ಬಿಟ್ ಕಾಯಿನ್: ದಿನದಿಂದ ದಿನಕ್ಕೆ ಬಗೆದಷ್ಟು ಬಿಜೆಪಿ ಬುಡಕ್ಕೆ ಕೊಡಲಿ ಏಟು?
ದಂಧೆಯಲ್ಲಿ ಯಾರೇ ಇದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ, ಸಚಿವರಾಗಿದ್ದರೂ ಕಿತ್ತೊಗೆಯುತ್ತೇವೆ ಎನ್ನುವ ಆಕ್ರೋಶಭರಿತ ಮಾತುಗಳನ್ನೆನ್ನೋ ಬಿಜೆಪಿಯ ನಾಯಕರು ಆಡುತ್ತಿದ್ದಾರೆ. ಆದರೆ, ದಿನ ಹೋದಂತೆ ಬಿಟ್ ಕಾಯಿನ್ ದಂಧೆ ಚಿತ್ರವಿಚಿತ್ರ ತಿರುವನ್ನು ಪಡೆದುಕೊಳ್ಳುತ್ತಿದೆ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಜನರ ಗಮನವೆಲ್ಲಾ ಅದರ ಮೇಲಿತ್ತು. ಈಗ, ಬುಧವಾರ (ನ 10) ಇದ್ದಕ್ಕಿದ್ದಂತೇ ಬಿಟ್ ಕಾಯಿನ್ ವಿಚಾರ ಸ್ಫೋಟಿಸಲು ಆರಂಭಿಸಿದೆ. ಜೊತೆಗೆ, ಈ ದಂಧೆಯ ಪ್ರಮುಖ ರೂವಾರಿ ಹ್ಯಾಕರ್ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ
ಬಿಟ್ ಕಾಯಿನ್ ದಂಧೆಯಲ್ಲಿ ಹಲವು ರಾಜಕಾರಣಿಗಳು/ಆಯಕಟ್ಟಿನ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿರುವುದು ಗೊತ್ತಿರುವ ವಿಚಾರ. ಇವರನ್ನೆಲ್ಲಾ ರಕ್ಷಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎನ್ನುವ ಮಾತೂ ಚಾಲ್ತಿಯಲ್ಲಿತ್ತು. ಆದರೆ, ಇದರ ತನಿಖೆಯನ್ನು ಇಡಿಗೆ ವಹಿಸಿದೆ ಎಂದು ಬಿಜೆಪಿ ಹೇಳಿದೆ.
ಬಸವರಾಜ ಬೊಮ್ಮಾಯಿ 'ಮುಖ್ಯಮಂತ್ರಿ ಪಟ್ಟ ಬಲಿ' ಪಡೆಯಲಿದೆಯಾ 'ಬಿಟ್ ಕಾಯಿನ್'?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಿಢೀರ್ ದೆಹಲಿ ಭೇಟಿ ಕೂಡಾ ಹಲವು ಅನುಮಾನಕ್ಕೆ ಕಾರಣವಾಗಿದೆ. ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಿದ ರೀತಿ ಹಲವು ಅನುಮಾನಕ್ಕೆ ಕಾರಣವಾಗಿದೆ ಎನ್ನುವ ಮಾತನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಿದ್ದಾರೆ. ಈ ಬಿಟ್ ಕಾಯಿನ್ ಸಂಬಂಧ ಇಂಚಿಂಚು ಮಾಹಿತಿ ಸಿದ್ದರಾಮಯ್ಯನವರಿಗೆ ಲಭ್ಯವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಬೆಂಗಳೂರು ಜೈಲಿನಿಂದ ಹೊರಬಂದಿರುವ ಹ್ಯಾಕರ್ ಶ್ರೀಕಿ
ಬೆಂಗಳೂರು ಜೈಲಿನಿಂದ ಹೊರಬಂದಿರುವ ಹ್ಯಾಕರ್ ಶ್ರೀಕಿ ಸ್ವಾಭಾವಿಕವಾಗಿ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾನೆ. ಇವೆಲ್ಲದರ ನಡುವೆ, ಪ್ರಭಾವಿಗಳು ಶಾಮೀಲಾಗಿರುವ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬರು ಪ್ರಧಾನಿಗೆ ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರವೊಂದು ಭಾರೀ ಸದ್ದನ್ನು ಮಾಡಲಾರಂಭಿಸಿದೆ. ಈ ಪತ್ರದಲ್ಲಿ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯನವರು ಸೈಲೆಂಟಾಗಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸೈಲೆಂಟಾಗಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ, ಜೊತೆಗೆ, ಸದ್ಯದಲ್ಲೇ ದಾಖಲೆ ಸಮೇತ ಬಿಜೆಪಿ ವಿರುದ್ದ ಲಗ್ಗೆ ಇಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ, ಬಿಜೆಪಿ ಮುಖಂಡರ ನಾಡಿಮಿಡಿತ ಅರಿಯಲು ಪ್ರಿಯಾಂಕ್ ಖರ್ಗೆಯವರಿಂದ ಹೇಳಿಕೆ ಕೊಡಿಸಿದ್ದು ಎನ್ನುವ ಮಾತೂ ಕೇಳಿಬರುತ್ತಿದೆ. "ಬಿಜೆಪಿಯ ಪ್ರಮುಖರು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹಾಗಾಗಿ, ಬರೀ ಬಾಯಿ ಮಾತಲ್ಲಿ ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಯಾವುದೇ ತನಿಖೆಗೆ ಆದೇಶ ಮಾಡಿಲ್ಲ"ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು.
ಎರಡು ರಾಷ್ಟ್ರೀಯ ಪಕ್ಷಗಳ ಒಬ್ಬರನ್ನೊಬ್ಬರು ದೂರುತ್ತಾ ಕೆಸೆರೆರೆಚಾಟ
ಶ್ರೀಕರ್ ಆಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆಯಾಗಿರುವುದರಿಂದ, ಬಿಟ್ ಕಾಯಿನ್ ಹಗರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿಲ್ಲದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಒಬ್ಬರನ್ನೊಬ್ಬರು ದೂರುತ್ತಾ ಕೆಸೆರೆರೆಚಾಟ ನಡೆಸುತ್ತಿದ್ದಾರೆ. 2018ರಲ್ಲಿ ಬಿಟ್ ಕಾಯಿನ್ ದಂಧೆಯ ವಿಚಾರ ಹೊರಬರಲು ಆರಂಭಿಸಿತ್ತು. "ಪ್ರಧಾನಮಂತ್ರಿಗಳ ಕಚೇರಿಗೆ ದೂರು ಹೋಗಿದ್ದು, ಅಮೆರಿಕಾದ ತನಿಖಾ ಸಂಸ್ಥೆಯಿಂದ ಪ್ರಧಾನಿಗೆ ಮಾಹಿತಿ ಬಂದಿದೆ. ಆಂತರಿಕವಾಗಿ ಮಾತುಕತೆ ನಡೆದಾಗ ಎರಡೂ ಪಕ್ಷದ ನಾಯಕರ ಹೆಸರು ಕೇಳಿ ಬಂದಿದ್ದು ನನ್ನ ಗಮನಕ್ಕೆ ಬಂದಿದೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಈ ದಂಧೆಯ ಕರಾಳತೆಯನ್ನು ತೋರುತ್ತದೆ.
2018ರಲ್ಲಿ ನಡೆದ ಯುಬಿ ಸಿಟಿ ಹಲ್ಲೆ ಪ್ರಕರಣ
ಇನ್ನು, ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಇದೆ ಎನ್ನುವ ಅಂಶ ಬಿಜೆಪಿ ನಾಯಕರುಗಳ ಆರೋಪಕ್ಕೆ ಹೊಸ ಶಕ್ತಿಯನ್ನು ತಂದು ಕೊಟ್ಟಿದೆ. ನಾಯಕರ ಮಕ್ಕಳು ಹ್ಯಾಕರ್ ಶ್ರೀಕಿ ಜೊತೆಗೂಡಿ ಡ್ರಗ್ಸ್ ಮತ್ತು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಈ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು 2018ರಲ್ಲಿ ನಡೆದ ಯುಬಿ ಸಿಟಿ ಹಲ್ಲೆ ಪ್ರಕರಣ ಮತ್ತು 2020ರ ಕೆಂಪೇಗೌಡ ನಗರ ಡ್ರಗ್ಸ್ ಪ್ರಕರಣದಲ್ಲೂ ಕೇಳಿ ಬಂದಿತ್ತು.
ಬಿಟ್ ಕಾಯಿನ್: ದಿನದಿಂದ ದಿನಕ್ಕೆ ಬಿಜೆಪಿ ಬುಡಕ್ಕೆ ಕೊಡಲಿ ಏಟು?
"ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅದು ಬಿಜೆಪಿ ಅವರೇ ಆಗಿರಲಿ, ಕಾಂಗ್ರೆಸ್ ಅವರೇ ಅಗಲಿ ಮೊದಲು ಬುಕ್ ಮಾಡಲಿ. ಹೆಸರು ಹೇಳಲಿ, ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಎಸ್ಕೇಪ್ ಆಗಲು ಏನೇನೋ ಹೇಳಿಕೆ ನೀಡಬಾರದು. ಹೆಸರು ಹೇಳಲು ಆಗಿಲ್ಲ ಎಂದರೆ ಬಿಟ್ಟು ಕೊಡಲಿ, ನಾವು ನೋಡಿಕೊಳ್ಳುತ್ತೇವೆ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಟ್ಟಿನಲ್ಲಿ, ಈ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ದ ಮುಗಿಬೀಳಲು ಸಿದ್ದತೆಯನ್ನು ಮಾಡಿಕೊಂಡಿದೆ. ಇದರಲ್ಲಿ ಯಾರ್ಯಾರು ಇದ್ದಾರೋ, ಯಾರ ತಲೆದಂಡವಾಗಲಿದೆಯಾ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಗಬಹುದು.