'ಯಾರಿಗೂ ಒಲ್ಲದ' ಗೃಹಸಚಿವ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಸಂದರ್ಶನ
ನಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವಾಗಿರುವ ಶಾಸಕರು ಬಿಜೆಪಿಯಲ್ಲಿ ಒಂದು ಕಡೆ ಇರಬೇಕಾದರೆ ಒಂದು ಖಾತೆಗೆ ಮಾತ್ರ ಹಿರಿಯ ನಾಯಕರೆಲ್ಲ ಗಾಬರಿ ಬಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಕೂಡ ವರದಿ ಆಯಿತು. ಅಂಥದ್ದು ಒಂದು ಖಾತೆ ಇದೆಯಾ? ನಿಮಗೆ ಅಚ್ಚರಿ ಆಗುತ್ತಿರಬಹುದು.
ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಸಚಿವ ಸ್ಥಾನ ತಮಗೆ ಬೇಡ, ತಮಗೆ ಬೇಡ ಎಂದು ಎಲ್ಲರೂ ತಪ್ಪಿಸಿಕೊಳ್ಳುತ್ತಿದ್ದಾಗಲೇ ಬಸವರಾಜ್ ಬೊಮ್ಮಾಯಿ ಹೆಗಲಿಗೆ ಗೃಹ ಸಚಿವ ಜವಾಬ್ದಾರಿ ಹೆಗಲೇರಿದೆ. ಯಡಿಯೂರಪ್ಪ ಅವರ ಮಕ್ಕಳು ವರ್ಗಾವಣೆ ದಂಧೆ ನಡೆಸುತ್ತಿದ್ದು, ಐವತ್ತು ಐಎಎಸ್- ಐಪಿಎಸ್ ಅಧಿಕಾರಿಗಳನ್ನು ಒಂದು ತಿಂಗಳ ಫಾಸಲೆಯೊಳಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಯಡಿಯೂರಪ್ಪ ಸಂಪುಟದಲ್ಲಿ ಯಾವ ಸಚಿವರಿಗೆ ಯಾವ ಖಾತೆ?
Recommended Video
ಆದರೆ, ಇವೆಲ್ಲ ವಿವಾದ ಅಷ್ಟೇ. ನನ್ನ ಗಮನ ಏನಿದ್ದರೂ ಆಡಳಿತ ಯಂತ್ರದ ಸುಧಾರಣೆ ಕಡೆಗೆ ಮಾತ್ರ ಎನ್ನುತ್ತಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಟೈಮ್ಸ್ ಆಫ್ ಇಂಡಿಯಾದಿಂದ ಬಸವರಾಜ ಬೊಮ್ಮಾಯಿ ಅವರ ಸಂದರ್ಶನ ಮಾಡಲಾಗಿದೆ. ಈಗ ಕೇಳಿಬರುತ್ತಿರುವ ಆರೋಪಕ್ಕೆ ಅವರ ಪ್ರತಿಕ್ರಿಯೆ ಏನು ಹಾಗೂ ಇತರ ಪ್ರಶ್ನೆಗಳಿಗೆ ಅವರ ಉತ್ತರ ಏನು ಎಂಬುದರ ವಿವರ ಇಲ್ಲಿದೆ.
ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಕೈಗೊಂಬೆ ನೀವು ಎಂಬಂತೆ ವಿಪಕ್ಷದವರು ನೋಡುತ್ತಿದ್ದಾರೆ. ನೀವು ಇದನ್ನು ಹೇಗೆ ನಿಭಾಯಿಸುತ್ತೀರಿ?
ಈ ಎಲ್ಲ ಆರೋಪಗಳು ಆಧಾರರಹಿತ ಹಾಗೂ ವಾಸ್ತವವಾದದ್ದಲ್ಲ. ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಗೃಹ ಸಚಿವಾಲಯ ಮುಕ್ತವಾಗಿ ನಿರ್ವಹಿಸುವುದಕ್ಕೆ ಅವರ ಬೆಂಬಲ ಇದೆ. ಇಲಾಖೆಯಲ್ಲಿ ಸುಧಾರಣೆ ತರಲು ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಪ್ರಯತ್ನ ಮಾಡುತ್ತಿದ್ದೀನಿ.
ಪಕ್ಷದ ಹಿರಿಯರು ಒಪ್ಪಿಕೊಳ್ಳದ ಕಾರಣಕ್ಕೆ ಗೃಹ ಸಚಿವ ಸ್ಥಾನ ನಿಮಗೆ ನೀಡಲಾಗಿದೆ ಎಂಬ ವರದಿ ಇದೆಯಲ್ಲಾ?
