ಅಯೋಧ್ಯಾ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆ.ಕೆ. ಮುಹಮ್ಮದ್
ನವದೆಹಲಿ, ನವೆಂಬರ್ 9: ಅಯೋಧ್ಯಾದಲ್ಲಿ ಬಾಬ್ರಿ ಮಸೀದಿ ಅಡಿ ಹಿಂದೂ ದೇವಾಲಯದ ರಚನೆ ಇತ್ತು ಎಂಬುದಕ್ಕೆ ಭಾರತೀಯ ಪುರತತ್ವ ಸಮೀಕ್ಷೆ (ಎಎಸ್ಐ) ನೀಡಿದ ಪುರಾವೆಯನ್ನು ಸುಪ್ರೀಂಕೋರ್ಟ್ ತೀರ್ಪು ನೀಡುವ ವೇಳೆ ಪ್ರಮುಖವಾಗಿ ಉಲ್ಲೇಖಿಸಿತ್ತು. ಬಾಬ್ರಿ ಮಸೀದಿಯನ್ನು ಖಾಲಿ ಸ್ಥಳದಲ್ಲಿ ನಿರ್ಮಿಸಿರಲಿಲ್ಲ. ಅದನ್ನು ಭವ್ಯ ದೇವಾಲಯದ ಮೇಲೆ ಕಟ್ಟಾಗಿದೆ. ಆದರೆ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆಯೇ ಎಂಬ ಬಗ್ಗೆ ಎಎಸ್ಐ ಖಚಿತವಾಗಿ ತಿಳಿಸಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು.
ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಅನೇಕರು, ತೀರ್ಪು ರಾಮಜನ್ಮ ನ್ಯಾಸ್ ಪರವಾಗಿ ಬರಲು ಎಎಸ್ಐ ಅಧಿಕಾರಿಯೇ ಕಾರಣ ಎಂದು ಪ್ರಶಂಸಿಸುತ್ತಿದ್ದಾರೆ. ಎಎಸ್ಐನ ಮಾಜಿ ಅಧಿಕಾರಿ ಕೆ.ಕೆ. ಮುಹಮ್ಮದ್ ಅವರು ಅಯೋಧ್ಯಾದ ವಿವಾದಿತ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಅವರು ಬೆದರಿಕೆಗಳನ್ನು ಮೆಟ್ಟಿನಿಂತು ಸತ್ಯದ ಪರವಾಗಿ ಪುರಾವೆ ಒದಗಿಸಿದ್ದರ ಫಲವೇ ಇಂದಿನ ತೀರ್ಪು ಎಂದು ಕೊಂಡಾಡಿದ್ದಾರೆ.
ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ಸುಪ್ರೀಂಕೋರ್ಟ್ ತೀರ್ಪಿನ ಹಿಂದೆ ಕೆ.ಕೆ ಮುಹಮ್ಮದ್ ಅವರು ನಿಭಾಯಿಸಿದ ಪಾತ್ರ ಮಹತ್ವದ್ದು ಎಂದು ಟ್ವಿಟ್ಟರ್ನಲ್ಲಿ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಯಾರು ಕೆ.ಕೆ. ಮುಹಮ್ಮದ್? ಅಯೋಧ್ಯಾ ತೀರ್ಪಿನ ವಿಚಾರದಲ್ಲಿ ಅವರ ಪಾತ್ರವೇನು? ಈ ವರದಿ ಓದಿ...
ಅಯೋಧ್ಯಾದಲ್ಲಿ ಉತ್ಖನನ ಮಾಡಿದ್ದ ತಂಡ
ಎಎಸ್ಐನ ಮಾಜಿ ಪ್ರಧಾನ ನಿರ್ದೇಶಕರಾಗಿದ್ದ ಬಿಬಿ ಲಾಲ್ ಅವರೊಂದಿಗೆ ಅಯೋಧ್ಯಾದಲ್ಲಿ ಮುಹಮ್ಮದ್ ಕೆಲಸ ಮಾಡಿದ್ದರು. ಬಾಬ್ರಿ ಮಸೀದಿ ಜಾಗದಲ್ಲಿ ಹಿಂದೂ ದೇವಸ್ಥಾನದ ಪಳೆಯುಳಿಕೆಗಳು ಇವೆ ಎಂದು ಉತ್ಖನನದ ನೇತೃತ್ವ ವಹಿಸಿದ್ದ ಬಿಬಿ ಲಾಲ್ 1976-77ರಲ್ಲಿ ಮೊದಲ ಬಾರಿಗೆ ಪ್ರತಿಪಾದಿಸಿದ್ದರು.
ರಾಮನ ಅಸ್ತಿತ್ವಕ್ಕೆ ಪುರಾವೆಯಿದೆ
ಅನೇಕ ಕಡೆ ಉಪನ್ಯಾಸ ನೀಡಿದ್ದ ಮುಹಮ್ಮದ್, ಅಯೋಧ್ಯಾದಲ್ಲಿ ರಾಮಮಂದಿರ ಅಸ್ತಿತ್ವ ಇತ್ತು ಎಂಬುದನ್ನು ಒಪ್ಪಿಕೊಳ್ಳದ ಎಡಪಂಥೀಯರ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಪುರತತ್ವ ತಜ್ಞರು ಖಚಿತಪಡಿಸಿದ ಮಾಹಿತಿಗಳ ಆಧಾರದಲ್ಲಿ ಮಾತನಾಡುತ್ತಾರೆ. ಅಯೋಧ್ಯಾ ಉತ್ಖನನದ ವೇಳೆ ನಾನು ಆ ತಂಡದ ಭಾಗವಾಗಿದ್ದೆ. ರಾಮನ ಅಸ್ತಿತ್ವಕ್ಕೆ ಅಲ್ಲಿ ಪುರಾವೆಯಿದೆ. ಆದರೆ ಎಡಪಂಥೀಯರು ನನ್ನನ್ನು ಗೋಳುಹೊಯ್ದುಕೊಂಡು ಅಳಿಸಿದರು' ಎಂದು ವಾಗ್ದಾಳಿ ನಡೆಸಿದ್ದರು.
ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!
ಕೇರಳದಲ್ಲಿ ಜನಿಸಿದ ಮುಹಮ್ಮದ್
ಕೇರಳದ ಕ್ಯಾಲಿಕಟ್ನಲ್ಲಿ 1952ರಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಮುಹಮ್ಮದ್, ಕುಡುವಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ಬಳಿಕ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಪದವಿ ಪಡೆದರು. 1977ರಲ್ಲಿ ಪುರತತ್ವ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. ನಂತರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಸಹಾಯಕ ಪುರತತ್ವಜ್ಞರಾಗಿ ಕೆಲಸ ನಿರ್ವಹಿಸಿದರು. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಪುರತತ್ವ ಇಲಾಖೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದರು.
ವಿವಾದ ಸೃಷ್ಟಿಸಿದ ಆತ್ಮಚರಿತ್ರೆ
ದೇಶದ ಅನೇಕ ಕಡೆ ಪ್ರಾಚೀನ ದೇವಾಲಯಗಳನ್ನು, ಮಸೀದಿ ಕಟ್ಟಡಗಳನ್ನು ಮತ್ತು ಬೌದ್ಧ ಸ್ತೂಪಗಳನ್ನು ಉತ್ಖನನ ನಡೆಸಿ ಅಧ್ಯಯನ ಮಾಡಿದ್ದಾರೆ. 2016ರಲ್ಲಿ ಅವರು ಮಲಯಾಳಂನಲ್ಲಿ 'ನಾನ್ ಎನ್ನ ಭಾರತೀಯನ್' (ನಾನು ಒಬ್ಬ ಭಾರತೀಯ) ಎಂಬ ಆತ್ಮಚರಿತ್ರೆ ಬರೆದಿದ್ದರು. ಇದರಲ್ಲಿ ಅಯೋಧ್ಯಾ ವಿಚಾರ ಸೇರಿದಂತೆ ಅವರು ಪ್ರಸ್ತಾಪಿಸಿದ್ದ ವಿವಿಧ ಸಂಗತಿಗಳು ವಿವಾದಕ್ಕೆ ಕಾರಣವಾಗಿದ್ದವು. ಪುರತತ್ವ ಇಲಾಖೆ ನಡೆಸಿದ ಸಮೀಕ್ಷೆಯಂತೆ ಅಯೋಧ್ಯಾದಲ್ಲಿ ಮಸೀದಿಯ ಅಡಿ ದೇವಸ್ಥಾನ ಇರುವುದಕ್ಕೆ ಸ್ಪಷ್ಟ ಪುರಾವೆಗಳಿವೆ. ಆದರೆ ಎಡಪಂಥೀಯ ಇತಿಹಾಸಕಾರರು ಈ ವಾಸ್ತವವನ್ನು ತಿರಸ್ಕರಿಸಿ ಅಲಹಾಬಾದ್ ಹೈಕೋರ್ಟ್ಅನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದರು. ಮುಹಮ್ಮದ್ ಅವರಿಗೆ ಮಾರ್ಚ್ನಲ್ಲಿ ಪದ್ಮಶ್ರೀ ಪುರಸ್ಕಾರ ದೊರಕಿತ್ತು.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ತೀರ್ಪಿನ ಬಗ್ಗೆ ಮುಹಮ್ಮದ್ ಹೇಳಿದ್ದೇನು?
ಭಾರತೀಯ ಪುರತತ್ವ ಸರ್ವೆ (ಎಎಸ್ಐ) ಪೂರೈಸಿದ ಪುರತತ್ವ ಮತ್ತು ಐತಿಹಾಸಿಕ ಪುರಾವೆಗಳ ಆಧಾರದಲ್ಲಿ ನ್ಯಾಯಾಲಯವು, ಆ ಸ್ಥಳದಲ್ಲಿ ಸುಂದರವಾದ ಬೃಹತ್ ದೇವಸ್ಥಾನವಿತ್ತು ಎಂಬ ತೀರ್ಮಾನಕ್ಕೆ ಬಂದಿದೆ. ಮತ್ತು ನಾವು ಮತ್ತೊಮ್ಮೆ ಅಲ್ಲಿ ಹೊಸ ದೇವಸ್ಥಾನವನ್ನು ನಿರ್ಮಿಸಬೇಕಿದೆ ಎಂದು ಎಎಸ್ಐನ ಮಾಜಿ ಪ್ರಾದೇಶಿಕ ನಿರ್ದೇಶಕ (ಉತ್ತರ) ಕೆ.ಕೆ. ಮುಹಮ್ಮದ್ ಹೇಳಿದರು.
ಅಯೋಧ್ಯಾದಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುನ್ನ ರಾಮ ಮಂದಿರ ಇತ್ತು ಎಂದು ನಾನು ಬಲವಾಗಿ ಪ್ರತಿಪಾದಿಸಿದ್ದೆ. ಅದಕ್ಕಾಗಿ ನನ್ನ ಮೇಲೆ ಜನರ ಗುಂಪೊಂದು ದಾಳಿ ನಡೆಸಿತ್ತು. ಇದು ನಾವೆಲ್ಲರೂ ಬಯಸಿದ್ದಂತಹ ತೀರ್ಪೇ ಆಗಿದೆ ಎಂದು ತಿಳಿಸಿದರು.