ಚಾಮರಾಜನಗರದಲ್ಲಿ ಖಾತೆ ತೆರೆಯಲು ಜೆಡಿಎಸ್ ಕಸರತ್ತು!
ಚಾಮರಾಜನಗರ, ಏಪ್ರಿಲ್ 4: ಹಳೇ ಮೈಸೂರು ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಡಿರುವ ಜೆಡಿಎಸ್ ಚಾಮರಾಜನಗರ ಜಿಲ್ಲೆಯಲ್ಲಿ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಪಕ್ಷವನ್ನು ಮುನ್ನಡೆಸುವಂತಹ ಘಟಾನುಘಟಿ ನಾಯಕರ ಕೊರತೆ ಪಕ್ಷದ ಸಂಘಟನೆಗೆ ಹಿನ್ನಡೆಯಾಗುತ್ತಿದೆ.
ಕಾಂಗ್ರೆಸ್ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಈಗ ಬಿಜೆಪಿ ಗಟ್ಟಿಯಾಗುತ್ತಿದೆ. ಸದ್ಯ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮತ್ತು ಶಾಸಕರಾದ ನಿರಂಜನ್ ಕುಮಾರ್, ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಶಾಸಕ ಎನ್. ಮಹೇಶ್ ಅವರಿರುವುದು ಪಕ್ಷಕ್ಕೆ ಬಲ ಬಂದಿದ್ದು, ಮುಂದಿನ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಎಚ್ಡಿಕೆ vs ಸಿಪಿವೈ: ಚನ್ನಪಟ್ಟಣದಲ್ಲಿ ದಲಿತರ ಮನವೊಲಿಕೆಗೆ ಸರ್ಕಸ್!
ಘಟಾನುಘಟಿ ನಾಯಕರಿಗಾಗಿ ತಲಾಶ್
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಹಳೇ ಮೈಸೂರಿನತ್ತ ಕಣ್ಣಿಟ್ಟಿರುವ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಘಟಾನುಘಟಿ ನಾಯಕರು ಭೇಟಿ ನಡೆಸಲಿದ್ದಾರೆ. ಈ ವೇಳೆ ಚಾಮರಾಜನಗರದಲ್ಲಿ ಯಾವ ರೀತಿಯ ಬೆಳವಣಿಗೆಯಾಗಬಹುದೋ ತಿಳಿಯದಾಗಿದೆ. ಆದರೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಬೇಕಾದ ತಂತ್ರಗಳಂತೂ ನಡೆದೇ ನಡೆಯುತ್ತದೆ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದಾಗಿದೆ.
ಕಾಂಗ್ರೆಸ್ ಕೂಡ ಚಾಮರಾಜನಗರದಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಆರ್. ಧ್ರುವನಾರಾಯಣ್ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಅವರಿಗೆ ಸ್ವಕ್ಷೇತ್ರದತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ.
ಹಿಂದುಳಿತ ದಲಿತರ ಮತಸೆಳೆಯಲು ತಂತ್ರ
ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದೆ ಕಾರಣ ಬಿಎಸ್ಪಿ ಮೂಲಕ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಮತ್ತು ಹಿಂದುಳಿದ ದಲಿತರ ನಾಯಕರಾಗಿದ್ದ ಎನ್. ಮಹೇಶ್ ಬಿಜೆಪಿ ಸೇರಿದ್ದಾರೆ. ಹೀಗಾಗಿ ಅವರ ಮೂಲಕ ಹಿಂದುಳಿದ ಮತ್ತು ದಲಿತರ ಮತವನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಜತೆಗೆ ಜಿಲ್ಲೆಯಲ್ಲಿರುವ ಒಂದಷ್ಟು ನಾಯಕರನ್ನು, ಕಾರ್ಯಕರ್ತರನ್ನು ಪಕ್ಷಕ್ಕೆ ಎಳೆದು ತರುವ ಕೆಲಸ ಮುಂದಿನ ದಿನಗಳಲ್ಲಿ ನಡೆದರೆ ಅಚ್ಚರಿಪಡಬೇಕಾಗಿಲ್ಲ.
ಚುನಾವಣೆಗೆ ದಿನಗಳು ಹತ್ತಿರವಾದಂತೆಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಜೆಡಿಎಸ್ ಕೂಡ ಜಿಲ್ಲೆಯಲ್ಲಿ ಖಾತೆ ತೆರೆಯಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಆದರೆ ಪಕ್ಷವು ನಾಯಕರ ಕೊರತೆಯನ್ನು ಎದುರಿಸುತ್ತಿದ್ದು, ಈಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಪಕ್ಷವನ್ನು ಸಂಘಟಿಸುವುದು ಸುಲಭದ ಕೆಲಸವಾಗಿ ಉಳಿದಿಲ್ಲ.
ಜೆಡಿಎಸ್ನಿಂದ ಸದಸ್ಯತ್ವ ಅಭಿಯಾನ
ಈ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ನಾಯಕತ್ವ ವಹಿಸಿಕೊಂಡು, ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಜಿಲ್ಲಾಧ್ಯಕ್ಷ ಎಂ.ಆರ್. ಮಂಜುನಾಥ್ ಅವರು ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವತ್ತ ಚಿಂತನೆ ಮಾಡಿದ್ದು, ಈಗಾಗಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ನೀಡುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಹುಮ್ಮಸ್ಸಿನಲ್ಲಿರುವ ಅವರು ಹನೂರು ಕ್ಷೇತ್ರದಿಂದ ಸ್ಪರ್ಧಿಸಲು ತಯಾರಾಗಿದ್ದಾರೆ. ಆದ್ದರಿಂದ ಅವರು ತಮ್ಮ ಕ್ಷೇತ್ರದಲ್ಲಿ ಸಭೆ ಮಾಡುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಧ್ಯಕ್ಷರಾಗಿದ್ದರೂ ಹನೂರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಮುಖ್ಯವಾಗಿ ಅಲ್ಲಿ ಪಕ್ಷ ಸಂಘಟಿಸಿ ಗೆಲುವಿಗೆ ಬೇಕಾದ ಅನುಕೂಲ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ.
ರಾಜಕೀಯ ಬದಲಾವಣೆ ಖಚಿತ
ಈಗಾಗಲೇ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಶಾಲೆಯ ಹಿಂಭಾಗದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಸಿದ ಅವರು ಹನೂರು ಕ್ಷೇತ್ರದಲ್ಲಿ ಈ ಬಾರಿ ಗೆಲ್ಲಲು ನನಗೊಂದು ಅವಕಾಶ ಕೊಡಿ ಎಂದು ಬೇಡಿಕೊಂಡಿದ್ದಾರೆ. ಮಧುವನಹಳ್ಳಿ, ದೊಡ್ಡಿಂದುವಾಡಿ, ಪಾಳ್ಯ ಮುಂತಾದ ಪಂಚಾಯತಿಗಳಲ್ಲಿ ಸದಸ್ಯತ್ವ ಅಭಿಯಾನ ಪ್ರಾರಂಭ ಮಾಡಿರುವ ಅವರು, ಪ್ರತಿಯೊಂದು ವಾರ್ಡ್ಗಳಲ್ಲಿ ಸುಮಾರು 50ರಿಂದ 100 ಜನರುಗಳನ್ನು ಜೆಡಿಎಸ್ ಸದಸ್ಯರನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಜತೆಗೆ ಬೇರೆ ಪಕ್ಷದಿಂದ ಒಂದಷ್ಟು ಕಾರ್ಯಕರ್ತರನ್ನು ಜೆಡಿಎಸ್ಗೆ ತರುವ ಯತ್ನವನ್ನು ಮಾಡುತ್ತಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ಫಲಕೊಡುತ್ತದೆ ಎಂಬುದನ್ನು ಮುಂದೆ ನೋಡಬೇಕಿದೆ.
ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿವೆ. ತಮ್ಮ ಪಕ್ಷದ ಸಂಘಟನೆಗೆ ಬೇಕಾದ ತಂತ್ರಗಳನ್ನು ಮಾಡಲು ತಯಾರಿಯೂ ಪಕ್ಷದೊಳಗೆ ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜಕೀಯವಾಗಿ ಒಂದಷ್ಟು ಬದಲಾವಣೆಗಳಾಗುವುದು ಖಚಿತವಾಗಿದೆ.