ವಿದ್ಯಾರ್ಥಿಗಳು ಉದ್ಯೋಗವಂತರಾಗಲು NEP ಸಹಕಾರಿ; ಪ್ರೊ. ಬಿ. ತಿಮ್ಮೇಗೌಡ
ಬೆಂಗಳೂರು, ಸೆ. 16: "ರಾಷ್ಟ್ರೀಯ ಶಿಕ್ಷಣ ನೀತಿ ಒಬ್ಬ ವಿದ್ಯಾರ್ಥಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಡುವುದರ ಜೊತೆಗೆ ಭವಿಷ್ಯಕ್ಕೆ ಉತ್ತಮ ಉದ್ಯೋಗ ಕಂಡುಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ನಾವು ದೇಶದಲ್ಲಿ ಮೊದಲು ಉನ್ನತ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂಬ ದಾಖಲೆಗಾಗಿ ಅನುಷ್ಠಾನ ಮಾಡುತ್ತಿಲ್ಲ. ಎನ್ಇಪಿ ಚರ್ಚೆಗೆ ಬಂದಾಗಲೇ ನಾವು ಸಿದ್ಧತೆ ಮಾಡಿಕೊಂಡಿದ್ದೆವು. ಹೀಗಾಗಿ ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ"
ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ ಅವರ ಅವರ ಅಂತರಾಳದ ಮಾತಿದು. ಪ್ರಸಕ್ತ ಸಾಲಿನಲ್ಲಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹಗಲಿರುಳು ತಿಮ್ಮೇಗೌಡ ಶ್ರಮಿಸುತ್ತಿದ್ದಾರೆ. ಕೊರೊನಾವೈರಸ್ ಸಂಕಷ್ಟದ ನಡುವೆಯೂ ಸಮರ್ಥವಾಗಿ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ತಿಮ್ಮೇಗೌಡರ ಪಾತ್ರ ಪ್ರಮುಖವಾದುದ್ದು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಟೀಕೆ-ಟಿಪ್ಪಣಿ ನಡುವೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ವಿವರಣೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವಿವಾದ
ರಾಷ್ಟ್ರದಲ್ಲಿ ಏಕರೂಪದಲ್ಲಿ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಕೆಲವು ರಾಜ್ಯಗಳು ಕೊರೊನಾವೈರಸ್ ಸಂಕಷ್ಟದಿಂದ ಎನ್ಇಪಿ ಜಾರಿ ಮಾಡುವ ತೀರ್ಮಾನ ಮುಂದೂಡಿವೆ. ಇದರ ನಡುವೆ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಪದವಿ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಒಂದಡೆ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನೊಂದಡೆ ವಿರೋಧ ಪಕ್ಷಗಳು ಸರ್ಕಾರದ ತೀರ್ಮಾನವನ್ನು ಟೀಕಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಿಯೇ ತೀರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಸಿಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ಎಲ್ಲಾ ಗೊಂದಲದ ನಡುವೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡರು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಎದ್ದಿರುವ ಗೊಂದಲಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿವರಿಸಿದ್ದಾರೆ.
ಪ್ರಶ್ನೆ: ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ತಯಾರಿ ಹೇಗಿದೆ ?
ಪ್ರೊ. ತಿಮ್ಮೇಗೌಡ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಜಾರಿಗೆ ತರುತ್ತಿದ್ದೇವೆ ಎಂಬ ಹೆಗ್ಗಳಿಕೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿಲ್ಲ. ಬದಲಿಗೆ ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಕೂಲದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಜಾರಿಗೆ ತರುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸ್ತಾವನೆ ಮುಂದಿಟ್ಟಾಗಲೇ ಅದರ ಸಾಧಕ ಬಾಧಗಳ ಬಗ್ಗೆ ಚರ್ಚಿಸಿದ್ದೆವು. ರಾಷ್ಟ್ರೀಯ ಶಿಕ್ಷಣ ನೀತಿ ಕರಡು ವರದಿ ಬಂದಾಗಲೇ ನಾವು ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆವು. ಈ ವರ್ಷದಲ್ಲಿಯೇ ಜಾರಿಗೆ ತರಬೇಕು ಎಂಬ ತೀರ್ಮಾನ ತೆಗೆದುಕೊಂಡ ಕೂಡಲೇ ತುಂಬಾ ಕೆಲಸಗಳನ್ನು ಮಾಡಬೇಕಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನ ಚಿಂತನೆ, ಪಠ್ಯ ಕ್ರಮ, ಪಠ್ಯ ಕ್ರಮದ ತಯಾರಿ, ಪೂರ್ವ ಸಿದ್ಧತೆ ಕುಡಿತು ಸಾಕಷ್ಟು ಅನೇಕ ಸಮಿತಿಗಳನ್ನು ರಚಿಸಿ ತಯಾರಿ ನಡೆಸಿದೆವು. ಹೀಗಾಗಿ ಈ ವರ್ಷದಿಂದಲೇ ಸಮರ್ಥವಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಅನುಮಾನವೇ ಬೇಡ.
NEP ಯಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ ? :
ಪ್ರೊ. ತಿಮ್ಮೇಗೌಡ: ಎನ್ಇಪಿ ಯೋಜನೆಯ ಮೂಲ ಉದ್ದೇಶ ಬದುಕಿಗೆ ಹತ್ತಿರವಾಗಿದೆ. ಒಬ್ಬ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ರೂಪಿಸುವುದಕ್ಕೆ ಎನ್ಇಪಿಯಲ್ಲಿ ಆದ್ಯತೆ ನೀಡಲಾಗಿದೆ. ಮಿಗಿಲಾಗಿ ಉದ್ಯೋಗ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸ್ವತಂತ್ರ್ಯ ವಿಷಯ ಆಯ್ಕೆ ಜೊತೆಗೆ ಒಂದು ವಿಷಯದಲ್ಲಿ ಪರಿಣಿತಿ ಜೊತೆಗೆ ಸ್ವತಂತ್ರ್ಯ ಬದುಕು ಕಟ್ಟಿಕೊಳ್ಳಲು ವಿಫುಲ ಅವಕಾಶಗಳಿವೆ. ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಓದಿದವರಿಗೆ ಉದ್ಯೋಗ ಆಯ್ಕೆಗೆ ಹೆಚ್ಚು ಅವಕಾಶವಿದೆ. ಹೀಗಾಗಿ ಎನ್ಇಪಿ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ವರ್ಷದಲ್ಲಿ ಮೊದಲ ಪದವಿಗೆ ಸೇರುವ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬ ಕಾರಣದಿಂದ ಈ ವರ್ಷದಿಂದಲೇ ಜಾರಿ ಮಾಡಲಾಗುತ್ತಿದೆ. ನಾವು ಮೊದಲು ಮಾಡುತ್ತಿದ್ದೇವೆ ಎಂಬ ಕಿರೀಟಕ್ಕಾಗಿ ಎನ್ ಇಪಿ ಜಾರಿ ಮಾಡುತ್ತಿಲ್ಲ ಎಂದು ತಿಮ್ಮೇಗೌಡ ಸ್ಪಷ್ಟನೆ ನೀಡಿದ್ದಾರೆ.
ಪ್ರಶ್ನೆ: ಎನ್ಇಪಿ ಯಲ್ಲಿ ಉದ್ಯೋಗ ಆಧಾರಿತ ಶಿಕ್ಷಣಕ್ಕೆ ನಿಜವಾಗಿಯೂ ಅವಕಾಶ ನೀಡಲಾಗಿದೆಯೇ ?
ಪ್ರೊ. ತಿಮ್ಮೇಗೌಡ: ಮೊದಲು ಪದವಿ ಮೂರು ವರ್ಷ ಅಧ್ಯಯನಕ್ಕೆ ಅವಕಾಶವಿತ್ತು. ಆನಂತರ ಸ್ನಾತಕೋತ್ತರ ಪದವಿ ಎರಡು ವರ್ಷ, ಒಂದು ವೇಳೆ ಪದವಿ ನಂತರ ಬಿಇಡಿ ಪದವಿ ಮಾಡುವುದು, ಎರಡು ವರ್ಷದ ಸ್ನಾತಕೋತ್ತರ ಪದವಿ ಓದಬೇಕಿತ್ತು. ಈಗ ನಾಲ್ಕು ವರ್ಷದ ಆನರ್ಸ್ ಪದವಿ ನೀಡಲಾಗುತ್ತಿದೆ. ಇನ್ನು ಎಂಟು ಸೆಮಿಸ್ಟರ್ ಗಳಿದ್ದು, ಆನರ್ಸ್ ಬಳಿಕ ನೇರವಾಗಿ ಪಿಎಚ್ ಡಿಗೆ ಪ್ರವೇಶ ಪಡೆಯಬಹುದು. ಪದವಿಯಲ್ಲಿ ಮೂರು ವಿಷಯ ಅಧ್ಯಯನಕ್ಕೆ ಅವಕಾಶ ಕೊಟ್ಟಿದ್ದರೂ, ಒಂದು ವಿಷಯದಲ್ಲಿ ಪರಿಣಿತಿ ಪಡೆಯಲು ಎನ್ಇಪಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಉದ್ಯೋಗ ಆಧಾರಿತ ಔದ್ಯೋಗಿಕ ತರಬೇತಿ ನೀಡಲಾಗುತ್ತದೆ. ಎರಡನೇ ಸೆಮಿಸ್ಟರ್ ನಿಂದ ಎಂಟನೇ ಸೆಮಿಸ್ಟರ್ ವರೆಗೂ ಔದ್ಯೋಗಿಕ ತರಬೇತಿ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳುವ ಜೊತೆಗೆ ಉದ್ಯೋಗ ಪಡೆಯಲು ಎನ್ಇಪಿ ತುಂಬಾ ಅನುಕೂಲವಾಗಲಿದೆ. ಇದರ ಜೊತೆಗೆ ಎನ್ಸಿಸಿ, ಎನ್ಎಸ್ಎಸ್ ಮತ್ತಿತರ ತರಬೇತಿಗೂ ಅವಕಾಶ ಕಲ್ಪಿಸಿರುವುದಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗಿ ಬದಲಾಗುವ ಜೊತೆಗೆ ಉದ್ಯೋಗವಂತರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಮ್ಮೇಗೌಡರು ತಿಳಿಸಿದ್ದಾರೆ.