ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ
"ಮುಂಗಾರು ಮಳೆ ತಿಂಗಳಿಗೂ ಅಧಿಕ ಕಾಲ ವಿಳಂಬವಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದ ಬಗ್ಗೆ ಚಿಂತನೆ, ಚರ್ಚೆ ಸಾಕಷ್ಟು ನಡೆದರೂ ಪರಿಸರ ಉಳಿಸುವ ಕಾರ್ಯದಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ" ಎಂದು ಮಳೆಕೊಯ್ಲು, ಜಲ ಭೂಗರ್ಭಶಾಸ್ತ್ರಜ್ಞ ಡಾ. ದೇವರಾಜ ರೆಡ್ಡಿ ಅವರು ನೊಂದು ನುಡಿದರು.
ಮಳೆ ಕೊಯ್ಲು ಬಗ್ಗೆ ಮೊಬೈಲ್ನಲ್ಲೇ ಮಾಹಿತಿ ಪಡೆಯಿರಿ
ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ ಬಳಸಿಕೊಳ್ಳಬಹುದು, ನದಿ ಜೋಡಣೆ ಸಾಧ್ಯತೆ, ಕೊಳವೆ ಬಾವಿ...ನಾನಾ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಮೊದಲ ಭಾಗ ಇಲ್ಲಿದೆ..
ಕಳೆದ ಎರಡು ತಿಂಗಳಲ್ಲಿ ಮಳೆ ಕಾಣದೆ ಬರ ಪರಿಸ್ಥಿತಿ ಎದುರಿಸಿದ್ದ ಹತ್ತಾರು ಜಿಲ್ಲೆಗಳ ಪೈಕಿ ಬಹುತೇಕ ಎಲ್ಲಾ ಜಿಲ್ಲೆಗಳು ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಪೀಡಿತವಾಗಿವೆ. ಕರ್ನಾಟಕದ 17 ಜಿಲ್ಲೆ, 80 ತಾಲೂಕುಗಳು ಪ್ರವಾಹದಿಂದ ತತ್ತರಿಸಿವೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಹಾಳಾಗಿದೆ, ಪ್ರವಾಹ ತಗ್ಗಿದ ಬಳಿಕ ಇಡೀ ಪ್ರದೇಶ ತನ್ನ ಮೊದಲ ಫಲವತ್ತತೆ ಕಳೆದುಕೊಳ್ಳುವುದರ ಜೊತೆಗೆ ನೆಲ -ಜಲ ಬರಡಾಗುವ ಆತಂಕವೂ ಎದುರಾಗಲಿದೆ.
ಈ ನಿಟ್ಟಿನಲ್ಲಿ ಜಲತಜ್ಞರ ಮುಂದಿಟ್ಟ ಮೊದಲ ಪ್ರಶ್ನೆ- ಉತ್ತರ ಕರ್ನಾಟಕದ ಪ್ರವಾಹದ ತೀವ್ರತೆಗೆ ಕಾರಣವೇನು?
