ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!

|
Google Oneindia Kannada News

ಬೆಂಗಳೂರು, ಫೆ. 06: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17 ಶಾಸಕರ ಪೈಕಿ 10 ಶಾಸಕರಿಗೆ ಮಂತ್ರಿ ಸ್ಥಾನದ ಭಾಗ್ಯ ಸಿಕ್ಕಿದೆ. ವೈಯಕ್ತಿಕ ಪ್ರತಿಷ್ಠೆ, ಅನುದಾನ ತಾರತಮ್ಯ, ಮಂತ್ರಿಯಾಗುವ ಆಸೆ. ಹೀಗೆ ಬೇರೆ ಬೇರೆ ಕಾರಣಗಳಿಂದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗುವಂತೆ 17 ಶಾಸಕರು ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ 13 ಜನರ ಪೈಕಿ 11 ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಲ್ಲಿ 10 ಶಾಸಕರಿಗೆ ಮಂತ್ರಿಭಾಗ್ಯ ಸಿಕ್ಕಿದೆ.

ಯಡಿಯೂರಪ್ಪ ಸಂಪುಟ; ಬೆಂಗಳೂರು, ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ಯಡಿಯೂರಪ್ಪ ಸಂಪುಟ; ಬೆಂಗಳೂರು, ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ

ರಾಜೀನಾಮೆ ಕೊಟ್ಟು ಮತ್ತೆ ಆಯ್ಕೆಯಾಗಿ ಮಂತ್ರಿಯಗಿರುವ ನೂತನ ಸಚಿವರ ಪರಿಚಯ ಇಲ್ಲಿದೆ.

ಅಂದುಕೊಂಡಿದ್ದನ್ನು ಸಾಧಿಸಿದ ಸಾಹುಕಾರ!

ಅಂದುಕೊಂಡಿದ್ದನ್ನು ಸಾಧಿಸಿದ ಸಾಹುಕಾರ!

ಸ್ಥಳೀಯ ಸಹಕಾರಿ ಬ್ಯಾಂಕ್‌ ಒಂದರ ವಿಚಾರಕ್ಕೆ ಸಂಬಂಧಿಸಿದಂತೆ ರೆಬೆಲ್ ಆಗಿ ಕಾಂಗ್ರೆಸ್ ತೊರೆದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆದುಬಂದ ರಾಜಕೀಯದ ದಾರಿ ರೋಚಕ. ಕಾಂಗ್ರೆಸ್ ಪಕ್ಷದಿಂದ ಸತತವಾಗಿ 5 ಬಾರಿ ಶಾಸಕರಾಗಿ ರಮೇಶ್ ಜಾರಕಿಹೊಳಿ ಆಯ್ಕೆಯಾಗಿದ್ದರು. ಇತ್ತಿಚಿಗೆ ನಡೆದ ಉಪಚುನಾವಣೆಯಲ್ಲಿ 59 ವರ್ಷಗಳ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!<br />ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!

ಕಾಲೇಜು ದಿನಗಳಿಂದಲೂ ರಮೇಶ್ ಜಾರಕಿಹೊಳಿ ಅವರಿಗೆ ರಾಜಕೀಯದ ಸೆಳೆತ ಇತ್ತು. ಹಾಗಾಗಿ 1985ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿಯೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಬಳಿಕ 1999ರಿಂದ 2019ರ ಉಪಚುನಾವಣೆಯವರೆಗೂ ನಿರಂತರವಾಗಿ 6 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲನನೇ ಕಾಣದ ರಾಜಕಾರಣಿ ಎಂದು ಪ್ರಖ್ಯಾತರಾಗಿದ್ದಾರೆ. 1999ರಲ್ಲಿ ಮೊದಲ ಬಾರಿ ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, 2004, 2008, 2013, 2018ರಲ್ಲಿ ಸತತವಾಗಿ ಐದು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2019ರ ಉಪಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ರಮೇಶ್ ಜಾರಕಿಹೊಳಿ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎ ಓದಿದ್ದಾರೆ.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ಮಾಜಿ ಶಾಸಕ ಲಖನ್ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರರು.

