ಅಶೋಕ ಶೆಟ್ಟರ ಸ್ನೇಹದಿಂದ ಬೆಳಗೆರೆ ಎಡಪಂಥೀಯನಾಗಿ ಬದಲಾದ
ರವಿ ಬೆಳಗೆರೆ ನನ್ನ ನಾಲ್ಕು ದಶಕಗಳ ಸ್ನೇಹಿತ, ಸಂಗಾತಿ, ಜೀವದ ಗೆಳೆಯ. ಎಂಬತ್ತರ ದಶಕದಲ್ಲಿ ಆತ ಧಾರವಾಡ ವಿವಿಯಲ್ಲಿ ಓದುತ್ತಿದ್ದ. ಆತನ ಸಹಪಾಠಿ ನನ್ನ ಚಳವಳಿಯ ಒಡನಾಡಿ ಅಶೋಕ ಶೆಟ್ಟರ್ ಮೂಲಕ ಪರಿಚಯ. ಪರಿಚಯ ಕ್ರಮೇಣ ಸ್ನೇಹವಾಯಿತು. ಮುಂದೆ ಆತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿಯಾದಾಗ ಬಾಂಧವ್ಯ ಇನ್ನಷ್ಟು ನಿಕಟವಾಯಿತು.
ರವಿ, ನಾನು, ಜಿ.ಎಚ್. ರಾಘವೇಂದ್ರ ಎಷ್ಟೋ ಸಂಜೆಗಳನ್ನು ನಮ್ಮದೇ ಲೋಕದಲ್ಲಿ ಕಳೆದೆವು. ದಿನಗಟ್ಟಲೆ ಮಾತಾಡಿದೆವು. ನನ್ನ ಬರಹ ಇಷ್ಟ ಪಡುತ್ತಿದ್ದ ಆತ ನನ್ನಿಂದ ಬರೆಸಿದ. ಬಳ್ಳಾರಿಯ ರವಿ ಧಾರವಾಡಕ್ಕೆ ಓದಲು ಬಂದು ಅಶೋಕ ಶೆಟ್ಟರ ಸ್ನೇಹದಿಂದ ಎಡಪಂಥೀಯನಾಗಿ ಬದಲಾದ.
ಜೀವನದಲ್ಲಿ ತುಂಬ ಕಷ್ಟ ಪಟ್ಟು ಬರಿಗೈಲಿ ಬೆಂಗಳೂರಿಗೆ ಬಂದು, ಸಾಕಷ್ಟು ಬೆಳೆದ. ಹಾಯ್ ಬೆಂಗಳೂರು ಪತ್ರಿಕೆ ಮಾತ್ರವಲ್ಲ, ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ. ಇಷ್ಟೆಲ್ಲ ಬೆಳೆದರೂ ನನ್ನಂಥ ಹಳೆಯ ಗೆಳೆಯರನ್ನು ರವಿ ಮರೆತಿರಲಿಲ್ಲ. ನೆನಪಾದಾಗಲೆಲ್ಲ ಗುರುವೇ ಬಾ ಎಂದು ಕರೆದು ತಾಸುಗಟ್ಟಲೆ ಮಾತಾಡುತ್ತಿದ್ದ. ಫೋನ್ ನಲ್ಲಿ ಆರೋಗ್ಯ ವಿಚಾರಿಸುತ್ತಿದ್ದ. "ಇವರು ಮಾರ್ಕ್ಸ್ ವಾದ ಕಲಿಸಿದ ಗುರು" ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದ. ಆತ " ಹಾಯ್ ಬೆಂಗಳೂರ್ "ನಲ್ಲಿ ಬರೆದದ್ದು ತಪ್ಪೆಂದು ಹೇಳಿದರೆ ಒಪ್ಪಿಕೊಳ್ಳುತ್ತಿದ್ದ.
ಬಿಸ್ಕೆಟ್ ದಂಧೆ ಬೆನ್ನಟ್ಟಿದ್ದ ಬೆಳಗೆರೆ; ರೋಚಕ ಪ್ರಕರಣದ ರೀಕ್ಯಾಪ್
ಜಾತಿ- ಮತ ಮೀರಿದ ಮನುಷ್ಯ ಪ್ರೇಮಿ ಆತ. ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಹುಡುಗನನ್ನು ಪ್ರೀತಿಸಿ, ಮದುವೆಯಾದಾಗ ಆಕೆಯ ಬೆಂಗಾವಲಿಗೆ ನಿಂತ. ಎಲ್ಲಕ್ಕಿಂತ ಮಿಗಿಲಾಗಿ ದೈತ್ಯ ಬರಹಗಾರ. ಓದಿಸಿಕೊಂಡು ಹೋಗುವ ಶೈಲಿ ಆತನದು. ನಾನು ತುಂಬಾ ಕಷ್ಟದಲ್ಲಿದ್ದಾಗ ಧೈರ್ಯ ಹೇಳಿ ನೆರವಿಗೆ ಬಂದ ರವಿಯನ್ನು ಹೇಗೆ ಮರೆಯಲಿ?
ಬರಿಗೈಲಿ ಬೆಂಗಳೂರಿಗೆ ಬಂದ ರವಿ ಬೆಳಗೆರೆ
ಬಳ್ಳಾರಿಯ ನಡು ಬೀದಿಯಿಂದ ಬರಿಗೈಲಿ ಬೆಂಗಳೂರಿಗೆ ಬಂದ ರವಿ ಬೆಳಗೆರೆಯ ಇತ್ತೀಚಿನ ಮುಖ ಎಲ್ಲರಿಗೂ ಗೊತ್ತು. ಅವರ ಹಾಯ್ ಬೆಂಗಳೂರು, ಖಾಸ್ ಬಾತ್, ಎಂದೂ ಮರೆಯದ ಹಾಡು, ಪ್ರಾರ್ಥನಾ ಸ್ಕೂಲು, ಕ್ರೈಂ ಡೈರಿಗಳು ಇವುಗಳಲ್ಲದೆ ರವಿಯೊಳಗೆ ಒಬ್ಬ ಎಡಪಂಥೀಯನಿದ್ದ. ಪ್ರಭುತ್ವದ ಅತಿರೇಕಗಳನ್ನು ಸದಾ ಪ್ರಶ್ನಿಸುವ ಬಂಡಾಯಗಾರನಿದ್ದ. ಆತನ ಅದ್ಭುತ ಬರಹದ ಶೈಲಿ ಹೊಸ ಪೀಳಿಗೆಯ ಯುವಕರಿಗೆ ಹಿಡಿಸಿತ್ತು.
ಬಳ್ಳಾರಿಯಿಂದ ಧಾರವಾಡ ವಿಶ್ವವಿದ್ಯಾಲಯಕ್ಕೆ ಓದಲು ಬಂದಾಗ ರವಿ ಬಿ. ರವಿಯಾಗಿದ್ದ. ಕೊಂಚ ಸಂಘಪರಿವಾರದ ಪ್ರಭಾವವೂ ಇತ್ತು. ಧಾರವಾಡದಲ್ಲಿ ಓದುವಾಗ ಆತನ ಸಹಪಾಠಿ ಅಶೋಕ ಶೆಟ್ಟರ್ ಒಡನಾಟದ ಪರಿಣಾಮ ಮಾತ್ರವಲ್ಲ, ಸದಾ ಪ್ರಶ್ನಿಸುವ ಮನೋಭಾವ ಹಾಗೂ ಓದು ಆತನನ್ನು ಮಾರ್ಕ್ಸ್ ವಾದಿ ವಿಚಾರ ಸರಣಿಯತ್ತ ಕರೆ ತಂತು.
ಬಳ್ಳಾರಿಗೆ ಹೋಗಿ ಕಾಲೇಜೊಂದರಲ್ಲಿ ನೌಕರಿ ಸೇರಿದ
ಎಂ.ಎ., ಮುಗಿಸಿ ಆತ ವಾಪಸು ಬಳ್ಳಾರಿಗೆ ಹೋಗಿ ಕಾಲೇಜೊಂದರಲ್ಲಿ ನೌಕರಿ ಸೇರಿದ. ಅಲ್ಲಿ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮುವಾದಿ ವಿದ್ಯಾರ್ಥಿ ಸಂಘಟನೆಯೊಂದು ರವಿ ಬೆಳಗೆರೆ ವಿರುದ್ಧ ಚಳವಳಿ ನಡೆಸಿದ ಪರಿಣಾಮವಾಗಿ ನೌಕರಿ ಹೋಯಿತು. ನಂತರ ಹಾಲು ಮಾರಾಟ ಮಾಡುತ್ತಿದ್ದ. ಕೆಲ ಕಾಲ ಹೊಟೇಲ್ ಮ್ಯಾನೇಜರ್ ಆಗಿದ್ದ. ಅಷ್ಟೇ ಅಲ್ಲ, ಪ್ರಜಾ ಜಾಗ್ರತಿ ಸಂಘವನ್ನು ಕಟ್ಟಿಕೊಂಡ.
ಆ ಸಂಘದಿಂದ ಈತ ಆರಂಭಿಸಿದ ಚಳವಳಿ ಎಲ್ಲರ ಗಮನ ಸೆಳೆಯಿತು. ಬಳ್ಳಾರಿ ನಗರದಲ್ಲಿ ಪೌರ ಕಾರ್ಮಿಕರಿಲ್ಲದ ದಾರಿ ತುಂಬ ಕಸ ಬಿದ್ದಾಗ ಆ ಕಸವನ್ನು ಲಾರಿಯೊಂದರಲ್ಲಿ ತುಂಬಿಕೊಂಡು ಸ್ಥಳೀಯ ನಗರಪಾಲಿಕೆ ಬಾಗಿಲ ಮುಂದೆ ಹಾಕುವ ವಿನೂತನ ಹೋರಾಟ ಹಮ್ಮಿಕೊಂಡ.
"ಇದು ನನ್ನ ಕೊನೆಯ ತಾಣ. ಇಲ್ಲೇ ಸಮಾಧಿ" ಎಂದಿದ್ದರು ರವಿ ಬೆಳಗೆರೆ
"ಸಂಯುಕ್ತ ಕರ್ನಾಟಕ" ಪತ್ರಿಕೆಯಲ್ಲಿ ಆತ ಕೆಲಸಕ್ಕೆ ಸೇರಿದಾಗ
ನಕ್ಸಲೀಯ ನಾಯಕ ಕೊಂಡಪಲ್ಲಿ ಸೀತಾರಾಮಯ್ಯನವರ ಆತ್ಮೀಯನಾಗಿದ್ದ ರವಿ ಬೆಳಗೆರೆ ಅವರೊಂದಿಗೆ ಆಂಧ್ರಪ್ರದೇಶದ ಕಾಡುಗಳಲ್ಲಿ ಕೆಲ ಕಾಲ ತಿರುಗಾಡಿದ್ದ. ಈ ನಡುವೆ ಬಳ್ಳಾರಿ ಪತ್ರಿಕೆ ಎಂಬ ಸಾಪ್ತಾಹಿಕ ಮಾಡಿ ಅದನ್ನು ನಡೆಸಲು ಹೈರಾಣಾದ. ನಂತರ ಎಂಬತ್ತರ ದಶಕದಲ್ಲಿ "ಸಂಯುಕ್ತ ಕರ್ನಾಟಕ" ಪತ್ರಿಕೆಯಲ್ಲಿ ಆತ ಕೆಲಸಕ್ಕೆ ಸೇರಿದಾಗ ನನ್ನ ಮತ್ತು ಅವನ ಸ್ನೇಹ ಇನ್ನಷ್ಟು ಗಾಢವಾಯಿತು.
ಸಂಯುಕ್ತ ಕರ್ನಾಟಕದಲ್ಲಿ ಸೇರಿದ ನಂತರ ಅಂದಿನ ಸಂಪಾದಕ ಶಾಮರಾವ್ ಅವರು ರವಿಗೆ "ಕರ್ಮವೀರ" ಸಾಪ್ತಾಹಿಕದ ಹೊಣೆ ಹೊರಿಸಿದರು. ಅಲ್ಲಿ ಅವನ ಪಾಪಿಗಳ ಲೋಕದಲ್ಲಿ ಬರಹ ತುಂಬಾ ಜನಪ್ರಿಯವಾಗಿತ್ತು.
ಟ್ಯಾಬ್ಲಾಯ್ಡ್ ಜರ್ನಲಿಸಂ ಆರಂಭಿಸಿದ ನಂತರ ರವಿ
ಟ್ಯಾಬ್ಲಾಯ್ಡ್ ಜರ್ನಲಿಸಂ ಆರಂಭಿಸಿದ ನಂತರ ರವಿ ಪತ್ರಿಕೆಯ ಪ್ರಸಾರ ಸಂಖ್ಯೆ ಉಳಿಸಿಕೊಳ್ಳಲು ಕೆಲವೊಮ್ಮೆ ರಾಜಿ ಮಾಡಿಕೊಂಡರೂ ನೊಂದವರ, ಬಡವರ, ಅವಕಾಶ ವಂಚಿತರ ಪರ ಬದ್ಧತೆ ಕಡಿಮೆಯಾಗಿರಲಿಲ್ಲ. ಈಗ ಎಲ್ಲೆಡೆ "ಲವ್ ಜಿಹಾದ್" ಮಾತು ಕೇಳುತ್ತೇವೆ. ಇದು ಕೋಮುವಾದಿ ಶಕ್ತಿಗಳ ರಾಜಕೀಯ ಅಸ್ತ್ರವಾಗಿದೆ. ಬಿಜೆಪಿ ಸರಕಾರವೂ ಲವ್ ಜಿಹಾದ್ ವಿರುದ್ಧ ಕಾನೂನು ಮಾಡಲು ಹೊರಟಿದೆ.
ಆದರೆ, ರವಿ ಬೆಳಗೆರೆ ಸೈದ್ಧಾಂತಿಕ ನಿಲುವು ಈ ವಿಷಯದಲ್ಲಿ ಸ್ಪಷ್ಟವಾಗಿತ್ತು. ಯಾವುದೇ ಜಾತಿ, ಮತದ ಯುವಕ, ಯುವತಿ ಪ್ರೀತಿ ವಿವಾಹ ಮಾಡಿಕೊಂಡರೆ ಬೆಂಬಲಕ್ಕೆ ನಿಲ್ಲುತ್ತಿದ್ದ. ತೀರ್ಥಹಳ್ಳಿಯ ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ದೊಡ್ಡ ಕೋಲಾಹಲವಾಗಿತ್ತು. ಆಗ ರವಿ ಬೆಳಗೆರೆ ಆ ಯುವ ಜೋಡಿಯ ಬೆಂಗಾವಲಿಗೆ ನಿಂತಿದ್ದನ್ನು ಹೇಗೆ ಮರೆಯಲು ಸಾಧ್ಯ?
Recommended Video
ಸೈದ್ಧಾಂತಿಕವಾಗಿ ರವಿ ಬೆಳಗೆರೆ ಎಡಪಂಥೀಯನಾಗಿದ್ದ
ಹಾಯ್ ಬೆಂಗಳೂರು ಪತ್ರಿಕೆ ಆರಂಭಿಸಿದ ನಂತರ ನಮ್ಮ ನಡುವಿನ ಸಂಪರ್ಕ ಕಡಿಮೆಯಾದರೂ ಆಗಾಗ ಭೇಟಿಯಾಗುತ್ತಿದ್ದೆವು. ನಾನು ಕಲಬುರಗಿಗೆ ಬಂದ ನಂತರ ಫೋನ್ ನಲ್ಲಿ ಮಾತಾಡುತ್ತಿದ್ದೆವು. ಕೆಲ ದಿನಗಳ ಹಿಂದೆ ಫೋನ್ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಿದ್ದ.
ಸೈದ್ಧಾಂತಿಕವಾಗಿ ರವಿ ಬೆಳಗೆರೆ ಎಡಪಂಥೀಯನಾಗಿದ್ದ. ಇದನ್ನು ಸ್ವತಃ ಆತ ಅನೇಕ ಬಾರಿ ಬರೆದುಕೊಂಡಿದ್ದಾನೆ. ಪಿ.ಲಂಕೇಶ್ ನಂತರ ಉಂಟಾದ ಶೂನ್ಯವನ್ನು ಒಂದು ವಿಧದಲ್ಲಿ ತುಂಬಿದ ರವಿ ಬೆಳಗೆರೆ ದೈತ್ಯ ಬರಹಗಾರ. ದಿನದ ಹದಿನೆಂಟು ತಾಸು ಬರೆಯುತ್ತಿದ್ದ. ಕಚೇರಿ ಯೇ ಅವನ ಮನೆಯಾಗಿತ್ತು. ಆತನನ್ನು ಇಷ್ಟ ಪಡುವವರಷ್ಟೇ ದ್ವೇಷಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಆತನನ್ನು ನಿರ್ಲಕ್ಷ್ಯ ಮಾಡಲಂತೂ ಸಾಧ್ಯವಿಲ್ಲ.
ಇತ್ತೀಚೆಗೆ ಫೋನ್ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟುವಾಗಿ ಟೀಕಿಸಿದ ರವಿ ಬೆಳಗೆರೆ, ಹಾಯ್ ಬೆಂಗಳೂರ್ ನಲ್ಲೂ ಬಿಜೆಪಿ ಸರಕಾರ ಹೇಗೆ ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಲಾಬಿಯ ಸೇವೆ ಮಾಡುತ್ತಿದೆ ಎಂದು ಜಾಡಿಸಿದ್ದ.