ಮೂಗಲ್ಲಿ ನಳಿಕೆ, ಆದರೂ ಹೋರಾಟದಲ್ಲಿ ಮುಂದೆ! ಕಾರ್ನಾಡರೆಂದರೆ ಹಾಗೆ!
Recommended Video
ತುಘಲಕ್, ಯಯಾತಿ, ತಲೆದಂಡದಂಥ ನಾಟಕಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡ್(81) ಅವರದ್ದು ಹೋರಾಟದ ಹಾದಿ.
ಬಲಪಂಥೀಯ ವಾದದ ವಿರೋಧಿಯಾಗಿ ಹಲವು ಸಾಮಾಜಿಕ ಹೋರಾಟಗಳಲ್ಲಿ ಸ್ವ ಇಚ್ಛೆಯಿಂದ ಭಾಗಿಯಾಗುತ್ತಿದ್ದ ಗಿರೀಶ್ ಕಾರ್ಖಾಡ್ ಅವರು ಇತ್ತೀಚೆಗೊಮ್ಮೆ 'ಅರ್ಬನ್ ನಕ್ಸಲ್' ಫಲಕವನ್ನು ತೊಟ್ಟು ಸುದ್ದಿಯಾಗಿದ್ದರು. ಮೂಗಿನಲ್ಲಿ ನಳಿಕೆ ಹಾಕಿಕೊಂಡೇ, ಅನಾರೋಗ್ಯದ ನಡುವೆಯೂ ಸಾಮಾಜಿಕ ಹೋರಾಟ ಎಂದು ಓಡಾಡುತ್ತಿದ್ದ ಕಾರ್ನಾಡ್ ಇನ್ನಿಲ್ಲ. ದಿ.ಯು. ಆರ್.ಅನಂತಮೂರ್ತಿ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಸಾಹಿತ್ಯ ರಂಗಕ್ಕೆ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ಕೊಡುಗೆ ನೀಡಿದ ಕಾರ್ನಾಡ್ ಅವರು ನಡೆದು ಬಂದ ದಾರಿಯ ಕಿರುಪರಿಚಯ ಇಲ್ಲಿದೆ.
ಮಹಾರಾಷ್ಟ್ರದಲ್ಲಿ ಹುಟ್ಟಿದರೂ ಕನ್ನಡ ಸಾಹಿತಿಯಾದ ಕಾರ್ನಾಡ್
1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು. ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್ನಲ್ಲಿ ಹೈಸ್ಕೂಲ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ನಂತರ ರ್ಹೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963 ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್ಫರ್ಡ್ ಯುನಿಯನ್ ಆಧ್ಯಕ್ಷರಾದರು.
ವೃತ್ತಿ ಬದುಕಿನ ಹಾದಿ...
ಚೆನ್ನೈನಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ ಇವರು ನಂತರ ಅಮೇರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವೆಲ್ಲರ ಮಧ್ಯೆಯೇ ನಾಟಕ ಬರಹದಲ್ಲಿ ತೊಡಗಿದ್ದರು. ಇವರು ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 1980 ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆಯಾದರು.ದಂಪತಿಗಳಿಗೆ ಒಬ್ಬ ಪುತ್ರ ಮತ್ತು ಪುತ್ರಿಯರುಂಟು. 2011 ರಲ್ಲಿ ತಮ್ಮ ಆತ್ಮಕಥೆಯಾದ ಆಡಾಡತ ಆಯುಷ್ಯ' ವನ್ನು ರಚಿಸಿದರು.
ನಾಟಕ ಕೃತಿಯಲ್ಲಿ ವಿಶೇಷ ಆಸ್ಥೆ
ನಾಟಕ ಕೃತಿ ಬರೆಯುವುದರಲ್ಲಿ ವಿಶೇಷ ಆಸ್ಥೆ ಹೊಂದಿದ್ದ ಕಾರ್ನಾಡ್ ಸುಮಾರು ಹದಿನಾಲ್ಕು ನಾಟಕಗಳನ್ನು ಬರೆದಿದ್ದಾರೆ. ಮಾ ನಿಷಾಧ - ಏಕಾಂಕ ನಾಟಕ, ಯಯಾತಿ, ಹಯವದನ, ಅಂಜುಮಲ್ಲಿಗೆ, ತುಘಲಕ್, ಹಿಟ್ಟಿನ ಹುಂಜ ಅಥವಾ ಬಲಿ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ಒಡಕಲು ಬಿಂಬ, ಮದುವೆ ಆಲ್ಬಮ್, ಫ್ಲಾವರ್ಸ್, ಬೆಂದ ಕಾಳು ಆನ್ ಟೋಸ್ಟ್ ಅವರ ನಾಟಕ ಕೃತಿಗಳು.
ಪ್ರಶಸ್ತಿ ತಂದಿತ್ತ ನಾಗಮಂಡಲ
ಇವರು ಬರೆದ ನಾಗಮಂಡಲ' ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿ ಕೊಟ್ಟಿತು. ಇದು ಮನುಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತ ನಾಟಕವಾಗಿತ್ತು. ಇದು ಮುಂದೆ 1997 ರಲ್ಲಿ ಟಿ.ಎಸ್.ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತು. ಮಹಾಭಾರತದ ಪಾತ್ರ ಯಯಾತಿ ಮೇಲೆ ಹೊರಬಂದ ನಾಟಕ ಯಯಾತಿ' ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹುರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ತುಘಲಕ್ನೊಂದಿಗೆ ಸಮೀಕರಿಸಿ ಐತಿಹಾಸಿಕ ತುಘಲಕ್' ನಾಟಕ ರಚಿಸಿದರು.
ಕಥಾಸರಿತ್ಸಾಗರದ ಕಥೆಯಧಾರಿತ ಹಯವದನ' ಮನುಷ್ಯನ ಅಪೂರ್ಣತೆ , ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು.
ಪ್ರಸಿದ್ಧ ಕಾದಂಬರಿಗಳನ್ನು ಚಿತ್ರಕ್ಕಿಳಿಸಿ...
ನಂತರ ಬಂದ ತೆಲೆದಂಡ' 12 ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೇ ನಡೆದಂತ ದಬ್ಬಾಳಿಕೆ, ಕಗ್ಗೋಲೆಗಳನ್ನು ತೆರೆದಿಟ್ಟಿತು. ಇವರ ಅಂಜು ಮಲ್ಲಿಗೆ' ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲಿತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ.
1970 ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ ಸಂಸ್ಕಾರ' ಚಿತ್ರದ ಮೂಲಕ ನಟನೆಗೆ ಇಳಿದರು.ನಂತರ ಶಂಕರ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್' ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು . ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ' ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರ ಕಾನೂರು ಹೆಗ್ಗಡತಿ' ಕೃತಿಯನ್ನು ಪರದೆಗೆ ತಂದ ಕೀರ್ತಿ ಕಾರ್ನಾಡರದು. ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿರುವ ಇವರು ಹಲವು ಕನ್ನಡ,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.