ಶಿವಮೊಗ್ಗದಲ್ಲಿದೆ ನಳಮಹಾರಾಜ ಪೋಷಿಸಿ ಬೆಳೆಸಿದ್ದ "ಕರಿಬೇವಿನ ಕಾಡು"
ಶಿವಮೊಗ್ಗ, ಜನವರಿ 30: ದಕ್ಷಿಣ ಭಾರತದ ಸಾವಿರಾರು ಹಳ್ಳಿಗಳಲ್ಲಿ ಪಂಚ ಪಾಂಡವರಿಗೆ ಸಂಬಂಧಿಸಿದ ಹಲವಾರು ರೋಚಕ ಕಥೆಗಳು ಸಿಗುತ್ತವೆ. ಹಾಗೆಯೇ ಪಶ್ಚಿಮ ಘಟ್ಟದ ಹೃದಯವಾಗಿರುವ ಶಿವಮೊಗ್ಗ ಕೂಡ ಇಂಥ ಕಥೆಯೊಂದಕ್ಕೆ ಸಾಕ್ಷಿಯಾಗಿದೆ.
ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸ್ವಲ್ಪ ಕಾಲ ಶಿವಮೊಗ್ಗದ ಹೊಸನಗರದ ಶರಾವತಿ ದಂಡೆಯ ಮೇಲೆ ವಾಸವಿದ್ದರು ಎಂದು ಪುರಣಗಳಲ್ಲಿ ಉಲ್ಲೇಖವಿದೆ. ಪಾಂಡವರು ವನವಾಸಕ್ಕೆ ಹೊಸನಗರದಲ್ಲಿ ವಾಸ್ತವ್ಯ ಹೂಡಿದ್ದ ಇತಿಹಾಸದ ಕಥೆ ಇಲ್ಲಿದೆ...
ನಳಮಹಾರಾಜ ನಿರ್ಮಿಸಿದ ಕರಿಬೇವಿನ ಕಾಡು
ಹೊಸನಗರದ ಹತ್ತಿರ ಇರುವ ಪಟ್ಟುಗುಪ್ಪ ಸಮೀಪ ಹರಿದ್ರಾವತಿ ಮತ್ತು ಶರಾವತಿ ನದಿಗಳು ಸೇರುವ ಪುಣ್ಯ ಸಂಗಮ ಕ್ಷೇತ್ರದ ಅಕ್ಕಪಕ್ಕದ ಅರಣ್ಯ ಪ್ರದೇಶಗಳಲ್ಲಿ ಪಾಂಡವರು ವಾಸಿಸಿದರು ಎಂದು ಸ್ಥಳ ಪುರಾಣಗಳಿಂದ ತಿಳಿದು ಬರುತ್ತದೆ. ಭಾರತದ ಸರ್ವಶ್ರೇಷ್ಠ ನಳನಾಗಿದ್ದ ಭೀಮಸೇನ ತನ್ನ ಪಕ್ವಾನಗಳು ರುಚಿಕರವಾಗಿರಲು ಅದಕ್ಕೆ ಸ್ವಾಭಾವಿಕವಾಗಿ ಕರಿಬೇವಿನ ಸೊಪ್ಪು ಹಾಕುತ್ತಿದ್ದ. ಅದಕ್ಕಾಗೇ ಇಲ್ಲಿದ್ದಾಗ ಕರಿಬೇವಿನ ಸಸಿಗಳನ್ನು ನೆಟ್ಟಿದ್ದ ಎಂದು ಹೇಳಲಾಗುತ್ತದೆ.
ಒಂದೇ ಗುಡಿಯಲ್ಲಿ ಕಾಳಿ, ಈಶ್ವರ; ಶಿವಮೊಗ್ಗದಲ್ಲಿದೆ ಈ ಅಪರೂಪದ ದೇಗುಲ
ಕಾಲಾಂತರದಲ್ಲಿ ಹರಡಿಕೊಂಡ ಕರಿಬೇವು
ಭೀಮಸೇನ ತನ್ನ ಹಸ್ತದಿಂದ ನೀರು ಹಾಕಿ ಪೋಷಿಸಿದ ಕರಿಬೇವು ಕಾಲಾಂತರದಲ್ಲಿ ಎಲ್ಲೆಲ್ಲೂ ಹರಡಿಕೊಂಡಿತು. ಅದು ಕಾಲದಿಂದ ಕಾಲಕ್ಕೆ ನೂರಾರು ಹೆಕ್ಟೇರುಗಳಷ್ಟು ತುಂಬಿತು. ಇದೀಗ ಅರಣ್ಯ ಪ್ರದೇಶದ ಬಹುತೇಕ ಜಾಗ ಕರಿಬೇವಿನ ಕಾಡಾಗಿ ಪರಿವರ್ತನೆ ಹೊಂದಿದೆ.
ಕಾಡಿನಲ್ಲೆಲ್ಲ ಕರಿಬೇವಿನ ವಾಸನೆ
ಇಂದಿಗೂ ಆ ಕಾಡಿನೊಳಗೆ ಹೋದ ತಕ್ಷಣ ಕರಿಬೇವಿನ ಪರಿಮಳ ಮೂಗಿಗೆ ಬಡಿಯುತ್ತದೆ. ಆ ಸುವಾಸನೆ ಒಂದು ಕ್ಷಣ ಮೈ ಜುಂ ಅನ್ನಿಸುತ್ತದೆ. ಎಲ್ಲಿ ನೋಡಿದರೂ ನಮಗೆ ಕಾಣಿಸುವುದು ಕೇವಲ ಕರಿಬೇವಿನ ಮರ ಮತ್ತು ನೆಲದಲ್ಲಿ ಹರಡಿಕೊಂಡ ಸಾವಿರಾರು ಸಸ್ಯಗಳು. ಇಂತಹ ಅದ್ಭುತ ಅರಣ್ಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ಅಜಯ್ ಕುಮಾರ್ ಶರ್ಮ.
ಮಲೆನಾಡಿನ ಹಸಿರಿನ ಮಧ್ಯೆ ಪಾತರಗಿತ್ತಿಗಳ ಚಿತ್ತಾರ ಲೋಕ
ಕ್ಷೀಣಿಸುತ್ತಿರುವ ಕರಿಬೇವು
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ನಂತರ ಕರಿಬೇವಿನ ಕಾಡು ಕ್ಷೀಣಿಸಲು ಆರಂಭಿಸಿತು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ಒತ್ತುವರಿ ಆಗಿದ್ದರಿಂದ ಗೊತ್ತೇ ಆಗದಂತೆ ಕರಿಬೇವಿನ ಕಾಡು ಇಂಚಿಂಚೇ ಕಡಿಮೆಯಾಗುತ್ತಾ ಸಾಗಿದೆ. ಇಡೀ ಅರಣ್ಯ ತುಂಬಿದ್ದ ಕರಿಬೇವು ಸ್ವಲ್ಪ ಸ್ವಲ್ಪವೇ ಕಿರಿದುಗೊಳ್ಳುತ್ತಿದೆ. ಐತಿಹಾಸಿಕ ಭೀಮಸೇನನ "ಕರಿಬೇವಿನ ಕಾಡು" ಕೇವಲ ನೂರಾರು ಎಕರೆಗೆ ಸೀಮಿತವಾಗಿದೆ.