ರಾಜ್ಯ ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಸಿಡಿಸಿದ 'ಸಿದ್ದರಾಮಯ್ಯ'ಕಿಡಿ
ಬೆಂಗಳೂರು, ಆಗಸ್ಟ್ 17: ಬೆಂಗಳೂರು ರಾಜಕೀಯದಿಂದ ಇತ್ತೀಚಿನ ದಿನಗಳಲ್ಲಿ ಅಂತರ ಕಾಯ್ದುಕೊಂಡು ಬರುತ್ತಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಆಡಿರುವ ಮಾತು, ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಕಿಡಿಯನ್ನು ಹೊತ್ತಿಸಿದೆ. ಶ್ರೀರಾಮುಲು ಹೇಳಿಕೆ ಕಾಂಗ್ರೆಸ್ಸಿನಲ್ಲಿನ ಸಿದ್ದರಾಮಯ್ಯನವರ ವಿರೋಧಿ ಬಣದ ಅಸಮಾಧಾನಕ್ಕೂ ಕಾರಣವಾಗಬಹುದು.
ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ, ರಾಜಕೀಯ ನಿಂತ ನೀರಲ್ಲ ಎನ್ನುವ ಆಡುಮಾತಿಗೆ ಶ್ರೀರಾಮುಲು ಅವರ ಹೇಳಿಕೆ ತಾಜಾತಾಜಾ ಉದಾಹರಣೆಯಾಗಬಲ್ಲದು. ಚುನಾವಣಾ ವರ್ಷದಲ್ಲಿ ಶ್ರೀರಾಮುಲು ಹೇಳಿಕೆ ಹಲವು ವ್ಯಾಖ್ಯಾನಕ್ಕೆ ಕಾರಣವಾಗಿದೆ ಕೂಡಾ.
ಸಿದ್ದರಾಮಯ್ಯನವರು ಸಿಎಂ ಆಗಬೇಕೆಂಬುದು ನನ್ನ ಆಶಯ: ಸಚಿವ ಶ್ರೀರಾಮುಲು
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರು ಶ್ರೀರಾಮುಲು. ಡಿಸಿಎಂ ಪದವಿ ಹೋಗಲಿ, ಅವರು ಬಯಸಿದ ಸ್ಥಾನವೂ ಅವರಿಗೆ ಧಕ್ಕಿರಲಿಲ್ಲ.
ಬಿಎಸ್ವೈ ಸರಕಾರದ ಆರಂಭದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರನ್ನು ಕಳಪೆ ಖಾತೆ ನಿರ್ವಹಣೆ ಕಾರಣಕ್ಕಾಗಿ ಆ ಸಚಿವ ಸ್ಥಾನವನ್ನು ಅವರಿಂದ ಕಿತ್ತು, ಡಾ.ಸುಧಾಕರ್ ಅವರಿಗೆ ನೀಡಲಾಗಿತ್ತು. ಅಲ್ಲಿಂದ, ಶ್ರೀರಾಮುಲು ಅವರು ಬೆಂಗಳೂರು ರಾಜಕೀಯದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು.
ಕುರುಬರ ಮತ ಸೆಳೆಯಲು ಸಿದ್ದರಾಮಯ್ಯ ಪರ ರಾಮುಲು ಬ್ಯಾಟಿಂಗ್ : ತಿಪ್ಪೇಸ್ವಾಮಿ ಟೀಕೆ
ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳ ಡಿಸಿಎಂ ಹುದ್ದೆ ಒತ್ತಾಯ
ಜನಾರ್ಧನ ರೆಡ್ಡಿ ಎಂಡ್ ಕೋ, ರಾಜ್ಯ ರಾಜಕೀಯದಲ್ಲಿ ಮೆರೆಯುತ್ತಿದ್ದಂತಹ ಸಂದರ್ಭದಲ್ಲಿ ಶ್ರೀರಾಮುಲು ಅವರ ಮಾತಿಗೂ ತೂಕವಿರುತ್ತಿತ್ತು. ಯಾವಾಗ, ರೆಡ್ಡಿ ಪ್ರಭಾವ ಕಮ್ಮಿಯಾಗಲಾರಂಭಿಸಿತೋ ಶ್ರೀರಾಮುಲು ಪ್ರಭಾವವೂ ಕಮ್ಮಿಯಾಗುತ್ತಾ ಬಂತು. ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳ ಡಿಸಿಎಂ ಹುದ್ದೆ ಒತ್ತಾಯಕ್ಕೂ ಬಿಜೆಪಿ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ. ತಾನಾಯಿತು ತನ್ನ ಜಿಲ್ಲೆಯಾಯಿತು ಎನ್ನುವಂತೆ ತನ್ನ ಪಾಡಿಗಿದ್ದ ಶ್ರೀರಾಮುಲು ಅವರು ಈಗ ಸಿದ್ದರಾಮಯ್ಯನವರ ಬಗ್ಗೆ ನೀಡಿದ ಹೇಳಿಕೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಬಳ್ಳಾರಿ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮ
ಬಳ್ಳಾರಿ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀರಾಮುಲು, "ನಾನು ಮತ್ತು ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಇಬ್ಬರೂ ಒಂದೊಂದು ಕ್ಷೇತ್ರದಿಂದ ಗೆದ್ದಿದ್ದೆವು. ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಗೆ ಗೆದ್ದರು ಎಂದು ಕೇಳಿ, ಸಾರ್ವಜನಿಕವಾಗಿ ಅದನ್ನು ಹೇಳಲು ಆಗುವುದಿಲ್ಲ. ಕಾಂಗ್ರೆಸ್ಸಿನಿಂದ ಸಿದ್ದರಾಮಯ್ಯನವರು ಸಿಎಂ ಆದರೆ, ನನಗೂ ಸಂತೋಷ. ಹಿಂದುಳಿದ ಜಾತಿಯವರನ್ನು ಬಿಟ್ಟು ಕೊಡಲು ನಾನು ಕೂಡಾ ಸಿದ್ದನಿಲ್ಲ" ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ಶ್ರೀರಾಮುಲು ಅವರ ಭಾಷಣದ ವೇಳೆ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಕೂಡಾ ಹಾಜರಿದ್ದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ
ಶ್ರೀರಾಮುಲು ಅವರ ಮಾತನ್ನು ಹಲವು ರೀತಿಯಿಂದ ವ್ಯಾಖ್ಯಾನಿಸಲಾಗುತ್ತಿದೆ. "ಶ್ರೀರಾಮುಲು ಒಬ್ಬ ವರ್ಣರಂಜಿತ ರಾಜಕಾರಣಿ, ನಾನು ಬ್ಲ್ಯಾಕ್ ಎಂಡ್ ವೈಟ್. ಯಾವ ಸಂದರ್ಭಲ್ಲಿ ಅವರು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹೇಳಿದ್ದಾರೋ ಅದರ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಮತ್ತೆ ಅವರು ಈ ಮಾತನ್ನು ಪುನರುಚ್ಚಿಸಿದರೆ ಆಗ ಅದರ ಬಗ್ಗೆ ಮಾತನಾಡುತ್ತೇನೆ"ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಸಿಡಿಸಿದ ಕಿಡಿ
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದರಿತೆ ಶ್ರೀರಾಮುಲು ಈ ಮಾತನ್ನು ಹೇಳಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಮುಂದಿನ ಸಿಎಂ ಯಾರು ಎನ್ನುವ ಕಾಂಗ್ರೆಸ್ಸಿನೊಳಗಿನ ಚರ್ಚೆಗೆ ಶ್ರೀರಾಮುಲು ಅವರ ಹೇಳಿಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ. ರಾಜ್ಯ ಬಿಜೆಪಿ ಬಗ್ಗೆ ತನಗಿರುವ ಅಸಮಾಧಾನವನ್ನು ಪರೋಕ್ಷವಾಗಿ ಶ್ರೀರಾಮುಲು ಈ ಮೂಲಕ ಹೊರಹಾಕಿದ್ದಾರೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
Recommended Video