BJP Survey: ಬಹುಮತದ ಸನಿಹಕ್ಕೆ ಬಿಜೆಪಿ? ಆಂತರಿಕ ಸಮೀಕ್ಷೆ ಮಾಹಿತಿ
ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಈಗಲೇ ಜಿದ್ದಾಜಿದ್ದಿ ನಡೆಯುತ್ತಿದೆ. ಚುನಾವಣಾ ಪೂರ್ವದಲ್ಲಿ ಜನಾಭಿಪ್ರಾಯ ಸಂಗ್ರಹ ರೂಪದಲ್ಲಿ ಹಲವಾರು ಸಮೀಕ್ಷೆ, ಅಧ್ಯಯನಗಳು ನಡೆದಿವೆ. ಈ ಬಗ್ಗೆ ಸೆ. 20ರಂದು ಒನ್ಇಂಡಿಯಾದಲ್ಲಿ ಬಂದ ವಿವರ ಓದಿರಬಹುದು. ಇದೀಗ ಬಿಜೆಪಿಯ ಆಂತರಿಕ ಸಮೀಕ್ಷೆಯ ಮಾಹಿತಿಯೂ ಹೊರಬಂದಿದೆ. ಬಿಜೆಪಿ ನಡೆಸಿರುವ ಸಮೀಕ್ಷೆ ಪ್ರಕಾರ ಆ ಪಕ್ಷಕ್ಕೆ 110 ಸ್ಥಾನ ಸಿಗುವ ನಿರೀಕ್ಷೆ ಇದೆ. ಕಾಂಗ್ರೆಸ್ಗೆ 74 ಮತ್ತು ಜೆಡಿಎಸ್ಗೆ 49 ಸ್ಥಾನ ಸಿಗಬಹುದು ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭೆಯಲ್ಲಿ 224 ಸ್ಥಾನಗಳಿದ್ದು, ಬಹುಮತಕ್ಕೆ 113 ಸ್ಥಾನಗಳ ಅವಶ್ಯಕತೆ ಇದೆ. ಬಿಜೆಪಿ ಸಮೀಕ್ಷೆ ಪ್ರಕಾರ ಆ ಪಕ್ಷಕ್ಕೆ ಬಹುಮತಕ್ಕೆ 3 ಸ್ಥಾನಗಳ ಕೊರತೆ ಬೀಳಬಹುದು. ಆದರೆ, ಒಂದು ವೇಳೆ ಈ ಸಮೀಕ್ಷೆ ನಿಜವೇ ಆದಲ್ಲಿ ಬಿಜೆಪಿಗೆ ಸರಕಾರ ರಚನೆ ಮಾಡಲು ಹೆಚ್ಚು ಅವಕಾಶ ಸಿಗುವುದಂತೂ ಹೌದು. ಬಹುಮತಕ್ಕೆ 3 ಸ್ಥಾನಗಳನ್ನು ಹೊಂದಿಸುವುದು ಬಿಜೆಪಿಗೆ ಕಷ್ಟವಾಗುವುದಿಲ್ಲ. ಪಕ್ಷೇತರರ ಬೆಂಬಲ ಸಿಕ್ಕಿದರೂ ಸಾಕು ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ.
ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಯಾರು? ಸಮೀಕ್ಷೆಗಳು ಹೇಳೋದೇನು?
ಬೇರೆ ಸಮೀಕ್ಷೆಗಳೇನು ಹೇಳುತ್ತವೆ?
ಇತ್ತೀಚೆಗೆ ರಾಜ್ಯದ ಜನರ ನಾಡಿಮಿಡಿತ ಅರಿಯಲು ಕೆಲವಾರು ಸಮೀಕ್ಷೆ ಮತ್ತು ಅಧ್ಯಯನಗಳು ನಡೆದಿವೆ. ಅವುಗಳು ನೀಡಿರುವ ಸುಳಿವಿನ ಪ್ರಕಾರ ಕೂಡ ರಾಜ್ಯದಲ್ಲಿ ಮುಂದಿನ ಚುನಾವಣೆ ಬಳಿಕ ರಾಜಕೀಯ ಸ್ಥಿತಿಗತಿಯಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದು ಅನುಮಾನ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆ ಕಾಣುತ್ತಿಲ್ಲ.
ಮೇ ತಿಂಗಳಿಂದ ಜೂನ್ವರೆಗೂ ನಡೆದ ಸಮೀಕ್ಷೆಗಳಲ್ಲಿ ಸಂಗ್ರಹಿಸಲಾದ ಜನಾಭಿಪ್ರಾಯದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಮೇಲುಗೈ ಸಿಗುವಂತೆ ತೋರಿರಲಿಲ್ಲ. ಆಗಸ್ಟ್ ಅಂತ್ಯದಲ್ಲಿ ನಡೆದ ಅಧ್ಯಯನಗಳಲ್ಲೂ ಈ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲದಿರುವುದು ಕಂಡುಬಂದಿದೆ.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ ಎಎಪಿ!
ಕಾಂಗ್ರೆಸ್ಗೆ 100 ಸ್ಥಾನ?
ರಾಜ್ಯ ವಿಧಾನಸಭೆಯಲ್ಲಿ 224 ಸ್ಥಾನಗಳಿವೆ. ವಿವಿಧ ಅಧ್ಯಯನ ಮತ್ತು ಸಮೀಕ್ಷೆಗಳನ್ನು ಗಣನೆಗೆ ತೆಗೆದುಕೊಂಡು ಸರಾಸರಿ ಲೆಕ್ಕ ಹಾಕಿದರೆ ಕಾಂಗ್ರೆಸ್ 100 ಸ್ಥಾನ ಪಡೆಯಬಹುದು. ಬಿಜೆಪಿಗೆ 95 ಸ್ಥಾನಗಳು ಸಿಗಬಹುದು. ಜೆಡಿಎಸ್ ಪಕ್ಷ 20 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಜೆಡಿಎಸ್ ಗೆಲುವು ಕಡಿಮೆಯಾದರೂ ಸರಕಾರ ರಚನೆಗೆ ಅದರ ಪ್ರಾಮುಖ್ಯತೆ ಕಡಿಮೆ ಆಗುವುದಿಲ್ಲ.
ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಬಹುಮತದಿಂದ ದೂರವೇ ಇರುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಷ್ಟೇನೂ ದೊಡ್ಡ ಅಂತರ ಇರುವುದಿಲ್ಲ. ಜೆಡಿಎಸ್ ಯಥಾಪ್ರಕಾರ ಕಿಂಗ್ ಮೇಕರ್ ಸ್ಥಾನದಲ್ಲಿ ಇರಬಹುದು. ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ರಚಿಸಲು ಜೆಡಿಎಸ್ ಬೆಂಬಲ ಅಗತ್ಯಬೀಳಬಹುದು ಎಂಬುದನ್ನು ಸಮೀಕ್ಷೆಗಳು ಸೂಚಿಸುತ್ತಿವೆ.
ಯಾವುದಕ್ಕೂ ಬದಲಾಗಲಿಲ್ಲ ಜನರು
ಅಧ್ಯಯನಗಳ ಪ್ರಕಾರ ಮೂರು ತಿಂಗಳ ಹಿಂದೆ ಇದ್ದ ಜನಾಭಿಪ್ರಾಯದಲ್ಲಿ ಈಗ ಅಂಥ ಏನು ವ್ಯತ್ಯಾಸ ಇಲ್ಲ. ಮೂರೂ ಪಕ್ಷಗಳ ಜನಬೆಂಬಲ ಬಹುತೇಕ ಯಥಾಸ್ಥಿತಿಯಲ್ಲಿದೆ. ಬೆಂಗಳೂರಿನಲ್ಲಿ ಬಿದ್ದ ಮಳೆ ಮತ್ತು ಪ್ರವಾಹ ಪರಿಸ್ಥಿತಿ, ಟ್ರಾಫಿಕ್ ಕಿರಿಕಿರಿಯು ಜನರನ್ನು ಆಕ್ರೋಶಕ್ಕೆ ದೂಡಿದಂತೆ ಕಾಣುತ್ತಿಲ್ಲ. ರೈತರು, ಅಂಗನವಾಡಿ ಕಾರ್ಯಕರ್ತೆಯರು, ಬಿಎಂಟಿಸಿ ನೌಕರರು ಹೀಗೆ ವಿವಿಧ ವರ್ಗಗಳಿಂದ ನಡೆದ ಸಾಲು ಸಾಲು ಪ್ರತಿಭಟನೆಗಳು ಜನರಿಗೆ ಹೆಚ್ಚು ಮುಖ್ಯ ಎನಿಸಿಲ್ಲ.
ಹಿಂದೂ ಮುಸ್ಲಿಂ ಹತ್ಯೆ ಘಟನೆಗಳು, ಹಿಜಾಬ್ ಪ್ರಕರಣ, ಭ್ರಷ್ಟಾಚಾರ ಇತ್ಯಾದಿ ಯಾವ ವಿಚಾರವೂ ಜನಾಭಿಪ್ರಾಯವನ್ನು ರೂಪಿಸಲು ವಿಫಲವಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತಗಳು ಬಹುತೇಕ ಹಾಗೇ ಅಂಟಿಕೊಂಡಿವೆ ಎಂಬುದು ಸದ್ಯಕ್ಕೆ ಕಾಣುವ ಟ್ರೆಂಡ್.
ಭ್ರಷ್ಟಾಚಾರ ಪ್ರಮುಖ ವಿಷಯ
ಸದ್ಯ ಸಮೀಕ್ಷೆಗಳು ನೀಡಿರುವ ಸುಳಿವನ್ನು ಅರ್ಥೈಸಿಕೊಳ್ಳುವುದಾದರೆ ಜನರಿಗೆ ಹೆಚ್ಚು ಮುಖ್ಯವೆನಿಸಿರುವುದು ಭ್ರಷ್ಟಾಚಾರ ವಿಚಾರ. ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಟ್ವೆಂಟಿ ಪರ್ಸೆಂಟ್ ಸರಕಾರ ಎಂದು ಆರೋಪಿಸುತ್ತಿತ್ತು. ಈಗ ಕೆಲ ತಿಂಗಳ ಹಿಂದೆ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. 40 ಪರ್ಸೆಂಟ್ ಕಮಿಷನಲ್ ಸರಕಾರ ಎಂದು ಕಾಂಗ್ರೆಸ್ ಆಗಾಗ್ಗೆ ತಿವಿಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಟ್ರೆಂಡಿಂಗ್ ಆಗಬಹುದು. ಬಿಜೆಪಿ ಸರಕಾರ ಕೂಡ ಹಿಂದಿನ ಕಾಂಗ್ರೆಸ್ ಸರಕಾರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಕೆದಕುವ ನಿರ್ಧಾರಕ್ಕೆ ಬಂದಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಆಮ್ ಆದ್ಮಿ ಪಕ್ಷ ತನ್ನ ಪ್ರಚಾರ ಕೈಗೊಂಡಿದೆ.
(ಒನ್ಇಂಡಿಯಾ
ಸುದ್ದಿ)