ಕೂಲಿ ಕೆಲಸ ಮಾಡುವ ಯುವಕ ಮಕ್ಕಳ ಚಿಕಿತ್ಸೆಗೆ ಕೊಟ್ಟದ್ದು ಮೂವತ್ತೈದು ಲಕ್ಷ
ಉಡುಪಿ, ಆಗಸ್ಟ್ 29: ಸಮಾಜಸೇವೆಗೆ ಸಾವಿರ ದಾರಿ. ಆದರೆ ಇದನ್ನು ಮಾಡಲು ಮನಸ್ಸು ಬೇಕಷ್ಟೆ. ಒಬ್ಬ ಕೂಲಿ ಕೆಲಸ ಮಾಡುವ ಯುವಕ, ಮಕ್ಕಳ ಚಿಕಿತ್ಸೆಗೆ ಮೂವತ್ತೈದು ಲಕ್ಷ ರೂ ನೀಡಲು ಸಾಧ್ಯವೇ? ಖಂಡಿತ ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟವರು,ಉ ಡುಪಿಯ ಕಟಪಾಡಿಯ ಯುವಕ ರವಿ.
ಹೌದು, ರವಿ ಓರ್ವ ಕೂಲಿ ಕೆಲಸಗಾರ. ಉಡುಪಿಯಿಂದ ಕೇವಲ ಐದು ಕಿ.ಮೀ ದೂರದಲ್ಲಿ ರವಿ ಅವರ ವಾಸ. ಈಗೊಂದು ಏಳು ವರ್ಷದ ಹಿಂದೆ ರವಿಯವರಿಗೆ ಒಂದು ಯೋಚನೆ ಹೊಳೆಯಿತು: ತನ್ನಿಂದ ಈ ಸಮಾಜಕ್ಕೆ ಏನಾದರೂ ನೀಡುವಂತಾಗಬೇಕು ಎಂಬುದು. ಆಗ ಅವರಿಗೆ ಹೊಳೆದದ್ದೇ ಈ ಐಡಿಯಾ. ಏನದು ಐಡಿಯಾ?
ಉಡುಪಿಯ ಹುಲಿವೇಷದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!
ವರ್ಷಂಪ್ರತಿ ವಿಭಿನ್ನ ವೇಷ: ಒಂದು ಗಮನ ಸೆಳೆಯುವಂತಹ ವೇಷವನ್ನು ಹಾಕಿ ಹಣ ಸಂಗ್ರಹಿಸುವುದು, ಅದನ್ನು ಕಾಯಿಲೆ ಇರುವ ಕಂದಮ್ಮಗಳಿಗೆ ನೀಡುವುದು. ಏಳು ವರ್ಷ ಹಿಂದೆ ಈ ತರಹ ಯೋಚಿಸಿದ ಈ ಯುವಕ ಅಷ್ಟಮಿಯ ಆಸುಪಾಸಿನಲ್ಲಿ ವೇಷ ಹಾಕತೊಡಗಿದರು. ಪ್ರತಿ ವರ್ಷವೂ ಒಂದೊಂದು ವೇಷ. ರವಿಗೆ ಹಾಲಿವುಡ್ ನ ಇಮ್ಯಾಜಿನರಿ ಕ್ಯಾರೆಕ್ಟರ್ ಅಂದರೆ ಮೊದಲಿಂದಲೂ ಸೆಳೆತ. ಹೀಗಾಗಿ ವರ್ಷಕ್ಕೊಂದು ವೇಷ ಹಾಕಿ ಗಮನ ಸೆಳೆಯುತ್ತಾರೆ. ಈ ವರ್ಷ ಇವರು ಹಾಕಿದ್ದು, ವ್ಯಾಂಪೈರ್ ವೇಷ. ನೋಡಿದಾಗ ಭಯವಾಗುತ್ತೆ. ಅಂಥ ವೇಷ ಇದು. ಈ ವೇಷ ಹಾಕಿ ಮೂರ್ನಾಲ್ಕು ದಿನ ಉಡುಪಿ ಸುತ್ತಮುತ್ತ ಸಂಚರಿಸಿದ್ದಾರೆ. ಇವರಿಗೆ ಕಟಪಾಡಿ ರವಿ ಗೆಳೆಯರ ಬಳಗವೂ ಸಾಥ್ ನೀಡಿತ್ತು. ರವಿ ಕಟಪಾಡಿಗೆ ಸಾರ್ವಜನಿಕರು ಉದಾರ ಕೊಡುಗೆ ನೀಡಿದ್ದಾರೆ.
ಮೂವತ್ತೈದು ಲಕ್ಷ ಸಹಾಯ!: ಹೀಗೆ ರವಿ ಕಟಪಾಡಿ ಈತನಕ ಮೂವತ್ತೈದು ಲಕ್ಷ ಹಣ ಸಂಗ್ರಹಿಸಿ ರೋಗ ಪೀಡಿತ ಮಕ್ಕಳಿಗೆ ಧನ ಸಹಾಯ ಮಾಡಿದ್ದಾರೆ. ನೆನಪಿಡಿ ,ಈ ಮೂವತ್ತೈದು ಲಕ್ಷದಲ್ಲಿ ಈ ಸಲದ ಲೆಕ್ಕ ಸೇರಿಲ್ಲ. ಈ ಬಾರಿಯ ಸಂಗ್ರಹ ಈಗಾಗಲೇ ನಡೆಯುತ್ತಿದೆ. ಇಷ್ಟರಲ್ಲೇ ಅದನ್ನು ಮಕ್ಕಳ ಚಿಕಿತ್ಸೆಗೆ ನೀಡಲಿದ್ದಾರೆ.
ಊರಲ್ಲೇ ಕೂಲಿ ಕೆಲಸ ಮಾಡುತ್ತಿದ್ದ ರವಿ, ಕಳೆದ ವರ್ಷ ಕೆಲಸ ಅರಸಿ ಮಸ್ಕತ್ ಗೆ ತೆರಳಿದ್ದರು. ಈ ಸಲ ವೇಷ ಹಾಕುವ ಸಲುವಾಗಿಯೇ ಕೆಲ ದಿನಗಳ ಮಟ್ಟಿಗೆ ಊರಿಗೆ ಆಗಮಿಸಿದ್ದಾರೆ. ಮಸ್ಕತ್ ಯಾಕೆ ಅಂತೀರಾ? ಊರವರು ರವಿ ಕಟಪಾಡಿಗೆ ಕೆಲಸ ಕೊಡುತ್ತಿಲ್ಲ. ಕಾರಣ, ನೀನೊಬ್ಬ ದೊಡ್ಡ ಮನುಷ್ಯ, ನಿನಗೆ ಹೇಗೆ ಕೆಲಸ ಕೊಡೋದು ಅಂತಾರೆ. ರವಿ ಸದ್ಯ ಉಡುಪಿಯ ಸೆಲೆಬ್ರಿಟಿ, ನೆನಪಿರಲಿ, ಈತ ಸಂಗ್ರಹಿಸಿದ ಲಕ್ಷಾಂತರ ಹಣ ನೇರ ಮಕ್ಕಳ ಚಿಕಿತ್ಸೆಗೆ ಹೋಗುತ್ತೆ. ಹೊಟ್ಟೆಪಾಡಿಗೆ ಇವರು ಶ್ರಮಪಟ್ಟು ದುಡೀತಾರೆ! ಈ ಯುವಕನ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನೀಯ,ಅಲ್ಲವೇ?