'ವಾಜಪೇಯಿ ಸೋತಿದ್ದರಿಂದ ಭದ್ರಾವತಿಯ ಆ ಹುಡುಗ ಪ್ರಾಣ ಕಳ್ಕೊಂಡಿದ್ದ'
ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಃಕರಣ ಹಾಗೂ ಮಾನವೀಯತೆಯನ್ನು ಉದಾಹರಣೆ ಸಹಿತ ಪರಿಚಯಿಸುವಂಥ ಘಟನೆಯೊಂದನ್ನು ಹೇಳಬೇಕಿದೆ. ವಾಜಪೇಯಿ ಅವರು ತೀರಿಕೊಂಡ ನಂತರ ವಿಧಾನಪರಿಷತ್ ಮಾಜಿ ಸಭಾಪತಿ ಹಾಗೂ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ ಆ ಘಟನೆಯನ್ನು ಹಂಚಿಕೊಂಡಿದ್ದಾರೆ.
ಅವರು ಹೇಳಿದ ಘಟನೆಯ ವಿವರ ಹೀಗಿದೆ. "ಇಂದಿರಾಗಾಂಧಿ ಅವರ ಹತ್ಯೆಯಾದ ನಂತರ ಆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಭಾರೀ ವಿಜಯ ಸಾಧಿಸಿತ್ತು. ಬಿಜೆಪಿಯು ದೇಶದಾದ್ಯಂತ ಸೋಲು ಕಂಡಿತ್ತು. ಆಗ ವಾಜಪೇಯಿ ಅವರು ಕೂಡ ಚುನಾವಣೆ ಸೋತಿದ್ದರು. ಈಗಿನಂತೆ ಟೀವಿ ಮಾಧ್ಯಮಗಳು ಪ್ರವರ್ಧಮಾನದಲ್ಲಿ ಇಲ್ಲದ ಕಾಲವದು.
ಅಟಲ್ ಬಿಹಾರಿ ವಾಜಪೇಯಿ ಅವರ 'ಇಷ್ಟದ' ಸಂಗತಿಗಳು...
"ರೇಡಿಯೋದಲ್ಲಿ ಸುದ್ದಿ ಪ್ರಕಟ ಆಗುತ್ತಿದ್ದಂತೆಯೇ ಹದಿನಾಲ್ಕು-ಹದಿನೈದು ವರ್ಷದ ಲಕ್ಷ್ಮೀನಾರಾಯಣ ಅನ್ನೋ ಹುಡುಗ ಒಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡುಬಿಟ್ಟ. "ವಾಜಪೇಯಿ ಅವರು ಸೋತಿದ್ದು ನನ್ನ ಮನಸಿಗೆ ಬಹಳ ನೋವಾಗಿದೆ" ಎಂದು ಆ ಪತ್ರದ ಒಕ್ಕಣೆಯಾಗಿತ್ತು. ಹಾಗೆ ಬರೆದು ನೇಣು ಹಾಕಿಕೊಂಡು ಬಿಟ್ಟ.
ದೆಹಲಿಯಲ್ಲಿದ್ದ ವಾಜಪೇಯಿ ಅವರಿಗೆ ಮಾಹಿತಿ ತಿಳಿಸಿದರು
"ಆ ಹುಡುಗ ಆರೆಸ್ಸೆಸ್ ನ ಶಾಖೆಗೆ ಬರುತ್ತಿದ್ದವನು. ಭದ್ರಾವತಿ ಹತ್ತಿರದ ಒಂದು ಹಳ್ಳಿಯಲ್ಲಿ ಇದ್ದವನು. ದಲಿತರ ಕುಟುಂಬದ ಆ ಹುಡುಗ ಇದ್ದದ್ದು ಒಂದು ಪುಟ್ಟ ಗುಡಿಸಲಿನಲ್ಲಿ. ಆ ಹುಡುಗನ ನಿರ್ಧಾರ ನಮಗೆಲ್ಲ ಆಘಾತವಾಗಿತ್ತು. ಈ ವಿಚಾರವನ್ನು ದೆಹಲಿಯಲ್ಲಿದ್ದ ವಾಜಪೇಯಿ ಅವರಿಗೆ ಫೋನ್ ಮಾಡಿ ನಾನು ತಿಳಿಸಿದೆ.
ಭದ್ರಾವತಿಯಲ್ಲಿದ್ದ ಗುಡಿಸಲಿಗೆ ಬಂದರು
"ಮಾರನೇ ದಿನವೇ ಅಲ್ಲಿಂದ ಹೊರಟು ಬಂದರು ಅಟಲ್ ಜೀ. ಭದ್ರಾವತಿಯ ಹಳ್ಳಿಯಲ್ಲಿದ್ದ ಗುಡಿಸಲಿಗೆ ಹುಡುಕಿಕೊಂಡು ಹೊರಟೆವು. ಅದೆಂಥ ಸಣ್ಣ ಗುಡಿಸಲು ಅಂದರೆ ವಾಜಪೇಯಿ ಅವರೊಬ್ಬರೇ ಒಳಗೆ ಹೋಗಲು ಸಾಧ್ಯವಾಯಿತು. ನಾನು ಅವರಿಗಾಗಿ ಹೊರಗೆ ಕಾಯುತ್ತಾ ನಿಂತೆ. ಸ್ವಲ್ಪ ಸಮಯ ಕಳೆದ ಮೇಲೆ ಆ ಹುಡುಗ ಲಕ್ಷ್ಮೀನಾರಾಯಣ ತಂದೆ ಹಾಗೂ ಅಟಲ್ ಜೀ ಹೊರಬಂದರು.
ಇಪ್ಪತ್ತೈದು ಸಾವಿರ ರುಪಾಯಿ ಕೊಟ್ಟರು
"ಇಬ್ಬರ ಕಣ್ಣಲ್ಲೂ ನೀರಿತ್ತು. ಆ ಹುಡುಗನ ತಂದೆಗೆ ಹಿಂದಿ ಬಾರದು, ಅಟಲ್ ಜೀಗೆ ಕನ್ನಡ ಬಾರದು. ಆದರೆ ಆ ಕುಟುಂಬಕ್ಕೆ ಆದ ದುಃಖವನ್ನು ಅಟಲ್ ಜೀ ತಮ್ಮದೇ ದುಃಖ ಅಂದುಕೊಂಡಿದ್ದರು. ಕೂಡಲೇ ನನ್ನ ಕೈಗೆ ಇಪ್ಪತ್ತೈದು ಸಾವಿರ ರುಪಾಯಿ ಕೊಟ್ಟರು. ಲಕ್ಷ್ಮೀನಾರಾಯಣನ ತಮ್ಮ ಹಾಗೂ ತಂಗಿ ವಿದ್ಯಾಭ್ಯಾಸವನ್ನು ಪೂರ್ತಿಯಾಗಿ ನೋಡಿಕೊಳ್ಳಿ ಎಂದು ನನಗೆ ಸೂಚಿಸಿದರು.
ಆರ್ಥಿಕ ಸ್ಥಿತಿಯೇನೂ ಉತ್ತಮವಾಗಿರಲಿಲ್ಲ
"ಆಗಿನ ಕಾಲಕ್ಕೆ ಇಪ್ಪತ್ತೈದು ಸಾವಿರ ರುಪಾಯಿ ದೊಡ್ಡ ಮೊತ್ತ. ಅದನ್ನು ಬ್ಯಾಂಕ್ ನಲ್ಲಿಟ್ಟು, ಅದರಲ್ಲೇ ಆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದೆ. ಅದಕ್ಕೆ ಅಗತ್ಯ ಬಿದ್ದಾಗ ನನ್ನ ಕೈಯಿಂದಲೂ ಸ್ವಲ್ಪ ಮೊತ್ತವನ್ನು ಹಾಕಿದೆ. ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಇರುವುದನ್ನು ಒದಗಿಸಲು ಸಾಧ್ಯವಾಯಿತು. ಆದರೆ ಈ ನೆರವು ನೀಡುವ ಸಂದರ್ಭದಲ್ಲಿ ನಮ್ಮೆಲ್ಲರ ಸ್ಥಿತಿಯೂ ಕಷ್ಟದಲ್ಲೇ ಇತ್ತು. ಇಡೀ ದೇಶದಲ್ಲಿ ಚುನಾವಣೆ ಸೋಲುವ ಜತೆಗೆ, ಇತರ ವೆಚ್ಚಗಳಿಗೆ ಸಾಲ ಮಾಡಿದ್ದೆವು. ಆ ಹುಡುಗನ ಮನೆಗೆ ಹೋಗಿದ್ದ ಕಾರಿನ ಬಾಡಿಗೆ ಸಹ ಸಾಲದ ಹಣದಲ್ಲೇ ಕಟ್ಟಿದ್ದೆವು.
ಉಳಿದ ಹಣವನ್ನು ಅನಾಥಾಶ್ರಮಕ್ಕೆ ಕೊಡಲು ಸೂಚಿಸಿದರು
"ಈ ಘಟನೆ ಆದ ಹದಿನಾಲ್ಕು-ಹದಿನೈದು ವರ್ಷಗಳಿಗೆ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಮಂತ್ರಿಯಾದರು. ದೆಹಲಿಯಲ್ಲಿ ಅವರನ್ನು ಭೇಟಿಯಾದಾಗ ಲಕ್ಷ್ಮೀನಾರಾಯಣನ ಕುಟುಂಬದ ಬಗ್ಗೆ ಕೇಳಿದರು. ಆ ಹುಡುಗನ ತಮ್ಮ -ತಂಗಿಯ ವಿದ್ಯಾಭ್ಯಾಸ ಪೂರ್ತಿಯಾದ ಬಗ್ಗೆ ತಿಳಿಸಿದೆ. ಇನ್ನು ಬ್ಯಾಂಕ್ ನಲ್ಲಿ ಹತ್ತು-ಹನ್ನೆರಡು ಸಾವಿರ ರುಪಾಯಿ ಉಳಿದಿದೆ. ಏನು ಮಾಡಲಿ ಅಂತಲೂ ಕೇಳಿದೆ. ಅದಕ್ಕೆ ಅವರು, ಯಾವುದಾದರೂ ಅನಾಥಾಶ್ರಮಕ್ಕೆ ಆ ಹಣ ಕೊಟ್ಟು ಬಿಡುವಂತೆ ತಿಳಿಸಿದರು" ಎಂದು ಮಾತೇ ಮುಗಿದು ಹೋದವರಂತೆ ಮೌನವಾದರು ಶಂಕರಮೂರ್ತಿ.