ ಎನ್ಜಿಒ ಗುಜರಾತ್ ಗಲಭೆ ವಿಚಾರದಲ್ಲಿ ಪೊಲೀಸ್ ಠಾಣೆಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದರು ಎಂದು ಆರೋಪ ಮಾಡಿದ್ದಾರೆ.
ಯಾರು ಈ ತೀಸ್ತಾ?
ಗುಜರಾತ್ ಮೂಲದ 60 ವರ್ಷದ ತೀಸ್ತಾ ಸೆಟಲ್ವಾಡ್ ಅವರು ಮುಂಬೈನಲ್ಲಿ ವಕೀಲರಾಗಿದ್ದ ಅತುಲ್ ಸೆಟಲ್ವಾಡ್ ಅವರ ಮಗಳು. ತೀಸ್ತಾ ಅಜ್ಜ ಎಂ ಸಿ ಸೆಟಲ್ವಾಡ್ ಅವರು ಭಾರತದ ಮೊದಲ ಅಟಾರ್ನಿ ಜನರಲ್. ಪತ್ರಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ಇಂಡಿಯನ್ ಎಕ್ಸ್ಪ್ರೆಸ್, ದಿ ಡೈಲಿ, ಬ್ಯುಸಿನೆಸ್ ಇಂಡಿಯಾ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.
ನಂತರ ಮುಖ್ಯವಾಹಿನಿ ಪತ್ರಿಕೋದ್ಯಮವನ್ನು ಬಿಟ್ಟು ಇವರು ಹಾಗೂ ಪತಿ ಜಾವೇದ್ ಆನಂದ್ ಇಬ್ಬರೂ ಸೇರಿ ಕೋಮುಗಲಭೆ ವಿರುದ್ಧ ಪೂರ್ಣಪ್ರಮಾಣದಲ್ಲಿ ಹೋರಾಡಲು ನಿರ್ಧರಿಸಿದರು. ಅದರಂತೆ "ಕಮ್ಯೂನಿನಲಿಸಂ ಕಾಂಬ್ಯಾಟ್" (Communalism Combat) ಎಂಬ ಮಾಸಿಕ ಪತ್ರಿಕೆಯನ್ನು 1993ರಲ್ಲಿ ಆರಂಭಿಸಿದರು.
2002ರ ಫೆಬ್ರವರಿಯಲ್ಲಿ ಗುಜರಾತ್ ಗಲಭೆಗಳು ಆರಂಭಗೊಂಡಾಗ ತೀಸ್ತಾ ಸೆಟಲ್ವಾಡ್ ಹಾಗೂ ಇನ್ನೂ ಅನೇಕರು ಸೇರಿಕೊಂಡು ಏಪ್ರಿಲ್ ತಿಂಗಳಿಲ್ಲಿ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬ ಎನ್ಜಿಒ ಸ್ಥಾಪಿಸಿದರು. ಜಾವೇದ್ ಅಖ್ತರ್, ವಿಜಯ್ ತೆಂಡೂಲ್ಕರ್, ರಾಹುಲ್ ಬೋಸ್ ಮೊದಲಾದ ಗಣ್ಯರು ಈ ಎನ್ಜಿಒದ ಸಂಸ್ಥಾಪಕರಲ್ಲಿ ಸೇರಿದ್ದಾರೆ.
ಗುಜರಾತ್ ಗಲಭೆಯ ಸಂತ್ರಸ್ತರಿಗೆ, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಈ ಎನ್ಜಿಒವನ್ನು ಆರಂಭಿಸಲಾಯಿತು. ಗಲಭೆ ಘಟನೆಗಳು ನಡೆದ ಸ್ಥಳದ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಕೊಡಲಾಯಿತು.
ತೀಸ್ತಾ ಅವರ ಚಟುವಟಿಕೆ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇವರು ಮಹಿಳೆಯರು, ದಲಿತರು, ಮುಸ್ಲಿಮರ ಹಕ್ಕುಗಳಿಗಾಗಿ ಬಹಳ ಹೋರಾಟ ಮಾಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಡುವ ಸಬ್ರಂಗ್ ಕಮ್ಯೂನಿಕೇಶನ್ಸ್ ಎಂಬ ಸಂಸ್ಥೆಯನ್ನು ತೀಸ್ತಾ ಪತಿಯೇ ಸ್ಥಾಪಿಸಿದ್ದು.
ಕೋಮುವಾದ ಮತ್ತು ಕೋಮು ಹಿಂಸಾಚಾರ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕೇಳುವ ಹೆಸರು ತೀಸ್ತಾ ಸೆಟಲ್ವಾಡ್ ಅವರದ್ದು. ಕೋಮುವಾದದ ವಿರುದ್ಧ ಬರೆಯುವ ಪತ್ರಕರ್ತರ ಗುಂಪನ್ನೇ ಇವರು ತಯಾರಿಸಿದ್ದಾರೆ.
ತೀಸ್ತಾ ವಿರುದ್ಧ ಆರೋಪ:
ಗುಜರಾತ್ ಗಲಭೆ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹಾಕಿದ ಆರೋಪ ತೀಸ್ತಾ ಮೇಲಿದೆ. 2007-2014ರವರೆಗೆ ಗಲಭೆ ಸಂತ್ರಸ್ತರ ನೆರವಿಗೆಂದು ಜಾಹೀರಾತುಗಳ ಮೂಲಕ 6-7 ಕೋಟಿಯಷ್ಟು ದೇಣಿಗೆಗಳನ್ನು ಸಂಗ್ರಹಿಸಲಾಗಿದೆ. ಆದರೆ, ಈ ಚಾರಿಟಿ ಹಣವನ್ನು ಸಂತ್ರಸ್ತರಿಗೆ ಉಪಯೋಗಿಸದೇ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಹಾಗೆಯೇ, 2009ರಲ್ಲಿ ಅಮೆರಿಕದ ಫೋರ್ಡ್ ಫೌಂಡೇಶನ್ನಿಂದ ಇವರ ಎನ್ಜಿಒಗೆ ನೀಡಲಾದ ದೇಣಿಗೆಯಲ್ಲಿ ವಿದೇಶ ವಿನಿಯಮ ಕಾನೂನುಗಳ ಉಲ್ಲಂಘನೆಯಾಗಿದೆ ಎಂಬ ಆರೋಪವೂ ಇದೆ.
ತೀಸ್ತಾ ಸೆಟಲ್ವಾಡ್ ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ತಮ್ಮ ಹೋರಾಟವನ್ನು ಹತ್ತಿಕ್ಕಲು ಸರಕಾರ ನಡೆಸುತ್ತಿರು ಪ್ರಯತ್ನ ಎಂದು ವಾದಿಸಿದ್ಧಾರೆ.
(ಒನ್ಇಂಡಿಯಾ ಸುದ್ದಿ)