ಮೂರು ಚುನಾವಣಾ ಅಖಾಡಗಳಲ್ಲಿ ರಾಜ್ಯ ಬಿಜೆಪಿ ನಾಯಕರದ್ದೇ ಪಾರುಪತ್ಯ
ದಕ್ಷಿಣ ಭಾರತದ ಎರಡು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಈ ಮೂರೂ ಕಡೆಗಳಲ್ಲಿನ ಚುನಾವಣಾ ಪ್ರಚಾರದ ಪ್ರಮುಖ ಹೊಣೆಗಾರಿಕೆಯನ್ನು ಕರ್ನಾಟಕದಲ್ಲಿನ ಬಿಜೆಪಿ ಕೇಂದ್ರ ಕಚೇರಿ ನಿಭಾಯಿಸುತ್ತಿದೆ.
ಕೇಂದ್ರದಲ್ಲಿ ಪ್ರಮುಖ ನಾಯಕರಿದ್ದರೂ, ಬಹುತೇಕ ಜವಾಬ್ದಾರಿಗಳನ್ನು ಕರ್ನಾಟಕದ ನಾಯಕರಿಗೆ ವಹಿಸಲಾಗಿದೆ. ಹೀಗಾಗಿ ಈ ಮೂರೂ ಕಡೆಗಳಲ್ಲಿ ರಾಜ್ಯ ಬಿಜೆಪಿಯ ಮುಖಂಡರದ್ದೇ ಓಡಾಟ ಕಾಣಿಸುತ್ತಿದೆ.
ತಮಿಳುನಾಡು ಚುನಾವಣೆ; ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ?
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಸಕ ಸಿ.ಟಿ ರವಿ ಅವರಿಗೆ ತಮಿಳುನಾಡಿನ ಉಸ್ತುವಾರಿ ನೀಡಲಾಗಿದೆ. ಚುನಾವಣೆ ಘೋಷಣೆಗೂ ಮುಂಚೆಯಿಂದಲೂ ಅವರು ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇನ್ನೊಂದೆಡೆ ಬಿಜೆಪಿಯ ರಾಜ್ಯಸಭೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಪುದುಚೆರಿಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಅವರೊಂದಿಗೆ ಸಹ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಕೇರಳದಲ್ಲಿಯೂ ಕರ್ನಾಟಕದ ಬಿಜೆಪಿ ನಾಯಕರದ್ದೇ ಪಾರುಪತ್ಯ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರನ್ನು ಕೇರಳ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದ್ದರೆ, ಶಾಸಕ ಸುನಿಲ್ ಕುಮಾರ್ ರಾಜ್ಯ ಉಸ್ತುವಾರಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕೂಡ ರಾಜ್ಯದ ಮುಖಂಡರು ಪ್ರಮುಖ ಜವಾಬ್ದಾರಿಗಳನ್ನು ಪಡೆದಿದ್ದರು.
ಮಂಜೇಶ್ವರವೇ ಮುಖ್ಯ ಗುರಿ
ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ವಿರೋಧಪಕ್ಷ ಯುಡಿಎಫ್ ನಡುವಿನ ಪೈಪೋಟಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸುಲಭವಲ್ಲ. ಆದರೆ, ಅದು ಕೇರಳದಲ್ಲಿ ನಿರ್ದಿಷ್ಟ ಸಂಖ್ಯೆಯ ಸೀಟುಗಳ ಮೇಲೆ ಕಣ್ಣಿರಿಸಿದೆ. ಮುಖ್ಯವಾಗಿ ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಂತಿರುವ ಕನ್ನಡ ಮತ್ತು ತುಳು ಭಾಷಿಕರು ಹೆಚ್ಚಾಗಿರುವ ಮಂಜೇಶ್ವರದಲ್ಲಿನ ಸೀಟುಗಳನ್ನು ಗುರಿಯನ್ನಾಗಿರಿಸಿಕೊಂಡಿದೆ. ಕರಾವಳಿಯವರೇ ಆದ ಶಾಸಕ ಸುನಿಲ್ ಕುಮಾರ್ ಅವರಿಗೆ ಮಂಜೇಶ್ವರದಲ್ಲಿ ಗೆಲುವು ತಂದುಕೊಡುವ ಹೊಣೆ ವಹಿಸಲಾಗಿದೆ. ಪ್ರತಿದಿನವೂ ಬೂತ್ ಮಟ್ಟದ ಸಭೆಗಳನ್ನು ಅವರು ಮಂಜೇಶ್ವರದಲ್ಲಿ ನಡೆಸುತ್ತಿದ್ದಾರೆ.
ಸುರೇಂದ್ರನ್ ಸ್ಪರ್ಧೆ
ಕರ್ನಾಟಕದ 150ಕ್ಕೂ ಅಧಿಕ ಪಕ್ಷದ ಕಾರ್ಯಕರ್ತರನ್ನು ಕೇರಳದಲ್ಲಿನ ಪ್ರಚಾರಕ್ಕೆ ನಿಯೋಜಿಸಲಾಗಿದೆ. ಬಿಜೆಪಿ ಕೇರಳ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಮಂಜೇಶ್ವರ ಮತ್ತು ಕೊಣ್ಣಿಯಿಂದ ಕಣಕ್ಕಿಳಿಸಲಾಗಿದೆ. 'ದೆಹಲಿಯಲ್ಲಿ ನರೇಂದ್ರ, ಮಂಜೇಶ್ವರದಲ್ಲಿ ಸುರೇಂದ್ರ ಎಂಬ ಘೋಷಣೆಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರದಿಂದ ಸ್ಪರ್ಧಿಸಿದ್ದ ಸುರೇಂದ್ರನ್, ಕೇವಲ 89 ಮತಗಳಿಂದ ಸೋಲು ಕಂಡಿದ್ದರು.
ತಮಿಳುನಾಡಲ್ಲಿ 20 ಶಾಸಕರು
ತಮಿಳುನಾಡಿನಲ್ಲಿ ಕರ್ನಾಟಕದಿಂದ ಕನಿಷ್ಠ 20 ಶಾಸಕರು ಮತ್ತು 150 ಪಕ್ಷದ ಪದಾಧಿಕಾರಿಗಳು, ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ 20 ಕ್ಷೇತ್ರಗಳಲ್ಲಿನ ಪ್ರಚಾರಕ್ಕೆ ಪಾಲ್ಗೊಳ್ಳಬೇಕು ಎಂದು ಸಿ.ಟಿ. ರವಿ ಸೂಚಿಸಿದ್ದಾರೆ. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಆರ್ಆರ್ ನಗರದ ಶಾಸಕ ಮುನಿರತ್ನ ನಾಯ್ಡು ಈಗಾಗಲೇ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.
ಪುದುಚೆರಿಯಲ್ಲಿ ಬಿಬಿಎಂಪಿ ಕಾರ್ಪೊರೇಟರ್ಗಳು
ಇನ್ನು ಪುದುಚೆರಿಯಲ್ಲಿ ಬಿಬಿಎಂಪಿಯ 30 ಸದಸ್ಯರನ್ನು ನಿಯೋಜಿಸಲಾಗಿದೆ. ಪ್ರತಿ ಕಾರ್ಪೊರೇಟರ್ ಅಡಿ 10-20 ಸ್ಥಳೀಯ ಮುಖಂಡರು ಕೆಲಸ ಮಾಡುತ್ತಿದ್ದಾರೆ. ಪುದುಚೆರಿಯಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಸರಾಸರಿ 30,000 ಮತದಾರರಿದ್ದಾರೆ. ಇದು ಬಿಬಿಎಂಪಿಯ ವಾರ್ಡ್ವಾರು ಮತದಾರರಷ್ಟೇ ಪ್ರಮಾಣದಲ್ಲಿದೆ. ಕಾರ್ಪೊರೇಷನ್ ಚುನಾವಣೆಯ ವೈಖರಿಯಲ್ಲಿಯೇ ಹೊಸ ಆಲೋಚನೆ, ಉಪಾಯಗಳೊಂದಿಗೆ ಪ್ರಚಾರ ನಡೆಸುವಂತೆ ಅವರಿಗೆ ಸೂಚನೆ ನೀಡಲಾಗಿದೆ.