ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಬಿಜೆಪಿಗೆ ವರದಾನ?
Recommended Video
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಆಡಳಿತ ನಡೆಸುತ್ತಿರುವುದು ಮಾತ್ರವಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೋಸ್ತಿಯಾಗಿದ್ದುಕೊಂಡೇ ಬಿಜೆಪಿಯನ್ನು ಬಗ್ಗುಬಡಿಯಲು ತೀರ್ಮಾನಿಸಿವೆ. ಹೀಗಾಗಿ ಹಲವು ತಂತ್ರಗಳನ್ನು ಅಳವಡಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯದಂತೆ ನೋಡಿಕೊಳ್ಳುವ ಕಾರ್ಯಕ್ಕೆ ಮುಂದಾಗಿವೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಲೋಕಸಭಾಕ್ಷೇತ್ರಗಳನ್ನು ಎರಡು ಪಕ್ಷಗಳು ಹಂಚಿಕೊಂಡು ದೋಸ್ತಿಯಾಗಿಯೇ ಚುನಾವಣೆಯನ್ನು ಎದುರಿಸುವ ತೀರ್ಮಾನವನ್ನು ಮಾಡಿವೆ. ಆ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವುದಲ್ಲದೆ, ಗೆಲುವಿಗೆ ಅಡ್ಡಗಾಲು ಹಾಕಲು ತೀರ್ಮಾನಿಸಿವೆ.
ಜಿಲ್ಲಾ ಪಂಚಾಯತ್ ಸದಸ್ಯರನ್ನೂ ಬಲ್ಲ ಗೌಡ್ರಿಗೆ, ಪ್ರೀತಂ ಗೌಡ ಯಾರೆಂದು ಗೊತ್ತಿಲ್ಲವಂತೆ!
ಚುನಾವಣೆಗೆ ದಿನಾಂಕ ಇನ್ನೂ ಘೋಷಣೆಯಾಗದ ಹಿನ್ನಲೆಯಲ್ಲಿ ಜತೆಗೆ ಬಜೆಟ್ ಪರ ಅಧಿವೇಶನ ನಡೆಯುತ್ತಿರುವುದರಿಂದ, ಅಷ್ಟೇ ಅಲ್ಲದೆ ಆಪರೇಷನ್ ಕಮಲದ ಆಡಿಯೋ ಹಗರಣ, ಅತೃಪ್ತ ಶಾಸಕರ ನಿಗೂಢ ನಡೆಗಳು, ಶಾಸಕ ಪ್ರೀತಂಗೌಡ ಅವರ ಮನೆ ಮೇಲಿನ ಕಲ್ಲು ತೂರಾಟ ಹೀಗೆ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ಲೋಕಸಭಾ ಚುನಾವಣೆಯ ಬಗ್ಗೆ ರಾಜ್ಯ ನಾಯಕರು ಇಲ್ಲಿ ತನಕ ತಲೆಕೆಡಿಸಿಕೊಂಡಂತೆ ಕಾಣದಿದ್ದರೂ ಕೇಂದ್ರದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ಯಾದಿಯಾಗಿ ಎಲ್ಲ ಪಕ್ಷಗಳ ನಾಯಕರು ಚುನಾವಣಾ ಗುಂಗಿನಲ್ಲಿದ್ದು, ಈಗಿನಿಂದಲೇ ಮುಂದೇನು ಮಾಡಬೇಕು ಎಂಬ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪ್ರಕರಣ ಮತ್ತೊಂದು ದಿಕ್ಕಿಗೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಪರೇಷನ್ ಕಮಲ ಹಿನ್ನಲೆಯಲ್ಲಿ ಯಡಿಯೂರಪ್ಪ ಆಡಿರುವ ಮಾತುಗಳು ಮತ್ತು ಒಡ್ಡಿರುವ ಆಮಿಷಗಳನ್ನೊಳಗೊಂಡ ಮಾತುಕತೆಯ ಆಡಿಯೋವನ್ನು ಮಾಧ್ಯಮದ ಮುಂದೆ ಬಯಲು ಮಾಡಿದ್ದರಿಂದ ಅದು ವೈರಲ್ ಆಗಿ ಕಲಾಪವೂ ಬಲಿಯಾಯಿತು. ಆದರೆ ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರ ಬಾಯಿ ಮುಚ್ಚಿಸಬಹುದು ಎಂದು ನಿರೀಕ್ಷೆ ಮಾಡಿದ್ದ ಕುಮಾರಸ್ವಾಮಿಗೆ ಪ್ರಕರಣ ಮತ್ತೊಂದು ದಿಕ್ಕಿಗೆ ಹೋಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿರುವುದೇನು?
ಸಿಎಂಗೆ ಇಂತಹ ನಿರೀಕ್ಷೆಯಿತ್ತಾ?
ಒಂದು ವೇಳೆ ಜೆಡಿಎಸ್ ನ ಕಾರ್ಯಕರ್ತರು ಕಲ್ಲು ತೂರಾಟದಂತಹ ಕೃತ್ಯ ಮಾಡದೆ ಹೋಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ದೋಸ್ತಿ ಪಕ್ಷಗಳಿಗೆ ಯಡಿಯೂರಪ್ಪ ಅವರ ಆಡಿಯೋವನ್ನೇ ಅಸ್ತ್ರವಾಗಿಟ್ಟುಕೊಳ್ಳಬಹುದಿತ್ತು. ಅಲ್ಲದೆ ಅದನ್ನಿಟ್ಟುಕೊಂಡೇ ತಮ್ಮ ರಾಜಕೀಯ ಬೇಳೆಯನ್ನು ಸುಲಭವಾಗಿ ಬೇಯಿಸಿಕೊಳ್ಳಬಹುದಿತ್ತೇನೋ? ಈ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಕ್ಕಿ ಹಾಕಿಕೊಂಡಿದ್ದರಿಂದ ಇನ್ನು ಮುಂದೆ ಅವರು ಕುಮಾರಸ್ವಾಮಿ ಅವರ ತಂಟೆಗೆ ಬರುತ್ತಿರಲಿಲ್ಲವೇನೋ? ಹೀಗಾಗಿ ಯಾವುದೇ ಅಡೆತಡೆಯಿಲ್ಲದೆ ಐದು ವರ್ಷ ಸಿಎಂ ಆಗಿ ಅಧಿಕಾರವಧಿಯನ್ನು ಪೂರೈಸಬಹುದಿತ್ತೇನೋ? ಬಹುಶಃ ಇಂತಹದೊಂದು ನಿರೀಕ್ಷೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದರೂ ಅಚ್ಚರಿಯಿಲ್ಲ.
ಎಚ್ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ
ದಿಕ್ಕನ್ನೇ ಬದಲಾಯಿಸಿದರು
ಪ್ರೀತಂಗೌಡ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಎಂಬ ವಿಚಾರ ಹೊರಬರುತ್ತಿದ್ದಂತೆಯೇ ರೊಚ್ಚಿಗೆದ್ದ ಜೆಡಿಎಸ್ ನ ಕಾರ್ಯಕರ್ತರು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡ ಘಟನೆ ನಡೆಯಿತು. ಇದು ಬಿಜೆಪಿ ಅವರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನೇ ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿ ನಾಯಕರು ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಯ ದಿಕ್ಕನ್ನೇ ಬದಲಾಯಿಸಿದರು. ಹೋರಾಟಗಳನ್ನು ಆರಂಭಿಸಿಯೇ ಬಿಟ್ಟರು.
ಬಿಜೆಪಿಗೆ ವರದಾನವಾಗಿದೆ
ಇಷ್ಟು ದಿನಗಳ ಕಾಲ ಯಡಿಯೂರಪ್ಪ ಆಡಿದ್ದಾರೆ ಎನ್ನಲಾದ ಆಡಿಯೋವನ್ನೇ ಮುಂದಿಟ್ಟುಕೊಂಡು ಬ್ರೇಕಿಂಗ್ ನ್ಯೂಸ್ ನೀಡುತ್ತಿದ್ದ ಮಾಧ್ಯಮಗಳ ದಿಕ್ಕು ಅದಾಗಲೇ ಶಾಸಕನ ಮನೆ ಮೇಲಿನ ಕಲ್ಲು ತೂರಾಟ ಮತ್ತು ಅದರ ಸುತ್ತಲಿನ ಬೆಳವಣಿಗೆಯತ್ತ ಬದಲಾಗಿತ್ತ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಬಿಜೆಪಿ ಕೂಡ ಜೆಡಿಎಸ್ ಕಾರ್ಯಕರ್ತರ ಗೂಂಡಾಗಿರಿಯನ್ನೇ ಪ್ರಮುಖ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡು ಒಂದಷ್ಟು ದಿನಗಳ ಕಾಲ ಇದರ ಬಿಸಿ ಆರದಂತೆ ನೋಡಿಕೊಳ್ಳುವ ಮೂಲಕ ಯಡಿಯೂರಪ್ಪ ಅವರ ಮೇಲಿನ ಆಡಿಯೋ ಆರೋಪವನ್ನು ಮರೆಸುವಂತೆ ಮಾಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಕೂಡ ಬಿಜೆಪಿಗೆ ವರದಾನವಾಗಿದೆ.
ದಿನಕಳೆದಂತೆ ಲೋಕಸಭಾ ಚುನಾವಣೆ ಹತ್ತಿರವಾಗಲಿದೆ. ಈ ವೇಳೆ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರಲಿವೆ. ಇನ್ನು ಮುಂದೆ ನಡೆಯುವ ಸಣ್ಣಪುಟ್ಟ ವಿಚಾರ, ಹೇಳಿಕೆಗಳಿಗೆ ರಾಜಕೀಯ ಬಣ್ಣ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಹೋಗುತ್ತಾರೆ. ಎಲ್ಲವನ್ನು ನೋಡುತ್ತಾ, ಅನುಭವಿಸುತ್ತಿರುವ ಮತದಾರರು ಏನು ಮಾಡುತ್ತಾರೆ ಎಂಬುದು ಮಾತ್ರ ಗೌಪ್ಯವಾಗಿಯೇ ಉಳಿದಿದೆ.