ರಾಜ್ಯ ಬಜೆಟ್: ಕುಡುಕರ ಮೇಲೆ ಯಾಕೆ ಕೋಪತಾಪ ಮುಖ್ಯಮಂತ್ರಿಗಳೇ..
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ (ಮಾ 4) ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡಿಸಿದ್ದಾರೆ. 135 ನಿಮಿಷದ ಸುದೀರ್ಘವಾಗಿ ಮಂಡಿಸಿದ ಆಯವ್ಯಯದಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಎಂದಿನಂತೆ ಆಡಳಿತ ಪಕ್ಷದವರು ಬಜೆಟ್ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರೆ, ವಿರೋಧ ಪಕ್ಷದವರು ಸಂಪ್ರದಾಯದಂತೆ ಕೆಟ್ಟ ಬಜೆಟ್ ಎಂದು ವರ್ಣಿಸಿದ್ದಾರೆ. ಬೆಂಗಳೂರು ನಗರ ಮತ್ತು ತವರು ಜಿಲ್ಲೆ ಹಾವೇರಿ ಜಿಲ್ಲೆಗೆ ಬಂಪರ್ ಘೋಷಣೆಯನ್ನು ಸಿಎಂ ಬೊಮ್ಮಾಯಿ ಮಾಡಿದ್ದಾರೆ.
ಕರ್ನಾಟಕ ಬಜೆಟ್ - 2022: ಬೆಂಗಳೂರಿಗೆ ಸಿಕ್ಕಿದ್ದೇನು? ಹೈಲೆಟ್ಸ್
ನೇರವಾಗಿ ಯಾವುದೇ ತೆರಿಗೆಯನ್ನು ಏರಿಸದಿದ್ದರೂ, ರಾಜಸ್ವ ಸಂಗ್ರಹದ ಗುರಿಯನ್ನು ಮುಖ್ಯಮಂತ್ರಿಗಳು ಹೆಚ್ಚಿಸಿದ್ದಾರೆ. ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಮೇಲ್ನೋಟಕ್ಕೆ ಹೆಚ್ಚುವರಿ ಕರ ವಿಧಿಸದಿದ್ದರೂ, ರಾಜಸ್ವ ಸಂಗ್ರಹದ ಟಾರ್ಗೆಟ್ ಹೆಚ್ಚಿಸಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಜನರಿಗೆ ತಟ್ಟಬಹುದು.
ಸರಕಾರಕ್ಕೆ ಪ್ರಮುಖ ಆದಾಯದ ಮೂಲವಾಗಿರುವ ಅಬಕಾರಿ ಇಲಾಖೆಯ ರಾಜಸ್ವ ಸಂಗ್ರಹವನ್ನೂ ಮುಖ್ಯಮಂತ್ರಿಗಳು ಹೆಚ್ಚಿಸಿದ್ದಾರೆ. ಯಾವುದೇ ಸರಕಾರವಿರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ, ಅಬಕಾರಿ ಇಲಾಖೆಯ ಮೇಲೆಯೇ ಎಲ್ಲರಿಗೂ ಮೊದಲ ಕಣ್ಣು.
ಮೇಕೆದಾಟುಗೆ ಸಾವಿರ ಕೋಟಿ: ಪಾದಯಾತ್ರೆ ಎಫೆಕ್ಟ್ ಅಥವಾ ಕಾಂಗ್ರೆಸ್ಸಿಗೆ ಬೊಮ್ಮಾಯಿ ಠಕ್ಕರ್?
ಅಬಕಾರಿ ಇಲಾಖೆಗೆ 29,000 ಕೋಟಿ ರಾಜಸ್ವ ಸಂಗ್ರಹಣೆಯ ಗುರಿ
ಮುಖ್ಯಮಂತ್ರಿಗಳು ತಮ್ಮ ಬಜೆಟಿನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನು ಮಾಡಿಲ್ಲ. ರಾಜಸ್ವದ ಕೊರತೆ ಅಂದಾಜು 14,699 ಕೋಟಿ, ವಿತ್ತೀಯ ಕೊರತೆ ಅಂದಾಜು 61,564 ಕೋಟಿ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ರಾಜಸ್ವ ಸಂಗ್ರಹಣೆಯ ಗುರಿಯನ್ನು ಪರಿಷ್ಕರಿಸಿದ್ದು ಸಾರಿಗೆ ಇಲಾಖೆಗೆ 8,007 ಕೋಟಿ, ಅಬಕಾರಿ ಇಲಾಖೆಗೆ 29,000 ಕೋಟಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ, ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ರುಪಾಯಿ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ.
