ಬಿಜೆಪಿ ಹೊಸ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಿಚಯ
ರಾಜ್ಯ ಬಿಜೆಪಿಯು ಸುಖದ ದಿನಗಳನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನಳೀನ್ ಕುಮಾರ್ ಕಟೀಲ್ ಪಾಲಾಗಿದೆ. ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರುವ ಅವರಿಗೆ ಬಂದಿರುವ ಈ ಜವಾಬ್ದಾರಿ ಅನಿರೀಕ್ಷಿತವಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಂಸದರಾಗಿರುವ ನಳೀನ್ ಕಟೀಲ್ ಅವರು, ಮಂಗಳೂರಿನಲ್ಲಿ 7 ಡಿಸೆಂಬರ್ 1966 ರಲ್ಲಿ ಜನಿಸಿದರು. 52 ವರ್ಷ ವಯಸ್ಸಿನ ನಳೀನ್ ಕುಮಾರ್ ಮೂರು ಬಾರಿ ಸಂಸದರಾಗಿದ್ದಾರೆ. ಆದರೆ ಅವರು ರಾಜಕೀಯ ಪ್ರಾರಂಭ ಮಾಡಿದ್ದು ತಾಲ್ಲೂಕು ಮಟ್ಟದಿಂದ..
ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ, ಅಧಿಕೃತ ಘೋಷಣೆ
ಹದಿನೆಂಟರ ವಯಸ್ಸಿನಲ್ಲಿಯೇ ಆರ್ಎಸ್ಎಸ್ ಶಿಬಿರದಲ್ಲಿ ಶಿಸ್ತಿನ ಪಾಠ ಕಲಿಯಲು ಪ್ರಾರಂಭಿಸಿದ ನಳೀನ್ ಕುಮಾರ್ ಕಟೀಲ್ ಅವರು ಸತತ 12 ವರ್ಷ ಆರ್ಎಸ್ಎಸ್ ಪ್ರಚಾರಕರಾಗಿ ದುಡಿದಿದ್ದಾರೆ. ಈ ನಡುವೆ ಹಲವು ಹಿಂದೂಪರ ಹೋರಾಟಗಳಲ್ಲಿಯೂ ಅವರು ಭಾಗಿಯಾಗಿದ್ದರು. ಅಯೋಧ್ಯೆ ಆಂದೋಲನದಲ್ಲಿಯೂ ಅವರು ಮುಂಚೂಣಿಯಲ್ಲಿದ್ದರು.
ತಂದೆಯವರ ಮರಣಾನಂತರ ಕುಟುಂಬಕ್ಕೆ ಆಸರೆಯಾಗಲು ಕೃಷಿಯಲ್ಲಿ ತೊಡಗಿಕೊಂಡ ನಳೀನ್ ಕುಮಾರ್, ಆ ನಂತರ ಕಟ್ಟಡ ನಿರ್ಮಾಣ ಗುತ್ತಿಗೆದಾರರಾದರು. ನಂತರ ಮತ್ತೆ ರಾಜಕೀಯದ ಸೆಳೆತ ಹೆಚ್ಚಾಗಿ ಬಿಜೆಪಿ ಪಕ್ಷ ಸೇರಿದರು. ತಾಲ್ಲೂಕು ಮಟ್ಟದಿಂದ ರಾಜಕೀಯ ಪ್ರಾರಂಭಿಸಿದ ನಳೀನ್ ಕುಮಾರ್ ಕಟಿಲ್ ನಂತರ ಜಿಲ್ಲಾ ಕಾರ್ಯದರ್ಶಿಯಾಗಿ ಐದು ವರ್ಷಗಳ ಕಾಲ ಸಂಘಟನೆ ಮಾಡಿದರು.
ಮೊದಲ ಚುನಾವಣೆಯಲ್ಲೇ ಘಟಾನುಘಟಿಗೆ ಸೋಲುಣಿಸಿದ್ದರು
2009 ರಲ್ಲಿ ನಳೀನ್ ಅವರಿಗೆ ಮೊದಲ ಬಾರಿಗೆ ಬಿಜೆಪಿ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಆಗ ತಾನೆ ವಿಭಜನೆ ಮಾಡಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಹೊಸ ಅಭ್ಯರ್ಥಿಯನ್ನು ಹುಡುಕುತ್ತಿದ್ದಾಗ, ಆರ್ಎಸ್ಎಸ್ ನೆರಳಲ್ಲಿ ಬೆಳೆದ, ಧರ್ಮ ಮತ್ತು ರಾಷ್ಟ್ರೀಯವಾದದ ಪ್ರಖರ ಅನುಯಾಯಿಯಾಗಿದ್ದ ಕಟೀಲ್ ಅವರು ಕಣ್ಣಿಗೆ ಬಿದ್ದರು. ಅಂತೆಯೇ ಅವರು ಪ್ರಬಲ ಎದುರಾಳಿ ಜನಾರ್ದನ ಪೂಜಾರಿ ಅವರನ್ನು 40,420 ಮತಗಳ ಅಂತರದಲ್ಲಿ ಸೋಲಿಸಿ ಲೋಕಸಭೆ ಪ್ರವೇಶಿಸಿದರು.
ಎರಡನೇ ಬಾರಿ ಹೆಚ್ಚಿನ ಅಂತರದಲ್ಲಿ ಜಯ
2014 ರಲ್ಲಿ ಮೋದಿ ಅಲೆ ದೇಶದೆಲ್ಲೆಡೆ ಬೀಸುತ್ತಿದ್ದ ಸಮಯದಲ್ಲಿ ಮತ್ತೆ ಜನಾರ್ಧನ ಪೂಜಾರಿ ಅವರನ್ನುಏ ಎದುರಿಸಿದ ನಳೀನ್ ಕುಮಾರ್ ಕಟಿಲ್, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಜಯಗಳಿಸಿ ತಮ್ಮ ಸಂಘಟನೆ ಶಕ್ತಿಯನ್ನು ಸಾಬೀತು ಮಾಡಿದರು. 2014 ರಲ್ಲಿ ಅವರು ಜನಾರ್ಧನ ಪೂಜಾರಿ ಅವರನ್ನು 1.43 ಲಕ್ಷ ಮತಗಳ ಅಂತರದಲ್ಲಿ ಸೋಲಿಸಿದ್ದರು.
ಯಡಿಯೂರಪ್ಪ ಸಂಪುಟ ಸೇರಿದ ಶಶಿಕಲಾ ಜೊಲ್ಲೆ ಪರಿಚಯ
ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿತ್ತು
2019 ರಲ್ಲಿ ನಳೀನ್ ಕುಮಾರ್ ಕಟೀಲ್ ಅವರು ಕೆಲವು ಪ್ರತಿರೋಧಗಳನ್ನು ಎದುರಿಸಬೇಕಾಯಿತು. ಸಂಸದರು ಕ್ಷೇತ್ರವನ್ನು ಮರೆತಿದ್ದಾರೆಂಬ ಆರೋಪಗಳು ಟಿಕೆಟ್ ನೀಡಿಕೆ ಸಮಯದಲ್ಲಿ ಕೇಳಿಬಂದುವು. ಸ್ವ-ಪಕ್ಷೀಯರೇ ಕೆಲವರು ಕಟೀಲ್ಗೆ ಟಿಕೆಟ್ ನೀಡಲು ವಿರೋಧಿಸಿದ್ದರು. ಆದರೆ ಎಲ್ಲದರ ಹೊರತಾಗಿ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಲಾಯಿತು.
ಮಿಥುನ್ ರೈ ವಿರುದ್ಧ ಭಾರಿ ಅಂತರದ ಗೆಲುವು
2019 ರಲ್ಲಿಯೂ ಮೋದಿ ಹವಾ ಎಲ್ಲೆಡೆ ಜೋರಾಗಿತ್ತು. ಈ ಬಾರಿ ಜನಾರ್ಧನ ಪೂಜಾರಿ ಬದಲಿಗೆ ಯುವಕ ಮಿಥುನ್ ರೈ ಅವರನ್ನು ಎದುರಿಸಿದ ನಳೀನ್ ಕುಮಾರ್ ಕಟಿಲ್, ಭಾರಿ ಅಂತರದಲ್ಲಿ ಜಯಗಳಿಸಿದರು. ಕಟೀಲ್ ಬರೋಬ್ಬರಿ 2.74 ಲಕ್ಷ ಅಂತರದಲ್ಲಿ ಮಿಥುನ್ ರೈ ಅವರನ್ನು ಸೋಲಿಸಿದ್ದರು.