ಇದು ನಿಜವಲ್ಲ. ಗೃಹ ಇಲಾಖೆ ಬಹಳ ಮುಖ್ಯವಾದದ್ದು. ಇಲ್ಲಿ ಸವಾಲುಗಳು ಹಾಗೂ ಅವಕಾಶಗಳು ಇವೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಜತೆಗೆ ಅಪರಾಧ ತಡೆಗಟ್ಟುವುದು ಸವಾಲು. ಹೊಸ ಬಗೆಯ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ಕ್ರಮಗಳನ್ನು ಅನುಸರಿಸಬೇಕಿದೆ. ಇಲಾಖೆಗೆ ಆಧುನಿಕ ಸ್ಪರ್ಶ ನೀಡಬೇಕಿದೆ. ನಾನು ಯಾವ ಸ್ಥಾನ ಅಥವಾ ಹುದ್ದೆಗೂ ಆಸೆ ಪಟ್ಟವನಲ್ಲ. ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ರಾಷ್ಟ್ರಮಟ್ಟದಲ್ಲಿ ಮೋದಿ ಹಾಗೂ ಅಮಿತ್ ಶಾ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ನನ್ನ ಸಾಮರ್ಥ್ಯ ಎಷ್ಟಿದೆಯೋ ಅದಕ್ಕೆ ತಕ್ಕಂತೆ ಕೆಲಸ ಮಾಡಲು ಬಯಸುತ್ತೇನೆ.
ಐವತ್ತಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ ಮತ್ತು ನೀವು ಅಧಿಕಾರ ಸ್ವೀಕರಿಸುವ ಮುಂಚೆಯೇ ಮುಖ್ಯ ಹುದ್ದೆ ಅಲಂಕರಿಸಿದ್ದಾರೆ. ನೀವು ಈಗಲೂ ಹಿರಿಯ ಅಧಿಕಾರಿಗಳಿಂದ ವಿಶ್ವಾಸ ನಿರೀಕ್ಷಿಸುತ್ತೀರಾ?
ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗುವುದು ಸಾಮಾನ್ಯ. ಇದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಗಳಿಗೆ ಇಂಥ ವರ್ಗಾವಣೆ ಮಾಡುವ ವಿವೇಚನಾಧಿಕಾರ ಇರುತ್ತದೆ. ಇದರಲ್ಲಿ ನಾನು ನಿರ್ವಹಿಸಬೇಕಾದ ಪಾತ್ರ ಇಲ್ಲ. ಇದರಿಂದ ನಾನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಕ್ಕೆ ಯಾವ ಸಮಸ್ಯೆಯೂ ಇಲ್ಲ. ನನಗೆ ನನ್ನದೇ ಜವಾಬ್ದಾರಿಗಳಿವೆ.
ಐಎಂಎ ಹಗರಣ ಹಾಗೂ ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಲಾಗಿದೆ. ಇದರಿಂದ ಪೊಲೀಸ್ ಇಲಾಖೆ ಸ್ಥೈರ್ಯದ ಮೇಲೆ ಪರಿಣಾಮ ಆಗುವುದಿಲ್ಲವಾ?
ಐಎಂಎ ಪ್ರಕರಣ ವಹಿಸಿದ್ದು ಹೈ ಕೋರ್ಟ್ ಆದೇಶದ ಮೇರೆಗೆ. ಅದು ರಾಜಕೀಯ ನಿರ್ಧಾರವಲ್ಲ. ಅದರಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಮಾತೇ ಇಲ್ಲ. ಕರ್ನಾಟಕ ಪೊಲೀಸರು ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಹೀಗೆ ಮುಂದುವರಿಯುತ್ತದೆ ಕೂಡ. ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿರುವುದರಲ್ಲಿ ಯಾವುದೇ ರಾಜಕೀಯ ದ್ವೇಷ ಇಲ್ಲ ಎಂದು ನನಗೆ ಅನಿಸುತ್ತದೆ.
ಉಪ ಮುಖ್ಯಮಂತ್ರಿಗಳ ನೇಮಕ ಹಾಗೂ ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಅಸಮಾಧಾನ ಹೆಚ್ಚಾಗುತ್ತಲೇ ಇದೆಯಲ್ಲಾ...
ಇದು ಸಂಪೂರ್ಣವಾಗಿ ಕೇಂದ್ರ ನಾಯಕತ್ವ ನೋಡಿಕೊಳ್ಳುತ್ತದೆ. ಅತೃಪ್ತ ಶಾಸಕರ ಬಗ್ಗೆ ಇಷ್ಟು ಬೇಗ ಮಾತನಾಡುವ ಅಗತ್ಯ ಇಲ್ಲ. ಏಕೆಂದರೆ ಕೇವಲ ಐವತ್ತು ಪರ್ಸೆಂಟ್ ನಷ್ಟು ಸಚಿವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ವಿವಿಧ ಪ್ರಾದೇಶಿಕ ಭಾಗದ, ವಿವಿಧ ಸಮುದಾಯವನ್ನು ಪ್ರತಿನಿಧಿಸುವ ಇನ್ನೂ ಹಲವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.
ಈ ಹಿಂದೆ ಜಿ. ಪರಮೇಶ್ವರ್ ಅವರು 'ಜೀರೋ ಟ್ರಾಫಿಕ್' ವಿಚಾರವಾಗಿ ಬಹಳ ಟೀಕೆ ಎದುರಿಸಿದರು. ನೀವು ಅದನ್ನೇ ಅನುಸರಿಸುತ್ತೀರಾ?
ಇಲ್ಲ, ಜೀರೋ ಟ್ರಾಫಿಕ್ ವಿನಾಯಿತಿಯನ್ನು ನಾನು ದುರ್ಬಳಕೆ ಮಾಡಿಕೊಳ್ಳಲ್ಲ. ಈ ಅಭ್ಯಾಸವನ್ನು ನಿಲ್ಲಿಸುವುದಕ್ಕೆ ನಾನು ನೋಡ್ತೀನಿ.