ಎಚ್ಚರ! ಪಾಲಿಷ್ ಅಕ್ಕಿಯಿಂದ ಮಕ್ಕಳ ಹೃದಯಕ್ಕೆ ಹಾನಿ
ಬೆಂಗಳೂರು, ಸೆಪ್ಟೆಂಬರ್ 12: ತಾಯಿಯ ಆಹಾರಾಭ್ಯಾಸಕ್ಕೂ ಮಗುವಿನ ಹೃದಯ ಕಾರ್ಯಾಚರಣೆಗೂ ನಿಕಟ ಸಂಬಂಧವಿದೆ ಎಂಬುದನ್ನು ಬೆಂಗಳೂರಿನ ಸಂಶೋಧಕರು ನಡೆಸಿದ ಅಧ್ಯಯನ ಕಂಡುಕೊಂಡಿದೆ.
ಪಾಲಿಷ್ ಮಾಡಿರುವ ಅಕ್ಕಿಯನ್ನು ಸೇವಿಸುವುದು ನವಜಾತ ಶಿಶುಗಳಲ್ಲಿ ವಿಟಮಿನ್ B1 ಕೊರತೆಗೆ ಕಾರಣವಾಗಲಿದೆ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ ಎಂಬ ಆಘಾತಕಾರಿ ಸಂಗತಿಯನ್ನು ಈ ಅಧ್ಯಯನ ತಿಳಿಸಿದೆ. ಪಾಲಿಷಿಂಗ್ ಸಮಯದಲ್ಲಿ ಅಕ್ಕಿಯ ಮೇಲ್ಪದರದಲ್ಲಿ ಅತಿ ಹೆಚ್ಚು ಇರಲಿರುವ ಥಿಯಾಮೈನ್ ಅಥವಾ ವಿಟಮಿನ್ ಬಿ1ಯ ಪೌಷ್ಟಿಕಾಂಶಯುತ ಭಾಗವನ್ನು ತೆಗೆದುಹಾಕಲಾಗುತ್ತದೆ.
ಕೊವಿಡ್ 19 ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಲು ಕಾರಣವೇನು?
ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ (ಎಸ್ಜೆಐಸಿಎಸ್ಆರ್) ಆರು ವರ್ಷ ನಡೆಸಿದ ಸುದೀರ್ಘ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿಯನ್ನು ಕಂಡುಕೊಂಡಿದೆ. ಅತಿ ವೇಗದ ಉಸಿರಾಟ, ವಾಂತಿ, ಕೃತಕ ಉಸಿರಾಟವನ್ನು ಪಡೆದುಕೊಳ್ಳಲು ಅಸಾಮರ್ಥ್ಯದಂತಹ ಸಮಸ್ಯೆಗಳ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಆರು ತಿಂಗಳ ಒಳಗಿನ 250 ಶಿಶುಗಳ ಕುರಿತು ಆಳವಾದ ಅಧ್ಯಯನ ನಡೆಸಲಾಗಿದೆ. ಮುಂದೆ ಓದಿ.
'ಪಲ್ಮೊನರಿ ಹೈಪರ್ಟೆನ್ಷನ್' ಸಮಸ್ಯೆ
ಅಪಾರ ಸಂಖ್ಯೆಯ ಮಕ್ಕಳು ಜೀವಕ್ಕೆ ಅಪಾಯ ತಂದೊಡ್ಡುವ ಕಾಯಿಲೆಗಳಿಗೆ ಏಕೆ ಗುರಿಯಾಗುತ್ತಿದ್ದಾರೆ ಎಂಬ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ವೇಳೆ, ಮಕ್ಕಳ ಹೃದಯದ ಬಲಭಾಗದಲ್ಲಿ ಹಾಗೂ ಶ್ವಾಸಕೋಶದಲ್ಲಿನ ರಕ್ತನಾಳಗಳಲ್ಲಿ ತೀವ್ರ ಒತ್ತಡ ಇರುವುದು ಕಂಡುಬಂದಿದೆ. ಈ ಸ್ಥಿತಿಯನ್ನು 'ಪಲ್ಮೊನರಿ ಹೈಪರ್ಟೆನ್ಷನ್' ಎಂದು ಕರೆಯಲಾಗುತ್ತದೆ.
