ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!
ಚೆನ್ನೈ, ಮೇ 14: ತೃತೀಯ ರಂಗ ನಿರ್ಮಿಸುವ ಕನಸು ಹೊತ್ತು ಎಂಕೆ ಸ್ಟಾಲಿನ್ ಭೇಟಿಗೆ ತೆರಳಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಬರಿಗೈಲಿ ವಾಪಸ್ಸಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಡೀ ದೇಶದ ಕುತೂಹಲ ಕೆರಳಿಸಿದ್ದ ಸ್ಟಾಲಿನ್-ಕೆಸಿಆರ್ ಭೇಟಿ ಸೋಮವಾರ ಅಪರಾಹ್ನ 4 ಗಂಟೆಗೆ ಚೆನ್ನೈಯ ಸ್ಟಾಲಿನ್ ನಿವಾಸದಲ್ಲಿ ನಡೆಯಿತು. ಈ ಮೊದಲೇ 'ಇದು ಕೇವಲ ಸೌಜನ್ಯದ ಭೇಟಿ' ಎನ್ನುವ ಮೂಲಕ ತನ್ನ ಆಪ್ತ ಮೈತ್ರಿಪಕ್ಷ ಕಾಂಗ್ರೆಸ್ ನ ಕೆಂಗಣ್ಣಿಗೆ ಗುರಿಯಾಗುವುದನ್ನು ಡಿಎಂಕೆ ತಪ್ಪಿಸಿಕೊಂಡಿತ್ತು. ಆದರೆ ಎಂಕೆ ಸ್ಟಾಲಿನ್ ಮಟ್ಟಿಗೆ ಅದು ಸೌಜನ್ಯದ ಭೇಟಿಯೇ ಆಗಿದ್ದರೂ, ಕೆಸಿಆರ್ ಅವರ ಮನಸ್ಸಿನಲ್ಲಿದ್ದ ಉದ್ದೇಶ ಬೇರೆಯೇ ಆಗಿತ್ತು.
ಹಲವು ಅನುಮಾನ, ಊಹಾಪೋಹಗಳಿಗೆ ಕಾರಣವಾದ ಕೆಸಿಆರ್-ಸ್ಟಾಲಿನ್ ಭೇಟಿ
ಆದರೆ ಸುಮಾರು ಒಂದು ಗಂಟೆಯ ಕಾಲದ ಮಾತುಕತೆಯಲ್ಲಿ ಕೆಸಿಆರ್ ಅವರ ತೃತೀಯ ರಂಗದ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ ಸ್ಟಾಲಿನ್, ಕೆಸಿಆರ್ ಅವರಿಗೆ ಹೊಸ ಆಫರ್ ನೀಡಿದ್ದಾರೆ! ಅದು ಕಾಂಗ್ರೆಸ್ ನೇತೃತ್ವದ ಯುಪಿಎ ಗೆ ವಾಪಸ್ಸಾಗುವ ಬಗ್ಗೆ!
ಏನೇನೋ ಕನಸು ಹೊತ್ತು ಸ್ಟಾಲಿನ್ ಭೇಟಿಗೆ ತೆರಳಿದ್ದ ಕೆಸಿಆರ್ ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ವಾಪಸ್ಸಾಗಿದ್ದಾರೆ, ತಲೆಯಲ್ಲಿ ಮಹಾಘಟಬಂಧನವೋ, ಯುಪಿಎ ಮೈತ್ರಿಕೂಟವೋ ಅಥವಾ ತೃತೀಯ ರಂಗವೋ ಎಂಬ ಹುಳ ಬಿಟ್ಟುಕೊಂಡು!
ಸಭೆಯಲ್ಲಿ ಏನಾಯ್ತು?
ಸ್ಟಾಲಿನ್ ಮತ್ತು ಟಿಆರ್ ಎಸ್ ಮುಖಂಡ ಕೆಸಿಆರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ತೃತೀಯ ರಂಗದೊಂದಿಗೆ ಗುರುತಿಸಿಕೊಳ್ಳಲು ಸ್ಟಾಲಿನ್ ಒಪ್ಪಿಗೆ ನೀಡಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹೊರಗಿಟ್ಟು ನಿರ್ಮಿಸಲು ಉದ್ದೇಶಿಸಲಾದ ತೃತೀಯ ರಂಗದ ಬಗ್ಗೆ ಮಾತನಾಡಿದ ಸ್ಟಾಲಿನ್, ಕಾಂಗ್ರೆಸ್ ಅನ್ನು ಹೊರಗಿಟ್ಟು ಮೈತ್ರಿ ಮಾಡಿಕೊಳ್ಳಲು ನನ್ನ ಒಪ್ಪಿಗೆ ಇಲ್ಲ ಎಂದು ನೇರವಾಗಿ ಹೇಳಿದರು.
ಪ್ರಧಾನಿ ಹುದ್ದೆಗೆ ರಾಹುಲ್ ಹೆಸರು
"ನಾನು ಈಗಾಗಲೇ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದೇನೆ. ಈಗಲೂ ನಾನು ಆ ಮಾತಿಗೆ ಬದ್ಧವಾಗಿದ್ದೇನೆ. ಕಾಂಗ್ರೆಸ್ ಜೊತೆಗೆ ನಾವು ಈಗಾಗಲೇ ಮೈತ್ರಿ ಮಾಡಿಕೊಂದಿದ್ದು, ಅದರಿಂದ ಹೊರಬರುವುದಕ್ಕೆ ಇಷ್ಟಪಡುವುದಿಲ್ಲ" ಎಂದು ಸ್ಟಾಲಿನ್ ಹೇಳಿದರು. ಈ ಮೂಲಕ ಎಲ್ಲೋ ದೂರದಲ್ಲಿ ಉಸಿರಾಡುತ್ತಿದ್ದ ಕೆಸಿಆರ್ ಅವರ ಪ್ರಧಾನಿ ಹುದ್ದೆಯ ಕನಸಿಗೂ ಮಂಗಳ ಹಾಡಿದರು!
ಸ್ಟಾಲಿನ್ ಕೆಸಿಆರ್ ಭೇಟಿ ಮಾಡುತ್ತಿರುವುದೇಕೆ? ಡಿಎಂಕೆ ಸ್ಪಷ್ಟನೆ
ಸ್ಥಿರ ಸರ್ಕಾರ ನೀಡುವುದಕ್ಕೆ ಸಾಧ್ಯವಿಲ್ಲ!
"ಹಳೆಯ ಅನುಭವಗಳ ಆಧಾರದಿಂದ ಹೇಳುತ್ತಿದ್ದೇನೆ. ತೃತೀಯ ರಂಗದ ಸರ್ಕಾರ ಸ್ಥಿರವಾಗಿರುವುದಿಲ್ಲ. ದಕ್ಷ ಆಡಳಿತ ನೀಡುವುದಕ್ಕೂ ಸಾಧ್ಯವಿಲ್ಲ. ಎರಡು ಅತೀ ದೊಡ್ಡ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವೇ ಇಲ್ಲ" ಎಂದು ಸ್ಟಾಲಿನ್ ಕೆಸಿಆರ್ ಅವರಿಗೆ ಬುದ್ಧಿಮಾತಿನ ಧಾಟಿಯಲ್ಲಿ ಹೇಳಿದ್ದಾರೆ.
ಕೆಸಿಆರ್ ಪ್ರತಿಕ್ರಿಯೆ ಏನು?
ಸ್ಟಾಲಿನ್ ಅವರ ಮಾತುಗಳನ್ನೆಲ್ಲ ಸಮಾಧಾನದಿಂದ ಕೇಳಿಸಿಕೊಂಡ ಕೆಸಿಆರ್, "ನೀವು ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೂ, ಫಲಿತಾಂಶದ ನಂತರ ನಾವು ಪ್ರಾದೇಶಿಕ ಪಕ್ಷಗಳೆಲ್ಲ ಒಂದಾಗಿ ಸರ್ಕಾರ ರಚಿಸಲು ಸಾಧ್ಯ. ಇದರಿಂದ ದಕ್ಷಿಣ ಭಾರತವೂ ಆಡಳಿತದಲ್ಲಿ ಗಟ್ಟಿ ಸ್ಥಾನ ಪಡೆಯಬಹುದು. ಈ ಬಾರಿ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಬಹುಮತ ಗಳಿಸುವುದಿಲ್ಲ. ಯೋಚಿಸಿ" ಎಂದಿದ್ದಾರೆ. ನಂತರ ಕೆಲ ಹೊತ್ತುಗಳ ಕಾಲ ಉಭಯ ನಾಯಕರೂ ರಾಷ್ಟ್ರದ ರಾಜಕೀಯ ಸ್ಥಿತಿಗತಿ, ಚುನಾವಣೆ, ಫಲಿತಾಂಶದ ಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.