ನಿಷ್ಠುರವಾದಿ ಎ.ಕೆ. ಸುಬ್ಬಯ್ಯ ಎಂಬ ಮಹಾನ್ ಚೇತನದ ಅಂತರಂಗ ಹೀಗಿತ್ತು
ಬೆಂಗಳೂರು, ಆಗಸ್ಟ್ 27: ಕರ್ನಾಟಕ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಂಗಳವಾರ ನಳೀನ್ ಕುಮಾರ್ ಕಟೀಲ್ ಅಧಿಕಾರವಹಿಸಿಕೊಂಡಿದ್ದಾರೆ. ಇದೇ ದಿನ ಕರ್ನಾಟಕ ಬಿಜೆಪಿಯ ಮೊದಲ ಅಧ್ಯಕ್ಷ ಎ. ಕೆ. ಸುಬ್ಬಯ್ಯ ನಿಧನ ಹೊಂದಿರುವುದು ಕಾಕತಾಳೀಯ ಇರಬಹುದು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೊಡಗು ಮೂಲದ ಸುಬ್ಬಯ್ಯ ಅಗಲಿದ್ದಾರೆ.
ಅವರ ಬದುಕಿನ ಪುಟಗಳ ಮೇಲೆ ಕಣ್ಣಾಡಿಸಿದರೆ, ಅವತ್ತಿನ ಜನಸಂಘ ಬಿಜೆಪಿಯಾಗಿ ಬದಲಾದ ದಿನಗಳು, ಸುಬ್ಬಯ್ಯ ನಂಬಿದ ಸಿದ್ಧಾಂತವನ್ನು ಜೀರ್ಣಿಸಿಕೊಂಡು ಚೌಕಟ್ಟಿನಿಂದ ಹೊರಬಿದ್ದ ಪರಿ, ಬಿಜೆಪಿ ಮಾತೃಸಂಸ್ಥೆ 'ಆರ್ಎಸ್ಎಸ್ ಅಂತರಂಗ'ವನ್ನು ಅವರು ಬಿಚ್ಚಿಟ್ಟ ರೀತಿ ಹಾಗೂ ತಮ್ಮ ಕೊನೆಯ ದಿನಗಳವರೆಗೂ ನಿರ್ಗತಿಕರ ಪರವಾಗಿ ಹೊರಡಿಸಿದ ಗಟ್ಟಿ ದನಿಗಳು, ಜನಪರ ಹೋರಾಟಗಳಲ್ಲಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಕಾಣಿಸುತ್ತವೆ.
ಹೋರಾಟದ ಮೂಲಕ ಅಧಿಕಾರ ಧಕ್ಕಿಸಿಕೊಂಡು, ಆ ನಂತರ ಹೋರಾಟಕ್ಕೆ ತಿಲಾಂಜಲಿ ಇಟ್ಟು ಅಧಿಕಾರವನ್ನು ವಂಶಪಾರಂಪರ್ಯವಾಗಿ ಅನುಭವಿಸಿದ ಹಲವು ರಾಜಕಾರಣಿಗಳು ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ಕಾಣಸಿಗುತ್ತಾರೆ. ಆದರೆ ಎ. ಕೆ. ಸುಬ್ಬಯ್ಯ ಹಾಗಲ್ಲ. ಅವರು ಅಧಿಕಾರದಲ್ಲಿದ್ದಾಗಲೂ ಸಹ ಹೋರಾಟವನ್ನು ಬಿಟ್ಟವರಲ್ಲ, ಹೋರಾಟಕ್ಕಾಗಿ ಅಧಿಕಾರವನ್ನೇ ಬಿಟ್ಟ ಅಪರೂಪದ ವ್ಯಕ್ತಿತ್ವ ಅವರದ್ದು.
ಹೋರಾಟಗಾರ, ವಕೀಲ ಎ.ಕೆ. ಸುಬ್ಬಯ್ಯ ವಿಧಿವಶ
ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ ಅವರು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದಲ್ಲಿ 1934ರಲ್ಲಿ ಜನಿಸಿದರು. ವಿರಾಜಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ, ಕಾನೂನು ಪದವಿ ಪಡೆದರು. 1963ರಿಂದ ವಕೀಲ ವೃತ್ತಿ ಆರಂಭಿಸಿದರು. ನಂತರ ಜನಸಂಘದ ಮೂಲಕ ರಾಜಕಾರಣಕ್ಕೆ ಕಾಲಿಟ್ಟರು. ಜನಸಂಘದಿಂದಲೇ ಎರಡು ಬಾರಿ ವಿಧಾನ ಪರಿಷತ್ಗೂ ಆಯ್ಕೆಯಾದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸಹ ಸೇರಿದ್ದರು. ಆದರೆ ಅವರ ನಿಜವಾದ ಹೋರಾಟ ಆರಂಭವಾದದ್ದು 198೦ರಲ್ಲಿ, ಅವರು ಕರ್ನಾಟಕ ಬಿಜೆಪಿಯ ಮೊದಲ ಅಧ್ಯಕ್ಷರಾದ ನಂತರ.
ರಾಜ್ಯದಾದ್ಯಂತ ಸಂಚರಿಸಿ ಯುವಕರನ್ನು ಸಂಘಟಿಸಿ ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಆಂದೋಲನ ಪ್ರಾರಂಭಿಸಿದರು ಎ. ಕೆ. ಸುಬ್ಬಯ್ಯ. ಅವತ್ತಿಗೆ ಸುಬ್ಬಯ್ಯರನ್ನು ಕರ್ನಾಟಕ ವಾಜಿಪೇಯಿ ಎಂದು ಬಲಪಂಥೀಯರು ಕೊಂಡಾಡಿದ್ದರು. ಅವತ್ತಿಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದ ಬಿಜೆಪಿಗೆ ಎ. ಕೆ. ಸುಬ್ಬಯ್ಯ ಹೊರತಾದ ಇನ್ನೊಬ್ಬ ಗಟ್ಟಿ ನಾಯಕ ಇಲ್ಲ ಎಂಬ ಪರಿಸ್ಥಿತಿ ಇತ್ತು.
1983ರಲ್ಲೇ ಬಿಜೆಪಿಗೆ 18 ಸ್ಥಾನ ಗೆಲ್ಲಿಸಿಕೊಟ್ಟಿದ್ದರು ಸುಬ್ಬಯ್ಯ
ಉತ್ತರದ ರಾಜ್ಯಗಳಲ್ಲೇ ಬಿಜೆಪಿ ತೆವಳುತ್ತಿದ್ದ ಸಮಯವದು. ಆದರೆ ಎ. ಕೆ. ಸುಬ್ಬಯ್ಯ ತಮ್ಮ ಸಂಘಟನಾ ಚಾತುರ್ಯದಿಂದ 1983ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಂತೆ ಮಾಡಿದರು. ಅಷ್ಟೆ ಅಲ್ಲದೆ ಜನತಾ ಪಕ್ಷದ ಜೊತೆ ಸೇರಿ ಸರ್ಕಾರ ರಚನೆಯಲ್ಲೂ ಪಾಲುದಾರರಾದರು. ವಿಶೇಷ ಅಂದರೆ, ಬಿಜೆಪಿಯನ್ನು 'ಜಾತ್ಯಾತೀತ, ಭ್ರಷ್ಟಾಚಾರ ವಿರೋಧಿ ಪಕ್ಷ'ವಾಗಿ ಬೆಳೆಸುವ ಮಹಾತ್ವಾಕಾಂಕ್ಷೆ ಸುಬ್ಬಯ್ಯ ಅವರದ್ದಾಗಿತ್ತು. ಆದರೆ ಬಿಜೆಪಿಯ ಮಾತೃಸಂಸ್ಥೆ ಆರ್ಎಸ್ಎಸ್ಗೆ ಇದು ಬೇಡವಾಗಿರಲಿಲ್ಲ ಎಂದು ಮುಂದೊಮ್ಮೆ ಸ್ವತಃ ಸುಬ್ಬಯ್ಯ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದರು.
ಅಸ್ಪೃಶ್ಯತೆ ಶುರುವಾಗಿದ್ದು ಮುಸ್ಲಿಮರು ಬಂದ ಬಳಿಕ: ಆರೆಸ್ಸೆಸ್ ಮುಖಂಡ
ಬಿಜೆಪಿಯಲ್ಲಿ ಆರ್ಎಸ್ಎಸ್ ಪ್ರತಿಸಿದ್ಧಾಂತ ರೂಪಿಸಿತ್ತು
ಸುಬ್ಬಯ್ಯ ಆರ್ಎಸ್ಎಸ್ ವಿರುದ್ಧವಾಗಿ ಪ್ರತಿಸಿದ್ಧಾಂತವೊಂದನ್ನು ಬಿಜೆಪಿ ಪಕ್ಷದಲ್ಲಿ ರೂಪಿಸಲು ಪ್ರಾರಂಭಿಸುತ್ತಿದ್ದರು. ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡ ಪ್ರಕಾರ, ಇದು ಆರ್ಎಸ್ಎಸ್ ಮತ್ತು ಸುಬ್ಬಯ್ಯ ನಡುವೆ ಶೀತಲ ಸಮರಕ್ಕೆ ನಾಂದಿ ಹಾಡಿತು. ಕೊನೆಗದು ಬಹಿರಂಗ ಕಿತ್ತಾಟ, ಕುತಂತ್ರಗಳ ಮಟ್ಟಕ್ಕೆ ಹೋಯಿತು. ಬಿಜೆಪಿ ಪಕ್ಷದ ಕಚೇರಿಯಲ್ಲಿನ ಟೆಲಿಫೋನ್, ಟೈಪ್ರೈಟರ್ಗಳನ್ನು ಆರ್ಎಸ್ಎಸ್ನ ಕಾಲಾಳುಗಳು ಎತ್ತಿಕೊಂಡು ಹೋಗಿದ್ದರು.
'ಆರ್ಎಸ್ಎಸ್ನ ಸಲಿಂಗ ಕಾಮಿಗಳು' ಅಂಕಣ ಬರೆದಿದ್ದ ಸುಬ್ಬಯ್ಯ
ಹೀಗೆ ಸಾಗಿದ್ದ ಶೀತಲ ಸಮರ ಅಂತ್ಯವಾಗಿದ್ದು ಸುಬ್ಬಯ್ಯ ಇಂಗ್ಲಿಷ್ ನಿಯತಕಾಲಿಕೆಯೊಂದಕ್ಕೆ ಬರೆದ ಅಂಕಣದಿಂದ. ಅವತ್ತು ಪ್ರಕಟವಾಗಿದ್ದ ಅಂಕಣದ ತಲೆಬರಹ ಹೀಗಿತ್ತು; 'ಆರ್ಎಸ್ಎಸ್ನ ಸಲಿಂಗ ಕಾಮಿಗಳು'. ಅಂಕಣ ಪ್ರಕಟವಾದ ಕೂಡಲೇ ಸುಬ್ಬಯ್ಯರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಆಗ ವಾಜಪೇಯಿ ಅವರಿಗೆ ದೀರ್ಘ ಪತ್ರವನ್ನು ಬರೆದಿದ್ದ ಸುಬ್ಬಯ್ಯ, ಆ ಪತ್ರವನ್ನೇ ಇನ್ನಷ್ಟು ವಿಸ್ತರಿಸಿ 'ಆರ್ಎಸ್ಎಸ್ ದಿ ವ್ಹಿಪ್ಪಿಂಗ್ ಹ್ಯಾಂಡ್ ಆಫ್ ಬಿಜೆಪಿ' ಎಂಬ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿದರು.
'ಕನ್ನಡ ನಾಡು' ಪಕ್ಷ ಕಟ್ಟಿದರು ಸುಬ್ಬಯ್ಯ
ನಂತರ ಅವರು 'ಕನ್ನಡ ನಾಡು' ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರಿ ದೊಡ್ಡದಾಗಿ ಪಕ್ಷದ ಉದ್ಘಾಟನೆಯೂ ಆಯಿತು. ಸುಬ್ಬಯ್ಯ ಅವರ ಸಿಡಿನುಡಿಗಳಿಗೆ ಮಾರುಹೋದವರು ಸಹಸ್ರಾರು ಸಂಖ್ಯೆಯಲ್ಲಿ ಅಂದು ನೆರೆದಿದ್ದರು. ಕರ್ನಾಟಕದಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಆದ ಗತಿಯೇ ಕನ್ನಡ ನಾಡು ಪಕ್ಷಕ್ಕೂ ಆಯಿತು. ಅದು ರಾಜಕೀಯವಾಗಿ ಮೇಲೆ ಏಳಲೇ ಇಲ್ಲ. ನಂತರದ ದಿನಗಳಲ್ಲಿ ಸುಬ್ಬಯ್ಯ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
DSS vs RSS : ಮೀಸಲಾತಿ ಹೇಳಿಕೆ ಸಮರ್ಥನೆ, ಖಂಡನೆ, ವಿವರಣೆ
ರಾಜ್ಕುಮಾರ್ ಅವರನ್ನೇ ಎದುರು ಹಾಕಿಕೊಂಡಿದ್ದರು
ಕಾಂಗ್ರೆಸ್ ಪಕ್ಷ ಸೇರಿದ ಮೇಲೂ ಸುಬ್ಬಯ್ಯ ಅವರು ವಿರಮಿಸಲಿಲ್ಲ. ಪಕ್ಷ ತಪ್ಪು ಮಾಡಿದಾಗಲೆಲ್ಲಾ ಪಕ್ಷದ ವಿರುದ್ಧ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ತಿರುಗಿ ಬೀಳುತ್ತಿದ್ದರು. ಅವರ ನಿಷ್ಠುರ ಮಾತುಗಳಿಗೆ ಗುರಿಯಾಗುವ ಭಯದಿಂದ ದೊಡ್ಡ-ದೊಡ್ಡ ರಾಜಕಾರಣಿಗಳೆ ಹೆದರಿ ಹಾದಿ ಬದಲಾಯಿಸುತ್ತಿದ್ದರಂತೆ. ಆಗಿನ ಕಾಲದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ಡಾ.ರಾಜ್ಕುಮಾರ್ ವಿರುದ್ಧವೇ ಮಾತನಾಡಿ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಎಷ್ಟೇ ಕಹಿಯಾಗಿರಲಿ ತಮಗೆ ಅನಿಸಿದ ಸತ್ಯ ಹೇಳಲು ಎಂದೂ ಎದೆಗುಂದಿದವರಲ್ಲ ಎ. ಕೆ. ಸುಬ್ಬಯ್ಯ.
ಕೋಮುಶಕ್ತಿಗಳ ವಿರುದ್ಧ ಕೊನೆಯ ವರೆಗೂ ಹೊರಾಟ
ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಎರಡು ವರ್ಷಗಳಿಂದಲೂ ಡಯಾಲಿಸಿಸ್ಗೆ ಒಳಗಾಗಿದ್ದರು ಸುಬ್ಬಯ್ಯ. ಮನೆ ಬಿಟ್ಟು ಹೊರಗೆ ಹೋಗಲಸಾಧ್ಯವಾದ ಪರಿಸ್ಥಿತಿ ಇದ್ದರೂ, ಕೋಮುವಾದಿಗಳ ವಿರುದ್ಧ ದನಿ ಎತ್ತುವ ಉತ್ಸಾಹ ಮಾತ್ರ ಅವರಲ್ಲಿ ಇನಿತೂ ಕಡಿಮೆ ಆಗಿರಲಿಲ್ಲ. ಸಾಯುವ ಹತ್ತು ದಿನಗಳ ಹಿಂದೆಯಷ್ಟೆ ಡೆಕನ್ ನ್ಯೂಸ್ ವೆಬ್ಸೈಟ್ಗೆ ಸಂದರ್ಶನ ನೀಡಿದ್ದರು. ಕೋಮುಶಕ್ತಿಗಳ ವಿರುದ್ಧ ರೂಪುಗೊಳ್ಳುತ್ತಿದ್ದ ಸಣ್ಣ ಹೋರಾಟಗಳನ್ನೂ ಬೆನ್ನುತಟ್ಟುತ್ತಿದ್ದ ಸುಬ್ಬಯ್ಯ, 'ಕಾರ್ಮೋಡದ ಮಧ್ಯೆ ಕಾಣುವ ಬೆಳ್ಳಿ ಗೆರೆ' ಎಂದು ಕೋಮುವಿರೋಧಿ ಹೋರಾಟಗಳನ್ನು ಕರೆಯುತ್ತಿದ್ದರು.
ಹಿಂದು-ಹಿಂದುತ್ವಕ್ಕೆ ವ್ಯತ್ಯಾಸ ಸೂಕ್ಷ್ಮವಾಗಿ ತಿಳಿಸಿದ್ದರು
ಮೇ ತಿಂಗಳಲ್ಲಿ ಮಹೇಂದ್ರ ಕುಮಾರ್ ಅವರಿಗೆ ನೀಡಿರುವ ವಿಡಿಯೋ ಸಂದರ್ಶನದಲ್ಲಿ ಮಾತನಾಡಿದ್ದ ಸುಬ್ಬಯ್ಯ, 'ಗಾಂಧಿ ನಿಜವಾದ ಹಿಂದು, ಗೋಡ್ಸೆ ಹಿಂದುತ್ವ' ಎಂದು ಹಿಂದೂ ಮತ್ತು ಹಿಂದುತ್ವದ ನಡುವಿನ ದೊಡ್ಡ ಅಂತರವನ್ನು ಸರಳವಾಗಿ ತೆರೆದಿಟ್ಟಿದ್ದರು. ಕೊರಳಿಗೆ ಪ್ಲಾಸ್ಟರ್ ಸುತ್ತಿಕೊಂಡು ಡಯಾಲಿಸಿಸ್ ಮಾಡಿಸಿಕೊಂಡ ನೋವನ್ನು ಮರೆಮಾಚಿಕೊಂಡು ಉತ್ಸಾಹದಿಂದಲೇ ಕೋಮುಶಕ್ತಿಗಳನ್ನು ಎದುರಿಸುವ ರೀತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದರು.
ರಾಜಕೀಯ ತಪ್ಪಿತಸ್ತರು ವಿರಮಿಸುವ ಹೊತ್ತಿದು?
ಇವತ್ತು ಬಿಜೆಪಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಸಮಯದಲ್ಲಿ ಸುಬ್ಬಯ್ಯ ಅವರ ಆಶಯಗಳಾದ 'ಜಾತ್ಯಾತೀತ ಹಾಗೂ ಭ್ರಷ್ಟಾಚಾರ ಮುಕ್ತ' ಆಡಳಿತ ನೀಡಲು ಸಾಧ್ಯವಾಗತ್ತಿದೆಯಾ? ಇಂತಹದೊಂದು ಪ್ರಶ್ನೆಯೇ ಅಪ್ರಸ್ತುತಗೊಂಡಿರುವ ಹೊತ್ತಿನಲ್ಲಿ ಸುಬ್ಬಯ್ಯ ನಿರ್ಗಮಿಸಿದ್ದಾರೆ, ಬಹುಶಃ ರಾಜಕೀಯ ತಪ್ಪಿತಸ್ಥರು ವಿರಮಿಸುವ ಹೊತ್ತಿದು.