ಉಪ ಚುನಾವಣೆ: ಮೂಲ ಬಿಜಿಪಿಗರು ಪೇಲವ, ವಲಸೆ ಸಚಿವರು ಲಕಲಕ
ಅಕ್ಟೋಬರ್ ಮೂವತ್ತರಂದು ನಡೆಯಲಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಇನ್ನೇನು ಐದು ದಿನಗಳಲ್ಲಿ ಮುಗಿಯಲಿದೆ. ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸುತ್ತಿದ್ದರೆ, ಹಾನಗಲ್ ನಲ್ಲಿ ಕಾಟಾಚಾರಕ್ಕಾಗಿ ಕಣದಲ್ಲಿದೆ. ನವೆಂಬರ್ ಎರಡರಂದು ಎರಡು ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡೂ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡು, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ, ಜೋಡೆತ್ತುಗಳಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
''ನಳಿನ್ ಕುಮಾರ್ ಕಟೀಲಿಗೆ ಸೀರೆ ಉಡಿಸಿದರೆ ಹೆಣ್ಣೂ ಅಲ್ಲಾ ಗಂಡೂ ಅಲ್ಲಾ..''
ಬಿಜೆಪಿಯ ಬಹುತೇಕ ಸಚಿವ ಸಂಪುಟ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ, ಆದರೂ ಕೆಲವು ಸಚಿವರು/ಮುಖಂಡರು ಪೂರ್ಣ ಮನಸ್ಸಿನಿಂದ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದು ಕಾರ್ಯಕರ್ತರಿಗೆ ಇರಿಸುಮುರಿಸು ಉಂಟಾಗುತ್ತಿದೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ವಲಸೆ ಬಿಜಿಪಿ ಮುಖಂಡರು, ಮೂಲ ಬಿಜೆಪಿಗರಿಗಿಂತ ಚುರುಕಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ವರದಿಗಳು ಬಿಜೆಪಿ ವರಿಷ್ಠರಿಗೆ ಹೋಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜಾರಕಿಹೊಳಿ 'ಮಂಚ'ವನ್ನು ಮತ್ತೆ ಎಳೆದು ತಂದ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪ್ರತಿಷ್ಠೆಯ ಪ್ರಶ್ನೆ
ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಉಪ ಚುನಾವಣೆಯ ಪ್ರಚಾರದ ಜವಾಬ್ದಾರಿಯನ್ನು ಒಂದೊಂದು ಪಂಚಾಯತಿಗೆ ಒಬ್ಬೊಬ್ಬರು ಸಚಿವರಂತೆ ಬಿಜೆಪಿ ನೇಮಿಸಿದೆ. ಜೊತೆಗೆ, ಸಿಎಂ ಬೊಮ್ಮಾಯಿಯವರು ಖುದ್ದು ತಾವೇ ಮುಂದೆ ನಿಂತು ಉಸ್ತುವಾರಿಗಳಿಗೆ ಅಗತ್ಯ ಸೂಚನೆ/ಸಲಹೆಗಳನ್ನು ನೀಡುತ್ತಿದ್ದಾರೆ. ಜಾತಿ ಸಮೀಕರಣದಂತೆ ಸಚಿವರುಗಳನ್ನು ಪ್ರದೇಶಾವಾರು ನೇಮಿಸಲಾಗಿದ್ದರೂ, ಮೂಲ ಬಿಜೆಪಿ ಮುಖಂಡರು ಮನಸಿಟ್ಟು ಕೆಲಸವನ್ನು ಮಾಡುತ್ತಿಲ್ಲ ಎನ್ನುವ ದೂರು ದೆಹಲಿಯ ವರೆಗೆ ಹೋಗಿದೆ ಎಂದು ಹೇಳಲಾಗುತ್ತಿದೆ.
ವಲಸೆ ಬಿಜೆಪಿ ಸಚಿವರುಗಳು ಚುರುಕಾಗಿ ಕೆಲಸವನ್ನು ಮಾಡುತ್ತಿದ್ದಾರೆ
ಪ್ರಚಾರ ಮತ್ತು ಕಾರ್ಯತಂತ್ರದ ವಿಚಾರದಲ್ಲಿ ವಲಸೆ ಬಿಜೆಪಿ ಸಚಿವರುಗಳು ಚುರುಕಾಗಿ ಕೆಲಸವನ್ನು ಮಾಡುತ್ತಿದ್ದಾರೆ. ತಮಗೆ ವಹಿಸಲಾಗಿರುವ ಕ್ಷೇತ್ರ ಮತ್ತು ಕೆಲಸವನ್ನು ನಿಷ್ಠೆಯಿಂದ ಇವರುಗಳು ಮಾಡುತ್ತಿದ್ದಾರೆ. ಪ್ರಮುಖವಾಗಿ, ಡಾ.ಸುಧಾಕರ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್ ಮುಂತಾದವರು ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.
ಸಚಿವ ನಾರಾಯಣ ಗೌಡ ಕೂಡಾ ಪ್ರಚಾರಕ್ಕೆ ಧುಮುಕಿದ್ದಾರೆ. ಸಚಿವ ಮತ್ತು ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕರೂ ಆಗಿರುವ ಗೋಪಾಲಯ್ಯ ಕೂಡಾ ಸಕ್ರಿಯವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೂತ್ ಮಟ್ಟದ ಸಭೆ ನಡೆಸಿ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ
ಬೂತ್ ಮಟ್ಟದ ಸಭೆ ನಡೆಸಿ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುತ್ತಾ, ವಿರೋಧ ಪಕ್ಷಗಳ ಟೀಕೆಯನ್ನು ವಲಸೆ ಬಿಜೆಪಿಗರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸರಕಾರದ ಅಭಿವೃದ್ದಿ ಕೆಲಸಗಳು, ಶತಕೋಟಿ ಲಸಿಕೆ, ಹೊಸ ಯೋಜನೆಗಳ ವಿವರಗಳನ್ನು ಮತದಾರರಿಗೆ ತಲುಪಿಸುವಲ್ಲಿ ವಲಸೆ ಸಚಿವರುಗಳು ಮೂಲ ಬಿಜಿಪಿಯವರಿಗಿಂತ ಸಕ್ರಿಯರಾಗಿದ್ದಾರೆ. ಈ ಮಾಹಿತಿ ವರಿಷ್ಠರಿಗೂ ಹೋಗಿದೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆಯ ಉಸ್ತುವಾರಿಯಲ್ಲಿರುವ ಮೂಲ ಬಿಜೆಪಿಗರು
ಇನ್ನು ಉಪ ಚುನಾವಣೆಯ ಉಸ್ತುವಾರಿಯಲ್ಲಿರುವ ಮೂಲ ಬಿಜೆಪಿಗರಲ್ಲಿ ಶ್ರೀರಾಮುಲು, ವಿ.ಸೋಮಣ್ಣ, ಸಿ.ಸಿ.ಪಾಟೀಲ್ , ಮುರುಗೇಶ್ ನಿರಾಣಿ ಮುಂತಾದ ಕೆಲವರು ಮಾತ್ರ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ, ವಿ.ಸುನೀಲ್ ಕುಮಾರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಜೆ.ಸಿ.ಮಾಧುಸ್ವಾಮಿ, ಆರ್.ಅಶೋಕ್ ಮುಂತಾದವರು ಚುರುಕಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದು ಕಾರ್ಯಕರ್ತರಿಗೂ ಬೇಸರವನ್ನು ತಂದಿದೆ. ಬಹಿರಂಗ ಪ್ರಚಾರಕ್ಕೆ ಉಳಿದಿರುವ ಕೆಲವೇ ಕೆಲವು ದಿನಗಳಲ್ಲಿ ಮೂಲ ಬಿಜೆಪಿಗರಿಗೆ ಯಾವ ರೀತಿಯ ಸಂದೇಶ ಹೈಕಮಾಂಡ್ ನಿಂದ ಬರಲಿದೆ ಎಂದು ಕಾದು ನೋಡಬೇಕಿದೆ.