Karnataka Cabinet Expansion : ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರು
ದಕ್ಷಿಣ ಕನ್ನಡಕ್ಕೆ ಬೆಂಕಿ ಇಡುತ್ತೇವೆ ಎಂದ ವಿವಾದ
ಧರ್ಮದ ರಾಜಕೀಯವನ್ನೇ ಶೈಲಿಯಾಗಿಸಿಕೊಂಡಿರುವ ನಳೀನ್ ಕುಮಾರ್ ಕಟೀಲ್ ಅವರು ಆಗಾಗ್ಗೆ ಇದೇ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿಯೂ ಇದ್ದಾರೆ. 'ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಇಡುತ್ತೇವೆ' ಎಂದು ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆರ್ಎಸ್ಎಸ್ ಸಿದ್ಧಾಂತಗಳನ್ನು ಪಾಲಿಸುವ ಕಟೀಲ್, ಇತ್ತೀಚೆಗಷ್ಟೆ ಗಾಂಧಿ ಕೊಂದವರ ಪರವಾಗಿ ಟ್ವೀಟ್ ಮಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ನಂತರ ಪಕ್ಷವು ಎಚ್ಚರಿಕೆ ಸಹ ನೀಡಿತು.
ಅಭಿವೃದ್ಧಿ ಕಾರಣ ಸಂಸದರಾದವರಲ್ಲವೆಂದ ಆರೋಪ
ಕಟೀಲ್, ಅಭಿವೃದ್ಧಿಯ ಕಾರಣದಿಂದ ಸಂಸದರಾದವರಲ್ಲ ಧರ್ಮದ ರಾಜಕಾರಣದ ಕಾರಣದಿಂದ ಸಂಸದರಾದವರು ಎಂಬ ಆರೋಪ ಅವರ ಮೇಲಿದೆ. ಅಷ್ಟೆ ಅಲ್ಲದೆ ಕಟೀಲ್ ಅವರು ಲೋಕಸಭೆ ಚುನಾವಣೆ ಸಮಯದಲ್ಲಿ ಹೊರತುಪಡಿಸಿ ಬೇರೆ ಸಮಯದಲ್ಲಿ ರಾಜ್ಯದೊಂದಿಗೆ ಸಂಪರ್ಕವನ್ನೇ ಇಟ್ಟುಕೊಳ್ಳುವುದಿಲ್ಲವೆಂಬ ಗುರುತರ ಆರೋಪವೂ ಇದೆ. ಸಂಸತ್ತಿನಲ್ಲಿಯೂ ಕಟೀಲ್, ಅಷ್ಟೇನು ಕ್ರಿಯಾಶೀಲರಾಗಿಲ್ಲ.
ಹೈಕಮಾಂಡ್ ನಿಲವು ಸ್ಪಷ್ಟವಾಗಿದೆ
ಈಗ ಇದೇ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಯಾರೂ ಊಹಿಸದ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿದೆ. ಅಲ್ಪವಾದರೂ ಸಮಾಜವಾದಿ ಆಗಿದ್ದ ಯಡಿಯೂರಪ್ಪ ಅವರ ಸ್ಥಾನಕ್ಕೆ ಧರ್ಮ ರಾಜಕಾರಣವನ್ನೇ ಮಾಡುತ್ತಾ ಬಂದಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಕೂರಿಸುವ ಮೂಲಕ ಹೈಕಮಾಂಡ್ ತನ್ನ ನಿಲವನ್ನು, ಗುರಿಯನ್ನು ಸ್ಪಷ್ಟಪಡಿಸಿದ್ದು. ಬಿಜೆಪಿಯು ರಾಜ್ಯದಲ್ಲಿ ಇನ್ನು ಮುಂದೆ ಧರ್ಮ, ರಾಷ್ಟ್ರೀಯತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ.