ಒಳಗೆ ಸಚಿವರ ಪರಿಶೀಲನೆ; ಹೊರಗೆ ತಂದೆ ಕಳೆದುಕೊಂಡ ಯುವತಿ ರೋದನೆ
ರಾಂಚಿ, ಏಪ್ರಿಲ್ 14: "ಬಾರಿ ಬಾರಿ ಬೇಡಿದರೂ, ಅಂಗಲಾಚಿದರೂ, ಗೋಗರೆದರೂ ವೈದ್ಯರು ನನ್ನ ತಂದೆಗೆ ಚಿಕಿತ್ಸೆ ನೀಡಲಿಲ್ಲ. ಕೊರೊನಾವೈರಸ್ ಸೋಂಕಿಗೆ ಚಿಕಿತ್ಸೆ ಸಿಗದೇ ಇಂದು ನನ್ನ ತಂದೆ ನನ್ನಿಂದ ದೂರ ಹೋಗಿದ್ದಾರೆ. ಸಚಿವರೇ ನನ್ನ ತಂದೆಯನ್ನು ನೀವು ತಂದು ಕೊಡುತ್ತೀರಾ" ರಾಂಚಿಯ ಆಸ್ಪತ್ರೆಯೊಂದರಲ್ಲಿ ತಂದೆಯನ್ನು ಕಳೆದುಕೊಂಡ ನೊಂದ ಮಗಳ ನೋವಿನ ಮಾತುಗಳಿವೆ.
ಜಾರ್ಖಂಡ್ನ ಹಜಾರಿಬಾಗ್ನಿಂದ ರಾಂಚಿಯ ಸದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿ ತನ್ನ ತಂದೆಯನ್ನು ಮಗಳು ಕರೆದುಕೊಂಡು ಹೋಗಿದ್ದರು. ಮಂಗಳವಾರ ತಂದೆಗೆ ಚಿಕಿತ್ಸೆ ನೀಡುವಂತೆ ವೈದ್ಯರ ಬಳಿ ಗೋಗರೆದರೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ಅದೇ ದಿನ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲು ತೆರಳಿದ್ದ ಸಚಿವರ ಸುತ್ತಲೂ ರೌಂಡ್ ಹೊಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
Explained: ಭಾರತದಲ್ಲಿ ಭಯ ಹುಟ್ಟಿಸುತ್ತಿರುವುದೇಕೆ ಕೊರೊನಾವೈರಸ್?
ತಂದೆಯ ಅಗಲಿಕೆಯ ಆಕ್ರೋಶದಲ್ಲಿ ಮಹಿಳೆಯು ಆಕ್ರೋಶ ಹೊರ ಹಾಕಿದ ರೀತಿ ಮತ್ತು ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ಅಂದು ಜಾರ್ಖಂಡ್ ಆಸ್ಪತ್ರೆಯಲ್ಲಿ ನಡೆದ ಘಟನೆ ಏನು. ತಂದೆ ಸಾವಿನಿಂದ ಮಗಳು ಅನುಭವಿಸಿದ ಯಾತನೆ ಎಂಥದ್ದು ಎನ್ನುವ ಮನ ಮಿಡಿಯುವ ವರದಿ ಒನ್ಇಂಡಿಯಾ ಓದುಗರಿಗಾಗಿ.
ಗಂಟೆಗಟ್ಟಲೇ ವೈದ್ಯರಿಗಾಗಿ ಎದುರು ನೋಡಿದ ಮಗಳು
ಜಾರ್ಖಂಡ್ನ ಹಜಾರಿಬಾಗ್ ಪ್ರದೇಶದಿಂದ ರಾಂಚಿಯ ಸದಾರ್ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ತಂದೆಯನ್ನು ಕರೆದುಕೊಂಡು ಹೋಗಿದ್ದರು. ಏಪ್ರಿಲ್ 13ರಂದು ಆಸ್ಪತ್ರೆಯ ಆವರಣದಲ್ಲೇ ಕಾಯುತ್ತಿದ್ದ ಮಗಳು ತನ್ನ ತಂದೆಗೆ ಚಿಕಿತ್ಸೆ ನೀಡುವಂತೆ ಬಾರಿ ಬಾರಿ ಬೇಡಿದರೂ ವೈದ್ಯರು ಸೋಂಕಿತನ ಕಡೆ ತಿರುಗಿ ನೋಡಲಿಲ್ಲ. ಗಂಟೆಗಟ್ಟಲೇ ಯಾರೊಬ್ಬರೂ ರೋಗಿಯ ಆರೋಗ್ಯದ ಸ್ಥಿತಿ ಬಗ್ಗೆ ಗಮನ ಹರಿಸಲಿಲ್ಲ ಎನ್ನುವುದು ಯುವತಿ ಆರೋಪವಾಗಿದೆ.
ಅದೇ ದಿನ ಸಚಿವರಿಂದ ಆಸ್ಪತ್ರೆಯಲ್ಲಿ ಪರಿಶೀಲನೆ
ಒಂದು ಕಡೆ ಚಿಕಿತ್ಸೆ ಇಲ್ಲದೇ ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಆವರಣದಲ್ಲೇ ರೋಗಿಯೊಬ್ಬರು ಮಲಗಿದ್ದರು. ಅದೇ ದಿನ ಸದಾರ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಕೊವಿಡ್-19 ರೋಗಿಗಳಿಗೆ ಅಗತ್ಯವಿರುವ ಸೌಲಭ್ಯ, ಚಿಕಿತ್ಸಾ ಸಲಕರಣೆ, ವೈದ್ಯಕೀಯ ಸಿಬ್ಬಂದಿಯ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹಾಗೂ ಬಹುಪಾಲು ಸಿಬ್ಬಂದಿ ಸಚಿವರ ಸುತ್ತಲೂ ಸೇರಿಕೊಂಡಿದ್ದರು ಎನ್ನಲಾಗಿದೆ.