ಮುಖ್ಯವಾಗಿ ಕಪ್ಪು ಮಣ್ಣಿನ ಪ್ರದೇಶದಲ್ಲಿ ಈ ರೀತಿ ಸತತವಾಗಿ ಮಳೆ ಬಂದು ಪ್ರವಾಹ ಪರಿಸ್ಥಿತಿ ಉಂಟಾದಾಗ, ನೀರನ್ನು ಇಂಗಿಸುವಂಥ ಕ್ರಿಯೆ ಕಡಿಮೆಯಾಗಿರುತ್ತದೆ. ಹೀಗಾಗಿ, ಅಲ್ಲಿನ ನೀರಿನ ಹರಿವು ತೀವ್ರತೆ ಪಡೆದುಕೊಳ್ಳುತ್ತದೆ. ಬಿಟ್ಟು ಬಿಟ್ಟು ಮಳೆ ಬಂದರೆ ಎಲ್ಲಾ ಪ್ರದೇಶದಲ್ಲೂ ಮಳೆ ನೀರನ್ನು ಇಂಗಿಸಿಕೊಳ್ಳುವ ಪ್ರಕ್ರಿಯೆ ಭೂಮಿ ತನ್ನಿಂದತಾನೇ ಮಾಡುತ್ತದೆ. ಆದರೆ, ಸತತವಾಗಿ ಮಳೆ ಸುರಿದು, ಅದರ ವೇಗ ಹೆಚ್ಚಾದಂತೆ ಹಾನಿ ಪ್ರಮಾಣ ವಿಸ್ತೀರ್ಣವಾಗುತ್ತದೆ. ಮಣ್ಣಿನ ಸವಕಳಿ(soil erosion), ಮಣ್ಣಿನ ಗುಣಮಟ್ಟ ಸಮಸ್ಯೆಯೇ ಕಾರಣ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ತಾಣಗಳಾದ ಕೆರೆ, ಹಳ್ಳಗಳು ಇಲ್ಲದ ಕಾರಣ, ಸಮತಟ್ಟು ಪ್ರದೇಶದಲ್ಲಿ ನೀರು ವೇಗವಾಗಿ ಹರಿಯುವುದರ ಜೊತೆಗೆ ಮಣ್ಣಿನ ಹಲವು ಪದರವನ್ನು ನಾಶಪಡಿಸಿಕೊಂಡು ಸಾಗುತ್ತದೆ. ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ತೀವ್ರತೆಗೆ ಇದೇ ಕಾರಣ
ಉತ್ತರ ಕರ್ನಾಟಕಕ್ಕೆ ಪ್ರವಾಹ ಹೊಸದೇನಲ್ಲ
ಉತ್ತರ ಕರ್ನಾಟಕಕ್ಕೆ ಪ್ರವಾಹ ಹೊಸದೇನಲ್ಲ, ಹತ್ತು ವರ್ಷದ ಹಿಂದೆಯೂ ಪ್ರವಾಹ ಪರಿಸ್ಥಿತಿಯಿತ್ತು, ಸಾವಿರಾರು ವರ್ಷಗಳಿಂದ ಪ್ರವಾಹಗಳನ್ನು ಆ ಪ್ರದೇಶ, ಭೂಮಿ ಕಂಡಿದೆ. ಈ ಹಿಂದೆ ಇದ್ದ ಹಲವು ಜಲಮೂಲಗಳು, ಜಲಾಗಾರಗಳು ನಾಶವಾಗಿರುವುದೇ ಪ್ರತಿ ಬಾರಿ ಪ್ರವಾಹದ ಭೀಕರತೆ ಹೆಚ್ಚಾಗಲು ಕಾರಣ. Flat terrain ನಲ್ಲಿ ಮೊದಲೇ ಹೇಳಿದಂತೆ ಪ್ರವಾಹದ ತೀವ್ರತೆ ಹೆಚ್ಚಾಗಿರುತ್ತದೆ. ತುಂಗಾ ನದಿ ಪಾತ್ರದಲ್ಲಿ ಎತ್ತರದಿಂದ ಕೆಳ ಮಟ್ಟಕ್ಕೆ ನೀರು ಹರಿವು ಇರುತ್ತದೆ. ಹಳ್ಳ ಕೊಳ್ಳ, ಬೆಟ್ಟಗುಡ್ಡಗಳನ್ನು ದಾಟಿ ಸಾಗುವುದರಿಂದ ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ, ಪ್ರವಾಹ ತೀವ್ರತೆ ಕಡಿಮೆ ಎನ್ನಬಹುದು, ಆದರೆ, ಮಲೆನಾಡು ಭಾಗದಲ್ಲಿ ನದಿ ರಭಸ ಹಾಗೂ ಪ್ರವಾಹದ ತೀವ್ರತೆಯಿಂದ ಭೂ ಕುಸಿತವಾಗಿ ಅನೇಕ ಎಕರೆ ಗಟ್ಟಲೆ ಅಡಿಕೆ, ಬಾಳೆ, ತೆಂಗು, ಕಾಫಿ ತೋಟಗಳು ಒಮ್ಮೆಗೆ ನಾಶವಾದ ಉದಾಹರಣೆಗಳು ಕಣ್ಮುಂದಿವೆ. ಇದೆಲ್ಲದರ ಅಂಕಿ ಅಂಶಗಳ ಅಧ್ಯಯನ, ಆ ಭಾಗದ ಪ್ರವಾಹ ಇತಿಹಾಸದ ಬಗ್ಗೆ ಅರಿವು ಪಡೆದು ಮುಂದಿನ ಕಾರ್ಯತಂತ್ರ ರೂಪಿಸಬೇಕಿದೆ.
2005-06ರ ಮಳೆಗೆ ಬೆಳಗಾವಿಯಲ್ಲಿ ಆದ ಹಾನಿ ಪ್ರಮಾಣ 424 ಕೋಟಿಗೂ ಹೆಚ್ಚು
ಹಳೆ ಕೋಟೆ, ಗುಹೆಗಳನ್ನೇ ಜಲಾಗಾರ ಮಾಡಬಹುದು
ಪ್ರವಾಹ ಸಂದರ್ಭದಲ್ಲಿ ಉಂಟಾಗುವ ಪರಿಣಾಮಕ್ಕಿಂತ ನಂತರ ಸಮಸ್ಯೆಗಳು ಅಧಿಕ, ರೋಗ ರುಜಿನ, ಮಣ್ಣಿನ ಫಲವತ್ತತೆ ನಾಶ, ಉದ್ಯೋಗ, ವಸತಿ, ಅಸ್ತಿತ್ವ ನಾಶ ಹೊಂದಿದವರು ಬದುಕು ಕಟ್ಟಿಕೊಳ್ಳಲು ವಲಸೆ ಹೋದಂತೆ ಪ್ರವಾಹ ಪೀಡಿತ ಆ ಭಾಗ ಹಾಳಾಗುತ್ತದೆ. ಬಾದಾಮಿ ಗುಹೆ, ಹಳೆ ಕೋಟೆಗಳನ್ನು ಜಲಾಗಾರಗಳಾಗಿ ಪರಿವರ್ತಿಸಬಹುದು, ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸಿರುತ್ತದೆ. ಅಣೆಕಟ್ಟನ್ನು ಕಟ್ಟಲು ಸಾಧ್ಯವಿಲ್ಲ, ಹೀಗಾಗಿ, ಲಭ್ಯ ಸಂಪನ್ಮೂಲ ಬಳಸಿ, ಅಲ್ಲಿ ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸುವುದರತ್ತ ಮೊದಲಿಗೆ ಗಮನ ಹರಿಸಬೇಕು. ಇನ್ನೊಂದು ಕಡೆ ಕಲುಷಿತ ನೀರನ್ನು ತಿಳಿಗೊಳಿಸಲು ಲಭ್ಯ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ...
ಬೆಂಗಳೂರು ಕೂಡಾ ಸಿದ್ಧವಾಗಬೇಕಿದೆ
ಎಸ್ಸೆಂಕೃಷ್ಣ ಅವರ ಕಾಲದಲ್ಲಿ ವಿಧಾನಸೌಧದಲ್ಲೂ ಮಳೆಕೊಯ್ಲು ಪದ್ಧತಿ ಅಳವಡಿಸಿ, ಲಕ್ಷಾಂತರ ರುಪಾಯಿ ಖರ್ಚು ಮಾಡಿ, ಮಳೆ ನೀರು ಉಳಿಸುವ ಯೋಜನೆ ಅನುಷ್ಠಾನಗೊಳಿಸಲಾಯಿತು. ಆದರೆ, ಈಗ ಅದು ಹಾಳಾಗಿದೆ. ಕೃಷ್ಣಾ, ತುಂಗಾ ಭದ್ರಾ ನದಿ ಪಾತ್ರದ ಪ್ರವಾಹ ಪರಿಸ್ಥಿತಿ ಕಾವೇರಿ ಕೊಳ್ಳದ ಪ್ರದೇಶಕ್ಕೆ ಪಾಠವಾಗಬೇಕಿದೆ. ಭಾರಿ ಮಳೆ, ಪ್ರವಾಹಕ್ಕೆ ಬೆಂಗಳೂರು ಕೂಡಾ ಸಿದ್ಧವಾಗಬೇಕಿದೆ. ಮಳೆ ನೀರು ಇಂಗಿಸುವ ಯೋಜನೆ ಯುದ್ಧೋಪಾದಿಯಲ್ಲಿ ಮಾಡದಿದ್ದರೆ, ಅಂತರ್ಜಲ ಉಳಿಸುವ ರೂಪುರೇಷೆ ಅನುಷ್ಠಾನವಾಗದಿದ್ದರೆ ಅಪಾಯ ಖಂಡಿತ. ಮಳೆಕೊಯ್ಲು ಕಡ್ಡಾಯ ಎಂಬುದು ಹೇಳಿಕೆ ಮಟ್ಟದಲ್ಲಿದೆ, ಚೆನ್ನೈನಲ್ಲಿ ಇದು ಸಮರ್ಥವಾಗಿ ಅನುಷ್ಠಾನಗೊಂಡಿದೆ. ನಗರ ಪ್ರದೇಶದಲ್ಲಿ ಇಂಗು ಗುಂಡಿ, ಮಳೆಕೊಯ್ಲು ಅಗತ್ಯದ ಬಗ್ಗೆ ಬಿಬಿಎಂಪಿ, ಸರ್ಕಾರ ಕ್ರಮ ಜರುಗಿಸದೆ, ಪ್ರವಾಹ ಬಂದರೂ ತಡೆಯಬಲ್ಲವೆ ಎನ್ನುವುದು ಹಾಸ್ಯಾಸ್ಪದ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಕೆರೆ ಕಟ್ಟಿ, ಕೆರೆ ಉಳಿಸಿ, ಹುಲ್ಲು ಬೆಳೆಸಿ, ಕೇರಳ ನೋಡಿ ಕಲಿರಿ
ಕೃಷ್ಣಾ ಪಾತ್ರದ ಪ್ರವಾಹ ಪರಿಸ್ಥಿತಿ ನೋಡಿದರೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ಬೆಳೆ ನಾಶ, ಅಂತರ್ಜಲ ನಾಶ, ಮಣ್ಣು ಹಾಳಾಗಿದ್ದು, ಜನಜೀವನವೂ ಅಸ್ತಿತ್ವ ಕಳೆದುಕೊಂಡಿದೆ. ಈ ಪ್ರದೇಶಕ್ಕಾಗಿ ಪ್ರತ್ಯೇಕ ground water mapping, ಅಂತರ್ಜಲ ಉಳಿಸುವ ಯೋಜನೆ ರೂಪಿಸಬೇಕು, ಇದಕ್ಕಾಗಿ ಅಗತ್ಯ ಸರ್ಕಾರೇತರ ಸಂಸ್ಥೆಗಳು, ಐಟಿ ಬಿಟಿ ತಜ್ಞರ ನೆರವು ಪಡೆದುಕೊಳ್ಳಬೇಕು. ಕೇಂದ್ರದಿಂದ ವಿನ್ಯಾಸವಾಗಿರುವ ಅಂತರ್ಜಲ ಯೋಜನೆ ಇನ್ನೂ ರಾಜ್ಯದಲ್ಲಿ ಅನುಷ್ಠಾನವಾಗಿಲ್ಲ, ಇಡೀ ರಾಜ್ಯದ ನದಿ ಪಾತ್ರಕ್ಕೆ ಪ್ರತ್ಯೇಕ ಯೋಜನೆ ಅಗತ್ಯ, ತುಂಬಾ ಸಿಂಪಲ್, ನೀರನ್ನು ಭೂಮಿಯೊಳಗೆ ಇಂಗಿಸುವ ಕೆಲಸವಾಗಬೇಕು. ಕೇರಳದಲ್ಲಿ ಕಳೆದ ಬಾರಿ ಪ್ರವಾಹ ಬಂದ ಬಳಿಕ ಅಲ್ಲಿ ಲಾವಂಚ ದಂಥ ಹುಲ್ಲು, ಸಸ್ಯಗಳನ್ನು ಹೆಚ್ಚಾಗಿ ಬೆಳೆಸಿ, ಪ್ರವಾಹದ ತೀವ್ರತೆ ತಡೆಗಟ್ಟುವ ಉಪಾಯ ಕಂಡುಕೊಂಡರು. ನಮ್ಮಲ್ಲಿ ಎಲ್ಲಾಸ್ತರದಲ್ಲೂ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.
ನಗರದಲ್ಲಿ ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ
ಕೃಷಿ ಭೂಮಿಯ ಸ್ವರೂಪವೇ ಬದಲಾಗಬೇಕು
ಸಾಧ್ಯವಾದ ಕಡೆಯೆಲ್ಲ ಅರಣ್ಯ ಬೆಳೆಸಬೇಕು, ಕೃಷಿ ಭೂಮಿಯನ್ನು ಮೈದಾನ ಮಾಡಿ ಬಿಟ್ಟಿದ್ದೇವೆ. ಸಾವಿರಾರು ಎಕರೆ ಭೂಮಿ ಇದ್ದರೂ ಬೆರೆಳೆಣಿಕೆಯಷ್ಟು ಮರಗಳನ್ನು ಬೆಳೆಸಿರುತ್ತಾರೆ. ಬೆಳೆಸಿದರೂ ಹಸಿರು ಭೂಮಿಯನ್ನು ಉಳಿಸುವ ವೈವಿಧ್ಯ ಪರಿಸರ ಸೃಷ್ಟಿಸಬೇಕು, ಮೊದಲೇ ಹೇಳಿದಂತೆ ಕೃಷಿ ಭೂಮಿಯಲ್ಲೂ ಲಾವಂಚ ಹುಲ್ಲನ್ನು ಬೆಳೆಸಬೇಕು. ಅದು ಸರಳವಾಗಿ ಮಣ್ಣು ಹಾಗೂ ನೀರನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಕಳೆದ ಬಾರಿಯ ಕೇರಳ ಹಾಗೂ ಕೊಡಗಿನ ಪ್ರವಾಹದ ಸ್ವರೂಪ ಒಂದು ರೀತಿ ಇದ್ದರೂ ಕೊಡಗಿನಲ್ಲಿ ಹುಲ್ಲು ಪ್ರದೇಶ ಕಡಿಮೆಯಾದ ಭೂ ಕುಸಿತ, ಪ್ರವಾಹದ ತೀವ್ರತೆ ಅಧಿಕವಾಯ್ತು ಎನ್ನುವುದು ನನ್ನ ವಾದ. ಕೃಷ್ಣಾ ಪಾತ್ರದಲ್ಲಿ ಕೃಷಿ ಪದ್ಧತಿ ಬದಲಾವಣೆ ಅಗತ್ಯ, ಕಬ್ಬು ಮಾತ್ರ ನಂಬಿಕೊಂಡಿದ್ದರೆ ಅಪಾಯ ಖಂಡಿತ ಎಂಬ ಎಚ್ಚರಿಕೆ ನೀಡಿದರು. ಈ ಬಗ್ಗೆ ಮುಂದಿನ ಲೇಖನದಲ್ಲಿ ವಿವರ ಸಿಗಲಿದೆ.