ಭಾರತೀಯರನ್ನು 14 ಗಂಟೆ ಮನೆಯಲ್ಲೇ ಕೂಡಿ ಹಾಕಿದ ಕೊರೊನಾ!
ನವದೆಹಲಿ, ಮಾರ್ಚ್ 22: ಭಾರತೀಯರನ್ನು 14 ಗಂಟೆಗಳ ಕಾಲ ಮನೆಯಲ್ಲಿ ಕೂಡಿ ಹಾಕಿದ ದಿನ. ಕೊರೊನಾವೈರಸ್ ಭೀತಿಯಲ್ಲೇ ಭಾರತೀಯರು ದಿನವಿಡೀ ಕಾಲ ಕಳೆದ ದಿನ. ಮನೆಯಿಂದ ಹೊರ ಬಾರದೇ ಜನರು ಬಂಧಿಯಾದ ದಿನ. ಮಾರ್ಚ್ 22 ಭಾರತದಲ್ಲಿ ಮೊದಲ ಬಾರಿಗೆ ಜನತಾ ಕರ್ಫ್ಯೂ ಜಾರಿಗೊಳಿಸಿದ ದಿನ.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆ ಸೃಷ್ಟಿಯಾಗಿದೆ. ಹೊಸ ಆತಂಕ ಸೃಷ್ಟಿಸಿದ ಕೊವಿಡ್-19 ಹೊಸ ಅಲೆಯು ಹಳೆ ದಿನವನ್ನು ಜ್ಞಾಪಿಸಿಕೊಳ್ಳುವಂತೆ ಮಾಡಿದೆ. ಕಳೆದ 2020ರ ಮಾರ್ಚ್ 22ರಂದು ಜನತಾ ಕರ್ಫ್ಯೂ ಜಾರಿಗೊಳಿಸಿ ಇಂದಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ.
ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!
ಕಳೆದ ವರ್ಷ ಮಾರ್ಚ್ 19ರಂದು ಭಾರತವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಬಗ್ಗೆ ಘೋಷಿಸಿದ್ದರು. ಕೊವಿಡ್-19 ವಿರುದ್ಧ ಹೋರಾಡಲು ಸಾರ್ವಜನಿಕರು 14 ಗಂಟೆಗಳವರೆಗೂ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದರು. ಪ್ರಧಾನಿ ಮಾತಿಗೆ ಜನರ ಸ್ಪಂದನೆ ಹೇಗಿತ್ತು. ಭಾರತದಲ್ಲಿ ಜಾರಿಗೊಂಡ ಮೊದಲ ಜನತಾ ಕರ್ಫ್ಯೂ ಹೇಗಿತ್ತು ಎಂಬುದರ ಕುರಿತು ವಿಶೇಷ ವರದಿ ಇಲ್ಲಿದೆ.
ಭಾರತದಲ್ಲಿ ಜನತಾ ಕರ್ಫ್ಯೂ ಅರ್ಥವೇನು?
ದೇಶಾದ್ಯಂತ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿತ್ತು. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾವೈರಸ್ ನಿಯಂತ್ರಣಾ ಕ್ರಮಗಳನ್ನು ಘೋಷಿಸಿದ್ದವು. ಅದೇ ನಿಟ್ಟಿನಲ್ಲಿ ಭಾರತದಲ್ಲಿ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ 'ಜನತಾ ಕರ್ಫ್ಯೂ' ಜಾರಿಗೊಳಿಸಲಾಗಿತ್ತು. ಭಾರತ ಲಾಕ್ ಡೌನ್ ಘೋಷಿಸಿದರೆ ಜನರ ಸ್ಪಂದನೆ ಹೇಗಿರುತ್ತದೆ ಎಂಬುದನ್ನು ಅವಲೋಕಿಸುವ ನಿಟ್ಟಿನಲ್ಲಿ ಈ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
"ಇಂದು ನಾನು ಪ್ರತಿಯೊಬ್ಬ ಸಾರ್ವಜನಿಕರಿಂದ ಹೆಚ್ಚಿನ ಸಹಕಾರವನ್ನು ಬಯಸುತ್ತಿದ್ದೇನೆ. ಜನರು ತಮಗೆ ತಾವೇ ಹಾಕಿಕೊಳ್ಳುವ ಕರ್ಫ್ಯೂ ಅನ್ನು ಜನತಾ ಕರ್ಫ್ಯೂ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು.
ಪ್ರಧಾನಿ ಮೋದಿ ಅಂದು ಭಾರತೀಯರಿಗೆ ಹೇಳಿದ್ದೇನು?
ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಂದು ಸಾರ್ವಜನಿಕರು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೂ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿದ್ದರು. ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಗಳಲ್ಲಿ ಬಂದು ಚಪ್ಪಾಳೆ ತಟ್ಟಬೇಕು. ಆ ಮೂಲಕ ಕೊರೊನಾವೈರಸ್ ವಾರಿಯರ್ಸ್ ಸೇವೆಗೆ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದ್ದರು. ಇದರ ಜೊತಗೆೆ ಜನತಾ ಕರ್ಫ್ಯೂ ವ್ಯಾಪ್ತಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಅಯ್ಯೋ ಶಿವನೇ.. ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಅಂದ್ರೆ ಹೀಗಾ ಮಾಡೋದು?!
ದೇಶದಲ್ಲಿ ಜನತಾ ಕರ್ಫ್ಯೂ ದಿನ ನಡೆದಿದ್ದೇನು?
ಜನತಾ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆ ಭಾರತೀಯರು ಅಂದು ರಸ್ತೆಗೆ ಇಳಿಯಲಿಲ್ಲ. ಸ್ವಯಂಪ್ರೇರಿತರಾಗಿ ಸಾರ್ವಜನಿಕ ಸ್ಥಳಗಳಿಂದ ದೂರವಿದ್ದ ಜನರು ಮನೆಗಳಲ್ಲೇ ಬಂಧಿಯಾಗಿದ್ದು, ಜನತಾ ಕರ್ಫ್ಯೂ ಯಶಸ್ವಿಯಾಗಿತ್ತು. ಪ್ರಧಾನಿ ಮೋದಿ ಮನವಿ ಪ್ರಕಾರ, ಚಪ್ಪಾಳೆ ತಟ್ಟುವಂತೆ ಹೇಳಿದರೆ ಸಾರ್ವಜನಿಕರು ಪ್ಲೇಟು, ತಾಟು ಹಿಡಿದು ರಸ್ತೆಯಲ್ಲಿ ಜನರು ಬಾರಿಸುತ್ತಾ ಸಾಗಿದರು. 5 ಗಂಟೆ 5 ನಿಮಷಗಳ ನಂತರವೂ ಇದು ಮುಂದುವರಿಯಿತು.
ಭಾರತದಲ್ಲಿ ಮೊದಲ ಹಂತದ ಲಾಕ್ ಡೌನ್ ಘೋಷಣೆ
ಜನತಾ ಕರ್ಫ್ಯೂ ಯಶಸ್ವಿಯಾದ ಎರಡು ದಿನಗಳ ನಂತರ ದೇಶಾದ್ಯಂತ ಮೊದಲ ಹಂತದ ಲಾಕ್ ಡೌನ್ ಘೋಷಿಸಲಾಯಿತು. ಮಾರ್ಚ್ 24 ರಿಂದ 21 ದಿನಗಳವರೆಗೂ ಲಾಕ್ ಡೌನ್ ಘೋಷಿಸಲಾಗಿದ್ದು, ನಂತರದಲ್ಲಿ ಅದನ್ನು ಮೂರು ಬಾರಿ ವಿಸ್ತರಿಸಲಾಯಿತು. ಕೊನೆಯದಾಗಿ ಮೇ 18ರಂದು ಆರಂಭವಾದ ಭಾರತ ಲಾಕ್ ಡೌನ್ ಮೇ 31ಕ್ಕೆ ಅಂತ್ಯವಾಯಿತು. ಜೂನ್ 1ರಿಂದ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಯಿತು.
ಭಾರತದಲ್ಲಿ ಕೊರೊನಾ 2ನೇ ಅಲೆಯಿಂದ ಹೆಚ್ಚಿನ ಭೀತಿ
ದೇಶದಲ್ಲಿ ಕೊರೊನಾವೈರಸ್ 2ನೇ ಅಲೆಯು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕಳೆದ 24 ಗಂಟೆಗಳಲ್ಲೇ 46951 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ 21,180 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಂದೇ ದಿನ 212 ಜನರು ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 1,16,46,081 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈವರೆಗೂ 1,11,51,468 ಸೋಂಕಿತರು ಗುಣಮುಖರಾಗಿದ್ದು, ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,59,967ಕ್ಕೆ ಏರಿಕೆಯಾಗಿದೆ. ಉಳಿದಂತೆ 3,34,646 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.