ಕನ್ನಡವೇ ಜಾತಿ, ಧರ್ಮ, ದೇವರು, ಒನ್ಇಂಡಿಯಾ ಸಂದರ್ಶನದಲ್ಲಿ ನಾಡೋಜ ಜೋಶಿ ಹೀಗಂದ್ರು
ಬೆಂಗಳೂರು, ಏಪ್ರಿಲ್ 25: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಾಡೋಜ ಡಾ. ಮಹೇಶ್ ಜೋಶಿಯವರು ಒನ್ ಇಂಡಿಯಾ ಕನ್ನಡದ ಜೊತೆ ತಮ್ಮ ಕನಸಿನ ಯೋಜನೆಗಳನ್ನು ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಸಾಪವನ್ನು ಜನ ಸಾಮಾನ್ಯರ ಪರಿಷತ್ತು ಮಾಡುವ ಕನಸನ್ನು ಮತ್ತು 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಒನ್ಇಂಡಿಯಾದ ಪ್ರತಿನಿಧಿ ಪುಟ್ಟರಾಜು ಜೊತೆ ಮಾತನಾಡಿದ್ದಾರೆ.
ಹಾವೇರಿಯಲ್ಲಿ ಸೆ.23 ರಿಂದ 25 ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಪ್ರತಿನಿಧಿ: ದೂರದರ್ಶನದಲ್ಲಿ ಮಹಾನಿರ್ದೇಶಕರಾಗಿ, ದೂರದರ್ಶನವನ್ನು ಸಮೀಪದರ್ಶನ ಮಾಡಿದ್ರು, ಇದೀಗ ಕಸಾಪ ಅಧ್ಯಕ್ಷರಾಗಿ ಕಸಾಪವನ್ನು ಜನಸಾಮಾನ್ಯರ ಪರಿಷತ್ತು ಮಾಡುತ್ತೇನೆ ಎಂಬ ತಮ್ಮ ಚುನಾವಣೆಯ ಭರವಸೆ ಏನಾಯ್ತು?
ಮಹೇಶ್ ಜೋಶಿ: ಇತಿಹಾಸ ಸೃಷ್ಟಿ ಮಾಡಿ ದಾಖಲೆ ಅಂತರದಲ್ಲಿ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ಒನ್ಇಂಡಿಯಾ ಮೂಲಕ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಜನಸಾಮಾನ್ಯರ ಪರಿಷತ್ತು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಕಸಾಪ ಸದಸ್ಯರಾಗಲು 1000 ರೂ ಶುಲ್ಕವಿತ್ತು ಅದನ್ನು ಕಡಿತಗೊಳಿಸುತ್ತಿದ್ದೇವೆ. ಕನ್ನಡ ನುಡಿ ಪತ್ರಿಕೆ ತರುತ್ತಿದ್ದೇವೆ ಅದನ್ನು ಆ್ಯಪ್ ಮೂಲಕ ತಲುಪಿಸುವ ಕಾರ್ಯ ಮಾಡುತ್ತೇವೆ. ಪತ್ರಿಕೆ ಮುದ್ರಣದಿಂದ ದುಂದುವೆಚ್ಚದ ಜೊತೆಗೆ ಪರಿಸರ ನಾಶವಾಗುತ್ತೆ ಪರಿಸರ ಉಳಿಸುವ ಕೆಲಸವಾಗಬೇಕು.
ಪ್ರತಿನಿಧಿ: ಕಸಾಪ ಪುಸ್ತಕ ಪ್ರಕಟಣೆ ಮುಖ್ಯವಾಗಿ ಪುಸ್ತಕರೂಪದಲ್ಲಿ ಇರಬೇಕಲ್ಲವೇ? ಮನೆಗೊಂದು ಪುಸ್ತಕ ತಲುಪಿಸುವ ಕೆಲಸ ಮಾಡಬಹುದಲ್ಲವೇ?
ಮಹೇಶ್ ಜೋಶಿ: ಸ್ವಲ್ಪ ಒಪ್ಪಬಹುದು ಗ್ರಂಥ ರೂಪದಲ್ಲಿರುವ ಮೌಲಿಕ ಪುಸ್ತಕ ಪ್ರಕಟಿಸುತ್ತೇವೆ. ಡಿಜಿಟಲ್ ಮೂಲಕವೂ ಪುಸ್ತಕ ದೊರೆಯುವುದರಿಂದ ಯಾರಿಗೆ ಬೇಕು ಅವರು ಡೌನ್ ಲೋಡ್ ಮಾಡಿಕೊಳ್ಳಬಹುದು. ಕನ್ನಡ ನುಡಿ ಪತ್ರಿಕೆ ಇ - ಪುಸ್ತಕದ ಡಿಜಿಟಲ್ ರೂಪದಲ್ಲಿ ಕಳುಹಿಸುತ್ತೇವೆ. ಹಳೇ ಬೇರು ಹೊಸ ಚಿಗುರು ರೀತಿ ಪರಿಷ್ಕರಣೆ ಮಾಡುತ್ತೇವೆ.
ಪ್ರತಿನಿಧಿ: ಜನ ಸಾಮಾನ್ಯರ ಪರಿಷತ್ತು ಹಿಂದೆ ಇರಲಿಲ್ವಾ?
ಮಹೇಶ್ ಜೋಶಿ: ನಾನು ದೂರದರ್ಶನದಲ್ಲಿದ್ದಾಗಲೂ ಅದಕ್ಕಿಂತ ಹಿಂದೆ ಅನೇಕ ನಿರ್ದೇಶಕರು ಇದ್ದರು. ಕಸಾಪ ಎಂದಾಗ ಅದೇ ರೀತಿ. ಇದು ಸಾಹಿತಿಗಳ ಪರಿಷತ್ತು. ಆಸ್ಮಿತೆಯ ಭಾಗ ಬಂದಾಗ ಮೊದಲು ಭಾಷೆ, ಸಂಸ್ಕೃತಿ , ಕಲೆಯ ರಕ್ಷಣೆ ಮುಖ್ಯವಾಗಿರುತ್ತೆ.
ಪ್ರತಿನಿಧಿ : ಕಸಾಪ ಅಭಿವೃದ್ಧಿಗಾಗಿ ಯಾವ ಯೋಜನೆಯಿದೆ?
ಮಹೇಶ್ ಜೋಶಿ: ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ 11 ಜನರ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ನೆಲ, ಗಡಿ , ಎಲ್ಲಾ ಭಾಗವನ್ನು ತಲುಪುತ್ತೇವೆ.
* ಈ ಹಿಂದೆ ಮಾಡಿರುವ ಉತ್ತಮ ಕಾರ್ಯ ಮುಂದುವರೆಸುತ್ತೇವೆ.
* ಕಸಾಪ ಕನ್ನಡಿಗರ ಮನೆ ಮನೆ ತಲುಪಬೇಕು.
* ಸದಸ್ಯತ್ವ ಶುಲ್ಕ 1000ರೂಪಾಯಿ ಇರೊದನ್ನು 250 ಇಳಿಸಿದ್ದೇವೆ.
* ಸದಸ್ಯತ್ವಕ್ಕಾಗಿ ಅರ್ಜಿ ಅವಶ್ಯಕತೆಯಿಲ್ಲಿ. ಆ್ಯಪ್ ಮೂಲಕ ಸದಸ್ಯತ್ವ ಪಡೆಯಬಹುದು.
ಪ್ರತಿನಿಧಿ: ಒಂದು ಕೋಟಿ ಸದಸ್ಯತ್ವ ಮಾಡುವ ನಿಟ್ಟಿನಲ್ಲಿ ಕ್ರಮವೇನು?
ಮಹೇಶ್ ಜೋಶಿ: 1915 ರಲ್ಲಿ ಕಸಾಪ ಸ್ಥಾಪನೆಯಾಯ್ತು. ಸದಸ್ಯತ್ವದ ಮಾನದಂಡ 18 ವರ್ಷವಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು ಎಂಬುದಾಗಿತ್ತು. ಭಾಷೆ ಬರದವರು ಸಹ ಸದಸ್ಯರಾಗಿದ್ದಾರೆ, ಸಹಿಮಾಡಲು ಬರದವರು ಸದಸ್ಯರಾಗುದ್ದಾರೆ, ಚುನಾವಣೆ ಉದ್ದೇಶದಿಂದ ಕೆಲವರನ್ನು ಸದಸ್ಯರನ್ನಾಗಿಸಿದ್ದಾರೆ.
ಪ್ರತಿನಿಧಿ : ಹಾಗಿದ್ದಲ್ಲಿ ಕಸಾಪ ಸದಸ್ಯತ್ವ ಪಡೆಯಲು ನಿಬಂಧಗಳ ತಿದ್ದುಪಡಿ ಮಾಡಲಾಗಿದೆಯೇ?
ಮಹೇಶ್ ಜೋಶಿ: ನಿಬಂಧನೆ ತಿದ್ದುಪಡಿ ಸಮಿತಿ ಕನಿಷ್ಠ ವಿದ್ಯಾರ್ಹತೆಗೆ ತಿಳಿಸಿದೆ.
* ಪ್ರಾಥಮಿಕ ಶಿಕ್ಷಣ / ತತ್ಸಮಾನ ಶಿಕ್ಷಣ ವಿದ್ಯಾರ್ಹತೆ ನಿಗದಿ. (ಕನಿಷ್ಠ ಏಳನೇ ತರಗತಿ)
* ಪರಿಷತ್ತು ನಡೆಸುವ ಸರಳ ಸಮಿತಿ ಪರೀಕ್ಷೆ ಉತ್ತೀರ್ಣರಾಗುವ ಮೂಲಕವು ಸದಸ್ಯತ್ವ ಪಡೆಯಬಹುದು.
* ವಿನಾಯತಿ: ಜಾನಪದ ಕಲಾವಿದರು, ಸಿನಿಮಾರಂಗದವರು ಸೇರಿದಂತೆ ಸಾಧನೆಗೈದ ಕನ್ನಡಿಗರಿಗೆ ನಿಬಂಧನೆಗಳಿಂದ ವಿನಾಯ್ತಿ ನೀಡಲಾಗುವುದು.
ಪ್ರತಿನಿಧಿ: ಸದಸ್ಯತ್ವ ವಿಚಾರದಲ್ಲಿ ಶಿಕ್ಷಣ ಮುಖ್ಯವಾಗಿದೆ. ಕನ್ನಡ ಶಾಲೆ ಉಳಿಸಿ ಬೆಳೆಸಿ ಅಂತೀರ ಅಧಿಕಾರದಲ್ಲಿರುವ ಸರ್ಕಾರಕ್ಕೆ ಏನು ಹೇಳ್ತೀರ?
ಮಹೇಶ್ ಜೋಶಿ: ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು. ನನಗೆ ಬಹಳ ದುಃಖ ಆಗ್ತಿದೆ. ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು. ಐಎಎಸ್ ಪರೀಕ್ಷೆ ಕನ್ನಡ ಮಾಧ್ಯಮದಲ್ಲೇ ಬರೆದವನು. ದೇವೇಗೌಡರು, ಸಿಎನ್ ಆರ್ ರಾವ್ , ಇನ್ಫೋಸಿಸ್ ನಾರಾಯಣ ಮೂರ್ತಿಯವರು ಸೇರಿದಂತೆ ಸಾಧನೆಗೈದ ಹಲವಾರು ಜನ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ್ದಾರೆ. ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಮೂಲಕ ಅದೇ ಶಿಕ್ಷಕ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದಾರೆ. ಮಕ್ಕಳು ಅತ್ತ ಕನ್ನಡವೂ ಇಲ್ಲ ಇತ್ತ ಇಂಗ್ಲಿಷ್ ಕೂಡ ಇಲ್ಲದೇ ಕಂಗ್ಲೀಷ್ ಕಲಿಯುವ ಮೂಲಕ ತ್ರಿಶಂಕು ಸ್ವರ್ಗದಲ್ಲಿದ್ದಾರೆ. ಇದೊಂದು ಭಯಾನಕ ವಿಚಾರವಾಗಿದೆ. ಕನ್ನಡ ಶಾಲೆಗಳನ್ನು ಉಳಿಸಬೇಕಿದೆ.
* ಸರ್ಕಾರಿ ಸಂಬಳ ತೆಗೆದುಕೊಳ್ಳುವವರು ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಬೇಕು.
ಪ್ರತಿನಿಧಿ : ಸಾಹಿತಿಗಳೇ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಿದ್ದಾರೆ ಏನು ಹೇಳ್ತೀರಾ? ಕನ್ನಡ ಭಾಷೆ ಅನ್ನದ ಭಾಷೆಯಾಗಲು ಸರ್ಕಾರಕ್ಕೆ ಏನು ಸಲಹೆ ಕೊಡ್ತೀರ?
ಮಹೇಶ್ ಜೋಶಿ: ಕೆಲ ಸಾಹಿತಿಗಳು ಹೀಗೆ ಮಾಡಿರೋದು ಬಹಳ ವಿಷಾದನೀಯ ಸಂಗತಿ.
* ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು ರಕ್ಷಿಸಬೇಕು.
ಹರಿಯಾಣ ಸರ್ಕಾರ ಕಾನೂನು ಮಾಡಿತ್ತು. ಆರ್ಟಿಕಲ್ 14 ರ ಪ್ರಕಾರ ಸಮಾನತೆಯ ಹಕ್ಕು ತಿರಸ್ಕರಿಸುವಂತಿಲ್ಲ. ಮಾಧ್ಯಮದ ಆಯ್ಕೆ ಪೋಷಕರು ವಿದ್ಯಾರ್ಥಿಗಳ ಹಕ್ಕಾಗಿದೆ. ಯಾವ ಶಾಲೆಯಲ್ಲಾದರು ಕಲಿಯುವ ಹಕ್ಕಿದೆ.
* ಸರ್ಕಾರಿ ಕೆಲಸಕ್ಕೆ ಸೇರಬೇಕಾದರೇ ಕನ್ನಡ ಬರಲೇಬೇಕು. ಕನ್ನಡದಲ್ಲೇ ಪರೀಕ್ಷೆ ನಡೆಸಲಿ.
* ಕನ್ನಡವೇ ಸಾರ್ವಭೌಮ.
* ಕೇಂದ್ರ ಸರ್ಕಾರವೂ ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು.
ಪ್ರತಿನಿಧಿ: 86ನೇ ಸಾಹಿತ್ಯ ಸಮ್ಮೇಳನ ಹಾವೇರಿ ಎಂಬುದು ನಿಶ್ಚಯವಾಗಿದೆ. ನೀವು ಮತ್ತು ಮುಖ್ಯಮಂತ್ರಿಗಳಿಬ್ಬರು ಹಾವೇರಿಯವರೇ ಅಲ್ಲವೇ?
ಮಹೇಶ್ ಜೋಶಿ: ದೈವ ಸಂಕಲ್ಪ, ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರು. ಕೋವಿಡ್ ಕಾಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿಲ್ಲ. ಆದರೂ ಆಸಕ್ತಿ ಕಡಿಮೆಯಾಗಿಲ್ಲ. ಆತಂಕವಿಲ್ಲದೇ ಪ್ರತಿಯೊಬ್ಬರು ಬರಬೇಕು ಎಂಬುದು ನಮ್ಮ ನಿಲುವು.
ಪ್ರತಿನಿಧಿ: ಸಮ್ಮೇಳನಕ್ಕೆ ಬಜೆಟ್ನಲ್ಲಿ 20 ಕೋಟಿ ಮೀಸಲಿಡಲಾಗಿದೆ. ಪಾರದರ್ಶಕತೆ ವಿಚಾರದಲ್ಲಿ ನಿಲುವೇನು?
ಮಹೇಶ್ ಜೋಶಿ: ಅನುಕೂಲ ಮಾಡಿಕೊಡುವುದು ಸರ್ಕಾರ, ಜಿಲ್ಲಾಧ್ಯಕ್ಷರು ಗೌರವಾಧ್ಯಕ್ಷರು ಪಾರದರ್ಶಕತೆಯಿಂದ ಕೆಲಸ ಮಾಡುತ್ತಾರೆ. ನಾನು ಸಂಪೂರ್ಣ ಪಾರದರ್ಶಕತೆ ದುಂದುವೆಚ್ಚ ಮಾಡದಂತೆ ಕರ್ತವ್ಯ ನಿರ್ವಹಣೆ ಮಾಡುತ್ತೇನೆ.
ಪ್ರತಿನಿಧಿ: ಸಾಹಿತ್ಯ ಸಮ್ಮೇಳನ ಯಾವಾಗ ನಿಗದಿಯಾಗಿದೆ?
ಮಹೇಶ್ ಜೋಶಿ: ಈಗಾಗಲೇ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಸೆಪ್ಟೆಂಬರ್ನಲ್ಲಿ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಪ್ರತಿನಿಧಿ: ನಾಡಗೀತೆ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರೆದಿದೆ.
ಮಹೇಶ್ ಜೋಶಿ: ಹಾವೇರಿ ಸಮ್ಮೇಳನಕ್ಕೆ ಮುನ್ನವೇ ನಿರ್ಧಾರಕ್ಕೆ ಬರುವಂತೆ ಮುಖ್ಯಮಂತ್ರಿಯನ್ನು ಕೇಳಿದ್ದೇವೆ. ಎಲ್ಲರು ಸೇರಿ ಒಮ್ಮತಕ್ಕೆ ಬಂದರೆ ಒಳಿತು.
ಪ್ರತಿನಿಧಿ: ಸಂದರ್ಶನದ ಕೊನೆಯಲ್ಲಿ ಏನು ಹೇಳಲು ಬಯಸುತ್ತೀರಿ.
ಮಹೇಶ್ ಜೋಶಿ : ಕಸಾಪದ ಅಧ್ಯಕ್ಷನಾಗಿ ನಮ್ಮ ಅವಧಿಯಲ್ಲಿ ಕಸಾಪವನ್ನು ಜನ ಸಾಮಾನ್ಯರ ಪರಿಷತ್ತು ಮಾಡಿ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯುತ್ತೇನೆ. ಹಾವೇರಿಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಂಕಲ್ಪ ಮಾಡಿದ್ದೇವೆ. ನನ್ನ ವಿಚಾರ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಒನ್ಇಂಡಿಯಾ ಕನ್ನಡಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು. ನನ್ನ ಸಂದರ್ಶನ ನಡೆಸಿದ ಒನ್ಇಂಡಿಯಾದ ಪ್ರತಿನಿಧಿಯಾದ ಪುಟ್ಟರಾಜುರವರಿಗೂ ವಂದನೆಗಳು.
Recommended Video