ಸಾತನೂರು ಟು ಕೆಪಿಸಿಸಿ : ಡಿಕೆಶಿ ರಾಜಕಾರಣ & 'ಆನೆ ನಡಿಗೆ'
Recommended Video
ಬೆಂಗಳೂರು, ಜುಲೈ 10 : ಡಿಕೆಶಿ ಅಲಿಯಾಸ್ ಡಿ. ಕೆ. ಶಿವಕುಮಾರ್. ಬುಧವಾರದ ಪಾಲಿಗೆ ಕರ್ನಾಟಕದ ಸುದ್ದಿಕೇಂದ್ರವನ್ನು ಆವರಿಸಿಕೊಂಡ ಪ್ರಭಾವಿ.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ರಾಜ್ಯ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಅಂತ ಕರೆಸಿಕೊಂಡವರು. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಸುದ್ದಿಕೇಂದ್ರವನ್ನು ಡಿಕೆಶಿ ಆವರಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಕನಕಪುರದ ಶಾಸಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಯಾರು? ಅವರ ಹಿನ್ನೆಲೆ ಏನು? ವಿವರಗಳು ಇಲ್ಲಿವೆ.
21 ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಡಿ. ಕೆ. ಶಿವಕುಮಾರ್ ಇಂದು ಕರ್ನಾಟಕದ ಗಡಿಯನ್ನು ಮೀರಿ ಬೆಳೆದ ನಾಯಕ. ಎಐಸಿಸಿ ನೀಡಿದ ಕೆಲಸವನ್ನು ಜವಾಬ್ದಾರಿಯಿಂದ ಮಾಡುವ ಪಕ್ಷದ ಶಿಸ್ತಿನ ಸಿಪಾಯಿ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುವ ಮಾತುಗಳು.
ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಡಿ. ಕೆ. ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯ ಮೇಲೆ ಹಲವು ವರ್ಷಗಳಿಂದ ಒಂದು ಕಣ್ಣಿಟ್ಟುಕೊಂಡೇ ಬಂದಿದ್ದರು. ಸಹೋದರ ಡಿ. ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ.
2017ರಲ್ಲಿ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆಯಿತು. ಇದರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಿತು. ಬಳಿಕ ಮುಂಬೈನಲ್ಲಿ ಹೋಟೆಲ್ ಮುಂದೆ ಅವರು ಧರಣಿ ಕೂತಾಗ ರಾಷ್ಟ್ರೀಯ ಮಾಧ್ಯಮದ ಕೇಂದ್ರ ಬಿಂದುವಾಗಿದ್ದರು.
* 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಡಿ. ಕೆ. ಶಿವಕುಮಾರ್ ಜನತಾ ಪಕ್ಷದ ಎಚ್. ಡಿ. ದೇವೇಗೌಡ ವಿರುದ್ಧ ಸೋತರು. 1989ರಲ್ಲಿ ಪುನಃ ಅದೇ ಕ್ಷೇತ್ರದಿಂದ ಕಣಕ್ಕಿಳಿದು 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.
* 1994ರಲ್ಲಿ ಕಾಂಗ್ರೆಸ್ ಡಿ.ಕೆ.ಶಿವಕುಮಾರ್ಗೆ ಟಿಕೆಟ್ ನೀಡಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಪಡೆದರು. 1999ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ 13 ಸಾವಿರ ಮತಗಳ ಅಂತರದಲ್ಲಿ ಗೆದ್ದರು.
* 2004ರ ಚುನಾವಣೆಯಲ್ಲಿ ಪುನಃ ಸಾತನೂರು ಕ್ಷೇತ್ರದಲ್ಲಿ ಗೆದ್ದರು. ಕ್ಷೇತ್ರ ಪುನರ್ ವಿಂಗಡನೆಯಿಂದಾಗಿ ಸಾತನೂರು ಕನಕಪುರದಲ್ಲಿ ವಿಲೀನವಾಯಿತು. 2008, 2013, 2018ರ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಗೆಲುವು ಸಾಧಿಸಿದರು.
* ಎಸ್. ಬಂಗಾರಪ್ಪ, ಎಸ್. ಎಂ. ಕೃಷ್ಣ ಸರ್ಕಾರದಲ್ಲಿ ಡಿ. ಕೆ. ಶಿವಕುಮಾರ್ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಎಸ್. ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತು.
* ಬಂಧಿಖಾನೆ, ನಗರಾಭಿವೃದ್ಧಿ, ಸಹಕಾರ, ಇಂಧನ ಸಚಿವರಾಗಿ ಕೆಲಸ ಮಾಡಿದ್ದಾರೆ. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರು.
* 2001ರಲ್ಲಿ ಎಐಸಿಸಿ ಸದಸ್ಯರಾಗಿ, 1985 ರಿಂದ 2001ರ ತನಕ ಕೆಪಿಸಿಸಿ ಕಾರ್ಯದರ್ಶಿಯಾಗಿ. 2013ರಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ, 2018ರಲ್ಲಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
* 2020ರ ಮಾರ್ಚ್ 11ರಂದು ಡಿ. ಕೆ. ಶಿವಕುಮಾರ್ರನ್ನು ಎಐಸಿಸಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ.