ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ
Recommended Video
ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ ಎರಡು ಬಾರಿ ಸಂಸತ್ಗೆ ಆಯ್ಕೆ ಮಾಡಿರುವ ಕಲಬುರಗಿ (ಗುಲ್ಬರ್ಗಾ) ಲೋಕಸಭೆ ಕ್ಷೇತ್ರ, 1951ರ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಚನೆಯಾಗಿತ್ತು.
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಗುಲ್ಬರ್ಗಾ ಕಾಂಗ್ರೆಸ್ ಮತಗಳಿರುವ ಪ್ರದೇಶ. ಅಭೇದ್ಯ ಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯಕ್ಕೆ ಬ್ರೇಕ್ ಹಾಕಿದ್ದು ಜನತಾದಳದಿಂದ 1996ರಲ್ಲಿ ಸ್ಪರ್ಧಿಸಿದ್ದ ಖಮರುಲ್ ಇಸ್ಲಾಂ.
1998ರಲ್ಲಿ ಬಸವರಾಜ ಪಾಟೀಲ್ ಸೇಡಂ ಬಿಜೆಪಿಗೆ ಇಲ್ಲಿ ಚೊಚ್ಚಲ ಗೆಲುವು ತಂದುಕೊಟ್ಟರು. ಈ ಎರಡು ನಿದರ್ಶನಗಳನ್ನು ಹೊರತುಪಡಿಸಿ ಉಳಿದ ಯಾವ ಚುನಾವಣೆಯಲ್ಲಿಯೂ ಬೇರೆ ಪಕ್ಷ ತನ್ನ ಗುರುತು ಮೂಡಿಸಲು ಸಾಧ್ಯವಾಗಿಲ್ಲ.
ಒಟ್ಟು 17 ಚುನಾವಣೆಗಳಲ್ಲಿ 15 ರಲ್ಲಿ ಕಾಂಗ್ರೆಸ್ ಜಯಭೇರಿ ನಡೆಸಿದೆ. ವಿಶೇಷವೆಂದರೆ ಗುಲ್ಬರ್ಗಾ ಮೂರು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಿದೆ. 1951ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾಮಿ ರಮಾನಂದ ತೀರ್ಥ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಆಗ ಗುಲ್ಬರ್ಗಾ, ಹೈದರಾಬಾದ್ ಸಂಸ್ಥಾನಕ್ಕೆ ಸೇರಿತ್ತು.
1957ರ ಚುನಾವಣೆಯಲ್ಲಿ ಮಹಾದೇವಪ್ಪ ಯಶ್ವವಂತ್ ರಾವ್ ಶಂಕರ್ದೇವ್ ಜಯಭೇರಿ ಭಾರಿಸಿದ ವೇಳೆ ರಾಜ್ಯ ಪುನರ್ ವಿಂಗಡಣೆಯಾಗಿ ಗುಲ್ಬರ್ಗಾ ಕರ್ನಾಟಕಕ್ಕೆ ಸೇರ್ಪಡೆಯಾಗಿತ್ತು. ಈ ಸಂದರ್ಭದಲ್ಲಿ ಗುಲ್ಬರ್ಗಾ ದ್ವಿಸದಸ್ಯ ಕ್ಷೇತ್ರವಾಗಿತ್ತು. 1977ರಲ್ಲಿ ಸಿದ್ರಾಮ ರೆಡ್ಡಿ ಲೋಕಸಭೆಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್ ಮತ್ತು ವೀರೇಂದ್ರ ಪಾಟೀಲ್ ಕೂಡ ಈ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದರು. ಎಂ. ಯಶವಂತಪ್ಪ, ಬಿ.ಜಿ. ಜವಳಿ, ಇಕ್ಬಾಲ್ ಅಹಮ್ಮದ್ ಸರಡಗಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಕ್ಷೇತ್ರದಿಂದ ಎರಡು ಬಾರಿ ಸಂಸತ್ ಪ್ರವೇಶಿಸಿದ್ದಾರೆ.
ವಿಧಾನಸಭೆ ಕ್ಷೇತ್ರಗಳು: ಅಫ್ಜಲ್ಪುರ, ಜೇವರ್ಗಿ, ಗುರುಮಿಟಕಲ್, ಚಿತ್ತಾಪುರ, ಸೇಡಂ, ಗುಲ್ಬರ್ಗಾ ಗ್ರಾಮೀಣ, ಗುಲ್ಬರ್ಗಾ ದಕ್ಷಿಣ ಮತ್ತು ಗುಲ್ಬರ್ಗಾ ಉತ್ತರ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶೇ 51.35 ಮತಗಳನ್ನು ಪಡೆದು (507193) ಜಯಗಳಿಸಿದ್ದರು. ಅವರ ಎದುರಾಳಿ ಬಿಜೆಪಿಯ ರೇವೂನಾಯಕ ಬೆಳಮಗಿ 432460 ಮತಗಳನ್ನು ಪಡೆದಿದ್ದರು. ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಈ ಬಾರಿಯೂ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ಬಿಜೆಪಿಯಿಂದ ಸುನಿಲ್ ವಲ್ಯಾಪುರೆ ಅವರ ಹೆಸರು ಕೇಳಿಬರುತ್ತಿದೆ.
ಕಲಬುರಗಿ ಎಂದು ಹೆಸರು ಹೊಂದಿರುವ ಈ ಕ್ಷೇತ್ರ, ಗುಲ್ಬರ್ಗಾ ಲೋಕಸಭಾ ಕ್ಷೇತ್ರವಾಗಿಯೇ ಗುರುತಿಸಿಕೊಂಡಿದೆ. ಬಹಮನಿ ಕೋಟೆ, ಬುದ್ಧ ವಿಹಾರ, ರಾಮತೀರ್ಥ ದೇವಸ್ಥಾನ, ಖ್ವಾಜಾ ಬಂದೇ ನವಾಜ ದರ್ಗಾ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.
ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿ ಅರಸರು, ದೇವಗಿರಿಯ ಯಾದವರು, ದ್ವಾರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ಬಹಮನಿ ಸುಲ್ತಾನರು, ಮೊಘಲರು ಹೀಗೆ ಇತಿಹಾಸದಲ್ಲಿ ಅನೇಕ ರಾಜ್ಯರ ಆಳ್ವಿಕೆಗೆ ಒಳಪಟ್ಟ ಗುಲ್ಬರ್ಗಾ, ಸ್ವಾತಂತ್ರ್ಯ ನಂತರವೂ ಹೈದರಾಬಾದ್ ಸಂಸ್ಥಾನದ ಅಧೀನದಲ್ಲಿತ್ತು. 1948ರ ಸೆಪ್ಟೆಂಬರ್ನಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾಯಿತು.
ತಾಲ್ಲೂಕುಗಳು: ಆಳಂದ, ಅಫಜಲ್ಪುರ, ಕಲಬುರಗಿ, ಚಿಂಚೋಳಿ, ಸೇಡಂ, ಚಿತ್ತಾಪುರ ಮತ್ತು ಜೇವರ್ಗಿ.
ಕಲಬುರಗಿಗೆ ತೊಗರಿ ಕಣಜ ಎಂಬ ಹೆಸರೂ ಇದೆ. ಕೃಷ್ಣಾ ಮತ್ತು ಭೀಮಾ ನದಿಗಳು ಇಲ್ಲಿನ ಕೃಷಿ ಮತ್ತು ಕುಡಿಯುವ ನೀರಿಗೆ ಇರುವ ಮೂಲಗಳು. ಕೃಷಿಯಷ್ಟು ಇಲ್ಲಿ ಕೈಗಾರಿಕಾ ಚಟುವಟಿಕೆಗಳು ಬೆಳೆದಿಲ್ಲ. ಕಾರಣ ಮೂಲಸೌಕರ್ಯದ ಕೊರತೆ. ತೊಗರಿ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆಯಾದರೂ ಇಲ್ಲಿನ ಬೇಳೆಯ ಮಿಲ್ಗಳು ನಷ್ಟದಲ್ಲಿವೆ. ಅನೇಕ ಮಿಲ್ಗಳು ಮುಚ್ಚಿ ಹೋಗಿವೆ. ಇವು ಇನ್ನೂ ಅತ್ಯಾಧುನಿಕತೆಗೆ ಒಡ್ಡಿಕೊಳ್ಳದೆ ಇರುವುದು ಕಾರಣ. ಸಿಮೆಂಟ್ ಉದ್ಯಮಗಳೂ ಅಲ್ಲಲ್ಲಿ ಇವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ
ಕಲಬುರಗಿಯ ಅಭಿವೃದ್ಧಿಗಾಗಿ ಐಟಿ ಪಾರ್ಕ್ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಕಲಬುರಗಿ ಮತ್ತು ಬೀದರ್ ನಡುವೆ ರೈಲು ಸಂಪರ್ಕ ಕಲ್ಪಿಸಿದರೆ, ಈ ಭಾಗದ ಜನರಿಗೆ ವಿಮಾನದ ಮೂಲಕ ಬೆಂಗಳೂರು ಮತ್ತು ದೆಹಲಿ ಸಂಪರ್ ಸುಲಭವಾಗಲಿದೆ ಎನ್ನುವ ಯೋಜನೆ ಅನೇಕ ಕಾಲದಿಂದ ಕಾಗದದಲ್ಲಿದೆ. ಆದರೆ ಅದು ಅನುಷ್ಠಾನಕ್ಕೆ ಬರುತ್ತಿಲ್ಲ.
ಐಟಿ ಪಾರ್ಕ್ ಸಿದ್ಧಗೊಂಡರೆ ಇಲ್ಲಿನ ಮೂಲಸೌಕರ್ಯಗಳು ತಾನಾಗಿಯೇ ಬೆಳೆಯುತ್ತವೆ ಎನ್ನುವುದು ಅಧಿಕಾರಿಗಳು ಮತ್ತು ರಾಜಕಾರಣಿಗಳ ಅಭಿಪ್ರಾಯ. ಆದರೆ, ಕನಿಷ್ಠ ಮೂಲಸೌಕರ್ಯವಿಲ್ಲದ ಸ್ಥಳದಲ್ಲಿ ಯಾವ ಉದ್ಯಮವೂ ಬೆಳೆಯಲಾರದು. ಕಲಬುರಗಿಯ ಎಲ್ಲ ಮೂಲಸೌಕರ್ಯಗಳ ಸಮಸ್ಯೆಗಳಿಗೆ ಪರಿಹಾರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ರಾಜಕೀಯವಾಗಿ ಕಲಬುರಗಿ ಸಾಕಷ್ಟು ಮಹತ್ವ ಹೊಂದಿದೆ. ಈಗಲೂ ಅಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ.
ಸಂಸದರ ನಿಧಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ 20 ಕೋಟಿ ರೂ.ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಯೋಜನೆಗಳಿಗೆ 16.03 ಕೋಟಿ ರೂ ವೆಚ್ಚ ಮಾಡಿದ್ದಾರೆ. ಇನ್ನು 4.45 ಕೋಟಿ ರೂ. ಬಾಕಿ ಉಳಿದಿದೆ.
ಒಟ್ಟಾರೆ 24.91 ಕೋಟಿ ರೂ.ಗಳಿಗೆ ಖರ್ಗೆ ಅಂದಾಜು ವೆಚ್ಚ ಪಟ್ಟಿ ಸಲ್ಲಿಸಿದ್ದರು. ಅಷ್ಟೂ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರಕಿತ್ತು.
2014ರಲ್ಲಿ ಒಟ್ಟು 1,721,990 ಮತದಾರರಿದ್ದರು. ಅವರಲ್ಲಿ 8,78,311 ಪುರುಷ ಹಾಗೂ 843,679 ಮಹಿಳಾ ಮತದಾರರಿದ್ದರು. ಅವರಲ್ಲಿ ಒಟ್ಟು ಶೇ 58 ರಷ್ಟು ಮಂದಿ ಮಾತ್ರ ಮತ ಚಲಾಯಿಸಿದ್ದರು. ಅಂದರೆ, 5,23,062 ಪುರುಷ ಮತ್ತು 4,74,576 ಮಹಿಳೆಯರು ಮತ ಚಲಾವಣೆ ಮಾಡಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ ಕಲಾಪಗಳಲ್ಲಿ ಅಪರೂಪದ ಸನ್ನಿವೇಶಗಳನ್ನು ಹೊರತುಪಡಿಸಿ ಗೈರಾಗಿಲ್ಲ. ಅವರ ಸರಾಸರಿ ಹಾಜರಾತಿ ಶೇ 90. ಶೇ 78ರಷ್ಟು ಸಂದರ್ಭಗಳಲ್ಲಿ ಅವರು ರಾಜ್ಯದ ಪರ ಚರ್ಚೆಗಳಲ್ಲಿ ಭಾಗವಹಿಸಿದ್ದರು.
ರಾಜ್ಯದ ಪರವಾಗಿ ಅವರು ಸರಾಸರಿ 350 ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಿದ್ದಾರೆ. ದೇಶದ ಪರವಾಗಿ ಸರಾಸರಿ 273 ಪ್ರಶ್ನೆಗಳಲ್ಲಿ ಭಾಗವಹಿಸಿದ್ದಾರೆ.