Operation ಕಮಲ ನಿಜವೆಷ್ಟು, ಕತೆಯೆಷ್ಟು?: ಇಲ್ಲಿದೆ ಲೆಕ್ಕಾಚಾರ
ಕರ್ನಾಟಕದಲ್ಲಿ ಇದೀಗ ಬೆರಳು ಮಡಚಿ, ತಲೆ ಎಣಿಸಬೇಕಾದ ಕಾಲ ಬಂದಿದೆ. ಎಲ್ಲಿ ನೋಡಿದರೂ ಇಗೋ ಸರಕಾರ ಬಿತ್ತಂತೆ, ಅಗೋ ಮುಗಿದೇ ಹೋಯಿತು. ಸಂಕ್ರಾಂತಿ, ಎಳ್ಳು-ಬೆಲ್ಲದ ಮಾತು. ಆದರೆ ಲೆಕ್ಕಾಚಾರಗಳು ಏನು ಹೇಳುತ್ತವೆ ಅಂತ ನೋಡಬೇಕಲ್ಲ. ಅದನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಇದು.
ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯ ಬಲದ ಸಂಖ್ಯೆ 224
ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ (ಒಟ್ಟು ಸ್ಥಾನದ ಶೇಕಡಾ 50ರಷ್ಟು ಪ್ಲಸ್ 1) 113
ಸದ್ಯಕ್ಕೆ
ಪಕ್ಷಗಳ
ಬಲಾಬಲ
ಹೀಗಿದೆ:
ಬಿಜೆಪಿ
104
ಕಾಂಗ್ರೆಸ್ 80
ಜೆಡಿಎಸ್ 37
ಬಿಎಸ್ ಪಿ 1
ಕೆಪಿಜೆಪಿ 1
ಪಕ್ಷೇತರ 1
ಆಪರೇಷನ್ ಕಮಲ ಭೀತಿ: ಸಿದ್ದರಾಮಯ್ಯ ಘೋಷಿಸಿದ 'ಬಿ' ಅಲರ್ಟ್
ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ (ಬಿಎಸ್ ಪಿ ಸದಸ್ಯರ ಬಲ ಇದೆ) ಬಳಿ 118 ಸದಸ್ಯ ಬಲ ಇದೆ.ಒಂದು ವೇಳೆ ಈ ಸರಕಾರವನ್ನು ಕೆಡವಿ, ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಅಂದರೆ ವಿಧಾನಸಭೆಯ ಸದ್ಯದ ಸಂಖ್ಯಾ ಬಲ 206 ಸ್ಥಾನಗಳಿಗೆ ಇಳಿಯಬೇಕು. ಅಥವಾ ಇಬ್ಬರು (ಕೆಪಿಜೆಪಿ ಹಾಗೂ ಪಕ್ಷೇತರ) ಶಾಸಕರ ಬಲ ಬಿಜೆಪಿಗೆ ಸಿಗುವುದಾದರೆ 210 ಸ್ಥಾನಕ್ಕೆ ಇಳಿಯಬೇಕು ಹಾಗೂ ಕಾಂಗ್ರೆಸ್-ಜೆಡಿಎಸ್ ನ ಶಾಸಕರು ರಾಜೀನಾಮೆ ನೀಡುವಂತೆ ಮಾಡಬೇಕು.
ಎಷ್ಟು ಮಂದಿ ರಾಜೀನಾಮೆ ನೀಡಬೇಕು ಅಂದರೆ, 118 ಸದಸ್ಯ ಬಲದ ಮೈತ್ರಿ ಕೂಟದಿಂದ ಹದಿನಾಲ್ಕು ಶಾಸಕರು ರಾಜೀನಾಮೆ ನೀಡಿ ಹೊರಬಂದರೆ, 210 ಸ್ಥಾನಕ್ಕೆ ವಿಧಾನಸಭೆಯ ಬಲ ಇಳಿಯುತ್ತದೆ. ಮೈತ್ರಿ ಪಕ್ಷಗಳ ಬಳಿ 104 ಹಾಗೂ ಬಿಜೆಪಿ ಬಳಿ 106 ಶಾಸಕರು ಇದ್ದಂತಾಗುತ್ತದೆ. ಅಂದರೆ ಸರಕಾರ ರಚಿಸಲು ಅಗತ್ಯ ಸಂಖ್ಯೆ ಬಲ ದೊರೆತಂತಾಗುತ್ತದೆ.
ಆದರೆ, ಎಷ್ಟು ಅಗತ್ಯ ಇದೆಯೋ ಅಷ್ಟೇ ಸಂಖ್ಯೆಯನ್ನು ಇಟ್ಟುಕೊಂಡು ಸರಕಾರ ನಡೆಸುವುದು ಬಹಳ ಕಷ್ಟ. ಇನ್ನು ಶಾಸಕರು ರಾಜೀನಾಮೆ ನೀಡಿದ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಅಲ್ಲಿ ಶತಾಯ ಗತಾಯ ಬಿಜೆಪಿ ಗೆಲ್ಲಬೇಕಾಗುತ್ತದೆ. ಹೀಗೆ ಸವಾಲು ಮುಂದುವರಿಯುತ್ತದೆ.
ಇನ್ನು ಪಕ್ಷಾಂತರ ಕಾಯ್ದೆ ಅನ್ವಯ ಆಗದಂತೆ ವಿಪಕ್ಷಗಳಿಂದ ಶಾಸಕರನ್ನು ಬಿಜೆಪಿಗೆ ಸೆಳೆದುಕೊಳ್ಳಬೇಕು ಅಂದರೆ, 37 ಸದಸ್ಯರಿರುವ ಜೆಡಿಎಸ್ ನಿಂದ 25 ಶಾಸಕರು ಹಾಗೂ 80 ಶಾಸಕರಿರುವ ಕಾಂಗ್ರೆಸ್ ನಿಂದ 54 ಮಂದಿ ಕೇಸರಿ ಪಕ್ಷ ಸೇರಬೇಕು. ಅಂಥ ಸನ್ನಿವೇಶ ಸೃಷ್ಟಿಯಾಗಲು ಸಾಧ್ಯವಾ?
ಮುಂಬೈನಲ್ಲಿ ಶಾಸಕರು, ಬಿಜೆಪಿಯಿಂದ ಆಪರೇಷನ್ ಕಮಲ : ಡಿಕೆಶಿ
118 ಸದಸ್ಯ ಬಲದ ಮೈತ್ರಿ ಕೂಟ ಅಂದುಕೊಂಡರೂ ಅಲ್ಲಿ ಕಾಂಗ್ರೆಸ್ ನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮತ ಚಲಾವಣೆ ಮಾಡುತ್ತಾರೆ. ಇನ್ನು ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ವಿಪ್ ಜಾರಿ ಮಾಡಿದ ಮೇಲೂ ಅಡ್ಡ ಮತದಾನ ಮಾಡಿದರೆ ಅಂಥವರ ಶಾಸಕತ್ವ ರದ್ದಾಗುತ್ತದೆ. ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿರುವುದಿಲ್ಲ. ಅಂಥ 'ತ್ಯಾಗ'ಕ್ಕೆ ಯಾರ ಸಿದ್ಧರಾಗಬಹುದು ಮತ್ತು ಯಾಕೆ ಸಿದ್ಧವಾಗಬಹುದು?
ಈ ಸರಕಾರ ಬಿದ್ದು ಹೋಗುತ್ತೆ, ಬಿದ್ದು ಹೋಗುತ್ತೆ ಅಂತ ಹೇಳುವ ಮುಂಚೆ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು ಅಲ್ಲವಾ? ಸದ್ಯದ ಸ್ಥಿತಿಯಲ್ಲಿ ಐವರು ಶಾಸಕರು ರಾಜೀನಾಮೆ ನೀಡಿದರೂ ಸರಕಾರ ಅಲುಗಾಡಲ್ಲ, ಬಿಜೆಪಿ ಅಧಿಕಾರ ಹಿಡಿಯಲ್ಲ. ಹಾಗಿದ್ದರೆ ಯಾಕಿಷ್ಟು ಧಾವಂತ?