ದೇಗುಲ ರಕ್ಷಣೆ ವಿಧೇಯಕ: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರ?
ಮೈಸೂರು ಜಿಲ್ಲಾಡಳಿತ ನಂಜನಗೂಡಿನ ದೇವಾಲಯವೊಂದನ್ನು ನೆಲಸಮ ಮಾಡಿದ ನಂತರ, ಧಾರ್ಮಿಕ ಕಟ್ಟಡಗಳ ರಕ್ಷಣೆ ಸಂಬಂಧ, ಬಸವರಾಜ ಬೊಮ್ಮಾಯಿ ಸರಕಾರದ ಮೇಲೆ ಇನ್ನಿಲ್ಲದ ಒತ್ತಡ ಎದುರಾಗಿದೆ. ಬಿಜೆಪಿ ಕಾರ್ಯಕಾರಿಣಿಯಲ್ಲೂ ಇದು ಮಾರ್ದನಿಸಿದೆ.
ಒಂದು ಕಡೆ, ಬಿಜೆಪಿ ಸರಕಾರದ ಅವಧಿಯಲ್ಲೇ ದೇವಾಲಯಗಳಿಗೆ ರಕ್ಷಣೆ ಇಲ್ಲ ಎಂದಾದರೆ ಹೇಗೆ ಎನ್ನುವ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದಿರುವ ಬೊಮ್ಮಾಯಿ ಸರಕಾರ ತರಾತುರಿಯಲ್ಲಿ ವಿಧೇಯಕದ ಮೊರೆ ಹೋಗಿದೆ. ಈ ಕುರಿತ ವಿಧೇಯಕವನ್ನು ಮಂಡಿಸಲಾಗಿದೆ.
ಮುದ್ರಾಂಕ ಶುಲ್ಕ ಇಳಿಕೆ, ಫ್ಲಾಟ್ ಖರೀದಿದಾರರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ
ಧಾರ್ಮಿಕ ಕಟ್ಟಡಗಳ ರಕ್ಷಣೆಗೆ ಸಂಬಂಧಿಸಿದಂತೆ ವಿಧೇಯಕ ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ, ಹಾಲೀ ಅಧಿವೇಶನದ ಕಾರ್ಯಕಲಾಪ ಪಟ್ಟಿಯಲ್ಲೂ ಇದನ್ನು ಸೇರ್ಪಡೆಗೊಳಿಸಲಾಯಿತು. ಅದರಂತೇ, 2021ನೇ ಸಾಲಿನ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕವನ್ನು ಸದನದಲ್ಲಿ ಮಂಡಿಸಲಾಯಿತು.
2814 ಅನಧಿಕೃತ ದೇವಾಲಯ ಅಧಿಕೃತಗೊಳಿಸಲು ಬಿಲ್ ಮಂಡನೆ ಮಾಡಲಿದ್ದಾರೆ ಶಾಸಕ ಎಸ್. ಎ. ರಾಮದಾಸ್
ಆದರೆ, ಈ ವಿಧೇಯಕ ಸದನದಲ್ಲಿ ಪಾಸ್ ಆದರೂ, ಅದಕ್ಕೆ ರಾಜ್ಯಪಾಲರ ಅಂಕಿತ ಬೀಳಬೇಕಾಗುತ್ತದೆ. ಅವರು ಸಹಿ ಹಾಕದೇ ರಾಷ್ಟ್ರಪತಿಗಳ ಅನುಮೋದನೆಗೂ ಕಳುಹಿಸಬಹುದು. ಇದರ ಸಾಧಕ ಬಾಧಕಗಳೇನು? ಬಿಲ್ ಪಾಸಾಗಲು ಇರುವ ತೊಡಕುಗಳೇನು? ಸದ್ಯದ ಮಟ್ಟಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾಗಿದೆಯಾ?
ಸುಪ್ರೀಂ ಆದೇಶದಂತೆ ನಡೆಯುತ್ತಿರುವುದರಿಂದ ಕಾನೂನು ಚೌಕಟ್ಟಿನಲ್ಲೇ ಇದಕ್ಕೆ ಪರಿಹಾರ
ಸದ್ಯ, ಸಾರ್ವಜನಿಕ ಸ್ಥಳಗಳಲ್ಲಿ ತಲೆ ಎತ್ತಿರುವ ಧಾರ್ಮಿಕ ಕೇಂದ್ರಗಳ ಪಟ್ಟಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದೇ ರಾಜ್ಯ ಸರಕಾರ. ಈಗ, ಒತ್ತಡಕ್ಕೆ ಮಣಿದು ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ. ಈ ವಿಧೇಯಕಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಕಮ್ಮಿ ಎನ್ನುವುದು ಕಾನೂನು ಪಂಡಿತರ ಅಭಿಪ್ರಾಯ. ಹಾಗಾಗಿ, ಸುಪ್ರೀಂ ಆದೇಶದಂತೆ ನಡೆಯುತ್ತಿರುವ ಕೆಲಸವಾಗಿರುವುದರಿಂದ ಕಾನೂನು ಚೌಕಟ್ಟಿನಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿ ಬರಬಹುದು.
