ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಹಿಂದೆ ಬಿಟ್ ಕಾಯಿನ್ ಅಕ್ರಮದ ವಾಸನೆ !
ಬೆಂಗಳೂರು, ನ. 11: ಬಿಟ್ ಕಾಯಿನ್ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಸುಳ್ಳಾ? ಎರಡು ಪಕ್ಷದ ರಾಜಕಾರಣಿಗಳ ನಿದ್ದೆ ಗೆಡಿಸಿರುವ ಬಿಟ್ ಕಾಯಿನ್ ಅಕ್ರಮದ ನಡೆದಿರುವ ಬೆಳವಣಿಗೆ ನೋಡಿದರೆ ಇಂತಹ ಅನುಮಾನ ಹುಟ್ಟು ಹಾಕಿದೆ. ಸಿಬಿಐ ಹಾಗೂ ಇಡಿ ತನಿಖೆಗೆ ವಹಿಸಿದ್ದೇ ಆದಲ್ಲಿ ಕೇಂದ್ರದ ಜಂಟಿ ತಂಡ ಬೆಂಗಳೂರಿಗೆ ಬರುವ ಅಗತ್ಯವೇನಿತ್ತು? ಬಿಟ್ ಕಾಯಿನ್ ಅಕ್ರಮವನ್ನು ತನಿಖೆಗೆ ವಹಿಸಿರುವ ಬಗ್ಗೆ ರಾಜ್ಯ ಸರ್ಕಾರದ ಒಂದು ಅಧಿಕೃತ ಆದೇಶದ ಪ್ರತಿ ಈವರೆಗೂ ಹೊರಗೆ ಬಿದ್ದಿಲ್ಲ. ಇದನ್ನು ನೋಡುತ್ತಿದ್ದರೆ ಬಿಟ್ ಕಾಯಿನ್ ಅಕ್ರಮದ ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಗೆ ಹಾರಿಸಿದರೇ ಎಂಬ ಅನುಮಾನ ಮೂಡಿಸಿದೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಅಕ್ರಮ ದೊಡ್ಡ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು ಬಿಟ್ ಕಾಯಿನ್ ಬ್ಲಾಕ್ ಅಂಡ್ ವೈಟ್ ಹವಾಲ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಪುತ್ರರೇ ಬಿಟ್ ಕಾಯಿನ್ ದಂಧೆಯಲ್ಲಿ ಸಿಕ್ಕಿ ಬೀಳಲಿದ್ದಾರೆ ಎಂದ ಬಿಜೆಪಿ ನಾಯಕರು ಪ್ರತ್ಯಾರೋಪ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಬಿಟ್ ಕಾಯಿನ್ ಹಗರಣದ ತನಿಖೆ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳೇ ಬೇರೆಯದ್ದೇ ಆಗಿದೆ. ಇದು ಯಾರಿಗೆ ಉರುಳಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ.
ರಾಜಕಾರಣಿಗಳಲ್ಲಿ ಹಾಗು ಪೊಲೀಸ್ ಅಧಿಕಾರಿಗಳಲ್ಲಿ ನಡುಕ
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆಯಿಂದ ಕೆಲ ರಾಜಕಾರಣಿಗಳಲ್ಲಿ ಹಾಗು ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಹ್ಯಾಕರ್ ಶ್ರೀಕೃಷ್ಣ ನಿಂದ ನಡೆದಿರುವ ಸಾವಿರಾರು ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಗಳು ಪ್ರಾಥಮಿಕ ವಿಚಾರಣೆ ಆರಂಭಿಸಿವೆ.
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸೇರಿದಂತೆ ಹಲವರಿಂದ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ಪತ್ರಿಕೆ ಸುದ್ದಿ ಪ್ರಕಟಿಸಿದೆ.
ಅಧಿಕೃತ ತನಿಖೆಗೆ ಎಂಟ್ರಿ
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸಿಬಿಐ, ಗುಪ್ತಚರ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಒಳಗೊಂಡ ತಂಡ ಬೆಂಗಳೂರಿಗೆ ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದ್ದು, ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿವೆ. ಈ ಬೆಳವಣಿಗೆ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿ ಬಂದಿರುವುದು ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಬಹುದೊಡ್ಡ ವಹಿವಾಟು
ರಾಜಕಾರಣಿಗಳ ಕಪ್ಪು ಹಣವನ್ನು ಬಿಟ್ ಕಾಯಿನ್ಗೆ ಪರಿವರ್ತನೆ ಮಾಡಲಾಗಿದೆ. ತಂತ್ರಜ್ಞಾನ ಬಳಿಸಿಕೊಂಡು ಹವಾಲ ದಂಧೆ ನಡೆಸಿರುವುದು, ಇದಕ್ಕಿಂತಲೂ ಬಹು ಮುಖ್ಯವಾಗಿ ಹ್ಯಾಕ್ ಮಾಡಿ ಕದ್ದಿರುವ ಬಿಟ್ ಕಾಯಿನ್ ಗಳನ್ನು ವಿಲೇವಾರಿ ಮಾಡಿರುವ ಸಂಗತಿ ಬಗ್ಗೆ ತನಿಖೆ ನಡೆಯಲಿದೆ. ಹ್ಯಾಕರ್ ಶ್ರೀಕೃಷ್ಣ ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ಗಳು ಕೆಲವು ರಾಜಕಾರಣಿಗಳು ರಾಜಕಾರಣಿಗಳ ಪುತ್ರರ ಖಾತೆಗಳಿಗೆ ವರ್ಗಾವಣೆಯಾಗಿವೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ಬಿಟ್ ಕಾಯಿನ್ ಅಕ್ರಮದ ತನಿಖೆ ಕೆಲ ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆಯಿದೆ.
ಹ್ಯಾಕಿಂಗ್ ಕ್ವೀನ್
ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಅಕ್ರಮ ದೊಡ್ಡ ಸದ್ದು ಮಾಡುತ್ತಿದೆ. ಹ್ಯಾಕಿಂಗ್ನ ಕಿಂಗ್ ಪಿನ್ ಶ್ರಿಕೃಷ್ಣ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಹ್ಯಾಕಿಂಗ್ ಮಾಡಿದ್ದ ಬಿಟ್ ಕಾಯಿನ್ನಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಪಾಲು ಪಡೆದಿದ್ದಾರೆ ಎಂಬ ಗಂಭೀರ ಅರೋಪ ಕೇಳಿ ಬರುತ್ತಿದೆ. ಆದರೆ, ಈ ಬಿಟ್ ಕಾಯಿನ್ ಹಗರಣ ಕೆಲ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ರಾಜಕಾರಣಿಗಳ ಮತ್ತು ಹ್ಯಾಕರ್ ಶ್ರೀಕೃಷ್ಣನ ನಡುವೆ ಸಂಪರ್ಕ ಕೊಂಡಿಯಾಗಿ ಬಿಟ್ ಕಾಯಿನ್ ಕ್ವೀನ್ ಒಬ್ಬಳು ಕಾರ್ಯ ನಿರ್ವಹಿಸಿದ್ದಾಳೆ. ಚಿಕ್ಕ ವಯಸ್ಸಿಗೆ ಐಷಾರಾಮಿ ಜೀವನ ಕಂಡುಕೊಂಡಿರುವ ಬಿಟ್ ಕಾಯಿನ್ ಕ್ವೀನ್ ಬಗ್ಗೆಯೂ ಕೇಂದ್ರ ತನಿಖಾ ಸಂಸ್ಥೆಗಳು ಮಾಹಿತಿ ಪಡೆದಿವೆ ಎಂದೇ ಹೇಳಲಾಗುತ್ತಿದೆ.
ಪ್ರಧಾನಿಗಳ ಕಾರ್ಯಾಲಯದ ಸೂಚನೆ ಮೇರೆಗೆ ತನಿಖೆ
ಅಮೆರಿಕಾದ ಬಿಟ್ ಕಾಯಿನ್ ಎಕ್ಸ್ಚೇಂಜ್ ಹ್ಯಾಕಿಂಗ್, ಸರ್ಕಾರದ ಹಣಕಾಸು ವೆಬ್ ತಾಣಗಳ ಹ್ಯಾಕ್ ಮಾಡಿ ಹಣ ಲಪಟಾಯಿಸಿರುವ ಆರೋಪ ಹ್ಯಾಕರ್ ಶ್ರೀಕೃಷ್ಣನ ಮೇಲಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಅಧಿಕಾರಿಗಳು ದೆಹಲಿಯಿಂದಲೇ ಆಗಮಿಸಿ ತನಿಖೆ ನಡೆಸುತ್ತಿರುವುದು ದೊಡ್ಡ ಸಂಚಲನ ಮೂಡಿಸಿದೆ. ರಾಜ್ಯದಲ್ಲಿರುವ ಕೇಂದ್ರದ ತನಿಖಾ ಸಂಸ್ಥೆಗಳ ಗಮನಕ್ಕೂ ತರದೇ ವಿಚಾರಣೆ ನಡೆಸಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆ ನೋಡಿದರೆ ಬಿಟ್ ಕಾಯಿನ್ ಹಗರಣವನ್ನು ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರಾಸಕ್ತಿ ತೋರಿತ್ತಾ? ಸಿಬಿಐ ತನಿಖೆಗೆ ವಹಿಸಿದ್ದೇನೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸುಳ್ಳಾ ಎಂಬ ಪ್ರಶ್ನೆ ಎದ್ದಿದೆ. ರಾಜ್ಯದಲ್ಲಿ ನಡೆದಿರುವ ಬಿಟ್ ಕಾಯಿನ್ ಅಕ್ರಮದ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಗಳ ತನಿಖೆಗೆ ವಹಿಸಿರುವ ಬಗ್ಗೆ ರಾಜ್ಯ ಸರ್ಕಾರದ ಸಣ್ಣ ಕಾಗದ ಪತ್ರ ಕೂಡ ಬಹಿರಂಗ ಗೊಳ್ಳದಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಅಂತೂ ಬಿಟ್ ಕಾಯಿನ್ ಹಗರಣ ಯಾರ ಪಾಲಿಗೆ ಮುಳವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.