ಆರು ವರ್ಷಗಳ ಅಧ್ಯಯನ
ಜರ್ನಲ್ ಆಫ್ ಆರ್ಕೈವ್ಸ್ ಆಫ್ ಡಿಸೀಸಸ್ ಇನ್ ಚೈಲ್ಡ್ಹುಡ್ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಶಿಶು ಹೃದ್ರೋಗ ತಜ್ಞೆ, ಅಸೋಸಿಯೇಟ್ ಪ್ರೊಫೆಸರ್ ಡಾ. ಉಷಾ ಎಂ.ಕೆ ಮತ್ತು ಪ್ರೊಫೆಸರ್ ಡಾ. ಜೇ ರಂಗನಾಥ್ ಅವರು 2013 ರಿಂದ 2019ರವರೆಗೆ ಆರು ವರ್ಷಗಳ ಅಧ್ಯಯನದ ಬಳಿಕ ಈ ಲೇಖನ ಪ್ರಕಟಿಸಿದ್ದಾರೆ.
ಕೋವಿಡ್ ಬಂದ ಮಕ್ಕಳ ಹೃದಯಕ್ಕೆ ತೀವ್ರ ಹಾನಿ: ಕಳವಳ ಮೂಡಿಸುವ ವರದಿ
ವಿಟಮಿನ್ ಬಿ1 ಮೂಲಕ ಚೇತರಿಕೆ
250 ಶಿಶುಗಳ ಪೈಕಿ 231 ಶಿಶುಗಳಿಗೆ ಥಿಯಾಮೈನ್ ಪೂರಕ ಇಂಜೆಕ್ಷನ್ ಅಥವಾ ವಿಟಮಿನ್ ಬಿ1 ನೀಡುವ ಚಿಕಿತ್ಸೆ ಮೂಲಕ ಚೇತರಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಚಿಕಿತ್ಸೆ ನೀಡಿದ 60 ದಿನಗಳವರೆಗೆ ಶಿಶುಗಳ ಆರೋಗ್ಯವನ್ನು ಗಮನಿಸಲಾಗಿದೆ. ಅವರಲ್ಲಿ ಪಲ್ಮೊನರಿ ಹೈಪರ್ಟೆನ್ಷನ್ ಮರುಕಳಿಸಿಲ್ಲ. ಏಳು ಶಿಶುಗಳು ಮೃತಪಟ್ಟಿದ್ದರೆ, 12 ಶಿಶುಗಳು ಥಿಯಾಮೈನ್ ಸಪ್ಲಿಮೆಂಟ್ಗೆ ಸ್ಪಂದಿಸಿಲ್ಲ. ಥಿಯಾಮೈನ್ಗೆ ಸ್ಪಂದಿಸಿದ 238 ಮಕ್ಕಳಲ್ಲಿ 155 ಗಂಡುಮಕ್ಕಳು ಹಾಗೂ 83 ಹೆಣ್ಣು ಶಿಶುಗಳಾಗಿವೆ.
ಥಿಯಾಮೈನ್ ಇಂಜೆಕ್ಷನ್ ಚಮತ್ಕಾರ
ಸಂಶೋಧಕರ ಪ್ರಕಾರ, ಪಲ್ಮೊನರಿ ಹೈಪರ್ಟೆನ್ಷನ್ ಹೃದಯ ಬಲಭಾಗದ ವೈಫಲ್ಯಕ್ಕೆ ಎಡೆಮಾಡಿಕೊಡುತ್ತದೆ. ಮುಖ್ಯವಾಗಿ ತಾಯಿಹಾಲು ಕುಡಿಯುವ ಮಕ್ಕಳಲ್ಲಿ ಥಿಯಾಮೈನ್ ಕೊರತೆ ಉದ್ಭವಿಸುವುದು ಇದಕ್ಕೆ ಕಾರಣ. 'ಪ್ರಮುಖವಾದ ಹೃದಯ ಅಥವಾ ಶ್ವಾಸಕೋಶ ಕಾಯಿಲೆ ಇಲ್ಲದೆ ಪಲ್ಮೊನರಿ ಹೈಪರ್ಟೆನ್ಷನ್ ತೀವ್ರವಾಗಿರುವ ಶಿಶುಗಳ ಮೇಲೆ ತೀವ್ರ ನಿಗಾ ಇರಿಸಿ ಅಧ್ಯಯನ ಮಾಡಿದ್ದೆವು. ಪ್ರಾಯೋಗಿಕ ಸಂದೇಹದ ಆಧಾರದಲ್ಲಿ ಮಕ್ಕಳಿಗೆ ಥಿಯಾಮೈನ್ ಇಂಜೆಕ್ಷನ್ ನೀಡಿದ ಬಳಿಕ ಅವರಲ್ಲಿ ಕೇವಲ 24-48 ಗಂಟೆಗಳಲ್ಲಿಯೇ ಪಲ್ಮೊನರಿ ಹೈಪರ್ಟೆನ್ಷನ್ ಸಂಪೂರ್ಣ ಸುಧಾರಣೆ ಕಂಡುಬಂದವು' ಎಂದು ಡಾ. ಉಷಾ ತಿಳಿಸಿದ್ದಾರೆ.
ವೆಂಟಿಲೇಟರ್ನಿಂದಲೂ ಚೇತರಿಕೆ
ಹೆಚ್ಚಿನ ಶಿಶುಗಳು ತೀವ್ರ ಅಸ್ವಸ್ಥವಾಗಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವು. ಚೇತರಿಸಿಕೊಂಡ 231 ಮಕ್ಕಳಲ್ಲಿ ನಾಲ್ಕು ಶಿಶುಗಳನ್ನು ವೆಂಟಿಲೇಟರ್ನಲ್ಲಿ ಇರಿಸಬೇಕಾಗಿತ್ತು. ಅವುಗಳಿಗೆ ಥಿಯಾಮೈನ್ ಅಭಿದಮನಿ ಚುಚ್ಚುಮದ್ದು ನೀಡಿದ ಬಳಿಕ ನಾಟಕೀಯವಾಗಿ ಚೇತರಿಸಿಕೊಂಡವು. 5-6 ಗಂಟೆಯಲ್ಲಿಯೇ ಅವುಗಳನ್ನು ವೆಂಟಿಲೇಟರ್ನಿಂದ ಹೊರ ತೆಗೆಯಲಾಯಿತು ಎಂದು ಸಂಶೋಧಕರು ಹೇಳಿದ್ದಾರೆ.
ಥಿಯಾಮಿನ್ ಕೊರತೆ ಏಕೆ?
ಥಿಯಾಮೈನ್ ಕೊರತೆಯು ಆಂಧ್ರಪ್ರದೇಶ, ಈಶಾನ್ಯ, ಒಡಿಶಾ, ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಶಿಶುಗಳಲ್ಲಿ ಅತಿ ಹೆಚ್ಚು ಕಂಡುಬರುತ್ತದೆ. ಈ ಭಾಗಗಳಲ್ಇ ಪ್ರಧಾನ ಆಹಾರ ಅಕ್ಕಿ. ಆದರೆ ಪಾಲಿಷ್ ಮಾಡಿದ ಅಕ್ಕಿಗಳನ್ನು ಬಳಸದ ಕೇರಳದಲ್ಲಿನ ರೋಗಿಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದಿಲ್ಲ ಎಂದು ಡಾ. ರಂಗನಾಥ್ ತಿಳಿಸಿದ್ದಾರೆ.
ಏಕದಳ,
ಕಾಳುಗಳು,
ದಿದ್ವಳ
ಧಾನ್ಯಗಳು,
ಆಲೂಗಡ್ಡೆ,
ಕಡಿಮೆ
ಕೊಬ್ಬಿನ
ಮಾಂಸ,
ಹಾಲು
ಮತ್ತು
ಒಣಹಣ್ಣುಗಳ
ಹೊರಭಾಗದ
ಪದರಗಳಲ್ಲಿ
ಥಿಯಾಮೈನ್
ಅಧಿಕ
ಪ್ರಮಾಣದಲ್ಲಿ
ಇರುತ್ತವೆ.
ಪಾಲಿಷ್ ಮಾಡಿದ ಅಕ್ಕಿ ಅಪಾಯ
ಸ್ತನ್ಯಪಾನ ಮಾಡುವ ತಾಯಂದಿರಿಗೆ ಮೊದಲ ಆರು ತಿಂಗಳು ಥಿಯಾಮೈನ್ ಸಪ್ಲಿಮೆಂಟ್ ಒದಗಿಸುವುದು ಅಗತ್ಯವಾಗಿದೆ. ಪ್ರಸವಪೂರ್ವ ಆಹಾರ ಕ್ರಮವು ಸಾಂಪ್ರದಾಯಿಕ ನಂಬಿಕೆ ಹಾಗೂ ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತವೆ. ಪಾಲಿಷ್ ಮಾಡಿರುವ ಅಕ್ಕಿಯನ್ನು ಸೇವಿಸುವುದು, ಆಹಾರ ಕ್ರಮದ ವೈವಿಧ್ಯದಲ್ಲಿನ ಕೊರತೆ ಮತ್ತು ಆಹಾರ ಕಟ್ಟುಪಾಡುಗಳು ಥಿಯಾಮೈನ್ ಕೊರತೆಗೆ ಪ್ರಮುಖ ಕಾರಣಗಳಾಗಿವೆ ಎಂದು ಡಾ. ರಂಗನಾಥ್ ವಿವರಿಸಿದ್ದಾರೆ.
Recommended Video
ಪೌಷ್ಟಿಕಾಂಶಯುತ ಆಹಾರ
'ಆಹಾರ ಪಥ್ಯ ನಿರ್ಬಂಧಗಳ ಭಾಗವಾಗಿ ಬಾಣಂತಿಯರು ಬೇಳೆಗಳು, ತರಕಾರಿ, ಕಾಳುಗಳು, ಧಾನ್ಯಗಳನ್ನು ಸೇವಿಸದಂತೆ ತಡೆಯುವ ಪದ್ಧತಿ ಕರ್ನಾಟಕದ ಹೆಚ್ಚಿನ ಭಾಗಗಳು, ತೆಲಂಗಾಣ ಮತ್ತು ಆಂಧ್ರಪ್ರದೇಶ ಕೆಲವು ಭಾಗಗಳಲ್ಲಿ ಚಾಲ್ತಿಯಲ್ಲಿದೆ. ಗರ್ಭಿಣಿಯರಿಗೆ ಕೆಂಪಕ್ಕಿ, ಕುಚ್ಚಲಕ್ಕಿ, ರಾಗಿ, ಕಿರುಧಾನ್ಯಗಳು, ತರಕಾರಿಗಳು ಮತ್ತು ಹೇರಳವಾಗಿ ಹಾಲು ನೀಡಬೇಕು. ಇದು ನವಜಾತ ಶಿಶುಗಳಲ್ಲಿ ಜೀವಕ್ಕೆ ಮಾರಕವಾಗುವ ಅಂಶಗಳನ್ನು ತಡೆಯಬಲ್ಲದು' ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಹೇಳಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
'ಪೂರಕ ಥಿಯಾಮೈನ್ ಮೂಲಕ ಹೃದಯ ವೈಫಲ್ಯದ ಲಕ್ಷಣಗಳುಳ್ಳ, ಆದರೆ ಹೃದಯ ಮತ್ತು ಶ್ವಾಸಕೋಶದಲ್ಲಿ ರಚನಾತ್ಮಕ ತೊಂದರೆಗಳನ್ನು ಹೊಂದಿಲ್ಲದ ಮಕ್ಕಳನ್ನು ರಕ್ಷಿಸಬಹುದು. ಇಂತಹ ಪ್ರಕರಣಗಳಲ್ಲಿ ಶಿಶು ಮರಣ ಪ್ರಮಾಣವನ್ನು ಸಾಕಷ್ಟು ಯಶಸ್ವಿಯಾಗಿ ಕಡಿಮೆ ಮಾಡಬಹುದು' ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.