ಯಾವುದೇ ವಿಧೇಯಕಕ್ಕೆ ರಾಷ್ಟ್ರಪತಿಗಳ, ರಾಜ್ಯಪಾಲರ ಅಂಕಿತ ಬೀಳುವುದು ಕಡ್ಡಾಯ
ಯಾವುದೇ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಥವಾ ರಾಜ್ಯಪಾಲರ ಅಂಕಿತ ಬೀಳುವುದು ಕಡ್ಡಾಯ. ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಸರಕಾರ ಪಾಲಿಸುತ್ತಿರುವುದರಿಂದ, ವಿಧೇಯಕಕ್ಕೆ ಸದನದಲ್ಲಿ ಅನುಮೋದನೆ ಸಿಗಬಹುದು. ಆದರೆ, ರಾಜ್ಯಪಾಲರು ಇದಕ್ಕೆ ಅಂಕಿತ ಹಾಕದೇ ರಾಷ್ಟ್ರಪತಿಗಳಿಗೆ ಕಳುಹಿಸಿದರೆ, ಅಂತಹ ಸಂದರ್ಭದಲ್ಲಿ ವಿಧೇಯಕ ಪಾಸ್ ಆಗದೇ ಇರುವ ಸಾಧ್ಯತೆಯೇ ಹೆಚ್ಚು. ಆದರೆ, ಈ ಪ್ರಕ್ರಿಯೆ ನಡೆಯಲು ಸಮಯ ತೆಗೆದುಕೊಳ್ಳುವುದರಿಂದ, ಸದ್ಯದ ಮಟ್ಟಿಗೆ ಬೊಮ್ಮಾಯಿ ಸರಕಾರ ಪಾರಾಗಬಹುದು.
ಯಾವುದಾದರೂ ಟ್ರಸ್ಟಿಗೆ ಲೀಸ್ ಆಧಾರದ ಮೇಲೆ ನೀಡಿ, ನಂತರ, ಅದನ್ನು ಸಕ್ರಮ
ಈಗ ಏನು ಸರಕಾರ ಅಕ್ರಮ ಧಾರ್ಮಿಕ ಕಟ್ಟಡ ಎಂದು ಗುರುತಿಸಿ ಸುಪ್ರೀಂಕೋರ್ಟಿಗೆ ಪಟ್ಟಿ ಸಲ್ಲಿಸಿದೆಯೋ, ಅವುಗಳಲ್ಲಿ ಬಹುತೇಕ ಹೆಚ್ಚಿನ ಕಟ್ಟಡ/ದೇಗುಲಗಳು ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಇರುವಂತಹದ್ದು. ಈಗ, ಇಂತಹ ಸ್ಥಳಗಳನ್ನು ಯಾವುದಾದರೂ ಟ್ರಸ್ಟಿಗೆ ಲೀಸ್ ಆಧಾರದ ಮೇಲೆ ನೀಡಿ, ನಂತರ, ಅದನ್ನು ಸಕ್ರಮ ಎಂದು ಘೋಷಿಸುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ, ಇದರಿಂದ ಮುಂದೊಂದು ದಿನ ಭೂಕಬಳಿಕೆಯ ಕೇಸುಗಳು ಹೆಚ್ಚಾಗಬಹುದು ಎನ್ನುವ ಭೀತಿಯೂ ಇದೆ.
ರಾಜ್ಯ ಹೆದ್ದಾರಿ-57ರಲ್ಲಿದ್ದ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲ
ರಾಜ್ಯ ಹೆದ್ದಾರಿ-57ರಲ್ಲಿದ್ದ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ಧ್ವಂಸ ಮಾಡಿತ್ತು. "ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಮೈಸೂರು ಜಿಲ್ಲೆಯ 93 ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ. ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೇ? ಒಂದೆಡೆ ದೇಗುಲಗಳ ಧ್ವಂಸ ನಡೆಯುತ್ತಿದೆ. ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದರು.