2018ರ ನಂತರ ನಡೆದ ಉಪ ಚುನಾವಣೆ: 'ಸಾವಿನ ಅನುಕಂಪಕ್ಕೆ' ಬಂದ ಮ್ಯಾನ್ಡೇಟ್ ಏನು?
2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ಆರು ಶಾಸಕರು ನಿಧನರಾಗಿ ನಂತರ ಉಪ ಚುನಾವಣೆ ನಡೆದಿದೆ. ಈ ಎಲ್ಲಾ ಉಪ ಚುನಾವಣೆಗಳಲ್ಲಿ ಅನುಕಂಪದ ರಾಜಕೀಯ ವರ್ಕೌಟ್ ಆಗಿದೆಯಾ?
ಇದಲ್ಲದೇ, ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಹದಿನೇಳು ಶಾಸಕರು ರಾಜೀನಾಮೆ ನೀಡಿದಾಗ, ನಡೆದ ಉಪ ಚುನಾವಣೆಯ ಲೆಕ್ಕ ಬೇರೆ. ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎರಡು ಕ್ಷೇತ್ರದಲ್ಲಿ ಗೆದ್ದ ನಂತರ, ಇನ್ನೊಂದು ಕ್ಷೇತ್ರದಲ್ಲೂ ಉಪ ಚುನಾವಣೆ ನಡೆದಿತ್ತು. ಹಾಗೂ, ಉಮೇಶ್ ಜಾಧವ್ ಅವರು ಲೋಕಸಭೆಗೆ ಆಯ್ಕೆಯಾದಾಗ, ಚಿಂಚೋಳಿ ಅಸೆಂಬ್ಲಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಹಾನಗಲ್ನಲ್ಲಿ ಬಿಜೆಪಿಗೆ ಮುಖಭಂಗ: ಈ ಇಬ್ಬರನ್ನು ನಂಬಿಕೆಟ್ಟ ಬೊಮ್ಮಾಯಿ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಗೆದಿದ್ದ ಬಿಜೆಪಿಯ, ಕೇಂದ್ರ ಸಚಿವರೂ ಆಗಿದ್ದ ಸುರೇಶ್ ಅಂಗಡಿಯವರು ಸೆಪ್ಟೆಂಬರ್ 23, 2020ರಂದು ನಿಧನರಾಗಿದ್ದರು. ತೆರವಾಗಿದ್ದ ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಮಂಗಲ ಅಂಗಡಿಯವರಿಗೆ ಪ್ರಯಾಸದ 5,240 ಗೆಲುವು ದಕ್ಕಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ದ ಮಂಗಲ ಅಂಗಡಿ ಗೆದ್ದಿದ್ದರು.
ಮೊದಲೆಲ್ಲಾ ಅನುಕಂಪ ಕೆಲಸ ಮಾಡುತ್ತಿತ್ತು. ಅವರ ಕುಟುಂಬದವರು ಅಂದರೆ ಹೆಂಡತಿ, ಸಹೋದರ, ಮಕ್ಕಳು ಸ್ಪರ್ಧಿಸಿದರೆ ಗೆಲುವು ಸುಲಭ ಇತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಂತಹ ವಾತಾವರಣ ಇಲ್ಲ. ಒಬ್ಬ ಶಾಸಕ ಇಲ್ಲ ಎಂದ ಮಾತ್ರಕ್ಕೆ ಜನ ಸುಲಭವಾಗಿ ಅವರ ಮನೆಯವರಿಗೆ ಓಟು ಒತ್ತುವುದಿಲ್ಲ. ಈಗ ಪಕ್ಷ ಮತ್ತು ಸ್ಪರ್ಧಿಗಳನ್ನು ನೋಡುತ್ತಾರೆ. ಅವರ ಕೆಲಸ ಕಾರ್ಯಗಳನ್ನು ತುಲನೆ ಮಾಡುತ್ತಾರೆ.
ಅನುಕಂಪದ ಮಧ್ಯೆಯೂ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಅನುಕಂಪ ಎಂದರೆ ಕೇವಲ ನಿಧನ ಹೊಂದಿದ ಅಭ್ಯರ್ಥಿಗೆ ಮಾತ್ರ ಆಗುತ್ತದೆ ಎಂದಲ್ಲ. ಹಿಂದೆ ಸೋತ ಅಭ್ಯರ್ಥಿಗೂ ಅನುಕಂಪ ಕೆಲಸ ಮಾಡುತ್ತದೆ ಎನ್ನುತ್ತದೆ 2018-2021ವರೆಗಿನ ಉಪ ಚುನಾವಣೆ ಇತಿಹಾಸ.
2018ರಿಂದ ಇದುವರೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಇಬ್ಬರು ಶಾಸಕರು ಮೃತ ಪಟ್ಟಿದ್ದಾರೆ. ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅನುಕಂಪ, ಕಳೆದ ಬಾರಿ ಗೆದ್ದ ಪಕ್ಷದ ಪರವಾಗಿ ಇತ್ತಾ ಎನ್ನುವ ಪ್ರಶ್ನೆಗೆ ಮಿಶ್ರ ಉತ್ತರ ಬರುತ್ತದೆ. ಅದು ಹೀಗಿದೆ:
ಠೇವಣಿ ಕಳೆದುಕೊಂಡ ಜೆಡಿಎಸ್: ಎಚ್ಡಿಕೆ ಮಹತ್ವದ ಹೇಳಿಕೆ
ಜಮಖಂಡಿ ಕ್ಷೇತ್ರದಿಂದ ಗೆದ್ದ ಸಿದ್ದು ನ್ಯಾಮೇಗೌಡ ಪುತ್ರ ಆನಂದ್
2018ರ ಅಸೆಂಬ್ಲಿ ಚುನಾವಣೆ ನಡೆದ ಕೆಲವೇ ತಿಂಗಳಲ್ಲಿ ಜಮಖಂಡಿ ಕ್ಷೇತ್ರದ ಶಾಸಕರಾಗಿದ್ದ, ಕಾಂಗ್ರೆಸ್ಸಿನ ಸಿದ್ದು ನ್ಯಾಮೇಗೌಡ, ಬಾಗಲಕೋಟೆಯಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ತೆರವಾದ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿದ ಅವರ ಪುತ್ರ ಆನಂದ್ ನ್ಯಾಮೇಗೌಡ ಸ್ಪರ್ಧಿಸಿ, ಬಿಜೆಪಿಯ ಶ್ರೀಕಾಂತ ಕುಲ್ಕರ್ಣಿ ವಿರುದ್ದ 39,525 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು.
ಕುಂದಗೋಳ ಕ್ಷೇತ್ರದಿಂದ ಗೆದ್ದ ಶಿವಳ್ಳಿ ಪತ್ನಿ ಕುಸುಮಾ
ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಆಯ್ಕೆಯಾಗಿದ್ದ ಸಿ.ಎಸ್.ಶಿವಳ್ಳಿಯವರ ನಿಧನದಿಂದ ತೆರವಾಗಿದ್ದ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿಯವರು ಕಾಂಗ್ರೆಸ್ - ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದರು. ಅವರು, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಐ.ಚಿಕ್ಕನಗೌಡರ್ ವಿರುದ್ದ 1,611 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಶಿರಾ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಡಾ.ರಾಜೇಶ್ ಗೌಡ
ಶಿರಾದಿಂದ ಆಯ್ಕೆಯಾಗಿದ್ದ ಜೆಡಿಎಸ್ಸಿನ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ. ಸಿ.ಎಂ.ರಾಜೇಶ್ ಗೌಡ ಗೆಲುವು ಸಾಧಿಸಿದ್ದರು. ಇವರು, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ ಅವರನ್ನು 12,949 ಮತಗಳ ಅಂತರದಿಂದ ಸೋಲಿಸಿದ್ದರು. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದರೂ, ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬಸವಕಲ್ಯಾಣ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶರಣು ಸಲಗರ
ಬಸವಕಲ್ಯಾಣ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ಸಿನ ಬಿ.ನಾರಾಯಣ ರಾವ್ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಗೆಲುವು ಸಾಧಿಸಿದ್ದರು. ಇವರು ಕಾಂಗ್ರೆಸ್ಸಿನ ಮಾಲಾ ನಾರಾಯಣ ರಾವ್ ವಿರುದ್ದ 20,629 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಹಾನಗಲ್ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ
ಹಾನಗಲ್ ಕ್ಷೇತ್ರದಿಂದ ಗೆದ್ದಿದ್ದ ಬಿಜೆಪಿಯ ಸಿ.ಎಂ.ಉದಾಸಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ ಜಯ ಸಾಧಿಸಿದ್ದಾರೆ. ಇವರು, ಬಿಜೆಪಿಯ ಶಿವರಾಜ್ ಸಜ್ಜನರ್ ವಿರುದ್ದ 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉದಾಸಿ ಕುಟುಂಬಕ್ಕೆ ಟಿಕೆಟ್ ಒಲಿದು ಬಂದಿರಲಿಲ್ಲ.
ಸಿಂಧಗಿ ಕ್ಷೇತ್ರದಿಂದ ಗೆದ್ದ ಬಿಜೆಪಿಯ ರಮೇಶ್ ಭೂಸನೂರ
ಸಿಂಧಗಿ ಕ್ಷೇತ್ರದಿಂದ ಗೆದ್ದಿದ್ದ ಜೆಡಿಎಸ್ಸಿನ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಭೂಸನೂರ್ ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್ಸಿನ ಅಶೋಕ್ ಮನಗೂಳಿ ವಿರುದ್ದ 31,185 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಇಲ್ಲಿ, ಜೆಡಿಎಸ್ ಠೇವಣಿ ಕಳೆದುಕೊಂಡಿದೆ.
Recommended Video