ಕರ್ನಾಟಕದಲ್ಲಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಶುರುವಾಗಿದೆ!
Recommended Video
ಕೆಲ ಕಾಲದ ಹಿಂದೆ ಪ್ಲಸ್ ಡಿಗ್ರಿ ಪಾಲಿಟಿಕ್ಸ್ ಕಡೆ ರಾಜಕೀಯ ಪಕ್ಷಗಳು ಹೆಚ್ಚಾಗಿ ಗಮನ ಹರಿಸುತ್ತಿದ್ದವು. ಆದರೆ ಈಗ ಪ್ಲಸ್ ಡಿಗ್ರಿ ಪಾಲಿಟಿಕ್ಸ್ ಗಿಂತ ಮುಖ್ಯವಾಗಿ ಮೈನಸ್ ಡಿಗ್ರಿ ಪಾಲಿಟಿಕ್ಸ್ ಮಾಡಬೇಕು ಎಂಬುದು ರಾಜಕೀಯ ಪಕ್ಷಗಳ ರಣತಂತ್ರವೇ ಆಗಿ ಹೋಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕೇಂದ್ರದ ಕಾಂಗ್ರೆಸ್ ನಾಯಕರು ಅನುಸರಿಸಿದ್ದು ಮೈನಸ್ ಡಿಗ್ರಿ ಪಾಲಿಟಿಕ್ಸ್ ಅನ್ನೇ.
ಅದಕ್ಕೂ ಮುಂಚಿನ ದಿನಗಳಲ್ಲಿ ತಮ್ಮ ಶಕ್ತಿಯನ್ನು ವರ್ಧಿಸಿಕೊಂಡು ಎದುರಾಳಿಗಳ ದೌರ್ಬಲ್ಯದ ಲಾಭ ಪಡೆದರೆ ಅಧಿಕಾರಕ್ಕೆ ಬರುವುದು ಸುಲಭ ಎಂಬ ನಂಬಿಕೆಯಿತ್ತು. ಆದರೆ 2013ರ ಚುನಾವಣೆಯ ವೇಳೆಗೆ ಕೇಂದ್ರದ ಯುಪಿಎ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ನಾಯಕರು ಮೈನಸ್ ಡಿಗ್ರಿ ಪಾಲಿಟಿಕ್ಸ್ ಅನ್ನು ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ಮಾಡಿದರು. ಆ ಸಂದರ್ಭದಲ್ಲಿ ಬಿಜೆಪಿ ಯಾವ ಕಾರಣಕ್ಕಾಗಿ ಮೂರು ಹೋಳುಗಳಾಯಿತು ಎಂಬುದನ್ನು ಗಮನಿಸಿದರೆ ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ಮಹತ್ವ ಅರ್ಥವಾಗುತ್ತದೆ. ಇದರ ಪರಿಣಾಮವಾಗಿಯೇ ಬಿಜೆಪಿ ನಲವತ್ತು ಸೀಟುಗಳಿಗೆ ಸೀಮಿತವಾದರೆ, ಪಡೆದ ಶೇಕಡಾವಾರು ಮತಗಳ ಆಧಾರದ ಮೇಲೆ ಅಷ್ಟೇ ಸೀಟುಗಳನ್ನು ಗಳಿಸಿದ ಜೆಡಿಎಸ್ ಅಧಿಕೃತ ವಿರೋಧ ಪಕ್ಷವಾಯಿತು.
ವಿಠ್ಠಲಮೂರ್ತಿ ಕಾಲಂ : ಸಂಕಟ ಹಾಗೂ ಸಂತಸದ ಮಧ್ಯೆ ಸಿದ್ದು
ಕುತೂಹಲದ ಸಂಗತಿ ಎಂದರೆ, 2008ರ ಚುನಾವಣೆಯಲ್ಲಿ ಶೇಕಡಾ ಮೂವತ್ಮೂರರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಅವತ್ತು ಎಂಭತ್ತು ಸೀಟುಗಳನ್ನು ಗಳಿಸಿದ್ದರೆ, ಸರಿಸುಮಾರು ಅಷ್ಟೇ ಪ್ರಮಾಣದ ಮತಗಳನ್ನು ಪಡೆದು 2013ರಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿ ಅಧಿಕಾರಕ್ಕೆ ಬಂತು.
ಮೈನಸ್ ಡಿಗ್ರಿ ಪಾಲಿಟಿಕ್ಸ್ ಎಂಬುದು ರಾಜಕೀಯದ ರಣಾಂಗಣದಲ್ಲಿ ಮಹತ್ವದ ತಂತ್ರವಾಗಿ ಪರಿಗಣಿಸಲ್ಪಟ್ಟಿದ್ದು ಅಂದಿನಿಂದ. ಅದಕ್ಕೂ ಮುಂಚೆ ಮೈನಸ್ ಡಿಗ್ರಿ ಪಾಲಿಟಿಕ್ಸ್ ಅಷ್ಟೊಂದು ಮಹತ್ವ ಪಡೆದಿರಲಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಎಲ್ಲ ರಾಜಕೀಯ ಪಕ್ಷಗಳೂ ಮೈನಸ್ ಡಿಗ್ರಿ ಪಾಲಿಟಿಕ್ಸ್ ಎಂಬ ಬಾಣವನ್ನು ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿವೆ.
ಈ ರಣತಂತ್ರದ ವಿಶೇಷ ಅಂಶವೆಂದರೆ...
ಈ ರಣತಂತ್ರದ ವಿಶೇಷ ಅಂಶವೆಂದರೆ, ಎದುರಾಳಿಗಳ ಶಕ್ತಿಯನ್ನು ಕಡಿಮೆ ಮಾಡುವುದು. ಆ ಮೂಲಕ ತಮ್ಮ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳುವುದು.ಬಿಜೆಪಿ ನಾಯಕರು ಹಿಂದೂ ಮತಗಳನ್ನು ಕ್ರೋಢೀಕರಿಸಿದರೆ ಸಾಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅವರಿಗೆ ಹಿಂದೂ ಮತಗಳು ಕ್ರೋಢೀಕರಣಗೊಂಡು ಅಲ್ಪಸಂಖ್ಯಾತರ ಮತಗಳು ಎದುರಾಳಿಗಳಿಗೆ ದಕ್ಕದಂತೆ ಒಡೆದು ಹೋಗುವಂತೆ ಮಾಡಿದರೆ ಸಾಕು. ತಾವು ನಿರಾಯಾಸವಾಗಿ ಅಧಿಕಾರಕ್ಕೆ ಬರಬಹುದು ಎಂಬ ನಂಬಿಕೆ ಇದೆ.
ಬಿಜೆಪಿ ಮತಬ್ಯಾಂಕ್ ಒಡೆದ ಸಿದ್ದರಾಮಯ್ಯ
ಇನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ. ಅವರು ಮುಖ್ಯವಾಗಿ ಬಿಜೆಪಿಯ ಬಲಿಷ್ಠ ಮತಬ್ಯಾಂಕ್ ಎಂದೇ ಬಣ್ಣಿಸಲ್ಪಟ್ಟ ಲಿಂಗಾಯತ ಮತಬ್ಯಾಂಕ್ ಅನ್ನು ವೀರಶೈವ-ಲಿಂಗಾಯತ ಧರ್ಮಗಳು ಬೇರೆ ಬೇರೆ ಎಂದು ಪ್ರತಿಪಾದಿಸಿ, ಅದಕ್ಕಾಗಿ ಬೀದಿ ಹೋರಾಟ ನಡೆಸುವ ಮೂಲಕ ಒಂದು ಮಟ್ಟಿಗೆ ಯಶಸ್ವಿಯಾಗಿದೆ. ಅದರ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಲಾಗದಿದ್ದರೂ ಒಂದಷ್ಟು ಪ್ರಮಾಣದಲ್ಲಿ ಅದು ಬಿಜೆಪಿಯ ಮತಗಳನ್ನು ಮೈನಸ್ ಮಾಡಿದೆ ಎಂಬುದು ನಿಜ.
ಸಿದ್ದುವಿಗೇ ಬಲವಾದ ಹೊಡೆತ ಕೊಟ್ಟ ಗೌಡ್ರು
ಆದರೆ ಈಗ ಕಾಂಗ್ರೆಸ್ ನ ವೋಟ್ ಬ್ಯಾಂಕ್ ಗೆ ಜೆಡಿಎಸ್ ಗುನ್ನ ಹೊಡೆದು ಕುಳಿತಿದೆ.ದೇಶದ ಪ್ರಬಲ ದಲಿತ ನಾಯಕಿ, ಬಹುಜನ ಸಮಾಜ ಪಕ್ಷದ ಧುರೀಣೆ ಮಾಯಾವತಿ ಜತೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಹೊಂದಾಣಿಕೆ ಮಾಡಿಕೊಂಡಿರುವುದೇ ಅದಕ್ಕೆ ಸಾಕ್ಷಿ.
ಯಾರೇನೇ ಹೇಳಲಿ, ತಮ್ಮ ವರ್ಚಸ್ಸಿನ ಮೂಲಕ ತಮ್ಮ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಬೇರೆ ಜಾತಿಯ ಅಭ್ಯರ್ಥಿಗಳಿಗೆ ಹಾಕಿಸಬಲ್ಲ ಶಕ್ತಿ ಮಾಯಾವತಿ ಅವರಿಗಿದೆ. ಅಂತಹ ಶಕ್ತಿ ಇರುವ ಕರ್ನಾಟಕದ ನಾಯಕರು ಎಂದರೆ ದೇವೇಗೌಡ, ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ. ಹೀಗಾಗಿ ಜೆಡಿಎಸ್ ಹಾಗೂ ಬಿ.ಎಸ್.ಪಿ ಪಕ್ಷಗಳ ನಡುವಣ ಹೊಂದಾಣಿಕೆ ನಿಶ್ಚಿತವಾಗಿ ಕಾಂಗ್ರೆಸ್ ನ ದಲಿತ ವೋಟ್ ಬ್ಯಾಂಕ್ ಷೇರು ಬಂಡವಾಳವನ್ನು ಕುಗ್ಗಿಸುತ್ತದೆ.
ಚುನಾವಣಾ ಪೂರ್ವ ಮೈತ್ರಿ: ಬಿಎಸ್ಪಿ-ಜೆಡಿಎಸ್ ಸೀಟು ಹಂಚಿಕೆ ಅಂತಿಮ
ಕಾಂಗ್ರೆಸ್ ಒಳಗೇ ಮೈನಸ್ ಡಿಗ್ರಿ ಪಾಲಿಟಿಕ್ಸ್
ವಸ್ತುಸ್ಥಿತಿ ಎಂದರೆ, ದಲಿತ ವರ್ಗದ ಬಲಗೈ ಸಮುದಾಯಕ್ಕೆ ಸಿದ್ಧರಾಮಯ್ಯ ಅವರ ಬಗ್ಗೆ ಅಸಮಾಧಾನವಿದೆ. ಇದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದಾಗಿನಿಂದ ಬೆಳೆದು ಬಂದಿದ್ದು. ಪರಮೇಶ್ವರ್ ಅವರ ಸೋಲು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಸಿದ್ಧರಾಮಯ್ಯ ನಿರಾಯಾಸವಾಗಿ ಓಡಿ ಗುರಿ ತಲುಪಲು ಸಾಧ್ಯವಾಗಿಸಿತು. ಹೀಗಾಗಿ ದಲಿತರು ಸಿಎಂ ಹುದ್ದೆಯ ರೇಸಿನಿಂದ ಹೊರಬಿದ್ದಂತಾಯಿತು.