ಮೊದಲ ಪ್ರಯತ್ನದಲ್ಲಿಯೇ ಮಂತ್ರಿಯಾದ ಶ್ರೀಮಂತ

ಮೊದಲ ಪ್ರಯತ್ನದಲ್ಲಿಯೇ ಮಂತ್ರಿಯಾದ ಶ್ರೀಮಂತ

ಮೊದಲ ಬಾರಿ ಕಾಂಗ್ರೆಸ್‌ ಪಕ್ಷದಿಂದ 2013ರಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದ ಶ್ರೀಮಂತ ಫಾಟೀಲ್, ನಂತರ 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆಯೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅದನ್ನು ಅಲ್ಲಗಳೆದಿದ್ದ ಶ್ರೀಮಂತ ಪಾಟೀಲ್ ಮೈತ್ರಿ ಸರ್ಕಾರ ಬಹುತಮ ಸಾಬೀತು ಪಡಿಸುವಾಗ ಗೈರಾಗುವ ಮೂಲಕ ಬಿಜೆಪಿಗೆ ಸಹಾಯ ಮಾಡಿದ್ದರು. ಆಮೇಲೆ ಶಾಸಕ ಸ್ಥಾನಕ್ಕೆ ಅನರ್ಹರಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಗವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಕೃಷಿಯಲ್ಲಿ ಪದವಿ ಪಡೆದಿರುವ ಸಚಿವ ಶ್ರೀಮಂತ ಪಾಟೀಲ್, 2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 65 ವರ್ಷಗಳ ಶ್ರೀಮಂತ ಬಾಳಾಸಾಹೇಬ ಪಾಟೀಲ್ ಅವರು 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಇದೀಗ ಮಂತ್ರಿಯಾಗಿದ್ದಾರೆ.

ವಿಜಯದ ಪತಾಕೆ ಹಾರಿಸಿದ ವಿಜಯನಗರದ ಆನಂದ್ ಸಿಂಗ್

ವಿಜಯದ ಪತಾಕೆ ಹಾರಿಸಿದ ವಿಜಯನಗರದ ಆನಂದ್ ಸಿಂಗ್

ಮೂಲತಃ ಬಿಜೆಪಿಯಿಂದಲೇ ರಾಜಕೀಯ ಆರಂಭಿಸಿದ್ದ ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, 2018ರಲ್ಲಿ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಕಂಡಿದ್ದರು.

ಆನಂದ್​​ ಸಿಂಗ್​​​ 2008, 2013 ಹಾಗೂ 2018ರಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಒಂದು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2008, 2013ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರು, ನಂತರ 2018 ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಗೆದ್ದಿದ್ದರು. ಬಳ್ಳಾರಿಯಿಂದ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಇಟ್ಟುಕೊಂಡು ಆನಂದ್ ಸಿಂಗ್ ಮೈತ್ರಿ ಸರ್ಕಾರದ ಆಡಳಿತಲ್ಲಿ ಉಪವಾಸ ಸತ್ಯಾಗ್ರಹ, ಹೋರಾಟ ಆರಂಭಿಸಿದ್ದರು. ಇದೇ ನೆಪವನ್ನು ಇಟ್ಟುಕೊಂಡು ಶಾಸಕಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದರು.

ಮೈತ್ರಿ ಸರ್ಕಾರದ ಬಹುಮತ ತೋರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕ, ಕಂಪ್ಲಿ ಕ್ಷೇತ್ರದ ಎಂಎಲ್ಎ ಗಣೇಶ್ ಅವರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದರು. ಅದಾದ ಬಳಿಕ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು 2019ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿ, ಇದೀಗ 56 ವರ್ಷಗಳ ಆನಂದ್ ಸಿಂಗ್ ಸಂಪುಟ ದರ್ಜೆ ಸಚಿವರಾಗಿದ್ದಾರೆ.

ಮಂತ್ರಿಯಾಗುವಲ್ಲಿ ಯಶಸ್ವಿಯಾದ ಯಶಂತಪುರದ ಎಸ್‌ಟಿಎಸ್

ಮಂತ್ರಿಯಾಗುವಲ್ಲಿ ಯಶಸ್ವಿಯಾದ ಯಶಂತಪುರದ ಎಸ್‌ಟಿಎಸ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಯಾಗಿದ್ದ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯಕ್ಕೆ ಬಂದಿದ್ದೆ ವಿಶೇಷ. ಬಿಜೆಪಿ ಹೈಕಮಾಂಡ್ ಮೇಲೆ ಆಗಾದ ವಾಗ್ದಾಳಿ ನಡೆಸುತ್ತಿದ್ದ ಸೋಮಶೇಖರ್, ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಲ್ಲದೆ, ಯಶವಂತಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.

ಕಳೆದ 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್​​.ಟಿ ಸೋಮಶೇಖರ್​, ಬಳಿಕ ಬಿಜೆಪಿ ಸೇರಿ 2019ರ ಉಪ-ಚುನಾವಣೆಯಲ್ಲಿ 3ನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. 61 ವರ್ಷಗಳ ನೂತನ ಸಚಿವ ಎಸ್.ಟಿ. ಸೋಮಶೇಖರ್ ಪದವಿ ಶಿಕ್ಷಣ ಪಡೆದಿದ್ದಾರೆ.

ಕೆ.ಆರ್. ಪುರದ ಬಿಜೆಪಿ ಶಾಸಕ ಬಿ.ಎ. ಬಸವರಾಜ

ಕೆ.ಆರ್. ಪುರದ ಬಿಜೆಪಿ ಶಾಸಕ ಬಿ.ಎ. ಬಸವರಾಜ

ಬೈರತಿ ಬಸವರಾಜ ಎಂದೆ ಕರೆಯಲ್ಪಡುವ ಬಿ.ಎ. ಬಸವರಾಜ ಅವರು ಗ್ರಾಮ ಪಂಚಾಯ್ತಿಯಿಂದ ರಾಜಕೀಯ ಆರಂಭಿಸಿ ಮಂತ್ರಿ ಪದವಿವರೆಗೆ ನಡೆದುಕೊಂಡು ಬಂದಿದ್ದು ಅವರ ಸಾಧನೆ. ಮೂಲತಃ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಆರಂಭಿಸಿದ್ದ ಬಸವರಾಜ ಅವರು, 2000 ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದರು. ನಂತರ 2002 ರಿಂದ 2007 ಬಿದರಹಳ್ಳಿ ತಾಲೂಕು ಪಂಚಾಯತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

2007 ರಲ್ಲಿ ಬೆಂಗಳೂರು ಪೂರ್ವ ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆ. 2010 ಮಹದೇವಪುರ ಕ್ಷೇತ್ರದ ಹೂಡಿ ವಾರ್ಡ್ ಪಾಲಿಕೆ ಸದಸ್ಯರಾಗಿ ಆಯ್ಕೆ. ನಂತರ 2013 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಅವರ ವಿರುದ್ದ ಕೆ.ಆರ್.ಪುರ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ದಿಸಿ ಗೆಲುವು ಸಾಧಿಸಿದ್ದರು. ಮತ್ತೆ 2018 ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿ ಎಂದೇಗುರುತಿಸಲ್ಪಟ್ಟಿದ್ದ 56 ವರ್ಷಗಳ ಬಿ.ಎ. ಬಸವರಾಜ್, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಕಾರಣ ರಾಜಿನಾಮೆ ನೀಡಿ 2019 ರಲ್ಲಿ ಬಿಜೆಪಿ ಸೇರ್ಪಡೆಗೊಂಡು, ಎಂ ಎಲ್ ಸಿ ನಾರಾಯಣಸ್ವಾಮಿ ವಿರುದ್ದ ಸ್ಪರ್ದಿಸಿ ಮೂರನೇ ಭಾರಿಗೆ ಶಾಸಕರಾಗಿ, ಇದೀಗ ಮೊದಲ ಭಾರಿ ಸಚಿವರಾಗಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ, ನೂತನ ಸಚಿವ ಡಾ. ಕೆ. ಸುಧಾಕರ್

ಚಿಕ್ಕಬಳ್ಳಾಪುರ ಶಾಸಕ, ನೂತನ ಸಚಿವ ಡಾ. ಕೆ. ಸುಧಾಕರ್

ನೂತನ ಸಚಿವ, ಚಿಕ್ಕಬಳ್ಳಾಪುರ ಬಿಜೆಪಿ ಶಾಸಕ ಡಾ. ಕೆ. ಸುಧಾಕರ್ ಅತ್ಯಂತ ಪ್ರಭಾವಿ ರಾಜಕಾರಣಿ ಎಂದೆ ಪರಿಚಿತ. ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳಿಗೆ ಅತ್ಯಂತ ಆಪ್ತರು. ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದಿರುವ ಡಾ. ಕೆ. ಸುಧಾಕರ್, ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಒಂದು ಸಲಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ, ಸುಧಾಕರ್ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇನ್ನು ಎಸ್.ಎಂ.ಕೃಷ್ಣ, ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಸಮಯದಲ್ಲಿ ಶ್ರೀಲಂಕಾ ದೇಶದ ವಾಣಿಜ್ಯ ಪ್ರತಿನಿಧಿಯಾಗಿಯೂ ಸುಧಾಕರ್​ ಕಾರ್ಯ ನಿರ್ವಹಿಸಿದ್ರು. ರಿಲಯನ್ಸ್ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಸುಧಾಕರ್ ಸೇವೆ ಸಲ್ಲಿಸಿದ್ದಾರೆ. 2013, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುಧಾಕರ್ ಶಾಸಕರಾಗಿ ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಸಚಿವಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್, ಮಂತ್ರಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಶಾಸಕರಾಗಿದ್ದರು.

ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಶಾಸಕ, ನೂತನ ಸಚಿವ ಕೆ. ಗೋಪಾಲಯ್ಯ

ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಶಾಸಕ, ನೂತನ ಸಚಿವ ಕೆ. ಗೋಪಾಲಯ್ಯ

ಬಿಬಿಎಂಪಿ ಸದಸ್ಯರಾಗಿದ್ದ ಕೆ. ಗೋಪಾಲಯ್ಯ ಅವರು ಮೊದಲ ಬಾರಿ 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕೆ. ಗೋಪಾಲಯ್ಯ ಅವರು, ಅದೇ ಸಮುದಾಯಕ್ಕೆ ಸೇರಿರುವ ಮತಗಳು ಹೆಚ್ಚು ಇರುವುದರಿಂದ ಮಾಜಿ ಪ್ರಧಾನಿ ದೇವೇಗೌಡರ ಕೃಪಾಕಟಾಕ್ಷದಿಂದಲೇ ಶಾಸಕರಾಗಿದ್ದಾರೆ ಎನ್ನಲಾಗಿತ್ತು. ನಂತರ ಎರಡನೇ ಬಾರಿ 2018ರಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಾಯಿ ಮಹಾಲಕ್ಷ್ಮಿಲೇಔಟ್ ಕ್ಷತ್ರದಿಂದ ಮರು ಆಯ್ಕೆ ಆಗಿದ್ದರು.

ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರಿ, ಅವರು 2019ರ ಉಪ-ಚುನಾವಣೆಯಲ್ಲಿ ಮತ್ತೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುರುವ ಗೋಪಾಲಯ್ಯ, ಇದೀಗ ಪೌರಾಡಳಿತ ಖಾತೆಯ ಆಕಾಂಕ್ಷಿಯಾಗಿದ್ದಾರೆ.

ಬಿಎಸ್‌ಸಿ ಪದವೀಧರರಾಗಿರುವ 64 ವರ್ಷಗಳ ಗೋಪಾಲಯ್ಯ ಅವರ ಪತ್ನಿ ಕೂಡ ರಾಜಕಾರಣಿ. ಬಿಬಿಎಂಪಿ ಉಪ ಮೇಯರ್ ಆಗಿಯೂ ಹೇಮಲತಾ ಗೋಪಾಲಯ್ಯ ಸೇವೆ ಸಲ್ಲಿಸಿದ್ದಾರೆ.

ಬಯಸಿದ್ದನ್ನು ಪಡೆದುಕೊಂಡ ಬಿ.ಸಿ. ಪಾಟೀಲ್

ಬಯಸಿದ್ದನ್ನು ಪಡೆದುಕೊಂಡ ಬಿ.ಸಿ. ಪಾಟೀಲ್

ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದಾಗ ಚಕ್ಕಡಿ-ಎತ್ತಿನ ಬಂಡಿಯಲ್ಲಿ ವಿಧಾನಸೌಧಕ್ಕೆ ಬಂದು ಗಮನ ಸೆಳೆದಿದ್ದ ನೂತನ ಸಚಿವ ಬಿ.ಸಿ. ಪಾಟೀಲ್ ಅವರು ಮೂಲತಃ ಪೊಲೀಸ್ ಅಧಿಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಯಲಿವಾಳ ಗ್ರಾಮ ಬಿ.ಸಿ. ಪಾಟೀಲ್ ಅವರ ಹುಟ್ಟೂರು. 1979ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆ ಕರ್ತವ್ಯ ಆರಂಭಿಸಿದ್ದರು. ನಂತರ 1994ರಲ್ಲಿ ಇನ್ಸಪೆಕ್ಟರ್ ಆಗಿ ಬಡ್ತಿಹೊಂದಿದ ಬಳಿಕ ಬೆಂಗಳೂರಿಗೆ ವರ್ಗವಣೆಯಾಗಿ ಬಂದಿದ್ದರು.


ಸಚಿವ ಬಿ.ಸಿ. ಪಾಟೀಲ್ ಅವರು ರೈತ ಹೋರಾಟದ ಮೂಲಕ 2004ರಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದರು. ನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಸಚಿವ ಸ್ಥಾನ ಸಿಗದೇ ಇದ್ದುದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಶಾಸಕನಾಗಿ ಬಿಜೆಪಿ ಸೇರಿದ್ದರು.

2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಇದೀಗ ಮೊದಲ ಸಲ ಸಚಿವರಾಗಿ ಗೃಹ ಖಾತೆಯ ಆಕಾಂಕ್ಷಿಯಾಗಿದ್ದಾರೆ. ಕಲಾ ವಿಭಾಗದಲ್ಲಿ ಪದವಿನ ಪಡೆದಿರುವ ಬಿ.ಸಿ. ಪಾಟೀಲ್, 2003ರಲ್ಲಿ ರೈತಪರ ಹೋರಾಟದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರೈತರ ಹೋರಾಟದಲ್ಲಿ ಭಾಗಿಯಾಗಿ 9 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.

ನೂತನ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ ಅವರು ರಂಗಭೂಮಿ ಕಲಾವಿದ ಕೂಡ ಹೌದು. ಮೊದಲಿನಿಂದಲೂ ರಂಗಭೂಮಿ ಕಲಾವಿದರಾಗಿದ್ದ ಬಿ.ಸಿ.ಪಾಟೀಲ್ 1994ರಲ್ಲಿ ಬೆಂಗಳೂರಿಗೆ ಬಂದ ನಂತರ ಚಲನಚಿತ್ರರಂಗ ಪ್ರವೇಶಿಸಿದ್ದರು. ನಿಷ್ಕರ್ಷ, ಸಂಘರ್ಷ ಚಿತ್ರಗಳಲ್ಲಿ ಗಮನ ಸೆಳೆಯುವ ನಟನೆ ಮಾಡಿದ್ದರು. 1998ರಲ್ಲಿ ಕೌರವ ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡರು. ನಂತರ 14 ಚಿತ್ರಗಳ ನಿರ್ಮಾಣ ಮಾಡಿದ್ದು, 5 ಚಿತ್ರಗಳ ನಿರ್ದೇಶನವನ್ನು ಮಾಡಿದ್ದಾರೆ.

ಕೃಷ್ಣರಾಜಪೇಟೆಯಲ್ಲಿ ಕಮಲ ಅರಳಿಸಿದ ನಾರಾಯಣಗೌಡ

ಕೃಷ್ಣರಾಜಪೇಟೆಯಲ್ಲಿ ಕಮಲ ಅರಳಿಸಿದ ನಾರಾಯಣಗೌಡ

ಜೆಡಿಎಸ್ ಭದ್ರಕೋಟೆ ಭೇದಿಸಿ ಕಮಲ ಅರಳಿಸಿದ ಕೀರ್ತಿ ಕೆ.ಆರ್. ಪೇಟೆ ಬಿಜೆಪಿ ಶಾಸಕ ಕೆ.ಸಿ. ನಾರಾಯಣಗೌಡ ಅವರದ್ದು. ಮೂಲತಃ ಉದ್ಯಮಿ ಆಗಿರುವ ನಾರಾಯಣಗೌಡ ಅವರು, 2013 ಮತ್ತು 2018ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಕೆ.ಆರ್. ಪೇಟೆ ಶಾಸಕರಾಗಿದ್ದರು.

ಹೊಟೆಲ್ ಮ್ಯಾನೆಜ್ಮೆಂಟ್‌ನಲ್ಲಿ ಪದವಿ ಪಡೆದಿರುವ ನಾರಾಯಣಗೌಡ ಅವರು ಹೊಟೆಲ್ ಉದ್ಯಮಿ. ಎರಡನೇ ಬಾರಿ ಜೆಡಿಎಸ್ ಶಾಸಕರಾಗಿದ್ದಾಗ ಬಿಜೆಪಿ ಸೇರಿ ಅನರ್ಹ ಶಾಸಕ ಆಗಿದ್ದರು. ಬಳಿಕ 2019ರಲ್ಲಿ ನಡೆದ ಕ್ಷೇತ್ರದ ಉಪ-ಚುನಾವಣೆಯಲ್ಲಿ 9,300 ಮತಗಳ ಅಂತರದಿಂದ ಬಿಜೆಪಿ ಶಾಸಕರಾಗಿ ಕೆ.ಆರ್. ಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದೀಗ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

English summary
Full details on the new ministers of cm yediyurappa cabinet, and their political history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X