ಬಾಯಲ್ಲಿ ನೀರೂರಿಸುವ ಕಟ್ಮಂಡಿಗೆ ಸ್ವೀಟ್ ಬಗ್ಗೆ ನಿಮಗೆಷ್ಟು ಗೊತ್ತು?!
ನೋಡಲು ಬಿಳಿ ಬಣ್ಣದ 7 ಇಂಚು ಅಗಲ, 7 ಇಂಚು ಉದ್ದದ, ಕತ್ತರಿಸಿದಾಗ ಪದರು ಪದರಾಗಿ ಕಾಣಿಸುವ ಮಲ್ಲಿಗೆಯ ಬಣ್ಣದ ಕರಾವಳಿಯ ವಿಶೇಷ ಸಿಹಿತಿಂಡಿ ಕಟ್ಟುಮಂಡಿಗೆ, ಕಟ್ಮಂಡಿಗೆ ಅಥವಾ ಪೇಪರ್ ಸ್ವೀಟ್! ಬಾಯಲ್ಲಿಟ್ರೆ ಹಾಗೇ ಕರಗಿ ಹೋಗುವ, ಬಾಯಲ್ಲಿ ನೀರೂರಿಸುವ ಅಪರೂಪದ ತಿನಿಸಿಗೆ ಜೈನ ಧರ್ಮೀಯರ ಸೀಮಂತ ಪ್ರಸ್ಥ ಕಾರ್ಯಕ್ರಮದಲ್ಲಿ ವಿಶೇಷ ಮಹತ್ವವಿದೆ.
ನೋಡಲು ಚೌಕಾಕಾರದ ಬಿಳಿ ಬಣ್ಣದ ಕಟ್ಮಂಡಿಗೆ ಹೆಚ್ಚಾಗಿ ಜೈನ ಸಮುದಾಯದ ಸಾಂಪ್ರದಾಯಿಕ ತಿನಿಸು. ಅಕ್ಕಿಯಿಂದ ತಯಾರಿಸಿದ ಪೇಪರ್ ನಂತಹಾ ತೆಳು ಹಾಳೆಗೆ ಸಕ್ಕರೆ ಮತ್ತು ಶುದ್ಧ ತುಪ್ಪವನ್ನು ಹರಡಿ ಚೌಕಾಕೃತಿಯಾಗಿ ಕಲಾತ್ಮಕವಾಗಿ ಮಡಚುತ್ತಾರೆ; ಅಂದ್ರೆ ಕಟ್ಟುತ್ತಾರೆ. ಇದು ಅಕ್ಕಿ ಸಕ್ಕರೆ ತುಪ್ಪಯಿಂದ ತಯಾರಿಸುವ ತಿನಿಸು. ಹೇಳಲೇನೋ ಭಾರೀ ಸುಲಭ. ಅಕ್ಕಿಯ ಹಾಳೆಗೆ ಸಕ್ಕರೆ ತುಪ್ಪ ಹರಡಿ ನಾಲ್ಕು ಕಡೆಯಿಂದ ಮಡಚಿದ್ರೆ ಕಟ್ಮಂಡಿಗೆ ರೆಡಿ. ಆದ್ರೆ ಇದನ್ನು ತಯಾರಿಸುವುದರ ಹಿಂದಿರುವ ಶ್ರಮ ಮಾತ್ರ ದೊಡ್ಡದು.
ಕುಂದಾ, ಕರದಂಟು ಜತೆಗೆ ಬೆಳಗಾವಿ ಅಧಿವೇಶನಕ್ಕೆ ಅಂಟಿಕೊಂಡ ನಂಟು
ಜೈನ ಧರ್ಮದ ವಿಶೇಷ ಕಾರ್ಯಕ್ರಮಗಳಲ್ಲಿ ಈ ತಿನಿಸಿಗೆ ವಿಶೇಷ ಪ್ರಾಧಾನ್ಯತೆ. ಇದಕ್ಕೆ ಪೇಪರ್ ಸ್ವೀಟ್ ಎಂದೂ ಹೇಳ್ತಾರೆ. ಕಟ್ಟು ಮಲ್ಲಿಗೆ ಹಾಗೂ ಕಟ್ಟು ಮಂಡಿಗೆ ಪೂತರೇಕುಲು ಎಂದು ಕೂಡಾ ಹೇಳ್ತಾರೆ. ಜೈನ ಧರ್ಮೀಯರ ಸೀಮಂತ ಪ್ರಸ್ಥದಲ್ಲಿ ಕಟ್ಮಂಡಿಗೆ ಇರಲೇ ಬೇಕು. ಕಟ್ಮಂಡಿಗೆ ಇಲ್ಲದ ಸೀಮಂತ ಕಾರ್ಯಕ್ರಮ ಅಪರಿಪೂರ್ಣ. ಕಟ್ಮಂಡಿಗೆ ಇಲ್ಲದೆ ಸೀಮಂತ ನಡೆಸಿದ್ರೆ ಸೀಮಂತಿನಿಯ ಬಯಕೆ ಈಡೇರುವುದಿಲ್ಲ ಎಂಬ ನಂಬಿಕೆಯಿದೆ. ಅಷ್ಟೊಂದು ಪ್ರಾಮುಖ್ಯತೆ ಇದೆ ಈ ಸ್ವೀಟ್ ಗೆ. ಎಷ್ಟೇ ಬಡವರಾದ್ರೂ ಸೀಮಂತದಂದು ಮಾತ್ರ ದೇವರಿಗೆ ಮತ್ತು ಸೀಮಂತಿನಿಗೆ ಕಟ್ಮಂಡಿಗೆ ಬಡಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ. ನಂತರ ಸೀಮಂತಿನಿಗೆ ಬಳಸಿದ ಕಟ್ಮಂಡಿಗೆಯನ್ನು ಸಭೆಗೆ ಹಂಚುವ ಪದ್ಧತಿಯೂ ಇದೆ.
ಶುಭಕಾರ್ಯಗಳಲ್ಲಿ ವಿಶೇಷ ಸಿಹಿತಿಂಡಿ
ಈಗಂತೂ ಯಾವುದೇ ಕಾರ್ಯಕ್ರಮವಿರಲಿ, ಜೈನ ಧರ್ಮೀಯರ ಪ್ರತಿಷ್ಠೆಯ ತಿನಿಸಾಗಿ ಕಟ್ಮಂಡಿಗೆ ಭೋಜನದ ಎಲೆಯ ತುದಿಯಲ್ಲಿ ಜಾಗ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಕಟ್ಮಂಡಿಗೆಯ ಜನಪ್ರಿಯತೆ ಇತ್ತೀಚಿಗೆ ಹೆಚ್ಚಾಗ್ತಾ ಇದೆ. ಜೈನರಲ್ಲದೇ ಇತರರೂ ಕೂಡಾ ಕಟ್ಮಂಡಿಗೆಯ ರುಚಿ ಕಂಡುಕೊಂಡಿದ್ದಾರೆ. ಇತರ ವರ್ಗದವರನ್ನೂ ಕಟ್ಮಂಡಿಗೆ ಬಾಯಿ ಚಪ್ಪರಿಸುವಂತೆ ಮಾಡಿದೆ. ಹಾಗಾಗಿಯೇ ಇತರ ಸಮುದಾಯದವರ ಬರ್ಥ್ ಡೇ ಪಾರ್ಟಿಗಳಿರಲಿ, ಮದುವೆ ಸೀಮಂತ ಇರಲಿ ಕಟ್ಮಂಡಿಗೆ ವಿಶೇಷ ಸಿಹಿತಿಂಡಿಯಾಗಿ ಮನ್ನಣೆ ಪಡೆದುಕೊಂಡಿದೆ.
ಪೇಪರ್ ಸ್ವೀಟ್ ಆಂಧ್ರ ಪ್ರದೇಶದ ವಿಶೇಷ ತಿಂಡಿ. ಪೂರ್ವ ಗೋದಾವರಿಯ ಅತ್ರೇಯಪುರಂ ಪೇಪರ್ ಸ್ವೀಟ್ ನ ಮೂಲ. ಇದನ್ನ ತೆಲುಗಿನಲ್ಲಿ ಪೂತರೇಕುಲು ಎಂದು ಕರೆಯುತ್ತಾರೆ. ಆಂಧ್ರ ಪ್ರದೇಶದ ಈ ಹಳ್ಳಿಯಲ್ಲಿ ವಿಶೇಷವಾಗಿ ಮಹಿಳೆಯರೇ ಈ ತಿನಿಸನ್ನು ತಯಾರಿಸುತ್ತಾರೆ. ಅಲ್ಲದೆ ಅಕ್ಕಿಯಿಂದ ತಯಾರಿಸಿದ ತೆಳು ಪಾರದರ್ಶಕವಾದ ಹಾಳೆಯನ್ನು ಮಾರುಕಟ್ಟೆಯಲ್ಲಿ ಮಾರಾಟವೂ ಮಾಡ್ತಾರೆ. ಬಹುಶಃ ಆಂಧ್ರ ಪ್ರದೇಶದಿಂದ ಕರ್ನಾಟಕಕ್ಕೆ ಈ ಸಿಹಿತಿನಿಸು ಬಂದಿರಬಹುದು ಎಂದು ಹೇಳಲಾಗಿದೆ.
ಸಾಂಪ್ರದಾಯಿಕ ತಿನಿಸೂ ಹೌದು!
ಇನ್ನು ನಮ್ಮ ದಕ್ಷಿಣ ಕರಾವಳಿಗೆ ಬಂದ್ರೆ ಜೈನ ಧರ್ಮೀಯರ ಹಬ್ಬ ಸಂಭ್ರಮದ ಕೂಟದ ಅಡುಗೆಯ ಮೆನುವಿನಲ್ಲಿ ಕಟ್ಮಂಡಿಗೆ ಒಂದು ಸಾಂಪ್ರದಾಯಿಕ ತಿನಿಸು. ದೇವರ ಕಾರ್ಯಕ್ರಮಕ್ಕೆ, ಶುಭ ಸಮಾರಂಭಗಳಲ್ಲಿ ವಿಶೇಷ ಸಿಹಿತಿಂಡಿಯಾಗಿ ಕಟ್ಮಂಡಿಗೆ ಸ್ಥಾನ ಪಡೆದುಕೊಂಡಿದೆ. ಕಟ್ಮಂಡಿಗೆ ಜೈನರ ಪೂಜಾ ಕಾರ್ಯಕ್ರಮಗಳಲ್ಲಿ ದೇವರ ನೈವೇದ್ಯಕ್ಕೆ ಅರ್ಹವಾಗಿರುವ ಚರು. ಸೀಮಂತಿನಿಗೆ ಬಹು ಪ್ರಿಯವಾದ ಕಜ್ಜಾಯ.