ತಂದೆಯ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲೂ ಬೆಡ್ ಇಲ್ಲ
ಕೊರೊನಾವೈರಸ್ ಸೋಂಕಿತ ತಂದೆಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಬೆಳಗ್ಗೆಯೇ ರಾಂಚಿ ತಲುಪಿದ ಮಗಳು ಇಡೀ ನಗರ ಸುತ್ತಿದರೂ ಖಾಸಗಿ ಆಸ್ಪತ್ರೆಯಲ್ಲೂ ಕೂಡಾ ಹಾಸಿಗೆ ಸಿಕ್ಕಿರಲಿಲ್ಲ. ಅಂತಿಮವಾಗಿ ಸದಾರ್ ಆಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆ ಆವರಣದಲ್ಲೇ ಗಂಟೆಗಟ್ಟಲೆ ಕಾದು ನಿಂತಿದ್ದರು. ಎಷ್ಟೋ ಹೊತ್ತಿನ ಮೇಲೆ ತಮ್ಮ ತಂದೆಯನ್ನು ವಾರ್ಡಿಗೆ ಕರೆದುಕೊಂಡ ಹೋದ ವೈದ್ಯರು ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
|
ಆರೋಗ್ಯ ಸಚಿವರ ಎದುರಿನಲ್ಲೇ ಯುವತಿ ಆಕ್ರೋಶ
ಒಂದು ಕಡೆ ತಂದೆಯ ಮೃತದೇಹವನ್ನು ವೈದ್ಯರು ಹೊರ ತರುತ್ತಿದ್ದಂತೆ ಮತ್ತೊಂದು ಕಡೆ ಪರಿಶೀಲನೆ ಮುಗಿಸಿದ ಸಚಿವರು ಆಸ್ಪತ್ರೆಯಿಂದ ಹೊರ ಬಂದರು. ಇದೇ ಸಮಯವನ್ನು ಎದುರು ನೋಡುತ್ತಿದ್ದ ನೊಂದ ಯುವತಿ ಸಚಿವರ ಎದುರಿನಲ್ಲೇ ತಮ್ಮ ಆಕ್ರೋಶ ಹೊರ ಹಾಕಿದರು. "ಸಚಿವರೇ ನಾವು ವೈದ್ಯರಿಗಾಗಿ ಎಷ್ಟು ಕೂಗಿದರೂ ಯಾರೊಬ್ಬರೂ ಬರಲಿಲ್ಲ. ಆಸ್ಪತ್ರೆ ಎದುರಿನಲ್ಲೇ ನಾವು ನಿಂತಿದ್ದರೂ ಯಾವ ವೈದ್ಯರೂ ಬಂದು ನಮ್ಮ ತಂದೆಗೆ ಚಿಕಿತ್ಸೆ ನೀಡಲಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ನಮ್ಮ ತಂದೆ ಪ್ರಾಣ ಬಿಟ್ಟಿದ್ದಾರೆ. ಆರೋಗ್ಯ ಸಚಿವರೇ ನಿಮಗೆ ನಮ್ಮ ತಂದೆಯನ್ನು ವಾಪಸ್ ತಂದು ಕೊಡುವುದಕ್ಕೆ ಆಗುತ್ತದೆಯೇ" ಎಂದು ಯುವತಿ ಆಕ್ರೋಶ ಹೊರ ಹಾಕಿದ್ದಾರೆ.
ಆರೋಗ್ಯ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯುವತಿ
ಈ ಜನರೆಲ್ಲ ಕೇವಲ ಮತ ಕೇಳುವುದಕ್ಕಾಗಿ ನಮ್ಮ ಬಳಿಗೆ ಬರುತ್ತಾರೆ. ಇಂಥವರಿಗೆ ಜನರ ನೋವುಗಳಿಗೆ ಸ್ಪಂದಿಸುವ ಮತ್ತು ಕಾಳಜಿ ತೋರಿಸುವ ಮನಸ್ಸು ಇರುವುದಿಲ್ಲ. ದಿನೇ ದಿನೆ ಪರಿಸ್ಥಿತಿ ಹದಗೆಡುತ್ತಿದ್ದು, ಚಿಕಿತ್ಸೆ ಸಿಗದೇ ಜನರು ಪ್ರಾಣ ಬಿಡುತ್ತಿದ್ದಾರೆ ಎಂದು ಆರೋಗ್ಯ ಸಚಿವರ ಬಗ್ಗೆ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವರು ನೀಡಿರುವ ಸ್ಪಷ್ಟನೆಯಲ್ಲಿ ಏನಿದೆ?
"ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಹಾಸಿಗೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್-19 ರೋಗಿಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ಮೀಸಲು ಇರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಯಾವುದೇ ನ್ಯೂನತೆಗಳಿದ್ದರೂ ಅದನ್ನು ಸರಿಪಡಿಸುವ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಆರೋಗ್ಯ ಸಚಿವ ಬನ್ನಾ ಗುಪ್ತಾ ಸ್ಪಷ್ಟಪಡಿಸಿದ್ದಾರೆ.