ಡಿಸೆಂಬರ್ 16ರಿಂದ ಪ್ರೇಮಿಗಳ ಕೆರೆಯಲ್ಲಿ ಉತ್ಸವ
ನಿಸರ್ಗ ವೈವಿಧ್ಯದೊಂದಿಗೆ ಸುಂದರ ವಾತಾವರಣದಲ್ಲಿ ನಿರ್ಮಾಣಗೊಂಡು ಸದಾ ಪ್ರವಾಸಿಗರು ಮತ್ತು ಪ್ರೇಮಿಗಳ ನೆಚ್ಚಿನ ತಾಣವಾಗಿರುವ ಮೈಸೂರಿನ ಕಾರಂಜಿ ಕೆರೆಯಲ್ಲಿ ಡಿಸೆಂಬರ್ 16 ಮತ್ತು 17ರಂದು ಕೆರೆ ಉತ್ಸವ ಆಚರಿಸಲು ಮೈಸೂರು ಮೃಗಾಲಯವು ಮುಂದಾಗಿದ್ದು, ಆ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ಕಾರಂಜಿ ಕೆರೆಯ ಮಹತ್ವವನ್ನು ಜನತೆಗೆ ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಉಪನ್ಯಾಸ, ಸಸ್ಯಸಂಕುಲ, ಚಿಟ್ಟೆ ವನಗಳ ಮಹತ್ವ, ಪಕ್ಷಿಗಳ ಪರಿಚಯ, ಕೆರೆ ಸಂರಕ್ಷಿಸುವ ಕುರಿತಂತೆ ಮಾಹಿತಿ ನೀಡಲಾಗುತ್ತದೆ.
ಜಾಗೃತಿಗೆ ವಿನೂತನ ಪ್ರಯತ್ನ
ಮೊದಲಿಗೆ ಹೋಲಿಸಿದರೆ ಇತ್ತೀಚೆಗೆ ನಗರೀಕರಣದ ಭರದಲ್ಲಿ ಹಲವು ಕೆರೆಗಳು ಅಸ್ತಿತ್ವ ಕಳೆದುಕೊಂಡು ಬಡಾವಣೆ, ಉದ್ಯಾನವನಗಳಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಕೆರೆಗಳ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಅಂತರ್ಜಲ ಕಾಪಾಡುವ ಕುರಿತು ತಿಳಿ ಹೇಳಬೇಕಾಗಿದೆ. ಹೀಗಾಗಿ ಪ್ರಥಮ ಬಾರಿಗೆ ಕಾರಂಜಿ ಕೆರೆ ಉತ್ಸವ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.
ಪ್ರವಾಸಿಗರ ಸೆಳೆಯುವ ಮೈಸೂರಿನ ಪ್ರವಾಸಿತಾಣಗಳು
ಕಾರಂಜಿ ಕೆರೆಗೆ ಜೀವಕಳೆ
ಕಳೆದ ಬೇಸಿಗೆಯಲ್ಲಿ ಕಾರಂಜಿಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಕೆರೆಯಲ್ಲಿದ್ದ ಹೂಳನ್ನು ತೆಗೆಯಲಾಗಿದ್ದು, ಈ ಬಾರಿ ಉತ್ತಮ ಮಳೆಯಾದ ಕಾರಣ ಕಾರಂಜಿ ಕೆರೆಗೆ ಜೀವಕಳೆ ಬಂದಿದ್ದು, ಹಲವು ಜಲಚರಗಳು ಆಶ್ರಯ ಪಡೆದಿವೆ. ಜತೆಗೆ ಪ್ರವಾಸಿಗರಿಗೆ ದೋಣಿ ವಿಹಾರಕ್ಕೂ ಅವಕಾಶ ಸಿಕ್ಕಿದೆ. ಕೆರೆಯಲ್ಲಿ ಹೆಸರಿಗೆ ತಕ್ಕಂತೆ ಕಾರಂಜಿ ನಿರ್ಮಾಣ ಮಾಡಿ ಆಕರ್ಷಿಸಲಾಗುತ್ತಿದೆ.
1976ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಕೆರೆ
ನಗರ ಬೆಳೆದಂತೆಲ್ಲಾ ಸುತ್ತಮುತ್ತಲಿನ ಕೊಳಕು, ಹೂಳು ತುಂಬಿ ಕೆರೆ ಕಲ್ಮಶವಾಯಿತು. ಕೆರೆಯ ಸುತ್ತಲೂ ಬೆಳೆದು ನಿಂತ ಮರ ಗಿಡ ಪೊದೆಗಳಲ್ಲಿ ದೂರದಿಂದ ಬಂದ ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುತ್ತಿದ್ದವು. ಗಣೇಶ ಚತುರ್ಥಿ ಸಂದರ್ಭ ಗಣಪತಿಯ ವಿಸರ್ಜನೆಗೆ ಇತ್ತ ಬಂದರೆ, ಉಳಿದಂತೆ ಹಳ್ಳಿಯ ರೈತರು ದನ ಮೇಯಿಸಲು ಬರುತ್ತಿದ್ದರು. ಆದರೆ ತನ್ನದೇ ನಿಸರ್ಗ ಚೆಲುವನ್ನು ಮೈಗೂಡಿಸಿಕೊಂಡಿದ್ದ ಈ ಕೆರೆ 1976ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಸುಮಾರು 90 ಎಕರೆಗಿಂತಲೂ ಹೆಚ್ಚಿನ ವಿಸ್ತಾರ ಹೊಂದಿರುವ ಕೆರೆಯನ್ನು ಅಭಿವೃದ್ಧಿಗೊಳಿಸಿ ಅದನ್ನು ಒಂದು ವಿಹಾರ ತಾಣವನ್ನಾಗಿ ರೂಪುಗೊಳಿಸುವ ಆಲೋಚನೆ ಯಾರಿಗೂ ಬಂದಿರಲಿಲ್ಲ. ಆ ನಂತರದ ವರ್ಷಗಳಲ್ಲಿ ಕೆರೆಯ ಬಳಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್ಗೆ ಜೀವ ತುಂಬಿದರು.
ಭರಚುಕ್ಕಿಯಲ್ಲಿ ಬಯೋ ಡೈವರ್ಸಿಟಿ ಪಾರ್ಕ್; ಏನೇನೆಲ್ಲಾ ಇರುವುದಿಲ್ಲಿ?
ಕೆರೆಗೊಂದು ಮರುಹುಟ್ಟು
ಬಳಿಕ ಕೆರೆ ಅಭಿವೃದ್ಧಿಯತ್ತ ಸಾಗತೊಡಗಿತು. ಕಲುಷಿತ ನೀರು, ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದ ಕೆರೆಗೊಂದು ಮರುಹುಟ್ಟನ್ನು ಮೃಗಾಲಯ ಪ್ರಾಧಿಕಾರ ನೀಡಿತು. ಪ್ರಾಧಿಕಾರದ ಆಗಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಮನೋಜ್ಕುಮಾರ್ ಅವರು ಕಾರಂಜಿಕೆರೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಕೆರೆಯ ತುಂಬಾ ತುಂಬಿದ್ದ ಹೂಳನ್ನೆಲ್ಲಾ ಹೊರ ತೆಗೆದರು. ಕೆರೆಗೆ ಬರುವ ಕೊಳಚೆ ನೀರನ್ನೆಲ್ಲಾ ತಪ್ಪಿಸಲು ಸಾಧ್ಯವಾಗದ ಕಾರಣ ಅದನ್ನು ಇಂಗುಗುಂಡಿಯ ಮೂಲಕ ಇಂಗಿಸಿ ತಿಳಿನೀರು ಮಾತ್ರ ಕೆರೆಯತ್ತ ಹರಿಯುವಂತೆ ಮಾಡಿದರು. ಕೆರೆಗಳ ಮಧ್ಯೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು. ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿದರು. ಕೆರೆಯ ದಂಡೆಯಲ್ಲಿ ಸುಂದರ ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು ನಿರ್ಮಿಸಿದರು. ಕೆರೆಯ ಸುತ್ತಲೂ ಏರಿ ನಿರ್ಮಿಸಿ ಸುಂದರವಾದ ಆಕರ್ಷಣೀಯವಾದ ಪ್ರವೇಶ ದ್ವಾರವನ್ನು ನಿರ್ಮಿಸಲಾಯಿತು. ಹೀಗೆ ನವೀಕರಣಗೊಂಡ ಕೆರೆಗೆ ಕಾರಂಜಿ ಪ್ರಕೃತಿ ಉದ್ಯಾನವನ ಎಂಬ ಹೆಸರನ್ನಿಟ್ಟು 2004 ಜನವರಿ 25 ರಂದು ಪ್ರವಾಸಿಗರ ವೀಕ್ಷಣೆಗೆ ಅನುವುಮಾಡಿಕೊಡಲಾಯಿತು. ಅಲ್ಲಿಂದ ಇಲ್ಲಿಯ ತನಕ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಾ ಬಂದಿದೆ.
ಇದೀಗ ಕೆರೆ ಉತ್ಸವ ಮಾಡುವ ಮೂಲಕ ಕಾರಂಜಿ ಕೆರೆಗೆ ಮತ್ತಷ್ಟು ಮತ್ತಷ್ಟು ಮೆರಗು ನೀಡಲಾಗುತ್ತಿರುವುದು ಸಂತಸದ ವಿಷಯವಾಗಿದೆ.