ಕಟ್ಮಂಡಿಗೆಗೆ ಬಳಸುವ ಅಕ್ಕಿಯಿಂದ ತಯಾರಿಸುವ ತೆಳು ಬಿಳಿಯ ಪಾರದರ್ಶಕ ಹಾಳೆ ತಿನ್ನಲು ನೀರುದೋಸೆಯದ್ದೇ ರುಚಿ. ತೆಳುವಾದ ಈ ಹಾಳೆ ಬಾಯಿಗೆ ಹಾಕಿದ್ರೆ ಬಾಂಬೆ ಮಿಠಾಯಿ ಥರ ಹಾಗೇ ಕರಗಿ ಹೋಗುತ್ತೆ. ಅಂಡಾಕಾರದ ಈ ತೆಳು ಹಾಳೆಯನ್ನು ತಯಾರಿಸುವುದು ನೀರು ದೋಸೆ ಹುಯ್ದಷ್ಟು ಸುಲಭವಲ್ಲ. ಅಂದ ಹಾಗೆ ಇದು ಕಾವಲಿಯಲ್ಲಿ ಹುಯ್ಯೋದೂ ಅಲ್ಲ. ಕಟ್ಮಂಡಿಗೆಗೆ ಹಾಳೆ ತೆಗೆಯುವುದು ಒಂದು ವಿಶೇಷವಾದ ಕಲೆ. ಇದು ಅಕ್ಕಿಯಿಂದ ತಯಾರಿಸೋ ಹಾಳೆ. ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟನ್ನು ಹದವಾಗಿ ಕಾದ ನುಣುಪಾದ ಮಣ್ಣಿನ ಮಡಕೆಯ ಬೆನ್ನಿಗೆ ಎರೆದು ಕಾಯಿಸಲಾಗುತ್ತದೆ. ಕಟ್ಮಂಡಿಗೆ ಕಟ್ಟಲು ಬೇಕಾದ ಹಾಳೆ ತೆಗೆಯುವುದು ಒಂದೆರಡು ಗಂಟೆಗಳ ಕೆಲಸ ಅಲ್ಲ.
ವಿಶ್ವಯುದ್ಧವನ್ನೆಲ್ಲ ನೋಡಿಬಂದ ಇಡ್ಲಿ, ನಿನ್ನ ಮಹಿಮೆ ನಾನೆಂತು ಪೇಳಲಿ!
ತಯಾರಿಸುವುದು ಸುಲಭದ ಕೆಲಸವಲ್ಲ!
ಪೇಪರ್ ಸ್ವೀಟ್ ನ ಹಾಳೆ ತಯಾರಿಸಲು ಅಕ್ಕಿ ಸೋಣ ಮಸೂರಿ ಅಕ್ಕಿಯನ್ನೇ ಬಳಸುತ್ತಾರೆ. ಅಕ್ಕಿಯನ್ನು ನೀರಲ್ಲಿ ಬರೋಬ್ಬರಿ ಮೂರು ಗಂಟೆಗಳ ಕಾಲ ನೆನೆಸಿ ಒಂದೂ ವರೆ ತಾಸು ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಾರೆ. ನಂತರ ಹಿಟ್ಟನ್ನ ನೀರಿಗಿಂತ ಸ್ವಲ್ಪವೇ ಗಟ್ಟಿಯಾದ ರೂಪಕ್ಕೆ ಹದ ಮಾಡಲಾಗುತ್ತದೆ.
ಹೀಗೆ ಹದ ಮಾಡಿದ ಅಕ್ಕಿ ಹಿಟ್ಟನ್ನು ತಯಾರಿಸಿಕೊಂಡು ಕವುಚಿದ ಮಡಕೆಗೆ ಬೆಂಕಿಯ ಶಾಖ ನೀಡಿ ಹದವಾಗಿ ಕಾಯಿಸುತ್ತಾರೆ. ನುಣ್ಣಗೆ ಹೊಳೆಯುವ ಮಡಕೆಯನ್ನು ಬೆಂಕಿಯ ಮೇಲೆ ಕವುಚಿ ಇಡಲಾಗುತ್ತೆ. ಬೆಂಕಿಯನ್ನು ಮಡಕೆಯ ಒಳಗೆ ಹಾಯಿಸಲಾಗುತ್ತೆ. ಮಡಕೆಯ ಒಳಗೆ ಹದವಾಗಿ ಮಡಕೆಯ ಎಲ್ಲಾ ಭಾಗ ಕಾಯುವಂತೆ ಬೆಂಕಿ ಹಾಯಿಸುತ್ತಾರೆ. ಕಾದ ಮಡಿಕೆಯ ಬೆನ್ನಿನ ಮೇಲೆ ತೆಳುವಾದ ಕರವಸ್ತ್ರದ ಗಾತ್ರದ ಶ್ವೇತ ವರ್ಣದ ಬಟ್ಟೆಯನ್ನು ಅಕ್ಕಿ ಹಿಟ್ಟಿಗೆ ಮುಳುಗಿಸಿ ಅದರಲ್ಲಿ ಅದ್ದಿ ಅಂಟಿದ್ದ ಅಕ್ಕಿಹಿಟ್ಟನ್ನು ನುಣುಪಾದ ಮಡಕೆಯ ಬೆನ್ನಿಗೆ ಎಳೆಯಲಾಗುತ್ತದೆ. ಆ ಹಿಟ್ಟು ಮಡಕೆಯ ಬೆನ್ನ ಭಾಗದಲ್ಲಿ ಕಾದು ನಂತರ ಹಾಳೆಯಾಗಿ ಎದ್ದು ಬರುತ್ತದೆ.
ಹೀಗೆ ತಯಾರಿಸಿದ ಮೂರು ನಾಲ್ಕು ಹಾಳೆಗಳನ್ನು ನೆನೆದ ಬಿಳಿಬಟ್ಟಿಯಲ್ಲಿ ಮಡಚಲು ಅನುಕೂಲವಾಗುವಂತೆ ನೆನೆಸುತ್ತಾರೆ. ನಂತರ ಈ ನೆನೆದ ಹಾಳೆಗಳನ್ನು ಕಟ್ಟುಮಂಡಿಗೆ ಕಟ್ಟುವ ಮಣೆಯ ಮೇಲೆ ಕ್ರಮವಾಗಿ ಜೋಡಿಸಿ ಸಕ್ಕರೆಯನ್ನು ಹರಡಿ ಹಾಳೆಗಳು ತೋಯುವಂತೆ ತುಪ್ಪವನ್ನು ಬೆರೆಸುತ್ತಾರೆ. ಏಳು ಇಂಚು ಅಗಲ ಏಳು ಇಂಚು ಉದ್ದದ ಕಟ್ಟುಮಂಡಿಗೆ ತಯಾರಿಸಲು ನಾಲ್ಕರಿಂದ 5 ಹಾಳೆಗಳನ್ನು ಬಳಸುತ್ತಾರೆ. ನಂತರ ಕ್ರಮಪ್ರಕಾರವಾಗಿ ಹಂತದಿಂದ ಹಂತಕ್ಕೆ ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ಬಳಿಕ ಮಲ್ಲಿಗೆಯ ಬಣ್ಣದ ಕಟ್ಮಂಡಿಗೆ ರೆಡಿ. ಕಟ್ಮಂಡಿಗೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಗಾದ ಅದು ಎಳೆಎಳೆಯಾಗಿ ಕಾಣಿಸುವುದರಿಂದ ಕಟ್ಮಂಡಿಗೆ ತಯಾರಿಸುವವನ ಕಲೆಗೆ ತಲೆದೂಗುವಂತಾಗುತ್ತದೆ.
ಬೆಲ್ಲದಿಂದಲೂ ತಯಾರಿಸಬಹುದು
ಸಕ್ಕರೆಯ ಕಟ್ಮಂಡಿಗೆ ಮಾತ್ರವಲ್ಲ. ಬೆಲ್ಲದಿಂದ ಕೂಡಾ ಕಟ್ಮಂಡಿಗೆ ತಯಾರಿಸಲಾಗುತ್ತದೆ. ಬೆಲ್ಲದ ಕಟ್ಮಂಡಿಗೆಯ ರುಚಿ ಇನ್ನೂ ಸೊಗಸು. ಆದಕ್ಕೆ ಬೇಡಿಕೆ ಜಾಸ್ತಿ ಇದ್ರೂ ಅದನ್ನು ಮಾಡೋದು ಸಕ್ಕರೆಯ ಕಟ್ಮಂಡಿಗೆಗೆ ಹೋಲಿಸಿದ್ರೆ ತುಸು ಕಷ್ಟವೇ.... ಆದ್ರೂ ತೀರಾ ಅಪರೂಪಕ್ಕೆ ಎನ್ನುವಂತೆ ಚಿನ್ನದ ಬಣ್ಣದ ಬೆಲ್ಲದ ಕಟ್ಮಂಡಿಗೆ ಕೂಡಾ ವಿಶೇಷ ಸಂದರ್ಭಗಳಲ್ಲಿ ತಯಾರಿಸುತ್ತಾರೆ.
ಕಟ್ಮಂಡಿಗೆ ಹಾಳೆ ತೆಗೆಯಲು ಬಳಸುವ ಮಡಕೆ ತಯಾರಿಗೂ ನಿರ್ದಿಷ್ಟ ಹಂತಗಳಿವೆ. ಮಡಿಕೆ ಯಾವ ಮಣ್ಣಿನಿಂದ ತಯಾರಿಸಬೇಕು, ಯಾವ ಆಕೃತಿಯಲ್ಲಿರಬೇಕು ಇದರ ಬಗ್ಗೆಯೂ ಸಿಹಿತಿಂಡಿ ತಯಾರಿಸುವವರು ಗಮನ ಹರಿಸುತ್ತಾರೆ. ಅಕ್ಕಿಯ ತೆಳು ಹಾಳೆ ಮಡಕೆಯಿಂದ ಕಾದು ಒಡಕಿಲ್ಲದೆ ಎದ್ದು ಬರಬೇಕಾದರೆ ಮಣ್ಣಿನ ಮಡಕೆ ನುಣುಪು ಮಾಡುವ ಕೆಲಸವಂತೂ ತೀರಾ ಶ್ರಮದಾಯಕವಾದದ್ದು. ಸತತ ಒಂದು ತಿಂಗಳು ಮಡಕೆಯ ಬೆನ್ನಿಗೆ ಎಳ್ಳೆಣ್ಣೆ ಸುರಿದು ಹೊಂಗೆ ಸೊಪ್ಪಿನಿಂದ ಉಜ್ಜಿ ಉಜ್ಜಿ ಮಡಕೆಯನ್ನು ನುಣುಪು ಮಾಡುತ್ತಾರೆ. ಮಡಕೆ ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಈ ಪ್ರಕ್ರಿಯೆ ಮುಂದುವರಿಯುತ್ತೆ. ನಂತರವಷ್ಟೆ ಅದು ಕಟ್ಮಂಡಿಗೆ ಹಾಳೆ ತೆಗೆಯಲು ಸಿದ್ಧವಾಗಿದೆ ಎಂದು ಅರ್ಥ. ಸುಮಾರು 7- 8 ಲೀಟರ್ ಎಳ್ಳೆಣ್ಣೆಯನ್ನು ಹಚ್ಚಿ ಹೊಂಗೆ ಸೊಪ್ಪಿನಲ್ಲಿ ಉಜ್ಜುವ ಮೂಲಕ ಮಡಕೆಯನ್ನು ನುಣುಪು ಮಾಡುತ್ತಾರೆ.
ಕಟ್ಟುಮಂಡಿಗೆ ಬೇಕರಿ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಮಾರಾಟಕ್ಕೆ ಸಿಗದೇ ಇರುವುದರಿಂದ ತೀರಾ ಅಪರೂಪದ ತಿನಿಸು ಎನಿಸಿಕೊಂಡಿದೆ. ವಿಶೇಷ ಸಂದಭ?ಗಳಲ್ಲಿ ಮತ್ತು ಸೀಮಂತಕ್ಕೆ ಸಾಂಪ್ರದಾಯಿಕವಾಗಿ ತಯಾರಿಸುವವರಲ್ಲಿಗೆ ತೆರಳಿ ಕಟ್ಟುಮಂಡಿಗೆ ಕಟ್ಟಿಸಿಕೊಂಡು ಬರುತ್ತಾರೆ.