ಪೂರ್ಣಚಂದ್ರ ತೇಜಸ್ವಿ ಅವರ ನಾನು ಮೆಚ್ಚಿದ ಕೃತಿಗಳು
ತೇಜಸ್ವಿ ಅವರು ಇಂದು ಬದುಕಿದ್ದು, 'ಸರ್, ನಾವು ನಿಮ್ಮ ಹುಟ್ಟುಹಬ್ಬ ಆಚರಿಸ್ತೇವೆ' ಎಂದು ಯಾರಾದರೂ ಅವರ ಬಳಿ ಹೇಳಿದ್ದರೆ ಕಪಾಳಕ್ಕೆ ಭಾರಿಸಿ ಕಳಿಸುತ್ತಿದ್ದರು. ಅವರಿಗೆ ಇಂತಹಾ ವ್ಯಕ್ತಿ ಭಕ್ತಿಗಳು, ಸಾಮಾಜಿಕ ಶಿಷ್ಟಾಚಾರಗಳು ಅಪಥ್ಯ. ಆದರೆ ಅವರು ಇಂದು ಇಲ್ಲ. ಹಾಗಾಗಿಯೇ ಭಯವಿಲ್ಲದೆ ಅವರ ಹುಟ್ಟುಹಬ್ಬ ಆಚರಿಸಬಹುದು. ತೇಜಸ್ವಿ ಬದುಕಿದ್ದರೆ ಇಂದಿಗೆ 80 ವರ್ಷ ವಯಸ್ಸಾಗಿರುತ್ತಿತ್ತು.
ಜೀವ ಜಗತ್ತಿನ ಬಗ್ಗೆ ಕುತೂಹಲ ಕೆರಳಿಸಿದ ಆ ಕಾಡಿನ ಋಷಿಯ ಹುಟ್ಟುಹಬ್ಬದಂದು ಅವರ ಪುಸ್ತಕಗಳ ಮೂಲಕ ಅವರನ್ನು ನೆನೆಸಿಕೊಳ್ಳುವುದೇ ಸರಿಯಾದ ಆಚರಣೆ. ಹಾಗಾಗಿ, ನಾನು ಮೆಚ್ಚಿದ ಅವರ ಹಲವು ಕೃತಿಗಳಲ್ಲಿ ಕೆಲವುಗಳ ಬಗ್ಗೆ ತುಣುಕಾಗಿಯಷ್ಟೆ ಇಲ್ಲಿ ಬರೆಯುತ್ತಿದ್ದೇನೆ. ಇದನ್ನು ವಿಮರ್ಶೆ ಎಂದು ಯಾವ ಕಾರಣಕ್ಕೂ ಪರಿಗಣಿಸಲೇ ಬಾರದು ಎಂದು ನನ್ನ ಮನವಿ. ಅರೆಬೆಂದ ಬರಹಗಾರನೊಬ್ಬನ, ಅಭಿಮಾನದ ಅಕ್ಷರಗಳು ಅಷ್ಟೆ ಇವು.
ಬಾಲ್ಯವೆಂದರೆ ಮಳೆ, ಅಲೆದಾಟ, ಆಟೋಟ ಮತ್ತು ಅಜ್ಜಿಯ ಪ್ರೀತಿ!
'ಕರ್ವಾಲೊ' ತೇಜಸ್ವಿ ಅವರ ಬಹು ಚರ್ಚಿತ ಕೃತಿ. ಪ್ರೀತಿ, ಆದರ ಸಂಪಾದಿಸಿದ ಕೃತಿ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಪುಸ್ತಕದಲ್ಲಿ ವಿಜ್ಞಾನಿ ಕರ್ವಾಲೊ ಮತ್ತು ಅವರ ಪ್ರಿಯ ಶಿಷ್ಯ ಮಂದಣ್ಣನ ಮೂಲಕ ಕಾಡನ್ನು, ಜೀವ ಜಗತ್ತನ್ನು ಎರಡು ಪೂರ್ಣ ಭಿನ್ನ ದೃಷ್ಟಿಕೋನದಲ್ಲಿ ಪರಿಚಯಿಸಿದ್ದಾರೆ. ಆದರೆ ಅಂತಿಮ ಬಿಂದುವಲ್ಲಿ, ಅವರೆಲ್ಲಾ ಅಷ್ಟು ಹುಡುಕಿದ ಹಾರು ಓತಿ ಕಾಡಿನ ಅಂನಂತದೊಳಕ್ಕೆ ಹಾರಿ ಮರೆಯಾಗಿ ಪ್ರಕೃತಿ ಮಾನವನ ಕೈಗೆ ಎಂದೂ ಎಟುಕದ ಅನಂತ ದಿವ್ಯ ನಿಗೂಢತೆಗಳ ಆಗರ ಎಂಬುದನ್ನು ಸೂಚ್ಯಗೊಳಿಸುತ್ತಾರೆ.
ಹೆಸರಿಗೆ ದೊಡ್ಡವರು ಎನಿಸಿಕೊಂಡ ಯಾರೊಂದಿಗೂ ಬೆರೆಯದ ಕರ್ವಾಲೊ, ಊರ ಮಂದಿಯಿಂದೆಲ್ಲಾ ಮಂದ ಬುದ್ಧಿಯವ ಎಂದು ಮೂದಲಿಸಿಕೊಳ್ಳುವ ಮಂದಣ್ಣನನೊಟ್ಟಿಗೆ ವಿಶೇಷ ಬಾಂಧವ್ಯ ಹೊಂದಿರುತ್ತಾರೆ. ಕರ್ವಾಲೊರ ವಿಜ್ಞಾನದ ದೃಷ್ಠಿ, ಮಂದಣ್ಣನ ಗ್ರಾಮ್ಯ ದೃಷ್ಠಿಕೋನದಲ್ಲಿ ಕಾಡನ್ನು ಓದುಗರಿಗೆ ಪರಿಚಯಿಸುವ ತೇಜಸ್ವಿ ಅವರು ಓದುಗರ ಮುಂದೆ ವಿಶಾಲ ಜಗತ್ತೊಂದನ್ನು ತೆರೆದಿಡುತ್ತಾರೆ.
ಪೂರ್ಣಚಂದ್ರ ತೇಜಸ್ವಿ 81ನೇ ಹುಟ್ಟುಹಬ್ಬ, ವಿವಿಧೆಡೆ ವಿಶಿಷ್ಟ ಕಾರ್ಯಕ್ರಮ
ಕರ್ವಾಲೊ ಕೃತಿಯಲ್ಲಿ ಬರುವ ಮಂದಣ್ಣ, ಕರ್ವಾಲೊ, ಪ್ರಭಾಕರ, ಬಿರಿಯಾನಿ ಕರಿಯಪ್ಪ, ಪ್ಯಾರ, ಕಿವಿ, ಎಲ್ಲ ಪಾತ್ರಗಳೂ ಓದುಗನಿಗೆ ಹತ್ತಿರವಾಗಿ ಬಿಡುತ್ತವೆ. ಎಲ್ಲ ಪಾತ್ರಗಳೊಂದಿಗೆ ಓದುಗ ಗೆಳೆತನ ಸಾಧಿಸಿಕೊಂಡು ಬಿಡುತ್ತಾನೆ ಅದು ತೇಜಸ್ವಿ ಅವರ ಬರಹಕ್ಕಿರುವ ಲಾಲಿತ್ಯ. ಕಥನದಲ್ಲಿ ಮೂರನೇ ವ್ಯಕ್ತಿಯಾಗಿ ನಿಲ್ಲುವ ತೇಜಸ್ವಿ ಘಟನೆಗಳನ್ನು ವಿಶ್ಲೇಷಿಸಿ, ಅದಕ್ಕೊಂದು ಹೊಸ ಅರ್ಥವನ್ನು ದಯಪಾಲಿಸುತ್ತಾ ಕತೆ ಹೇಳುತ್ತಾರೆ.
ಕರ್ವಾಲೊ ಕೃತಿಯ ಬಹುಮುಖ್ಯ ಧಾತು ಎಂದು ನನಗನಿಸುವುದು, ಅಲ್ಲಿನ ಬಹುತೇಕ ಪಾತ್ರಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಪರಿಮಿತ ಕುತೂಹಲ. ಆ ಕುತೂಹಲವೇ ಅವರನ್ನೆಲ್ಲಾ ಕಾಡಿನ ಒಳಕ್ಕೆ ಕರೆದುಕೊಂಡು ಹೋಯಿತು. ಕಾಲಗಳ ನಡುವಿನ ಕೊಂಡಿಯಂತೆ ಕಾಣುವ ಹಾರುವ ಓತಿಯ ದರ್ಶನ ಮಾಡಿಸಿತು ಆ ಮೂಲಕ ಅನೂಹ್ಯವಾದ ಅನುಭವವೊಂದರ ಅನುಭವವನ್ನು ತಮಗಾಗಿಸಿತು. ಕೃತಿಯ ಮೂಲಕ ತೇಜಸ್ವಿ ಅವರು ಓದುಗರಲ್ಲೂ ಆ ಕುತೂಹಲವನ್ನು ಕೆಣಕಲು ನೋಡುತ್ತಿದ್ದಾರೆ ಎನಿಸುತ್ತದೆ. ಕಣ್ಣಿಗೆ ಕಂಡದ್ದನ್ನೆಲ್ಲಾ ಕುತೂಹಲದಿಂದ ನೋಡುತ್ತಿದ್ದ ತೇಜಸ್ವಿ, ಓದುಗರನ್ನೂ ಕುತೂಹಲತೆಗೆ ಪ್ರೇರಿಪಿಸುತ್ತಾರೆ.
ನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿ
ನಾನು ಮತ್ತೆ ಮತ್ತೆ ಓದಿದ ತೇಜಸ್ವಿ ಅವರ ಮತ್ತೊಂದು ಪುಸ್ತಕ 'ಪರಿಸರದ ಕತೆ' ತಮ್ಮ ಸುತ್ತ-ಮುತ್ತ ನಡೆದ ಘಟನೆಗಳನ್ನೇ ತೇಜಸ್ವಿ ಅವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಇಲ್ಲಿ. 'ಪರಿಸರದ ಕತೆ' ಪುಸ್ತಕ ತೇಜಸ್ವಿ ಅವರಿದ್ದ ಪರಿಸರದ ಪರಿಚಯವನ್ನು ಓದುಗರಿಗೆ ಮಾಡಿಸುತ್ತದೆ. ಜೊತೆಗೆ ಮಲೆನಾಡ ಸಂಸ್ಕೃತಿ, ಜನರ ಜೀವನದ ದರ್ಶನವೂ ಸಾಧ್ಯವಾಗಿಸುತ್ತದೆ.
ಎಂಗ್ಟನ ಪುಂಗಿ, ಮೂಲಿಕೆ ಬಳ್ಳಿ ಸುತ್ತಾ, ಮುಳ್ಳುಹಂದಿ ಪ್ರಸಂಗ, ಕಿವಿಯೊಂದಿಗೆ ಒಂದು ದಿನ, ಮಗಳೊಂದಿಗೆ ಹಾವು ಹೊಡೆದದ್ದು, ಉಡ ಹಿಡಿದು ಮರಕ್ಕೆ ಕಟ್ಟಿದ್ದು, ಅಬ್ಬಾ ಒಂದೋ-ಎರಡೋ. ನಗರ ಬದುಕಿನಲ್ಲಿ ಸಿಕ್ಕಿ ನರಳುತ್ತಿರುವ ನಮ್ಮಂತಹವರಿಗೆ ಇಂತಹಾ ಘಟನೆಗಳನ್ನು ನಮ್ಮ ಜೀವನದಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಪರಿಸರದ ಕತೆ ಓದಿದರೆ ತೇಜಸ್ವಿ ಅವರ ಬದುಕಿನ ಶೈಲಿಯ ಬಗ್ಗೆ ಅಸೂಯೆ ಉಂಟಾಗುತ್ತದೆ ಅವರಂತೆ ನಮಗೆ ಬದುಕಲಾಗಲಿಲ್ಲವೇ ಎಂದು ವ್ಯಥೆಯಾಗುತ್ತದೆ.
ಅಂದಹಾಗೆ,
ಅವರೇ
ಹೇಳಿದ್ದಾರೆ,
'ನಾವು
ಬಯಸಿದಂತೆ
ಬದುಕುವ
ಸ್ವಾತಂತ್ರ್ಯ
ಯಾವತ್ತೂ
ಭಯಂಕರ
ಹೋರಾಟದ
ಫಲವೇ
ಹೊರತು
ಸುಲಭಕ್ಕೆ
ಸಿಗುವುದಲ್ಲ'.
ಅವರ
ಮಾತಿನಂತೆ
ನಮ್ಮಿಷ್ಟದಂತೆ
ಸರಿಯಾದ
ಮಾರ್ಗದಲ್ಲಿ
ಬದುಕಲು
ಹೋರಾಡೋಣ,
ನಾವೂ
ಅವರಂತೆ
ಅಪರಿಮಿತ
ಕುತೂಹಲವನ್ನು
ಮೈಗಂಟಿಸಿಕೊಳ್ಳೋಣ.
'ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ' ತೇಜಸ್ವಿ ಅವರ ಈ ಮಾತನ್ನು ನೆನೆಸಿಕೊಳ್ಳುತ್ತಾ ಅವರ ಹುಟ್ಟುಹಬ್ಬದ ದಿನ, ಅವರು ಅತಿಯಾಗಿ ಪ್ರೀತಿಸುತ್ತಿದ್ದ ಪರಿಸರವನ್ನು ಉಳಿಸುವ ಪಣ ತೊಡೋಣ. ಪರಿಸರ ಉಳಿಸಿ ಆ ಮೂಲಕ ತೇಜಸ್ವಿ ಅವರನ್ನು ಅಮರರನ್ನಾಗಿಸೋಣ.