ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?
ನಮ್ಮ ದೇಹವನ್ನು ಹೇಗೆ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಮನಸ್ಸನ್ನು ಕೂಡ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ.
ದೇಹಕ್ಕೆ ಉಂಟಾಗುವ ತೊಂದರೆಗಳು ಹೊರ ಪ್ರಪಂಚಕ್ಕೆ ತಿಳಿಯುತ್ತದೆ. ಅದಕ್ಕೆ ಚಿಕಿತ್ಸೆಯನ್ನು ಕೂಡ ನೀಡಬಹುದು. ಆದರೆ ಅನಾರೋಗ್ಯಕರ ಮನಸ್ಸು ಹೊರ ಜಗತ್ತಿಗೆ ಕಾಣದು. ಅದರಿಂದ ಉಂಟಾಗುವ ಪರಿಣಾಮ ಕೇವಲ ನಮಗೆ ಮಾತ್ರವಲ್ಲ ಇಡೀ ಸಮಾಜದ ಮೇಲೆ ಬೀರುತ್ತದೆ.
ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...
ಕೆಟ್ಟ ಮನಸ್ಸು ಪ್ರತಿಯೊಂದನ್ನೂ ಕೆಟ್ಟದಾಗಿಯೇ ಕಾಣುತ್ತದೆ. ಹಾಗಾಗಿ ನಾವು ಮಾಡುತ್ತಿರುವುದು ಸರಿ ಎಂಬ ಮನೋಭಾವ ಬಹಳಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಕೆಲವೊಮ್ಮೆ ಇಂತಹವರು ಸಮಾಜ ಕಂಟಕರಾಗಿ ಭಾರೀ ಶಿಕ್ಷೆಗೆ ಗುರಿಯಾಗಬಹುದು. ಆದುದರಿಂದ ನಮ್ಮ ಮನಸ್ಸನ್ನು ಸದಾ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯ.
ಹಾಗೆ ನೋಡಿದರೆ ಇಂದಿನ ಒತ್ತಡದ ಬದುಕಿನಲ್ಲಿ ಸದಾ ಒಂದಲ್ಲ ಒಂದು ರೀತಿಯ ಉದ್ವೇಗಗಳಿಗೆ ಒಳಗಾಗುವ ನಾವು ದೇಹಕ್ಕಿಂತ ಹೆಚ್ಚಿನ ಕೆಲಸವನ್ನು ಮೆದುಳಿಗೆ ನೀಡುತ್ತೇವೆ. ಮನಸ್ಸು ಸದಾ ಒತ್ತಡದಲ್ಲಿರುತ್ತದೆ. ಹೀಗಾಗಿ ಮನಸ್ಸನ್ನು ಒಂದೆಡೆ ತಂದು ಕಟ್ಟಿ ಹಾಕುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ.
ಪ್ರಶಾಂತ ವಾತಾವರಣದಲ್ಲಿರಿ
ಆಫೀಸಿನ ಕೆಲಸವನ್ನು ಕೇವಲ ಆಫೀಸಿನಲ್ಲಿಯೇ ಬಿಟ್ಟು ಬರುವಂತಿಲ್ಲ. ಬಹಳಷ್ಟು ಮಂದಿಯ ಕೆಲಸಕ್ಕೆ ನಿಗದಿತ ಸಮಯವಿಲ್ಲ. ಎಲ್ಲಿಯೇ ಇದ್ದರೂ ಕೆಲಸದ ನಂಟು ಇದ್ದೇ ಇರುತ್ತದೆ. ಹೀಗಾದಾಗ ಮನಸ್ಸು ಚಂಚಲವಾಗುತ್ತದೆ. ಇದರಿಂದ ಕ್ರಮೇಣ ಮಾನಸಿಕ ಅಸ್ವಸ್ಥತೆಗೆ ಗುರಿಯಾಗುವುದು ಹೆಚ್ಚು.
ಇಂತಹ ಒತ್ತಡಗಳ ಬದುಕು ನಡೆಸುವವರು ದಿನದಲ್ಲಿ ಕೆಲವು ಸಮಯವನ್ನಾದರೂ ಒತ್ತಡಗಳನ್ನು ದೂರವಿಟ್ಟು, ಪ್ರಶಾಂತ ವಾತಾವರಣದಲ್ಲಿದ್ದು ಮನಸ್ಸು ಹಗುರ ಮಾಡುವ ಪ್ರಯತ್ನ ಮಾಡಬೇಕು.
ಮಾನವೀಯತೆ ಬೆಳೆಸಿಕೊಳ್ಳಿ
ಪ್ರಾರಂಭದಿಂದಲೇ ನಾವು ಮನಸ್ಸಿನ ತುಂಬಾ ದುರ್ಭಾವನೆಗಳನ್ನು ತುಂಬಿಕೊಳ್ಳದೆ, ತಪ್ಪು ಆವೇಗಗಳನ್ನು ಸಂಚಯಿಸಿಕೊಳ್ಳದೆ ಬೇರೆಯವರ ಬಗ್ಗೆ ಅಸೂಯೆಪಡದೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಇತರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಅಸಂಗತ್ವವನ್ನೂ, ಕ್ಷಮೆಯನ್ನೂ, ವಿನಯವನ್ನೂ ರೂಢಿಸಿಕೊಳ್ಳುತ್ತಾ, ನಮ್ಮಲ್ಲಿ ಮಾನವೀಯತೆಯನ್ನು ಬೆಳೆಸುವ ಪ್ರಯತ್ನ ಮಾಡಬೇಕು.
ಹೀಗೆ ಮಾಡುವುದರಿಂದ ಮನಸ್ಸು ಮೃದುವಾಗುತ್ತದೆ. ತಕ್ಷಣಕ್ಕೆ ಕಾಠಿಣ್ಯ ರೂಪ ತಾಳದ ಕಾರಣ ದಿಢೀರ್ ಆಗಿ ನಮ್ಮಿಂದಾಗುವ ಆಚಾತುರ್ಯವನ್ನು ತಪ್ಪಿಸಬಹುದು.
ವ್ಯಕ್ತಿ ಸೇವಿಸೋ ಆಹಾರಕ್ಕೂ ಆತನ ಗುಣಕ್ಕೂ ಸಂಬಂಧವಿದೆಯಾ...?!
ನಾವೇ ಅನುಭವಿಸಬೇಕಾಗುತ್ತದೆ
ನಮ್ಮಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಅರಿವು ಮೂಡಬೇಕು. ನಾನು ಮತ್ತೊಬ್ಬನಿಗೆ ನೋವು ನೀಡಿದೆನಲ್ಲಾ ಎಂಬ ಪಶ್ಚಾತಾಪದ ಮನೋಭಾವ ಬರಬೇಕು. ಬದಲಾಗಿ ಆತನಿಗೆ ತಕ್ಕ ಶಾಸ್ತಿ ಮಾಡಿದೆ. ಅವನು ಇರುವಷ್ಟು ದಿನ ನೆನಪಿಸಿಕೊಳ್ಳಬೇಕು.
ಹಾಗೆ ಮಾಡಿದೆ ಎಂಬ ಮನೋಭಾವ ತಕ್ಷಣಕ್ಕೆ ನಾಯಕನಂತೆ ಪ್ರತಿಬಿಂಬಿಸಬಹುದಾದರೂ, ನಂತರದ ಎಲ್ಲಾ ಕೆಡುಕುಗಳ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ.
ಕ್ಷಮಾಗುಣ ಬೆಳೆಸಬೇಕು
ಮೊದಲು ನಮ್ಮಲ್ಲಿ ಕ್ಷಮಾಗುಣ ಬೆಳೆಯಬೇಕು ಅನ್ನೋದಕ್ಕಿಂತ ಬೆಳೆಸಬೇಕು. ಮಾತೆ ಶಾರದಾದೇವಿಯವರ ಪ್ರಕಾರ ಕ್ಷಮಾಗುಣವೇ ತಪಸ್ಸಂತೆ. ಬೈಬಲಿನ ಉಪದೇಶದಲ್ಲಿ ಕ್ರಿಸ್ತ ಹೇಳುತ್ತಾನೆ ನೀನು ಪೂಜಾ ವೇದಿಕೆಗೆ ಕಾಣಿಕೆ ತಂದಾಗ ನೆನಪಿಡು ನಿನ್ನ ಸೋದರನಿಗೆ ನಿನ್ನ ಬಗ್ಗೆ ಏನಾದರೂ ಮನಸ್ತಾಪವಿರುವ ಪಕ್ಷಕ್ಕೆ ನಿನ್ನ ಉಡುಗೊರೆಯನ್ನು ಅಲ್ಲಿಯೇ ಇಟ್ಟು ಹೊರಟು ಹೋಗು. ಮೊದಲು ಸೋದರನೊಂದಿಗೆ ಹೊಂದಾಣಿಕೆ ಮಾಡಿಕೋ ಆ ನಂತರ ಬಂದು ನಿನ್ನ ಕಾಣಿಕೆ ಒಪ್ಪಿಸು.
ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!
ಭಗವದ್ ಚಿಂತನೆಗೆ ಒತ್ತು ನೀಡಿ
ನಮ್ಮಲ್ಲಿರುವ ದ್ವೇಷ, ಅಸೂಯೆ, ಮತ್ಸರ ಎಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅನಾರೋಗ್ಯಕರವಾದ ಹಾಗೂ ಛಿದ್ರವಾದ ವಿಚಾರಗಳು ನಮ್ಮ ಮನಸ್ಸನ್ನು ಪ್ರವೇಶಿಸದಂತೆ ಎಚ್ಚರವಹಿಸಬೇಕು. ಅಡೆ-ತಡೆಗಳನ್ನು ಭೇದಿಸಿ ಬರುವ ಬಯಕೆಗಳು, ಗೊಂದಲಗಳನ್ನು ತಡೆದು, ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು.
ಸಾಧ್ಯವಾದರೆ ಧ್ಯಾನದಲ್ಲಿ ತೊಡಗಬೇಕು. ಯಾವುದು ಪರಿಶುದ್ಧ, ಯಾವುದು ಮನಸ್ಸಿಗೆ ಹಿತ ನೀಡಬಲ್ಲದೋ ಅದರ ಕಡೆಗೆ ಮನಸ್ಸನ್ನು ಕೊಂಡೊಯ್ಯಬೇಕು. ದಾನ, ಕರ್ತವ್ಯಪರತೆ, ನಿರ್ದಿಷ್ಟವಾದ ಹಾಗೂ ಸಾರ್ವತ್ರಿಕವಾದ ವ್ರತಗಳ ಆಚರಣೆ, ಸತ್ಕಾರ್ಯ ನಿರ್ವಹಣೆ, ಒಟ್ಟಾರೆ ಭಗವದ್ ಚಿಂತನೆಗೆ ಒತ್ತು ನೀಡಿದರೆ ಆರೋಗ್ಯಕರ ಮನಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ.