ವಿಶೇಷ: ಕೃಷಿಕರಿಗೆ, ನಾಗರಿಕರಿಗೆ ಜಲತಜ್ಞ ದೇವರಾಜ್ ಕೊಟ್ಟ ಎಚ್ಚರಿಕೆ
ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ ಬಳಸಿಕೊಳ್ಳಬಹುದು, ನದಿ ಜೋಡಣೆ ಸಾಧ್ಯತೆ, ಕೊಳವೆ ಬಾವಿ...ನಾನಾ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಕೊನೆಯ ಭಾಗ ಇಲ್ಲಿದೆ..
"ಕೃಷಿ ಭೂಮಿಯನ್ನು ಮೈದಾನ ಮಾಡಿ ಬಿಟ್ಟಿದ್ದೇವೆ. ಸಾವಿರಾರು ಎಕರೆ ಭೂಮಿ ಇದ್ದರೂ ಬೆರೆಳೆಣಿಕೆಯಷ್ಟು ಮರಗಳನ್ನು ಮಾತ್ರ ಅನೇಕ ಕಡೆ ಕಾಣುವಂಥ ಪರಿಸ್ಥಿತಿಯಿದೆ. ಕೃಷ್ಣಾ ಪಾತ್ರದಲ್ಲಿ ಕೃಷಿ ಪದ್ಧತಿ ಬದಲಾವಣೆ ಅಗತ್ಯ, ಕಬ್ಬು ಮಾತ್ರ ನಂಬಿಕೊಂಡಿದ್ದರೆ ಅಪಾಯ ಖಂಡಿತ ಎಂಬ ಎಚ್ಚರಿಕೆ ನೀಡಿದ್ದಾರೆ"
ವಿಶೇಷ: ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ
"ಕೊಳವೆ ಬಾವಿ ರೀಚಾರ್ಜ್, ನದಿ ಸಂರಕ್ಷಣೆ, ನದಿ ನೀರು ಜೋಡಣೆ ಸಾಧ್ಯತೆ, ಜಿಂದಾಲ್ ಸ್ಟೀಲ್ ಸಂಸ್ಥೆ, ಸತ್ಯಸಾಯಿ ಸಂಸ್ಥೆ ಕೈಗೊಂಡ ಯೋಜನೆ, ಸಮುದ್ರ ನೀರಿನ ಪುನರ್ಬಳಕೆ, ಮಳೆಕೊಯ್ಲು ಕಡ್ಡಾಯ, ಪಠ್ಯಕ್ರಮದಲ್ಲಿ ನೀರಿನ ಬಗ್ಗೆ ಹೀಗೆ, ಕಣ್ಮುಂದೆ ಅನೇಕ ಮಾರ್ಗೋಪಾಯಗಳಿವೆ, ಎಲ್ಲವನ್ನು ಸೂಕ್ತವಾಗಿ ಬಳಸಿಕೊಂಡು ಮುನ್ನಡೆದರೆ ಯಾವುದೇ ರೀತಿ ಸಮಸ್ಯೆಗಳಿರುವುದಿಲ್ಲ. ಇದು ಸರ್ಕಾರದ ಕೆಲಸ ಮಾತ್ರವಲ್ಲ, ಪ್ರತಿ ಹಳ್ಳಿ, ನಗರಗಳಲ್ಲಿ ಈ ಬಗ್ಗೆ ಜಾಗೃತಿ ಅಭಿಯಾನ, ಯೋಜನೆ ಅನುಷ್ಠಾನ ಕಡ್ಡಾಯಗೊಳಿಸಿದರೆ ಮುಂದಿನ ಪೀಳಿಗೆಗೆ ಜೀವಜಲವನ್ನು ಉಳಿಸಲು ಸಾಧ್ಯ " ಎಂದರು.
ಅರಣ್ಯ ಬೆಳೆಸುವವರಿಗೆ ಸರ್ಕಾರರಿಂದ ಪ್ರೋತ್ಸಾಹವಿಲ್ಲ
"ಅರಣ್ಯ ಬೆಳೆಸುವವರಿಗೆ ಸರ್ಕಾರರಿಂದ ಯಾವುದೇ ಪ್ರೋತ್ಸಾಹವಿಲ್ಲ, ಆದರೆ, ನಮ್ಮ ಕೃಷಿಯಲ್ಲಿ ಬೀಳುವ, ಸುಲಭವಾಗಿ ಸಿಗುವ 10 ಕೋಟಿ ಲೀಟರ್ ಗೂ ಅಧಿಕ ಮಳೆ ನೀರಲ್ಲಿ ಎಷ್ಟನ್ನು ಹಿಡಿದಿಟ್ಟೀವಿ ಎಂದು ಎಲ್ಲರೂ ಪ್ರಶ್ನಿಸಿಕೊಳ್ಳಬೇಕಾಗಿದೆ, ಕೃಷಿಯಲ್ಲಿ ವೈವಿಧ್ಯತೆ ಇಲ್ಲ, ಹೊಟ್ಟೆಪಾಡಿಗಾಗಿ ವಾಣಿಜ್ಯ ಬೆಳೆಗೆ ಮಾರು ಹೋಗುವುದು ಅನಿವಾರ್ಯವಾಗಿದೆ. ಮಣ್ಣು, ಕೃಷಿ ಪದ್ಧತಿ, ಜಲ ಸಂರಕ್ಷಣಾ ಪದ್ಧತಿ, ಮುಂದಿನ ಪ್ರವಾಹ ತಡೆಗೆಟ್ಟಲು ಎಲ್ಲಾ ಕೊಳ್ಳಗಳಿಗೆ ಸಮಗ್ರ ಯೋಜನೆ ಬೇಕಿದೆ. ಸರ್ಕಾರದ ನಿರೀಕ್ಷೆಗೂ ಮೀರಿ ನೂರು ಪಟ್ಟು ಭೂಮಿ ಇಂದು ಹಾಳಾಗಿದೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಅಸಂಖ್ಯ ಬೋರ್ ವೆಲ್ ಗಳನ್ನು ಕೊರೆದಿದ್ದೇವೆ
ಕಳೆದ 50 ವರ್ಷಗಳಲ್ಲಿ ಇಡೀ ದೇಶದಲ್ಲಿ ಕೋಟ್ಯಂತರ ಸಂಖ್ಯೆಗಳಲ್ಲಿ ಬೋರ್ ವೆಲ್ ಗಳನ್ನು ಕೊರೆದಿದ್ದೇವೆ, 250 ಬಿಲಿಯನ್ ಕ್ಯೂಬಿಕ್ ಕಿ.ಮೀ ನೀರು ತೆಗೆದಿದ್ದೇವೆ. ಇದರಿಂದ ಅಂತರ್ಜಲವಲ್ಲದೆ, ಆ ಪ್ರದೇಶವೇ ಬರಡು ಮಾಡಿದ್ದೇವೆ. ಅಂದರೆ, ಅಗಾಧ ಪ್ರಮಾಣದಲ್ಲಿ ನೀರನ್ನು ಭೂಮಿಯಲ್ಲಿ ಹಿಡಿದಿಡಬಹುದು, ಈಗ ಕೃಷ್ಣಾ ನದಿ ಪಾತ್ರದಲ್ಲಿ ಬೋರ್ ವೆಲ್ ರೀಚಾರ್ಜ್ ಮಾಡಿದರೆ, 50% ಪ್ರವಾಹವನ್ನು ತಡೆಗಟ್ಟಬಹುದು. ನೀರನ್ನು ಇಂಗಿಸುವ ಸಾಧ್ಯತೆಯಿದ್ದು, ಎಂಥಾ ಪ್ರವಾಹವನ್ನು ತಡೆಯಬಹುದು.
ನದಿಗಳ ಜೋಡಣೆ ಈಗ ಸಾಧ್ಯವೇ?
"ನದಿಗಳ ಜೋಡಣೆ ನನ್ನ ಮಟ್ಟಿಗೆ ಸಾಧ್ಯವಿಲ್ಲದ ಮಾತು. ಮಳೆ ನೀರು ಸಂರಕ್ಷಣೆ ಮಾಡಿದರೆ, ಬೇರೆ ನದಿಗಳ ನೀರನ್ನು ನಮ್ಮ ನದಿ ನೀರಿಗೆ ಹೊಂದಿಸುವುದು ಕಷ್ಟದ ಕೆಲಸ. ಇದರಿಂದ ಬೇರೆ ಬೇರೆ ಸಮಸ್ಯೆಗಳು ಎದುರಾಗಲಿವೆ. ನದಿ ಆಧಾರಿತ ನಾಗರೀಕತೆ ಬದಲಾಗುತ್ತದೆ. ಉದಾಹರಣೆ : ತೊರಣಗಲ್ ನಲ್ಲಿ ಜಿಂದಾಲ್ ಸ್ಟೀಲ್ ಸಂಸ್ಥೆಯವರು ಕೈಗಾರಿಕಾ ಬಳಕೆಗಾಗಿ ತುಂಗಾ ನದಿ ನೀರು ಬಳಸುತ್ತಿದ್ದಾರೆ, ಇದು ಸಾಲದಿದ್ದಾಗ ಆಲಮಟ್ಟಿಯಿಂದ ಕೃಷ್ಣಾ ನದಿ ನೀರು ಕೂಡಾ ತರಿಸುತ್ತಿದ್ದಾರೆ. ಒಂದು ಸಾವಿರ ಎಕರೆ ಕೆರೆಗಳಲ್ಲಿ ಪ್ರತ್ಯೇಕ ನೀರು ಬಳಸಿ ಉಕ್ಕು ಉತ್ಪಾದನೆಗೆ ಬಳಸಿ ಪರೀಕ್ಷಿಸಿದ್ದಾರೆ. ತುಂಗಾ ನದಿ ನೀರು ಬಳಸಿ ಉತ್ಪಾದಿಸಿದ ಸ್ಟೀಲ್ ಗುಣಮಟ್ಟ ಉತ್ತಮವಾಗಿದ್ದು, ಕೃಷ್ಣಾ ನದಿ ನೀರು ಬಳಸಿದ ಸ್ಟೀಲ್ ಗುಣಮಟ್ಟ ತಗ್ಗಿರುವುದು ಕಂಡು ಬಂದಿದೆ. ಎರಡು ಕುಡಿಯುವ ನೀರಾದರೂ ಗುಣ ವ್ಯತ್ಯಾಸದಿಂದ ಉಕ್ಕು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇನ್ನು ಬೆರೆಕೆ ಮಾಡಿದ ನೀರು ಜೀವಸಂಕುಲ ಬಳಕೆಗೆ ಯೋಗ್ಯ ಎಂದು ಸಾಬೀತುಪಡಿಸುವ ಅಧ್ಯಯನ ವರದಿಗಳಿಲ್ಲ.
ಗಂಗಾ-ಗೋದಾವರಿ ಜಲೇ ಕಾವೇರಿ ಸಮ್ಮಿಲನ, ಖರ್ಚು ವೆಚ್ಚ
ಗೋದಾವರಿ-ಗಂಗಾ-ಕಾವೇರಿ ಬೆರೆಸಿ ನದಿ ಜೋಡಣೆಯಿಂದ ಲಭ್ಯವಾಗುವ ನೀರನ್ನು ಬಳಸಿ ಮಾಡಿದ ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ನದಿ ಜೋಡಣೆ ಮುಖ್ಯ ಉದ್ದೇಶ ಕುಡಿಯುವ ನೀರಿನ ಯೋಜನೆಯಾದರೂ ಜಲ ಬಳಕೆ ಯೋಗ್ಯ ಎನಿಸುವುದಿಲ್ಲ. ಪ್ರತಿ ನದಿ ನೀರಿಗೂ ಅದರದ್ದೇ ಗುಣ ವಿಶೇಷವಿರಲಿದೆ. ನದಿ ಜೋಡಣೆ ಮಾಡಿ ಬೆರೆಕೆ ಮಾಡಿದರೆ ಆ ನೀರಿನ ಪಿ ಎಚ್, ನೈಟ್ರೇಟ್ ಪ್ರಮಾಣದಲ್ಲಿ ಏರುಪೇರಾಗಲಿವೆ. ಇದರಿಂದ ಪ್ರಯೋಜನಕ್ಕಿಂತ ದುಷ್ಪರಿಣಾಮಗಳೇ ಹೆಚ್ಚಾಗಬಹುದು. ಹೀಗಾಗಿ, ನದಿ ನೀರು ಜೋಡಣೆ ಕೂಡಾ ನಮ್ಮಲ್ಲಿರುವ ನೀರು ಪಂಪಿಂಗ್ ಯೋಜನೆಯ ಮತ್ತೊಂದು ರೂಪ ಅಷ್ಟೇ, ನಮ್ಮಲ್ಲಿ ಇಲ್ಲಿ ತನಕ ಪಂಪಿಂಗ್ ಪ್ರಾಜೆಕ್ಟ್ ಯಶಸ್ವಿಯಾಗಿಲ್ಲ. ಆಂಧ್ರಪ್ರದೇಶದಲ್ಲಿ 340 ಕಿ.ಮೀ ದೂರದ ಕಾಲುವೆ ಮೂಲಕ 45 ಟಿಎಂಸಿ ಅಡಿ ನೀರು ತುಂಗಾ ನದಿ ನೀರು ಪಂಪ್ ಮಾಡಿದ್ದಾರೆ. ಇದರಿಂದ ಬಂದ ಎಲೆಕ್ಟ್ರಿಸಿಟಿ ಬಿಲ್ 840 ಕೋಟಿ ರು. ನಮ್ಮಲ್ಲಿ ಬೆಳೆಯುವ ಶೇಂಗಾ, ಜೋಳ, ರಾಗಿಗೆ ಇಂಥ ನೀರು ಬೇಡ, ಖರ್ಚು ವೆಚ್ಚವೂ ಅಧಿಕ.
ಮಳೆ ಕೊಯ್ಲು ಅಳವಡಿಕೆ ಕಡ್ಡಾಯ ಮಾಡಬೇಕಿದೆ.
ಮಳೆಕೊಯ್ಲು(Rain water harvesting) ವೈಜ್ಞಾನಿಕ ಅಳವಡಿಕೆ ಕಡ್ಡಾಯ ಮಾಡಬೇಕಿದೆ. ಬರ ಪರಿಸ್ಥಿತಿ ಪಾಠ ಕಲಿಸಿದ್ದು, ಬೋರ್ ವೆಲ್ ಬಿಟ್ಟು, ಅಂತರ್ಜಲ ಉಳಿಸುವತ್ತ ಮನಸ್ಸು ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿ ಮನೆಗೂ ಕಡ್ಡಾಯ ಮಾಡಬೇಕು, ಚೆನ್ನೈನಲ್ಲಿ 30 X 40 ವಿಸ್ತೀರ್ಣದ ಮನೆಗಳಿಗೂ ಮಳೆಕೊಯ್ಲು ಕಡ್ಡಾಯವಾಗಿದ್ದು, 40 ಸಾವಿರ ರು ತನಕ ಖರ್ಚಾಗಬಹುದು. ನಮ್ಮಲ್ಲಿ ಮಾಹಿತಿ ಕೊರತೆ ಇದೆ, ಜಾಗೃತಿಯಂತೂ ಆಗುತ್ತಿಲ್ಲ, ಬೆಂಗಳೂರಿನಲ್ಲಿರುವ ಒಂದು ಸುಗ್ಗಿಕೇಂದ್ರದಿಂದ ಎಲ್ಲೆಡೆಗೆ ಮಾಹಿತಿ ರವಾನೆ ಸಾಧ್ಯವಾಗುತ್ತಿಲ್ಲ, ಜಿಲ್ಲಾ, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆಕೇಂದ್ರಗಳು ಕಡ್ಡಾಯವಾಗಬೇಕಿದೆ. ಮಳೆಕೊಯ್ಲಿಗೆ ಇಲಾಖೆಯೇ ಇಲ್ಲ, ಕೃಷಿ, ಜಲಮಂಡಳಿ ಯಾರಿಗೂ ಬೇಡವಾದ ವಸ್ತುವಾಗಿದೆ. ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡುವ ನೋಡಲ್ ಕೇಂದ್ರಗಳ ಸ್ಥಾಪನೆ ಅಗತ್ಯವಿದೆ. ಇದರಿಂದ ಉದ್ಯೋಗವೂ ಸಿಗಲಿದೆ, ಜನರಿಗೆ ಅನುಕೂಲವಾಗಲಿದೆ.