ಗುರಿ ಮೀರಿ ಆದಾಯ ಸಂಗ್ರಹಿಸುವ ತಾಕತ್ತು ಇಲಾಖೆಗೆ ಇದೆ ಎನ್ನುವ ವಿಶ್ವಾಸ
2021-22 ಸಾಲಿಗೆ ಅಬಕಾರಿ ಇಲಾಖೆಗೆ 24,580 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ, ಫೆಬ್ರವರಿ ಅಂತ್ಯಕ್ಕೆ 23,726 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಈಗಾಗಲೇ ಸಂಗ್ರಹಿಸಿಯಾಗಿದೆ. ಹಾಗಾಗಿ, ನಿರೀಕ್ಷಿತ ಗುರಿ ಮೀರಿ ಆದಾಯ ಸಂಗ್ರಹಿಸುವ ತಾಕತ್ತು ಇಲಾಖೆಗೆ ಇದೆ ಎನ್ನುವ ವಿಶ್ವಾಸದಿಂದಾಗಿ ಮುಂದಿನ ವರ್ಷದ ಗುರಿಯನ್ನು ಹೆಚ್ಚಿಸಲಾಗಿದೆ. 2022-23ರ ಸಾಲಿಗೆ 29,000 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹದ ಗುರಿಯನ್ನು ನೀಡಲಾಗಿದೆ.
ಈ ಬಾರಿ ಕೊರತೆ ಆಗುವುದಿಲ್ಲ ಎನ್ನುವ ನಿರೀಕ್ಷೆಯಿದೆ ಎಂದ ಮುಖ್ಯಮಂತ್ರಿ
ಆ ಮೂಲಕ, 4,420 ಕೋಟಿ ರೂಪಾಯಿ ಹೆಚ್ಚುವರಿ ಸಂಗ್ರಹದ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ/ನಿರೀಕ್ಷಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಸಿಎಂ ಬೊಮ್ಮಾಯಿ, "ನಾವು ಮದ್ಯವನ್ನು ಪ್ರಮೋಟ್ ಮಾಡುತ್ತಿಲ್ಲ. ಸೋರಿಕೆ ತಡೆಯುವುದಕ್ಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕಳೆದ ಬಾರಿ ಲಾಕ್ಡೌನ್ ಸಮಯದಲ್ಲಿ ಅದಕ್ಕೂ ಕೊರತೆಯಾಗಿತ್ತು. ಈ ಬಾರಿ ಕೊರತೆ ಆಗುವುದಿಲ್ಲ ಎನ್ನುವ ನಿರೀಕ್ಷೆಯಿದೆ"ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ದರ ಹೆಚ್ಚಳ ಮಾಡುವ ಚಿಂತನೆ ಇಲ್ಲ ಎಂದ ಅಬಕಾರಿ ಸಚಿವ ಗೋಪಾಲಯ್ಯ
ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, 4,420 ಕೋಟಿ ರೂಪಾಯಿ ಹೆಚ್ಚುವರಿ ಸಂಗ್ರಹಿಸಲು ಸರಕಾರ ಏನು ಕ್ರಮಕ್ಕೆ ಮುಂದಾಗಲಿದೆ ಎನ್ನುವುದು. ಒಂದೋ, ಮದ್ಯದ ಮಳಿಗೆಯನ್ನು ಹೆಚ್ಚಿಸಬೇಕು ಇಲ್ಲವೋ ಮದ್ಯದ ದರಗಳನ್ನು ಪರಿಷ್ಕರಿಸಬೇಕು. ಕೆಲವು ದಿನಗಳ ಹಿಂದೆ 'ಮದ್ಯದ ದರ ಹೆಚ್ಚಳ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ' ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದರು. ಆದರೆ, ದರ ಹೆಚ್ಚಿಸದೇ ಅಗಾಧ ಮೊತ್ತದ ಪರಿಷ್ಕೃತ ಟಾರ್ಗೆಟ್ ಅನ್ನು ಇಲಾಖೆ ತಲುಪುವುದು ಹೇಗೆ ಎನ್ನುವುದಿಲ್ಲಿ ಪ್ರಶ್ನೆ. ಒಟ್ಟಾರೆಯಾಗಿ, ಪ್ರತೀ ಬಜೆಟ್ ನಂತೆ ಈ ಬಾರಿಯೂ ಕುಡುಕರ ಮೇಲೆಯೇ ಸರಕಾರಕ್ಕೆ ಕಣ್ಣು.
Recommended Video