ಪತ್ರಕರ್ತ ರವಿ ಬೆಳಗೆರೆ ಪದ್ಮನಾಭನಗರದಿಂದ ಪಕ್ಷೇತರರಾಗಿ ಸ್ಪರ್ಧೆ!
ಬೆಂಗಳೂರು, ಏಪ್ರಿಲ್ 1: ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ? ಅವರದೇ ಮಾತುಗಳನ್ನು ನಂಬಿ ಹೇಳುವುದಾದರೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ಕರೆದು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ವಿಚಾರವನ್ನು ಸ್ವತಃ ರವಿ ಬೆಳಗೆರೆ ಅವರು ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿ, ಇನ್ನು ಮುಂದೆ ಹಾಯ್ ಬೆಂಗಳೂರ್ ಹಾಗೂ ಓ ಮನಸೇ ಎರಡರ ಸಂಪಾದಕರಾಗಿ ನನ್ನ ಹಿರಿಯ ಗೆಳೆಯರೊಬ್ಬರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಒಂದಿಷ್ಟು ಪುಸ್ತಕದ ಕೆಲಸ ಬಾಕಿ ಇದ್ದು, ಇನ್ನು ಮೂರು ದಿನಗಳೊಳಗೆ ಅವುಗಳ ಕೆಲಸ ಮುಗಿಯಲಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿ ರಂಗಣ್ಣ ವಿರುದ್ಧ ದೊಡ್ಡ ಮೊತ್ತಕ್ಕೆ ರವಿ ಬೆಳಗೆರೆ ಕೇಸ್
'ಕಾಮರಾಜ ಮಾರ್ಗ' ಕಾದಂಬರಿಯ ಎರಡನೇ ಕಂತು ಇನ್ನೇನು ಬಿಡುಗಡೆ ಆಗಲಿದೆ. ಈ ಮಧ್ಯೆ ನನ್ನ ಅರವತ್ತನೇ ವರ್ಷದಲ್ಲಿ ಮಾಡುತ್ತಿರುವ ಸಾಹಸ ರಾಜಕೀಯ ಪ್ರವೇಶ ಎಂದು ಹೇಳಿದರು. ಬಳ್ಳಾರಿಯಿಂದ ಬರಿಗೈಲಿ ಬಂದವನಿಗೆ ಅನ್ನ ಹಾಕಿದ್ದು ಬೆಂಗಳೂರಾದರೆ, ಇಂಥ ದೊಡ್ಡ ವಿಶಾಲ ವೃಕ್ಷಕ್ಕೆ ಬೇರಿನಂತೆ ಆಗಿದ್ದು ಪದ್ಮನಾಭನಗರ. ಈ ಕ್ಷೇತ್ರಕ್ಕೆ ನಾನು ಪೂರೈಸಬೇಕಾದ ಜವಾಬ್ದಾರಿ ಇದೆ. ಅದನ್ನು ಪೂರ್ಣ ಮಾಡುವ ಪ್ರಯತ್ನವೇ ಇದು ಎಂದರು.
ಪದ್ಮನಾಭನಗರದ ನಂಟು ಗಾಢವಾಗಿದೆ
ನಾನು ದಿನ ಬೆಳಗಾದರೆ ತಿಂಡಿ ತಿನ್ನುವುದು ನಾಯ್ಡು ಹೋಟೆಲಿನ ತಟ್ಟೆ ಇಡ್ಲಿ. ನಾನು ಬಳಸುವ ಪೆನ್ ನಮ್ಮ ಶಾಲೆ ಹತ್ತಿರದಲ್ಲೇ ಇರುವ ಸ್ಟೇಷನರಿ ಅಂಗಡಿಯದು. ಬಿರಿಯಾನಿ ತಿನ್ನಬೇಕು ಅಂದರೆ ಉತ್ತರಹಳ್ಳಿ ರಸ್ತೆಯ ಮಸಾಲೆ ಹೋಟೆಲ್ ಗೆ ಹೋಗ್ತೀನಿ. ಪದ್ಮನಾಭನಗರದ ಜತೆಗೆ ನನ್ನ ನಂಟು ಹಾಗಿದೆ ಎಂದು ಹೇಳಿದರು.
ಕಳೆದ ವರ್ಷ ಅನಿರೀಕ್ಷಿತಗಳನ್ನು ಎದುರುಗೊಂಡೆ
ರಾಜಕಾರಣ ಪ್ರವೇಶ ಮಾಡುವುದಿಲ್ಲ ಎಂದು ಹಲವು ಸಲ ಹೇಳಿದ್ದಿರಿ, ಈಗೇಕೆ ಇಂಥ ನಿರ್ಧಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ ನನ್ನ ಪತ್ರಿಕೋದ್ಯಮ ಜೀವನದಲ್ಲೇ ತೀರಾ ಅನಿರೀಕ್ಷಿತಗಳನ್ನು ಎದುರುಗೊಂಡೆ. ಆಗಿನಿಂದ ಮನಸಿನಲ್ಲಿ ಇಂಥದ್ದೊಂದು ಆಲೋಚನೆ ಸುಳಿದಾಡುತ್ತಿತ್ತು. ಇದೀಗ ಆ ನಿರ್ಧಾರ ಗಟ್ಟಿಯಾಯಿತು ಎಂದು ತಿಳಿಸಿದರು.
ಯಾವ ಪಕ್ಷದ ಚಿಹ್ನೆಯಡಿ ನಿಲ್ಲುವುದು ನನಗಿಷ್ಟವಿಲ್ಲ
ನಾನು ಎಂದಿಗೂ ಜಾತಿ ಹೆಸರಿನಲ್ಲಿ ಜನರ ಮುಂದೆ ಬಂದವನಲ್ಲ. ಅಸಭ್ಯ- ಅಶ್ಲೀಲ ವರ್ತನೆ ನನ್ನ ಜಾಯಮಾನದಲ್ಲೇ ಇಲ್ಲ. ಈ ಜನ್ಮಕ್ಕೆ ಸಾಕಾಗುವಷ್ಟು ಪ್ರೀತಿ, ಹೆಸರು, ಕೀರ್ತಿ, ಐಶ್ವರ್ಯವನ್ನು ನನ್ನ ಓದುಗರು ಕೊಟ್ಟಿದ್ದಾರೆ. ಅವರ ಪರವಾಗಿ ಧ್ವನಿ ಎತ್ತಬೇಕಾದದ್ದು ನನ್ನ ಕರ್ತವ್ಯ. ಯಾವ ಪಕ್ಷದ ಚಿಹ್ನೆಯಡಿ ನಿಲ್ಲುವುದು ನನಗಿಷ್ಟವಿಲ್ಲ. ಸೋಲುವ ಆಟ ಆರಂಭಿಸುವವನು ನಾನಲ್ಲ. ಆಟ ಶುರುವಾದ ಮೇಲೆ ಗೆಲ್ಲುವವರೆಗೆ ನಿಲ್ಲುವವನಲ್ಲ ಎಂದು ಅವರು ಹೇಳಿದರು.
ರವಿ ಬೆಳಗೆರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು
ಇನ್ನು ರವಿ ಬೆಳಗೆರೆ ಅವರ ವಿಧಾನಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಭವಿಷ್ಯ ನುಡಿದ ಪಂಡಿತ್ ವಿಠ್ಠಲ ಭಟ್, ರವಿ ಬೆಳಗೆರೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಅದರಲ್ಲೂ ಒಂದು ಪಕ್ಷದಿಂದ ಸ್ಪರ್ಧೆ ಮಾಡಿದರೆ ಮುಂದೆ ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ. ಆದರೆ ಬುಧವಾರದಂದು ಅವರ ರಾಜಕೀಯ ಪ್ರವೇಶದ ಘೋಷಣೆ ಮಾಡಿದರೆ ಒಳ್ಳೆಯದು ಎಂದು ತಿಳಿಸಿದರು.