ಹೋದಲೆಲ್ಲಾ ಹಿನ್ನಡೆ: ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಜೆಡಿಎಸ್ ಪ್ರಾಬಲ್ಯ
ಎರಡು ರಾಷ್ಟ್ರೀಯ ಪಕ್ಷಗಳ ಹಣಬಲದ ಎದುರು ನಾವು ಸೋತೆವು ಎನ್ನುವುದು ಜೆಡಿಎಸ್ ನಾಯಕರು ಇತ್ತೀಚಿನ ದಿನಗಳಲ್ಲಿ ಸೋತ ನಂತರ ಹೇಳುವ ಸ್ಟ್ಯಾಂಡರ್ಡ್ ಹೇಳಿಕೆಗಳು. ವಿಧಾನ ಪರಿಷತ್ತಿನ 25ಕ್ಷೇತ್ರಗಳ ಪೈಕಿ ಜೆಡಿಎಸ್ ಆರು ಸ್ಥಾನದಲ್ಲಿ ಸ್ಪರ್ಧಿಸಿತ್ತು.
ಆದರೆ, ಗೆದ್ದದ್ದು ಹಾಸನ ಮಾತ್ರ. ಅಲ್ಲಿ, ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ನಿರಾಯಾಸವಾಗಿ ಗೆಲುವನ್ನು ಸಾಧಿಸಿದ್ದಾರೆ. ಮಿಕ್ಕೆಲ್ಲಾ ಕಡೆ ಜೆಡಿಎಸ್ ಪರಾಭವಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಜೆಡಿಎಸ್ ಹಿನ್ನಡೆಯ ಮೇಲೆ ಹಿನ್ನಡೆ ಅನುಭವಿಸುತ್ತಿದೆ.
"ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರದ ಮಾತನ್ನಾಡಿದ್ದಾರೆ.
ಕುಮಾರಸ್ವಾಮಿಯವರು ಹೇಳುವ ಹಣಬಲವೇ ಮುಖ್ಯವಾದರೆ, ಅದ್ಯಾವ ಖಚಿತ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ದಳಪತಿಗಳು ಆಡುತ್ತಿದ್ದಾರೆ ಎನ್ನುವುದು ಗೊತ್ತಾಗದ ವಿಚಾರವಾಗಿದೆ. ಮಂಡ್ಯ ಮತ್ತು ಮೈಸೂರಿನಲ್ಲಿ ಜೆಡಿಎಸ್ಸಿಗೆ ಮುಖಭಂಗ! ಮುಂದೆ ಓದಿ...
ಜೆಡಿಎಸ್ ಜನಪ್ರಿಯತೆ ಕುಗ್ಗುತ್ತಿರುವುದಕ್ಕೆ ಸಾಕ್ಷಿ ಎನ್ನುವಂತಿದೆ
ಕಳೆದ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್ ಗೆದ್ದ ಕ್ಷೇತ್ರವನ್ನೆಲ್ಲಾ ಕಳೆದುಕೊಳ್ಳುತ್ತಿದೆ. ಮಹಾಲಕ್ಷ್ಮೀ ಲೇಔಟ್, ಶಿರಾ, ಸಿಂಧಗಿ, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಈ ಎಲ್ಲಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚಿದೆ. ಶಿರಾ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಶಾಸಕರು ನಿಧನರಾಗಿದ್ದರಿಂದ ಚುನಾವಣೆ ನಡೆದಿತ್ತು. ಅನುಕಂಪದ ರಾಜಕಾರಣವೂ ಇಲ್ಲಿ ನಡೆದಿಲ್ಲ ಎನ್ನುವುದು ಜೆಡಿಎಸ್ ಜನಪ್ರಿಯತೆ ಕುಗ್ಗುತ್ತಿರುವುದಕ್ಕೆ ಸಾಕ್ಷಿ ಎನ್ನುವಂತಿದೆ.
ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು
ಇನ್ನು, ಡಿಸೆಂಬರ್ ಹತ್ತರಂದು ನಡೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಜೆಡಿಎಸ್ ಪಕ್ಷದ ಹೃದಯ ಎಂದೇ ಹೇಳಲಾಗುವ ಮಂಡ್ಯದಲ್ಲೀ ಜೆಡಿಎಸ್ ಸೋತಿದ್ದು, ಪಕ್ಷಕ್ಕಾದ ತೀವ್ರ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷ ಸಂಘಟನೆಗ ಈ ಫಲಿತಾಂಶ ಹೊಡೆತ ನೀಡುವುದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಕಾಂಗ್ರೆಸ್ಸಿನ ಎಂ.ಜಿ.ಗೂಳಿಗೌಡ ಗೆಲುವು ಸಾಧಿಸಿದ್ದಾರೆ
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಪ್ಪಾಜಿ ಗೌಡ್ರು ಸುಲಭವಾಗಿ ದಡವನ್ನು ಸೇರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದ್ದವು. ಆದರೆ, ಅನಿರೀಕ್ಷಿತ ಫಲಿತಾಂಶ ಎನ್ನುವಂತೆ ಕಾಂಗ್ರೆಸ್ಸಿನ ಎಂ.ಜಿ.ಗೂಳಿಗೌಡ ಗೆಲುವು ಸಾಧಿಸಿದ್ದಾರೆ. ಇಬ್ಬರೂ 90 ಅನ್ನು ತಮ್ಮ ಅದೃಷ್ಟ ಸಂಖ್ಯೆಯನ್ನಾಗಿ ಚುನಾವಣೆಯಲ್ಲಿ ಹರಿಯಬಿಟ್ಟಿದ್ದರು. ಆದರೆ, ಅದೃಷ್ಟ ಮಾತ್ರ ಒಲಿದದ್ದು ಕಾಂಗ್ರೆಸ್ಸಿಗೆ. ತ್ರಿಕೋಣ ಸ್ಪರ್ಧೆ ಇಲ್ಲಿ ಇರಲಿದೆ ಎಂದು ಹೇಳಲಾಗುತ್ತಿದ್ದರೂ, ಬಿಜೆಪಿ ಅಭ್ಯರ್ಥಿ ಮಂಜು ಕೆ.ಆರ್.ಪೇಟೆ ಕೇವಲ ಐವತ್ತು ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. (ಚಿತ್ರದಲ್ಲಿ ಎಂ.ಜಿ.ಗೂಳಿಗೌಡ)
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ
ಮಂಡ್ಯದಲ್ಲಿ ಒಟ್ಟು 4,019 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಕಾಂಗ್ರೆಸ್ಸಿಗೆ 2,044, ಜೆಡಿಎಸ್ ಅಭ್ಯರ್ಥಿಗೆ 1,877, ಬಿಜೆಪಿಗೆ 50 ಮತಗಳು ಚಲಾವಣೆಗೊಂಡಿದ್ದರೆ, 46 ಮತಗಳು ಅಸಿಂಧುಗೊಂಡಿದ್ದವು. ಆ ಮೂಲಕ, ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷಕ್ಕೆ ಅದರ ಭದ್ರಕೋಟೆಯಲ್ಲೇ ಬಿಸಿ ಮುಟ್ಟಿಸಿದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ ಇತ್ತು ಎನ್ನುವ ಸುದ್ದಿ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ.