ಮತ್ತೆ ಕರ್ನಾಟಕ ಬಂದ್; ಮಹಿಷಿ ವರದಿ ಬಗ್ಗೆ ನಿಮಗೆಷ್ಟು ಗೊತ್ತು?
Recommended Video
ಬೆಂಗಳೂರು, ಫೆಬ್ರವರಿ 12: ಕನ್ನಡಿಗರಿಗೆ ಗಗನ ಕುಸುಮವಾಗಿರುವ, ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡಬೇಕು ಎಂದು ಹೇಳುವ 'ಡಾ ಸರೋಜಿನಿ ಮಹಿಷಿ ವರದಿ' ಮತ್ತೆ ಮುನ್ನೆಲೆಗೆ ಬಂದಿದೆ.
ವರದಿ ಜಾರಿ ಮಾಡುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಕಳೆದ ಒಂದು ತಿಂಗಳಿನಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರೋಜಿ ಮಹಿಷಿ ವರದಿಗೆ ಕನ್ನಡಿಗರು ಇಷ್ಟು ಪರಿ ಪರಿಯಾಗಿ ಕೇಳಿಕೊಂಡರೂ ವರದಿ ಜಾರಿಗೆ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಶೀಘ್ರವೇ ಸಿಹಿ ಸುದ್ದಿ
ಇದರಿಂದ ಕೆರಳಿರುವ ಕನ್ನಡ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಧರಣಿ ಸತ್ಯಾಗ್ರಹ ಮಾಡಿದರೆ ನಡೆಯುವುದಿಲ್ಲ ಎಂದು ಫೆಬ್ರವರಿ 13 ರಂದು (ಗುರುವಾರ) ಕರ್ನಾಟಕವನ್ನೇ ಒಂದು ದಿನ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿವೆ. ಇದಕ್ಕೆ ಕಾರ್ಮಿಕರು, ಆಟೋ, ಕ್ಯಾಬ್ ಡ್ರೈವರ್ಗಳು, ನೂರಾರು ಸಂಘಟನೆಗಳು ಬೆಂಬಲ ಸೂಚಿವೆ. ಈ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ಯಾರು? ಅವರು ನೀಡಿದ ವರದಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರೋಜಿನಿ ಮಹಿಷಿ ಯಾರು?
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಪ್ತೆಯಾಗಿದ್ದ ಸರೋಜಿನಿ ಮಹಿಷಿಯವರು ಲೇಖಕಿ, ರಾಜಕಾರಣಿ, ಕಾನೂನು ತಜ್ಞೆ ಆಗಿ ಹೆಸರು ಮಾಡಿದವರು. ಕರ್ನಾಟಕದ ಮೊದಲ ಮಹಿಳಾ ಸಂಸದರಾಗಿ ಹೆಸರು ಮಾಡಿದವರು. ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದಗಳನ್ನು ಮಾಡಿ ಕರ್ನಾಟಕದ ಒಬ್ಬ ಶ್ರೇಷ್ಠ ರಾಜಕಾರಣಿ ಎಂದು ಖ್ಯಾತಿ ಗಳಿಸಿದ್ದರು.
ನಾಲ್ಕು ಬಾರಿ ಧಾರವಾಡ ಸಂಸದೆ
ಸರೋಜಿನಿ ಮಹಿಷಿ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿರಹಟ್ಟಿಯವರು. ಧಾರವಾಡದಲ್ಲಿಯೇ ಶಿಕ್ಷಣ ಪಡೆದು ಬೆಳೆದ ಅವರು ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದರು. ಇಂದಿರಾ ಗಾಂಧಿ ಅವರಿಂದಾಗಿ 2 ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸರೋಜಿನಿ ಮಹಿಷಿ ಅವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲವನ್ನು ಮೂಡಿಸಿದ್ದರು. ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಂಸತ್ನಲ್ಲಿ ಸಮರ್ಥವಾಗಿ ಕರ್ನಾಟಕ, ಕನ್ನಡಿಗರನ್ನು ಪ್ರತಿನಿಧಿಸಿದ್ದರು.
ಫೆಬ್ರವರಿ 13ರ ಕರ್ನಾಟಕ ಬಂದ್; ಯಾರ ಬೆಂಬಲ ಇದೆ, ಇಲ್ಲ
ಕೇಂದ್ರದ ಕಣ್ಣು ತೆರೆಯಿಸಿದ ಮಹಿಷಿ
ಎಪ್ಪತ್ತರ ದಶಕದಲ್ಲಿ ಕೇಂದ್ರ ಸರ್ಕಾರದ ಉದ್ಯೋಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಸಂಸತ್ನಲ್ಲಿ ಸರೋಜಿನಿ ಮಹಿಷಿ ಮೊದಲ ಬಾರಿಗೆ ಮಾತನಾಡಿ ಅಂದಿನ ಕೇಂದ್ರ ಸರ್ಕಾರದ ಕಣ್ಣು ತೆರೆಸಿದರು. ನಂತರ ಖಾಸಗಿ ವಲಯಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ದೊಡ್ಡದಾಯಿತು. ಕನ್ನಡ ಸಾಹಿತಿಗಳು, ಸಂಘಟನೆಗಳು, ಕನ್ನಡಪರ ಹೋರಾಟಗಾರರು ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲು ನೀಡಬೇಕು ಎಂದು ತೀವ್ರ ಹೋರಾಟ ಪ್ರಾರಂಭಿಸಿದರು.
ವರದಿ ನೀಡಿದ ಸರೋಜಿನಿ ಮಹಿಷಿ
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿದ್ದರಿಂದ. ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಅಂದಿನ ಸಂಸದೆ ಸರೋಜಿನಿ ಮಹಷಿಯವರಿಗೆ ಸೂಚಿಸಿತು. ಮಹಿಷಿಯವರು ಸತತ ಒಂದು ವರ್ಷ ಕ್ಷೇತ್ರ ಪ್ರವಾಸ, ಅಧ್ಯಯನ ಮಾಡಿ ಸರ್ಕಾರಕ್ಕೆ 1983 ರಲ್ಲಿ ವರದಿ ನೀಡಿದರು. ಅದು ಮಹಿಷಿ ವರದಿ ಎಂದೇ ಖ್ಯಾತವಾಯಿತು. ವರದಿ ಪ್ರಕಾರ ಕರ್ನಾಟಕದಲ್ಲಿ ಖಾಸಗಿ ಸಂಸ್ಥೆಗಳು ಶೇ ಶೇ 25 ರಷ್ಟು ಉದ್ಯೋಗಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲು ಇಡಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. 2015 ರಲ್ಲಿ ಸರೋಜಿನಿ ಮಹಿಷಿ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.
ಸರ್ಕಾರಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕೂಡ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಆಧಾರವಾಗಿದೆ. ಆದರೆ, ಯಾವ ಸರ್ಕಾರಗಳೂ ಮಹಿಷಿ ವರದಿಯನ್ನು ಜಾರಿ ಮಾಡಲು ಇಚ್ಛಾಶಕ್ತಿ ತೋರಿಸದಿರುವುದು ಕನ್ನಡಿಗರಲ್ಲಿ ತೀವ್ರ ಬೇಸರ ತರಿಸಿರುವುದಂತೂ ಸತ್ಯ.