ಕೆಂಪೇಗೌಡ ಅಧ್ಯಯನ ಪೀಠ ವಿವಾದಕ್ಕೆ ಹೊಸ ತಿರುವು..
ಉಪ ಚುನಾವಣೆ ಸಂದರ್ಭ ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದ್ದ ಕೆಂಪೇಗೌಡ ಅಧ್ಯಯನ ಪೀಠದ ವಿವಾದ ಬೇರೆಯದ್ದೆ ತಿರುವು ಪಡೆದುಕೊಂಡಿದೆ. ಬೆಂಗಳೂರು ವಿವಿಯ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಕೊಟ್ಟಿದ್ದ ಅನುದಾನವನ್ನ ಹಿಂದಕ್ಕೆ ಪಡೆದುಕೊಂಡಿದ್ದು ಹಾಲಿ ಬಿಜೆಪಿ ಸರ್ಕಾರ ಅಲ್ಲ, ಬದಲಿಗೆ ಹಿಂದಿನ ಸಮ್ಮಿಶ್ರ ಸರ್ಕಾರ ಎಂಬ ಟಿಪ್ಪಣಿ ರಾಜ್ಯ ಸರ್ಕಾರದಿಂದ ಸಿದ್ಧವಾಗಿದೆ.
2016-17ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರ ಹಿಡಿದಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಕೂಟ ಅದೇ ವರ್ಷದ ಆಯವ್ಯಯದಲ್ಲಿ 1 ಕೋಟಿ ರೂ.ಗಳನ್ನು ಅಧ್ಯಯನ ಪೀಠಕ್ಕೆ ನಿಗದಿ ಮಾಡಿತ್ತು. ಆದ್ರೆ ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಿದ ಅನುದಾನದ ಬಳಕೆ ಆಗಲೇ ಇಲ್ಲ.
ಕೆಂಪೇಗೌಡ ಅಧ್ಯಯನ ಕೇಂದ್ರ ವಿವಾದ: ಹಾಲಿ Vs ಮಾಜಿ ಸರ್ಕಾರ ತಿಕ್ಕಾಟ
ಆದರೆ 2018-19ನೇ ಸಾಲಿನ ಬಜೆಟ್ ನಲ್ಲಿ ಅನುದಾನವನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಕೂಟ 10 ಲಕ್ಷ ರೂ.ಗಳಿಗೆ ಇಳಿಕೆ ಮಾಡಿದೆ. 50 ಕೋಟಿ ರೂ ಯೋಜನೆಯನ್ನು 10 ಲಕ್ಷ ರೂ.ಗಳಲ್ಲಿ ಜಾರಿಗೆ ತರುವುದು ಅಸಾಧ್ಯ ಎಂದು ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ತಿಳಿಸಿತು. ಆದರಿಂದ ಇಡೀ ಯೋಜನೆ ಕೈಬಿಡಲು ಸರ್ವಾನುಮತದ ತೀರ್ಮಾನ ಮಾಡಲಾಯ್ತು. ಯೋಜನೆ ರದ್ದಾಗಲು ಬಿಬಿಎಂಪಿಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವೇ ಹೊರತು ಹಾಲಿ ಬಿಜೆಪಿ ಸರ್ಕಾರವಲ್ಲ ಎಂದು ಸರ್ಕಾರ ಟಿಪ್ಪಣಿ ಹೊರಡಿಸಿದೆ ಎಂದು ಹೆಸರು ಹೇಳಲು ಇಚ್ಚಿಸದ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಒನ್ ಇಂಡಿಯಾಕ್ಕೆ ಮಾಹಿತಿ ಕೊಟ್ಟಿದ್ದಾರೆ.
ಅಷ್ಟಕ್ಕೂ ಚುನಾವಣೆ ಹಿಂದಿನ ದಿನ ನಡೆದದ್ದೇನೂ..?
ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ವಿವಿ ಆವರಣದಲ್ಲಿ ನಿರ್ಮಾಣ ವಾಗಬೇಕಿದ್ದ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಅನುದಾನ ಮಂಜೂರು ಮಾಡದೇ ತಡೆಹಿಡಿದಿದೆ ಎಂದು ಸೊಶಿಯಲ್ ಮಿಡಿಯಾದಲ್ಲಿ ಚರ್ಚೆ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಕಳೆದ ನವೆಂಬರ್ 11ರಂದು ಬಿಬಿಎಂಪಿಗೆ ಬರೆದಿದ್ದ ಪತ್ರ ಕೂಡ ಬಹಿರಂಗವಾಗುವ ಮೂಲಕ ಅಳಿವು ಉಳಿವಿನ ಉಪ ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಆತಂಕವನ್ನುಂಟು ಮಾಡಿತ್ತು. ಇಡೀ ಒಕ್ಕಲಿಗ ಸಮುದಾಯ ಬಿಜೆಪಿಯಿಂದ ದೂರವಾಗುವ ಆತಂಕವನ್ನ ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಎದುರಿಸಿದ್ದರು.
ಪೀಠ ಸ್ಥಾಪನೆಗೆ ಬಿಬಿಎಂಪಿಯಲ್ಲಿ ಅನುದಾನವಿಲ್ಲ : ಆಯುಕ್ತರು
ಸಧ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಪೀಠ ಸ್ಥಾಪನೆಗೆ ಅನುದಾನವಿಲ್ಲ ಎಂದು ಬಿಬಿಎಂಪಿ ಆಯುಕ್ತರು ನಗರಾಭಿವೃದ್ಧ ಇಲಾಖೆಗೆ 2019ರ ಮೇ 21ರಂದು ಪತ್ರ ಬರೆದಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ನಗರಾಭಿವೃದ್ಧಿ ಇಲಾಖೆ ಪಾಲಿಕೆಯಲ್ಲಿ ಅನುಧಾನವಿಲ್ಲದ ಕಾರಣ ಕಾಮಗಾರಿ ಕೈಬಿಡಲು ಹಾಗೂ ಟೆಂಡರ್ ರದ್ದು ಪಡಿಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಗೆ ಕಳೆದ ನವೆಂಬರ್ 18, 2019 ರಂದೇ ತಿಳಿಸಿದ್ದರು. ಅದೇ ಪತ್ರ ಉಪ ಚುನಾವಣೆ ಹಿಂದಿನ ದಿನ ಡಿಸೆಂಬರ್ 4 ರಂದು ಬಹಿರಂಗವಾಗುವ ಮೂಲಕ ರಾಜ್ಯ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಆತಂಕ ತಂದಿತ್ತು.
ನಿವಾಸಕ್ಕೆ ಅಧಿಕಾರಿಗಳನ್ನ ಕರೆಸಿಕೊಂಡಿದ್ದ ಸಿಎಂ
ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿ ಅಂತಾನೇ ಇಂಥದ್ದೊಂದು ರಾಜಕೀಯ ಹುನ್ನಾರ ನಡೆದಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದ ಸಿಎಂ ತರಾತುರಿಯಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನ ಕರೆಸಿಕೊಂಡಿದ್ದರು. ನಡೆದ ಎಲ್ಲವನ್ನ ಅಧಿಕಾರಿಗಳು ಸಿಎಂಗೆ ವಿವರಿಸಿದ ಬಳಿಕ ತಕ್ಷಣವೇ ಅನುದಾನ ಬಿಡುಗಡೆಗೆ ಯಡಿಯೂರಪ್ಪ ಸೂಚನೆ ಕೊಟ್ಟಿದ್ದರು. ನವೆಂಬರ್ 18ರಂದು ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಆಯುಕ್ತರಿಗೆ ಬರೆದಿದ್ದ ಪತ್ರವನ್ನ ಸಿಎಂ ಯಡಿಯೂರಪ್ಪ ತಡೆಹಿಡಿಯಲು ಸೂಚನೆ ಕೊಟ್ಟಿದ್ದರು. ಬಳಿಕ ನಗರೋತ್ಥಾನ ಯೋಜನೆಯಡಿ 100 ಕೋಟಿ ರೂ. ಅನುದಾನದಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪನೆಗೆ ಕಾಮಗಾರಿ ಅನುಷ್ಠಾನಕ್ಕೆ ಸರ್ಕಾರ ತೀರ್ಮಾನಿಸಿದೆ.
ನೆನೆಗುದಿಗೆ ಬಿದ್ದಿದೆ ಕೆಂಪೇಗೌಡರ ಅಧ್ಯಯನ ಪೀಠ...
ಯಾವುದೇ ಸರ್ಕಾರವಿದ್ರೂ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪನೆ ಯೋಜನೆ ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಸಮುದಾಯಗಳ ಜನರನ್ನ ಒಲಿಸಿಕೊಳ್ಳಲು ಯೋಜನೆ ಘೋಷಣೆ ಮಾಡುವ ಜನಪ್ರತಿನಿಧಿಗಳು ಅದನ್ನ ಮಾಡಲ್ಲ. ಪ್ರಸಕ್ತ ಸಾಲಿನಲ್ಲಿ ಯೋಜನೆ ಅನುಷ್ಠಾನ ಮಾಡ್ತೇವೆ ಅಂತಾ ರಾಜ್ಯ ಬಿಜೆಪಿ ಸರ್ಕಾರ ಹೇಳಿದೆ. ಅದಾಗುತ್ತಾ ಅಂತಾ ಕೆಂಪೇಗೌಡರ ಕುರಿತು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.