ನಾಯ್ಡು ಕೋಟೆ ಭೇದಿಸಿದ ಜಗನ್! ಹೀಗೊಂದು ರೋಚಕ ರಾಜಕಾರಣ
ರಾಜಕಾರಣದ ಚಕ್ರ ತಿರುಗುತ್ತದೆ... ಕೆಳಗಿದ್ದವರು ಮೇಲೆ ಹೋಗಬಹುದು, ಮೇಲಿದ್ದವರು ಒಮ್ಮೆಲೇ ಉರುಳಿ ಕೆಳಗೆ ಬೀಳಬಹುದು. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರ ಭದ್ರಕೋಟೆಯನ್ನು ಭೇದಿಸಿದ ಜಗನ್ ರೆಡ್ಡಿ ಅವರನ್ನು ರಾಜಕಾರಣದ ಚಕ್ರ ಗದ್ದುಗೆಯ ಬಳಿ ತಂದು ನಿಲ್ಲಿಸಿದೆ. ಜಗನ್ ರೆಡ್ಡಿ ಅವರ ಭಾವನಾತ್ಮಕ ಮಾತುಗಳು, ಚಾಣಾಕ್ಷ ತಂತ್ರಗಾರಿಕೆಯ ಎದುರು ನಾಯ್ಡು ಅವರ ನಾಲ್ಕು ದಶಕದ ರಾಜಕೀಯ ಅನುಭವ ಸೋತು ಸುಣ್ಣವಾಗಿದೆ.
ರಾಜ್ಯವಿಭಜನೆಯ ನಂತರ ಆಂಧ್ರಪ್ರದೇಶದಲ್ಲಿ ಟಿಡಿಪಿಗೆ ಸರಿಸಮನಾಗಿ ನಿಲ್ಲುವ ಪಕ್ಷ ಯಾವುದೂ ಇಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದು ಜಗನ್. ಸರಿಸುಮಾರು ತಮ್ಮ ರಾಜಕೀಯ ಅನುಭವದಷ್ಟೇ ವಯಸ್ಸಾದ ವ್ಯಕ್ತಿಯೊಬ್ಬರೆದುರು ತಾನು ತಲೆಬಾಗಿ ನಿಲ್ಲಬೇಕಾಗುತ್ತದೆ ಎಂಬ ಯಾವ ನಿರೀಕ್ಷೆಯನ್ನೂ ನಾಯ್ಡು ಕನಸಿನಲ್ಲಿಯೂ ಮಾಡಿರಲಿಲ್ಲ. ಆದರೆ ತಮ್ಮದೇ ತಪ್ಪು ಹೆಜ್ಜೆಯಿಂದ ನಾಯ್ಡು ಭಾರೀ ಬೆಲೆ ತೆರಬೇಕಾಯ್ತು.
ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್; ಇದು ಆಂಧ್ರ ಪಾಲಿಟಿಕ್ಸ್
ಚಂದ್ರಬಾಬು ನಾಯ್ಡು ಅವರಿಗಿದ್ದ ಅತಿಯಾದ ಆತ್ಮವಿಶ್ವಾಸದಿಂದಾಗಿ ಜಗನ್ ಅವರನ್ನು ತೀರಾ ಗಂಭೀರವಾಗಿ ಅವರೆಂದೂ ಪರಿಗಣಿಸಿರಲಿಲ್ಲ. ನಿರಂತರವಾಗಿ ಜಗನ್ ಮೇಲೆ ನಾಯ್ಡು ಟೀಕೆಯ ಸುರಿಮಳೆ ಮಾಡುತ್ತಿದ್ದರೆ ಜಗನ್ ತಳಮಟ್ಟದಿಂದ ಪಕ್ಷ ಸಂಘಟಿಸುವ, ಜನರಲ್ಲಿ ತನ್ನ ಪಕ್ಷದ ಬಗ್ಗೆ ಅನುಕಂಪ ಸೃಷ್ಟಿಸುವ ಜೊತೆಯಲ್ಲೇ ಆಡಳಿತ ಪಕ್ಷದ ಹುಳುಕುಗಳನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದರು!
ಎದುರಾಳಿ ಮೈಮರೆತಾಗ ಶಸ್ತ್ರ ಪ್ರಯೋಗ!
ಆಂಧ್ರದಲ್ಲಿ ತಾನು ಸೋಲುವುದಕ್ಕೆ ಸಾಧ್ಯವೇ ಇಲ್ಲ ಎಂಬ ಹುಚ್ಚು ನಂಬಿಕೆಯಲ್ಲಿ ನಾಯ್ಡು ಸಂಪೂರ್ಣವಾಗಿ ರಾಷ್ಟ್ರದ ರಾಜಕೀಯದತ್ತ ಗಮನ ಹರಿಸಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಜಗನ್, ಆಂಧ್ರದ ಜನರ ಮನಸ್ಸಿನಲ್ಲಿ ನೆಲೆಯೂರುವ ಪ್ರಯತ್ನದಲ್ಲಿ ಯಶಸ್ವಿಯಾದರು. ಮಹಾಘಟಬಂಧನದ ನಾಯಕರನ್ನು ಒಂದಾಗಿಸಿ, ಕೇಂದ್ರದಲ್ಲಿ ಎನ್ ಡಿಎಯೇತರ ಸರ್ಕಾರವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದ ನಾಯ್ಡು ಇತ್ತ ಆಂಧ್ರದಲ್ಲಿ ತನ್ನದೇ ಪಕ್ಷವನ್ನು ಮೊದಲು ಗಟ್ಟಿಗೊಳಿಸಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಅರಿಯದೆ ಹೋದರು. ಎದುರಾಳಿ ಮೈಮರೆತಾಗ ಜಗನ್ ಹೂಡಿದ ಅಸ್ತ್ರ ಜನರ ಮನಸ್ಸಿನಲ್ಲಿ ಚೆನ್ನಾಗಿಯೇ ನಾಟಿತ್ತು!
ಆಂಧ್ರದಲ್ಲಿ ನಾಯ್ಡು ಯುಗಾಂತ್ಯ! ಮೇ 30 ರಂದು ಜಗನ್ ಗದ್ದುಗೆಗೆ
ನಾಯ್ಡು ನಡೆ ಬಗ್ಗೆ ಜನರಲ್ಲೇ ಅಸಮಾಧಾನ
2014 ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದ ಚಂದ್ರಬಾಬು ನಾಯ್ಡು, ಆಂಧ್ರದ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ ಎನ್ನುವಾಗ ಮೈತ್ರಿಕೂಟದಿಂದ ಹೊರಬಂದರು. ಅದುವರೆಗೂ ಸದ್ದಿಲ್ಲದ 'ವಿಶೇಷ ಸ್ಥಾನಮಾನದ ಕೂಗು' ಆಗ ಪ್ರತಿಧ್ವನಿಸುವುದಕ್ಕೆ ಆರಭಿಸಿತ್ತು. ಆದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಕೂಗನ್ನು ಆರಂಭಿಸಿದ್ದು ಇದೇ ಜಗನ್ ರೆಡ್ಡಿ. ಆ ಕೂಗು ಎಲ್ಲಿ ಜಗನ್ ರೆಡ್ಡಿ ಅವರಿಗೆ ಜನಪ್ರಿಯತೆ ನೀಡಿಬಿಡುತ್ತದೋ, ತನ್ನ ರಾಜಕೀಯ ಬದುಕಿಗೆ ಸಂಚಕಾರ ತರುತ್ತದೋ ಎಂಬ ಆತಂಕಕ್ಕೆ ನಾಯ್ಡು ಆ ಕೂಗನ್ನು ತಮ್ಮದೇ ಧ್ವನಿಯನ್ನಾಗಿಸಿಕೊಂಡರು. ಕೇಂದ್ರ ಸರ್ಕಾರದಿಂದ ಹೊರಬಂದರು. ಆಂಧ್ರಕ್ಕಾಗಿ ತಾನು ಕೇಂದ್ರ ಸರ್ಕಾರದ ಸಂಬಂಧ ಕಡಿದುಕೊಂಡೆ ಎಂಬಂತೆ ಬಿಂಬಿಸುವ ಯತ್ನ ಮಾಡಿದರು. ಆದರೆ ನಾಲ್ಕು ವರ್ಷದವರೆಗೆ ಉಡುಗಿಹೋಗಿದ್ದ ಧ್ವನಿ ಇದ್ದಕ್ಕಿದ್ದಂತೆ ಸದ್ದು ಮಾಡಿದಾಗ ಅದರ ಹಿಂದೆ ರಾಜ್ಯದ ಬಗೆಗಿನ ಕಾಳಜಿಗಿಂತ, ಅಧಿಕಾರ ದಾಹದ ಉದ್ದೇಶವಿದೆ ಎಂಬುದನ್ನು ಜನರು ಅರ್ಥಮಾಡಿಕೊಂಡರು. ಜನರು ಅದನ್ನು ಅರ್ಥಮಾಡಿಕೊಳ್ಳುವ ಮಟ್ಟಿಗೆ ಅವರನ್ನು ಸಜ್ಜುಗೊಳಿಸಿದ್ದು ಜಗನ್ ರೆಡ್ಡಿ! ಆದರೆ ಇವೆಲ್ಲವೂ ನಾಯ್ಡುಗೆ ಅರ್ಥವಾಗುವ ಹೊತ್ತಿಗೆ 'ಫಲಿತಾಂಶ'ವೇ ಹೊರಬರಬೇಕಾಯ್ತು!
ತಾನೇ ಬಿಟ್ಟ ಬಾಣ ತನಗೇ ನಾಟಿ...
ಜಗನ್ ರೆಡ್ಡಿ ಅವರನ್ನು ನಾಯ್ಡು ಟೀಕಿಸದ ದಿನವಿಲ್ಲ. ರೆಡ್ಡಿ ಅವರನ್ನು ಟೀಕಿಸುವುದಕ್ಕೆ ಸಿಗುವ ಯಾವ ವಿಷಯವನ್ನೂ ನಾಯ್ಡು ಬಿಟ್ಟವರಲ್ಲ. ಆದರೆ ಜಗನ್ ರೆಡ್ಡಿ ನಾಯ್ಡು ಅವರ ಮೇಲೆ ಯಾವುದೇ ವೈಯಕ್ತಿಕ ಆರೋಪ ಮಾಡದೆ, ಅವರ ಸರ್ಕಾರದ ಹುಳುಕು ಮತ್ತು ಭ್ರಷ್ಟಾಚಾರದ ಆರೋಪದ ಬಗ್ಗೆ ಜನರನ್ನು ಸೆಳೆಯುವ ಯತ್ನ ಮಾಡಿದರು. ಅವರ ಈ ಪ್ರಬುದ್ಧ ವರ್ತನೆ ಜನರನ್ನು 'ಇಂಪ್ರೆಸ್' ಮಾಡುವಲ್ಲಿ ಸಾಕಷ್ಟು ಸಹಾಯಕವಾಯಿತು. ನಾಯ್ಡು ಅವರು ಎಷ್ಟೇ ಪ್ರಚೋದಿಸಿದರೂ ಸಂಯಮ ಕಳೆದುಕೊಳ್ಳದೆ ತಾಳ್ಮೆಯಿಂದಲೇ ಉಳಿದರು ಜಗನ್.
ಪಾದಯಾತ್ರೆಯ ಅನುಭವ
3648 ಕಿಮೀ ದೂರದ ಪಾದಯಾತ್ರೆ ಜಗನ್ ರೆಡ್ಡಿ ಅವರಿಗೆ ಸಾಕಷ್ಟು ಅನುಭವ ನೀಡಿದೆ. ಅವರನ್ನು ರಾಜಕೀಯವಾಗಿ ಪಳಗಿಸಿದೆ. ಆ ಪಾದಯಾತ್ರೆಯಲ್ಲಿ ಜನರ ಕಷ್ಟ, ಕಾರ್ಪಣ್ಯ ಅರಿಯುವುದಕ್ಕಿಂತ ಹೆಚ್ಚಾಗಿ ನಾಯ್ಡು ಸರ್ಕಾರದ ಮೇಲೆ ಜನರಿಗಿರುವ ಅಭಿಪ್ರಾಯ ತಿಳಿದುಕೊಳ್ಳುವ ಯತ್ನವನ್ನು ಜಗನ್ ಮಾಡಿದ್ದಾರೆ. ಅದಾಗಲೇ ಇದ್ದ ಆಡಳಿತ ವಿರೋಧಿ ಜ್ವಾಲೆಗೆ ತುಪ್ಪ ಸುರಿಯುವ ಕೆಲಸವನ್ನೂ ಸಮರ್ಥವಾಗಿ ಮಾಡಿದ್ದಾರೆ. ನಾಯ್ಡು ಸರ್ಕಾರದ ಯೋಜನೆಗಳು ಯಾವುದೂ ಜನರನ್ನು ತಲುಪಿಲ್ಲ ಎಂಬುದನ್ನು ಜನರಿಗೆ ಅರ್ಥಮಾಡಿಸಿದ್ದಾರೆ. ಪರ್ಯಾಯ ವ್ಯವಸ್ಥೆಯೊಂದು ಬೇಕೆ ಬೇಕು ಎಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಆ ಎಲ್ಲದರ ಪರಿಣಾಮವಾಗಿ ಅವರಿಂದು ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದು ನಿಂತಿದ್ದಾರೆ. ಹೀಗೇ ಎಂದೂ ಸೋಲುವುದಿಲ್ಲ ಎಂದುಕೊಂಡಿದ್ದ ನಾಯ್ಡು ಅವರಿಗೆ ಸೋಲಿನ ರುಚಿ ಉಣಿಸಿದ್ದಾರೆ, ಆಂಧ್ರದ ಟಿಡಿಪಿ ಭದ್ರಕೋಟೆ ಭೇದಿಸಿ ರಾಜಕಾರಣಕ್ಕೊಂದು ರೋಚಕ ತಿರುವು ನೀಡಿದ್ದಾರೆ.
ಆಂಧ್ರ ಚುನಾವಣಾ ಫಲಿತಾಂಶ
ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಕ್ಷೇತ್ರಗಳಲ್ಲಿ 152 ವೈಎಸ್ ಆರ್ ಕಾಂಗ್ರೆಸ್, 22 ಟಿಡಿಪಿ ಮತ್ತು 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ 22 ವೈಎಸ್ ಆರ್ ಕಾಂಗ್ರೆಸ್ ಮತ್ತು ಕೇವಲ 2 ಕ್ಷೇತ್ರಗಳಲ್ಲಿ ಟಿಡಿಪಿ ಜಯಗಳಿಸಿತ್ತು. ಇಲ್ಲಿ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬಿದ್ದಿತ್ತು.