ದಲಿತ ಡಿಸಿಎಂ ಕೂಗಿಗೆ ಓಗೊಡಲಿಲ್ಲ ಸಿದ್ದರಾಮಯ್ಯ
ಆನಂತರದ ದಿನಗಳಲ್ಲಿ ದಲಿತರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲಾದರೂ ತಂದು ಕೂರಿಸಬೇಕು ಎಂಬ ವಾದ ಶುರುವಾಯಿತು. ಆದರೆ ಈ ವಾದ ಶುರುವಿನಲ್ಲಿ ಗಟ್ಟಿಯಾಗಿತ್ತಾದರೂ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಮೇಲೆ ತಣ್ಣಗಾಯಿತು.
ಆನಂತರದ ದಿನಗಳಲ್ಲಿ ದಲಿತ ಡಿಸಿಎಂ ಕೂಗು ಕರ್ನಾಟಕಕ್ಕೆ ಸೀಮಿತವಾಯಿತೇ ಹೊರತು ದಿಲ್ಲಿ ಮಟ್ಟದಲ್ಲಿ ಪ್ರಬಲವಾಗಲೇ ಇಲ್ಲ. ಯಾಕೆಂದರೆ ದಿಲ್ಲಿಯ ನಾಯಕರಿಗೆ ಸಿದ್ಧರಾಮಯ್ಯ ಅವರ ವಿರುದ್ಧ ನಿಲ್ಲುವ ಇಚ್ಛೆಯಿರಲಿಲ್ಲ. ಸ್ವಯಂ ಶಕ್ತಿಯೇ ಕಡಿಮೆಯಾದಾಗ ಮತ್ತೊಬ್ಬರಿಗೆ ಕಡಿವಾಣ ಹಾಕುವುದು ಹೇಗೆ?
ದಲಿತರ ಅಸಮಾಧಾನ ಬೂದಿಮುಚ್ಚಿದ ಕೆಂಡ
ಸಿದ್ಧರಾಮಯ್ಯ ಅವರ ಶಕ್ತಿ ಹೀಗೆ ಹೆಚ್ಚಾಗುತ್ತಾ ಹೋಯಿತು. ತಮಗೆ ಪರ್ಯಾಯ ನಾಯಕರೊಬ್ಬರು ಬಂದು ಕೂರುವಂತಾಗಬಾರದು ಎಂದು ಅವರು ಕೂಡಾ ಡಿಸಿಎಂ ಹುದ್ದೆಯನ್ನು ದಲಿತರಿಗೆ ಕೊಡಲು ಒಪ್ಪಲೇ ಇಲ್ಲ. ಹೀಗವರು ದಲಿತ ಡಿಸಿಎಂ ವಿವಾದವನ್ನು ಬಗೆಹರಿಸದ ಪರಿಣಾಮವಾಗಿ ದಲಿತ ವರ್ಗದ ಬಲಗೈ ಸಮುದಾಯದವರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಉಳಿದೇ ಇದೆ. ಆದರೆ ಆ ಮತಗಳು ಬಿಜೆಪಿ ಕಡೆ ವಾಲಿಕೊಳ್ಳುವುದು ಕಷ್ಟ.
ಇಂಥ ಆಟ ಆಡುವುದರಲ್ಲಿ ಗೌಡ್ರು ನಿಸ್ಸೀಮರು
ಇಂಥ ಆಟ ಆಡುವುರದಲ್ಲಿ ನಿಸ್ಸೀಮರಾಗಿರುವ ದೇವೇಗೌಡರು ಈ ಸಂದರ್ಭವನ್ನು ನೋಡಿ ಪ್ಲೇ ಕಾರ್ಡ್ ಹಾಕಿದ್ದಾರೆ. ಬಿ.ಎಸ್.ಪಿ.ಜತೆ ಒಪ್ಪಂದ ಮಾಡಿಕೊಂಡು, ಕಾಂಗ್ರೆಸ್ ನ ದಲಿತ ವೋಟ್ ಬ್ಯಾಂಕ್ ಒಂದು ಮಟ್ಟದಲ್ಲಾದರೂ ಮೈನಸ್ ಆಗಲಿದೆ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈನಸ್ ಡಿಗ್ರಿ ಪಾಲಿಟಿಕ್ಸ್ ಎಂಬ ರಣತಂತ್ರವನ್ನು ಅನುಸರಿಸಿ, ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಒಂದು ಮಟ್ಟದಲ್ಲಿ ಮೈನಸ್ ಮಾಡಿದ ಸಿದ್ಧರಾಮಯ್ಯ ಈಗ ತಾವೇ ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ರಣತಂತ್ರಕ್ಕೆ ಕುತ್ತಿಗೆ ಕೊಡಬೇಕಾದ ಸ್ಥಿತಿ ಬಂದಿದೆ.
ಸಿದ್ದರಾಮಯ್ಯ ದಲಿತರಿಗೆ ಒಳಮೀಸಲಾತಿ ನೀಡಿದರೂ
ಒಂದು ವೇಳೆ ಸಿದ್ದರಾಮಯ್ಯ ಅವರು ದಲಿತರಿಗೆ ಒಳಮೀಸಲಾತಿ ನೀಡಿದರೂ ಬಲಗೈ ಸಮುದಾಯದ ಗಣನೀಯ ಮತಗಳು ಜೆಡಿಎಸ್-ಬಿಜೆಪಿ ಕಡೆ ವಾಲುತ್ತವೆ. ನೀಡದಿದ್ದರೂ ಮೂಲ ಅಸಮಾಧಾನ ಹಾಗೇ ಇರುವುದರಿಂದ ಮತ್ತು ಮುಂದಿನ ಸಿಎಂ ಸಿದ್ಧರಾಮಯ್ಯ ಎಂದೇ ಪ್ರತಿಬಿಂಬಿತವಾಗುತ್ತಿರುವುದರಿಂದ ಬಲಗೈ ಸಮುದಾಯದ ಮತಗಳು ಒಂದು ಮಟ್ಟದಲ್ಲಿ ಕಾಂಗ್ರೆಸ್ ನಿಂದ ಪಲ್ಲಟಗೊಳ್ಳುತ್ತವೆ.
ಮೈನಸ್ ಡಿಗ್ರಿ ಪಾಲಿಟಿಕ್ಸನ್ನು ಹೇಗೆ ಎದುರಿಸ್ತಾರೆ ಸಿದ್ದು?
ಒಂದು ಕಾಲದಲ್ಲಿ ಜೆಡಿಎಸ್ ನ ಭಿನ್ನಮತೀಯ ಶಾಸಕರನ್ನು ತಮ್ಮ ಕಡೆ ಸೆಳೆದುಕೊಂಡು ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ರುಚಿಯನ್ನು ಜೆಡಿಎಸ್ ಗೆ ತೋರಿಸಿದ್ದ ಸಿದ್ಧರಾಮಯ್ಯ ಈಗ ತಾವೇ ಮೈನಸ್ ಡಿಗ್ರಿ ಪಾಲಿಟಿಕ್ಸ್ ನ ಹೊಡೆತವನ್ನು ಎದುರಿಸಬೇಕಾಗಿದೆ.
ಅದನ್ನು ಅವರು ಯಾವ ರೀತಿ ಎದುರಿಸುತ್ತಾರೆ? ಎಂಬುದು ಮುಂದಿನ ವಿಷಯ. ಆದರೆ ಒಟ್ಟಿನಲ್ಲಿ ಕರ್ನಾಟಕದ ರಾಜಕೀಯ ದಿನ ಕಳೆದಂತೆ ಮೈನಸ್ ಡಿಗ್ರಿ ಪಾಲಿಟಿಕ್ಸ್ ಕಡೆ ಹೊರಳಿಕೊಳ್ಳುವ, ಆ ಮೂಲಕ ಎದುರಾಳಿಗಳಿಗೆ ಸವಾಲು ಒಡ್ಡುತ್ತಿರುವ ರೀತಿ ಮಾತ್ರ ಕುತೂಹಲಕಾರಿಯಾಗಿದೆ.