ಅತ್ಯುತ್ತಮ ಆಡಳಿತದಲ್ಲಿ ಕೇರಳಕ್ಕೆ ಮೊದಲು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ
ಬೆಂಗಳೂರು, ಅಕ್ಟೋಬರ್ 31: ದೇಶದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನ ಪಡೆದಿದೆ. ತಮಿಳುನಾಡು ಎರಡನೆಯ ಸ್ಥಾನದಲ್ಲಿದ್ದರೆ, ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಪಬ್ಲಿಕ್ ಅಫೇರ್ಸ್ ಸೆಂಟರ್ ಈ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ-2020ಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವವಿರುವ ಬೆಂಗಳೂರು ನಗರ ಮೂಲದ ಈ ಲಾಭರಹಿತ ಸಂಸ್ಥೆಯು ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದೆ. ಸುಸ್ಥಿರ ಅಭಿವೃದ್ಧಿಯ ಸನ್ನಿವೇಶದಲ್ಲಿ ಸಂಯುಕ್ತ ಸೂಚ್ಯಂಕದ ಆಧಾರದಲ್ಲಿ ಆಡಳಿತ ಪ್ರದರ್ಶನವನ್ನು ಪರಿಗಣಿಸಿ ರಾಜ್ಯಗಳಿಗೆ ಶ್ರೇಯಾಂಕ ನೀಡಲಾಗಿದೆ ಎಂದು ಅದು ತಿಳಿಸಿದೆ.
ಸ್ವಚ್ಛ ಸರ್ವೇಕ್ಷಣ 2020: ಸ್ವಚ್ಛನಗರ ಇಂದೋರ್, ಸ್ವಚ್ಛ ರಾಜ್ಯ ಛತ್ತೀಸ್ಗಢ
ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಆಡಳಿತದ ವಿಚಾರದಲ್ಲಿ ದೊಡ್ಡ ರಾಜ್ಯಗಳ ವಿಭಾಗದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ. ಕೇರಳ (1.388 ಪಿಎಐ ಸೂಚ್ಯಂಕ), ತಮಿಳುನಾಡು (0.912), ಆಂಧ್ರಪ್ರದೇಶ (0.531) ಮತ್ತು ಕರ್ನಾಟಕ (0.468) ಕ್ರಮವಾಗಿ ಮೊದಲ ಸ್ಥಾನಗಳಲ್ಲಿವೆ.
ಪಟ್ಟಿಯ ಅತಿ ಕೆಳಭಾಗದಲ್ಲಿ ಉತ್ತರ ಪ್ರದೇಶ (-1.461 ಸೂಚ್ಯಂಕ) ಇದೆ. ಒಡಿಶಾ (-1.201) ಮತ್ತು ಬಿಹಾರ (-1.158) ನಂತರದ ಸ್ಥಾನಗಳಲ್ಲಿವೆ. ಮುಂದೆ ಓದಿ.
ಸಣ್ಣ ರಾಜ್ಯಗಳಲ್ಲಿ ಗೋವಾ ಮುಂದೆ
ಸಣ್ಣ ರಾಜ್ಯಗಳ ವಿಭಾಗದಲ್ಲಿ ಗೋವಾ ಅತ್ಯಧಿಕ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಗೋವಾ ರಾಜ್ಯಕ್ಕೆ 1.745 ಸೂಚ್ಯಂಕಗಳು ದೊರೆತಿವೆ. ಅದರ ನಂತರ ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ಇವೆ. ಸಣ್ಣರಾಜ್ಯಗಳ ಪಟ್ಟಿಯಲ್ಲಿ ಅತಿ ಕಳಪೆ ಪ್ರದರ್ಶನ ತೋರಿಸಿರುವುದು ಮಣಿಪುರ (-0.363). ದೆಹಲಿ (-0.289) ಮತ್ತು ಉತ್ತರಾಖಂಡ (-0.277) ನಂತರದ ಸ್ಥಾನಗಳಲ್ಲಿವೆ.
ಸ್ವಚ್ಛ ಸರ್ವೇಕ್ಷಣ 2020: ಕಳೆದ ಬಾರಿಗಿಂತ ಬಿಬಿಎಂಪಿಯಿಂದ ಕಳಪೆ ಸಾಧನೆ
ಕೇಂದ್ರಾಡಳಿತ ಪ್ರದೇಶಗಳು
ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಡಳಿತವನ್ನು ಪರಿಗಣಿಸಿದಾಗ ಚಂಡೀಗಡ 1.05 ಪಿಐಎ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಬಳಿಕ ಪುದುಚೆರಿ (0.52) ಮತ್ತು ಲಕ್ಷದ್ವೀಪ (0.0003) ಸ್ಥಾನ ಪಡೆದಿವೆ. ದಾದರ್ ಮತ್ತು ನಗರ್ ಹವೇಲಿ (-0.69) ಅಂಡಮಾನ್, ಜಮ್ಮು ಮತ್ತು ಕಾಶ್ಮೀರ (-0.50) ಮತ್ತು ನಿಕೋಬಾರ್ (-0.30) ಅತಿ ಕಳಪೆ ಸಾಧನೆ ಮಾಡಿವೆ.
ಮೂರು ಸ್ಥಂಭಗಳ ಆಧಾರ
ಮೂರು ಪ್ರಮುಖ ಸ್ತಂಭಗಳಾದ ನೀತಿ, ಬೆಳವಣಿಗೆ ಮತ್ತು ಸುಸ್ಥಿರತೆಯಿಂದ ವ್ಯಾಖ್ಯಾನಿಸಲಾಗಿರುವ ಸುಸ್ಥಿರ ಅಭಿವೃದ್ಧಿಯ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳ ಆಡಳಿದ ಪ್ರದರ್ಶನವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಪಿಎಸಿ ತಿಳಿಸಿದೆ.
Recommended Video
ಕಸ್ತೂರಿ ರಂಗನ್ ಹೇಳಿಕೆ
'ಪಿಎಐ 2020ಯು ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸಂಕ್ರಮಣದ ಕುರಿತಾದ ಪ್ರತಿಫಲಿಸುವಂತೆ ಒಳನೋಟಗಳನ್ನು ಒದಗಿಸುವ ಮತ್ತು ಸೃಷ್ಟಿಸುವ ಮಹತ್ವದ ಕಾರ್ಯವನ್ನು ಮಾಡುತ್ತದೆ' ಎಂದು ಅಧ್ಯಕ್ಷ ಕೆ. ಕಸ್ತೂರಿರಂಗನ್ ತಿಳಿಸಿದ್ದಾರೆ.